ETV Bharat / state

ಯತ್ನಾಳ್ ವಿರುದ್ಧ ಯಡಿಯೂರಪ್ಪ ಹೋರಾಟಕ್ಕೆ ಕುಳಿತುಕೊಳ್ಳುತ್ತಾರಾ?: ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನೆ

author img

By ETV Bharat Karnataka Team

Published : Dec 13, 2023, 2:55 PM IST

Minister Priyank Kharge
ಸಚಿವ ಪ್ರಿಯಾಂಕ್​ ಖರ್ಗೆ

Priyank Khrage Question on Yediyurappa: ಬಿ ಎಸ್​ ಯಡಿಯೂರಪ್ಪ ಅವರು ಮೊದಲು ತಮ್ಮ ಸ್ವಂತ ಪಕ್ಷದವರ ವಿರುದ್ಧ ಹೋರಾಟಕ್ಕೆ ಕುಳಿತುಕೊಳ್ಳಬೇಕು ಎಂದ ಸಚಿವ ಪ್ರಿಯಾಂಖ್​ ಖರ್ಗೆ ವ್ಯಂಗ್ಯವಾಡಿದ್ದಾರೆ.

ಬೆಳಗಾವಿ: ಬಿ.ಎಸ್.​ ಯಡಿಯೂರಪ್ಪ ಅವರು ಯಾರ ವಿರುದ್ಧ ಹೋರಾಟ ಮಾಡ್ತಾರಂತೆ, ಯತ್ನಾಳ್​ ವಿರುದ್ಧ ಹೋರಾಟ ಮಾಡುತ್ತಾರಾ? ಯಡಿಯೂರಪ್ಪ ಅವರು ಮೊದಲು ತಮ್ಮ ಸ್ವಂತ ಪಕ್ಷದವರ ವಿರುದ್ಧ ಹೋರಾಟಕ್ಕೆ ಕುಳಿತುಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.

ಸುವರ್ಣಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬರ ನಿರ್ವಹಣೆಯಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಹೋರಾಟ ವಿಚಾರದ ಕುರಿತು ಮಾತನಾಡಿ, "ಬಿಜೆಪಿ ಹೋರಾಟ ಹಾಸ್ಯಾಸ್ಪದವಾಗಿದೆ. ಯಾವುದರ ವಿರುದ್ಧ ಹೋರಾಟ ಮಾಡ್ತಿದ್ದಾರೆ? ಗ್ಯಾರಂಟಿಗಳ ವಿರುದ್ಧ ಹೋರಾಟ ಮಾಡ್ತಿದ್ದಾರಾ? ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಸಂಪೂರ್ಣವಾಗಿ ಜಾರಿಗೊಳಿಸಲಾಗಿದೆ. ಬರ ನಿರ್ವಹಣೆಗೂ ನಾವು ಕ್ರಮ ಕೈಗೊಂಡಿದ್ದೇವೆ. ಕುಡಿಯುವ ನೀರು, ಮೇವಿನ ಬಗ್ಗೆ ರೈತರ ಸಲಹೆ ಪಡೆದು, ಕ್ರಮ ಕೈಗೊಂಡಿದ್ದೇವೆ." ಎಂದು ತಿಳಿಸಿದರು.

"ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡೋದು ಬಿಟ್ಟು ಹೋರಾಟ ಮಾಡ್ತಾರಂತೆ. ಯಾರ ವಿರುದ್ಧ ಯಡಿಯೂರಪ್ಪ ಅವರ ಹೋರಾಟ?. ವಿಜಯೇಂದ್ರ ಅವರನ್ನು ಇನ್ನು ಒಪ್ಪಿಕೊಂಡಿಲ್ಲ ಎಂದು ಹೋರಾಟ ಮಾಡ್ತಾರಾ?. ಬಿಜೆಪಿ ಅವರು ಏನು ಮಾಡುತ್ತಿದ್ದಾರೆ ಎನ್ನುವುದು ಅವರಿಗೇ ಗೊತ್ತಾಗುತ್ತಿಲ್ಲ. ಬಿಜೆಪಿಯಲ್ಲಿ ಬಕೆಟ್ ರಾಜಕೀಯ ನಡೆಯುತ್ತಿದೆ. ಬಕೆಟ್ ಜನತಾ ಪಕ್ಷ ಎಂದು ಕರೆದಿದ್ದು ನಾವಾ, ಅವರಾ? ಯಾರು ಯಾರಿಗೆ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಅವರಿಗೆ ಗೊತ್ತಾಗುತ್ತಿಲ್ಲ. ಯಾವ ಬ್ರ್ಯಾಂಡ್ ಬಕೆಟ್ ಹಿಡಿಯುತ್ತಿದ್ದಾರೆ" ಎಂದು ಪ್ರಶ್ನಿಸಿದರು.

ಬಿಜೆಪಿ ನೂರು ಬಾಗಿಲಾಗಿದೆ, ಅದು ಸದನದಲ್ಲೇ ಗೊತ್ತಾಗ್ತಾ ಇದೆ. ಯಡಿಯೂರಪ್ಪ ಅವರ ಮೊದಲು ಸ್ವಂತ ಪಕ್ಷದ ವಿರುದ್ಧ ಹೋರಾಟ ಮಾಡಬೇಕು. ಜನರ ಹಿತಾಸಕ್ತಿ ಕಾಪಾಡಲು ನೀವೆಲ್ಲ ಒಂದಾಗಿ ಎಂದು ಹೋರಾಟ ಮಾಡಬೇಕು. ಶಾಸಕಾಂಗ ಪಕ್ಷದಲ್ಲಿ ಯಡಿಯೂರಪ್ಪ ಅವರು ಇಲ್ಲ. ಹಲವಾರು ಬಾರಿ ನಮ್ಮ ನಾಯಕರು ಬಂದು ಬಂದು ಕೂತಿರ್ತಾರೆ, ಮಾರ್ಗದರ್ಶನ ಕೊಟ್ಟು ಹೋಗಿರ್ತಾರೆ. ಆದರೆ ಇವತ್ತು ಬಂದು ಕೂತಿರೋದು ನೋಡಿದರೆ, ಯಾರೂ ರಾಜ್ಯಾಧ್ಯಕ್ಷರ ಬಗ್ಗೆ ಅಪಸ್ವರ ಎತ್ತಬಾರದು. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಗೊಂದಲ ಚರ್ಚೆ ಆಗಬಾರದು ಎಂದು ಯಡಿಯೂರಪ್ಪ ಬಂದು ಕುಳಿತಿದ್ದಾರೆ ಎಂದು ಕಾಣಿಸುತ್ತದೆ ಎಂದ ಹೇಳಿದರು.

ಬಿಜೆಪಿಯವರು ಹುಟ್ಟುಸುಳ್ಳುಗಾರರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಹುಟ್ಟು ಸುಳ್ಳುಗಾರರು. ಸುಳ್ಳೇ ಬಿಜೆಪಿಯ ಮನೆ ದೇವರು. ಜಾತಿಗಣತಿ ವಿಚಾರವಾಗಿ ಯಾವುದೇ ಗೊಂದಲ ಇಲ್ಲ ಎಂದು ಡಿ ಕೆ ಶಿವಕುಮಾರ್​ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ವೈಜ್ಞಾನಿಕವಾಗಿ ಆಗಲಿ, ಜನ ಸಂಖ್ಯೆ ಅನುಗುಣವಾಗಿ ಸಾಂವಿಧಾನಿಕ ಸ್ಥಾನಮಾನ ಸಿಗಲಿ ಎಂದು ಡಿಕೆಶಿ ಹೇಳಿದ್ದಾರೆ. ಎಂದೂ ಯಾವ ಕಾಂಗ್ರೆಸ್ ನಾಯಕರೂ ಜಾತಿಗಣತಿ ವಿರುದ್ಧ ಹೇಳಿಲ್ಲ ಎಂದರು.

ಎಐಸಿಸಿ ಅಧ್ಯಕ್ಷರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​, ಇಂಡಿಯಾ ಒಕ್ಕೂಟ ಎಲ್ಲರೂ ಕೂಡ ಜಾತಿಗಣತಿ ಆಗಬೇಕು ಎಂದೇ ಹೇಳಿದ್ದಾರೆ. ಕೇಂದ್ರ ಸರ್ಕಾರ ಜನಗಣತಿಯನ್ನು ಯಾಕೆ ಮಾಡಿಲ್ಲ. ಜಾತಿ ಗಣತಿ‌ ಮಾಡಲು ಯಾಕೆ ಕೇಂದ್ರಕ್ಕೆ ಭಯ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಹಿಂದುಳಿದ ವರ್ಗದವರನ್ನೇ ಸಿಎಂ ಮಾಡಿದ್ದಾರೆ. ಜಾತಿಗಣತಿ ಆದರೆ ಬಿಜೆಪಿಗೆ ಹಿನ್ನಡೆ ಆಗುತ್ತೆ ಎಂದು ಅದನ್ನು ಮುಚ್ಚಿ ಹಾಕಲು ಹಿಂದುಳಿದ ವರ್ಗದರನ್ನು ಸಿಎಂ ಮಾಡಿದ್ದಾರೆ. ಕಾಂತರಾಜ್ ವರದಿ ನೋಡಿಲ್ಲ, ವರದಿ ಕೊಡಲಿ ನೋಡಿ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದಾರೆ. ಕೆಲವರಿಗೆ ಅವೈಜ್ಞಾನಿಕ ಎಂದು ಅನಿಸ್ತಿದೆ. ಅದು ಡಿಕೆಶಿ ಅವರ ವೈಯಕ್ತಿಕ ಹೇಳಿಕೆ ಅಲ್ಲ. ಸಮುದಾಯ ಹೇಳಿದ್ದನ್ನು ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಇದನ್ನೂ ಓದಿ: ಅಧಿವೇಶನವನ್ನ ಬಿಜೆಪಿಯವರು ಪೊಲಿಟಿಕಲ್ ಮೈಲೇಜ್‌ಗೆ ಬಳಸಿಕೊಳ್ತಿದ್ದಾರೆ: ಮಧು ಬಂಗಾರಪ್ಪ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.