ETV Bharat / state

ಪಕ್ಷ ಬಯಸಿದ್ರೆ ಗೋಕಾಕ್​ನಿಂದಲೇ ಸ್ಪರ್ಧೆ ಖಚಿತ: ಸಚಿವ ಜಾರಕಿಹೊಳಿ‌ಗೆ ಲಕ್ಷ್ಮಿ ಸವಾಲು

author img

By

Published : Feb 24, 2021, 10:47 AM IST

Updated : Feb 24, 2021, 2:22 PM IST

lakshmi hebbalkar
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಪಕ್ಷ ಬಯಸಿದ್ರೆ ಗೋಕಾಕ್​ನಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳುವ ಮೂಲಕ ಸಚಿವ ರಮೇಶ ಜಾರಕಿಹೊಳಿಯವರ‌ ಕ್ಷೇತ್ರದಿಂದ ಸ್ಪರ್ಧಿಸುವ ಮುನ್ಸೂಚನೆ ನೀಡಿದ್ದಾರೆ.

ಬೆಳಗಾವಿ: ಗೋಕಾಕ್​ ಕ್ಷೇತ್ರದ ಜನರು ಕರೆ ಮಾಡಿ ಕ್ಷೇತ್ರಕ್ಕೆ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ. ಪಕ್ಷ ಕೂಡ ಈ ಬಾರಿ ಸಂಪೂರ್ಣವಾಗಿ ನನಗೆ ಜವಾಬ್ದಾರಿ ಕೊಟ್ಟಿದ್ದು, ಪಕ್ಷ ಬಯಸಿದ್ರೆ ಗೋಕಾಕ್​ನಿಂದ ಸ್ಪರ್ಧೆ ಖಚಿತ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳುವ ಮೂಲಕ ರಮೇಶ ಜಾರಕಿಹೊಳಿಯವರ‌ ಕ್ಷೇತ್ರದಿಂದ ಸ್ಪರ್ಧಿಸುವ ಮುನ್ಸೂಚನೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ‌ಮಾತನಾಡಿದ ಅವರು, ಗೋಕಾಕ್​ ಕ್ಷೇತ್ರದಿಂದ ಸ್ಪರ್ಧೆ ಕುರಿತು ಪಕ್ಷದ ಆದೇಶವನ್ನು ಪಾಲಿಸುತ್ತೇನೆ. ಈ ಬಗ್ಗೆ ಖುದ್ದು ಗೋಕಾಕ್​ ಜನರೇ ಫೋನ್ ಕರೆ ಮಾಡುವ ಮೂಲಕ ಹಾಗೂ ಸ್ವತಃ ಬೆಂಗಳೂರಿನಲ್ಲಿ ಇದ್ದಾಗ ಅಲ್ಲಿಯೇ ಬಂದು ಕೆಲವರು‌ ಮುಂದಿನ‌ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮಗಳು. ಹೀಗಾಗಿ ಗ್ರಾಮೀಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು‌ ಕುಟುಂಬ ಸಮೇತ ರಾತ್ರಿ-ಹಗಲು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಆದ್ರೆ ಪಕ್ಷ ಏನು‌ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು‌ ಬದ್ಧಳಗಿರುತ್ತೇನೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಕಾರ್ಯಾಧ್ಯಕ್ಷ ಹಾಗೂ ಸಿದ್ದರಾಮಯ್ಯನವರು ನನಗೆ ಸಂಪೂರ್ಣವಾಗಿ ಜವಾಬ್ದಾರಿ ಕೊಟ್ಟಿದ್ದಾರೆ. ಮಾಜಿ‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಆಗಿ, ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ವಕ್ತಾರೆ ಆಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಂಎಲ್ಎಗಳನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಬೆನ್ನಿಗಿದೆ‌. ಬೆಳಗಾವಿ ಲೋಕಸಭೆ ಉಪಚುನಾವಣೆ ಸ್ಪರ್ಧೆ ವಿಚಾರಕ್ಕೆ ಪಕ್ಷ ಹಾಗೂ ಹೈಕಮಾಂಡ್ ನಿರ್ಣಯಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದು ತಿಳಿಸಿದರು.

ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ತಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದೊಂದು‌ ಸಹಜ ಪ್ರತಿಕ್ರಿಯೆ. ಆದರೆ, 18 ಕ್ಷೇತ್ರಗಳಲ್ಲಿ ನನ್ನ ಕ್ಷೇತ್ರದ ಮೇಲೆ‌ ಇಷ್ಟೊಂದು ವೈಯುಕ್ತಿಕವಾಗಿ ಫೋಕಸ್ ಮಾಡಬಾರದಿತ್ತು. ಅದನ್ನು ನಿಭಾಯಿಸುವ ಶಕ್ತಿ ನನ್ನಲ್ಲಿದೆ. ಪಿಡಿಓಗಳ ಮಟ್ಟಿಗೆ ಇಳಿದು ರಾಜಕಾರಣ ಮಾಡುವಂತ ಅವಶ್ಯಕತೆ ಇರಲಿಲ್ಲ ಎನ್ನುವ ಮೂಲಕ ಮಾತಿನಲ್ಲೇ ರಮೇಶ್​ ಜಾರಕಿಹೊಳಿ ಅವರನ್ನು ಕುಟುಕಿದರು.

ಇದನ್ನು ಓದಿ: ಗ್ಯಾಂಗ್​ವಾರ್​ಗೆ ರೆಡಿಯಾಗಿದ್ದ 11 ಆರೋಪಿಗಳು ಅರೆಸ್ಟ್​: 18 ಲಾಂಗು ಮಚ್ಚು ಸೀಜ್​ ಮಾಡಿದ ಸಿಸಿಬಿ

ಮೆಂಟಲ್ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ನಾನು ರಾಮನ ಭಕ್ತೆ. ಹೀಗಾಗಿ ನಾನು ವೈಯಕ್ತಿಕವಾಗಿ ಎರಡು ಲಕ್ಷ ರೂ.ಗಳ ದೇಣಿಗೆ ನೀಡಿ ನನ್ನ ಭಕ್ತಿಯನ್ನ ತೋರಿಸಿದ್ದೇನಿ. ಇದಲ್ಲದೇ ಕಾಂಗ್ರೆಸ್ ಪಕ್ಷದಲ್ಲೂ ಸಾಕಷ್ಟು ಜನರು ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಕಾರಣ, ರಾಮರಾಜ್ಯದ ಕನಸು ಕಂಡವರಲ್ಲಿ ನಾವು ಒಬ್ಬರು. ಆದ್ರೆ, ರಾಮನ ಪಕ್ಷದ ಅಂತಾ ಹೇಳಿಕೊಳ್ಳುವ ಬಿಜೆಪಿಯಲ್ಲಿ ಓರ್ವ ಮಹಿಳೆಗೆ ಬಗ್ಗೆ ಈ ರೀತಿ ಮಾತನಾಡೊದನ್ನ ಜನ ಗಮನಿಸುತ್ತಿದ್ದಾರೆ‌. ಜನರಿಗೆ ಎಲ್ಲವೂ ಅರ್ಥವೂ ಆಗ್ತಿದೆ. ಧಾರವಾಡ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂಬೆಲ್ಲಾ ಹೇಳಿಕೆ ನೀಡುತ್ತಿರುವುದು ರಮೇಶ ಜಾರಕಿಹೊಳಿ‌ಗೆ ಶೋಭೆ ತರುವುದಿಲ್ಲ" ಎಂದು ಟಾಂಗ್​ ಕೊಟ್ಟರು.

ಗ್ರಾಮ ಪಂಚಾಯತ್ ಚುನಾವಣೆ ಹಿಡಿದುಕೊಂಡು ಲೋಕಸಭೆ ಚುನಾವಣೆಯಲ್ಲೂ ಪರ, ವಿರೋಧ ಇದ್ದೇ ಇರುತ್ತದೆ. ಆದ್ರೆ, ಕ್ಷೇತ್ರದಲ್ಲಿ ಕೆಲಸ ಮಾಡಲಿಕ್ಕೆ ಆಗಲಿಲ್ಲಾ ಅಂದ್ರೆ ರಾಜಕಾರಣ ಮಾಡೋದಕ್ಕೆ ನಾನು ಅನ್​ಫಿಟ್. ಹೀಗಾಗಿ ಗುರುಗಳು ಒಂದು‌ ಮಾತನ್ನು ಹೇಳಿದ್ದಾರೆ. ಅದೇನೆಂದರೆ ಕರ್ಣನ ದಾನತ್ವ, ವಿಧುರನ ವಿಧುರನೀತಿ, ಕೃಷ್ಣನ ಛಲ, ಭೀಮನ ಬಲ, ಅರ್ಜುನ ಗುರಿ ಹಾಗೂ ಧರ್ಮರಾಯನ ಧರ್ಮತ್ವ ಇದೆಲ್ಲವನ್ನೂ ಸೇರಿಸಿಕೊಂಡೇ ನಾವು ರೆಡಿ ಆಗಿ ನಿಂತಿದ್ದೇವೆ. ಅದೆನೋ ಮಾಡಿದರೆ ದೇವಸ್ಥಾನ ಹಾಳಾಗುತ್ತಾ ಎನ್ನುವ ಮೂಲಕ ಸಚಿವ ರಮೇಶ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ.

ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮಿ ಗೆಲ್ಲಲು ತಾನೇ ಕಾರಣ ಎಂಬ ರಮೇಶ್​ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕಿ, ಉಸ್ತುವಾರಿ ಸಚಿವ ರಮೇಶ್​ ಜಾರಕಿಹೊಳಿಯನ್ನ ಹೈಕಮಾಂಡ್​ ಬಳಿ ಹೇಳಿ ನಾನೇ ಮಂತ್ರಿ ಮಾಡಿಸಿದ್ದು ಎನ್ನುತ್ತೇನೆ. ನಾನು ಹೇಳಿರುವ ಈ ಮಾತಿಗೂ ರಮೇಶ ಜಾರಕಿಹೊಳಿ‌ಯವರು ಹೇಳಿದ ಮಾತಿಗೂ ಪ್ರಾಮುಖ್ಯತೆ ನೀಡಬಾರದು. ಏಕೆಂದರೆ, ನಾನು- ನೀನು‌ ಎನ್ನುವ ಸಾಕಷ್ಟು ರಾಜರು ಹೆಸರಿಲ್ಲದಂತೆ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಹೀಗಾಗಿ ನನ್ನ ಆರಿಸಿ ಕಳುಹಿಸಿದ ಮತದಾರರು ನನ್ನನ್ನು ಶಾಸಕಿಯನ್ನಾಗಿ ಮಾಡಿದ್ದಾರೆ‌. ವಿರೋಧಿಗಳು ನನ್ನನ್ನು ವಿರೋಧಿಸುತ್ತಾರೋ ನಾನು ಅಷ್ಟು ಗಟ್ಟಿ ಆಗುತ್ತಲೇ ಹೋಗುತ್ತೇನೆ ಎಂದು ರಮೇಶ ಜಾರಕಿಹೊಳಿ‌ಗೆ ಸವಾಲು ಹಾಕಿದರು.

Last Updated :Feb 24, 2021, 2:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.