ETV Bharat / state

ಜೈನ ಮುನಿ ಹತ್ಯೆ ಪ್ರಕರಣ: ಹಿಂಡಲಗಾ ಜೈಲಿನಿಂದ ಚಿಕ್ಕೋಡಿಗೆ ಆರೋಪಿಗಳು ಶಿಫ್ಟ್

author img

By

Published : Jul 11, 2023, 4:06 PM IST

Updated : Jul 11, 2023, 4:19 PM IST

ಜೈನ ಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಹಿಂಡಲಗಾ ಜೈಲಿನಿಂದ ಚಿಕ್ಕೋಡಿಗೆ ಶಿಫ್ಟ್ ಮಾಡಲಾಯಿತು.

Jain Muni murder case
ಜೈನ ಮುನಿ ಹತ್ಯೆ ಪ್ರಕರಣ: ಹಿಂಡಲಗಾ ಜೈಲಿನಿಂದ ಚಿಕ್ಕೋಡಿಗೆ ಆರೋಪಿಗಳು ಶಿಫ್ಟ್

ಜೈನ ಮುನಿ ಹತ್ಯೆ ಪ್ರಕರಣ: ಹಿಂಡಲಗಾ ಜೈಲಿನಿಂದ ಚಿಕ್ಕೋಡಿಗೆ ಆರೋಪಿಗಳು ಶಿಫ್ಟ್

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಪ್ರಕರಣ ಇಡೀ ರಾಜ್ಯ ಸೇರಿದಂತೆ ದೇಶಾದ್ಯಂತ ಚರ್ಚೆ ಆಗ್ತಿದೆ. ವಿಧಾನ ಮಂಡಲ ಅಧಿವೇಶನದಲ್ಲೂ ಈ ಕುರಿತು ಚರ್ಚೆ ನಡೆದು ನಿಷ್ಪಕ್ಷಪಾತ ತನಿಖೆ ಮತ್ತು ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂಬ ಆಗ್ರಹವನ್ನು ಪ್ರತಿಪಕ್ಷ ಬಿಜೆಪಿ ಮಾಡಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ಇಂದಿನಿಂದ ಬಂಧಿತ ಆರೋಪಿಗಳ ವಿಚಾರಣೆ ‌ಆರಂಭವಾಗಿದೆ. ಇದರಿಂದ ಹಿಂಡಲಗಾ ಜೈಲಿನಿಂದ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಚಿಕ್ಕೋಡಿ ಸಿಪಿಐ ಆರ್. ಆರ್. ಪಾಟೀಲ್ ತಂಡದಿಂದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನಾರಾಯಣ ಮಾಳಿ, ಹಸನಸಾಬ್ ದಲಾಯತ್ ಬಂಧಿತ ಆರೋಪಿಗಳು. ಇಬ್ಬರು ಸಿಪಿಐ, ಒಂದು ಡಿಆರ್ ತುಕಡಿ ಭದ್ರತೆಯಲ್ಲಿ ಚಿಕ್ಕೋಡಿಗೆ ಆರೋಪಿಗಳನ್ನು ಕರೆದೊಯ್ಯಲಾಯಿತು. ಹಿಂಡಲಗಾ ಜೈಲಿನಿಂದ ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿಸಲಾಯಿತು. ನಂತರ ಚಿಕ್ಕೋಡಿ ನ್ಯಾಯಾಲಯಕ್ಕೆ ಪೊಲೀಸರು ಆರೋಪಿಗಳನ್ನು ಹಾಜರುಪಡಿಸಲಿದ್ದಾರೆ.

ಜೈನ ಮುನಿ ಹತ್ಯೆ ಪ್ರಕರಣದ ತನಿಖೆ ಚುರುಕು: ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತದ ಆಶ್ರಮದಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಪ್ರಕರಣದ ಎಫ್​ಐಆರ್​ (ಪ್ರಥಮ ಮಾಹಿತಿ ವರದಿ)ಯಲ್ಲಿ ಉಲ್ಲೇಖ ಮಾಡಲಾಗಿದೆ. ಕಾಮಕುಮಾರ ನಂದಿ ಮಹಾರಾಜರು ಜುಲೈ 6ರಂದು ಹಿರೇಕೋಡಿ ನಂದಿಪರ್ವತದ ಆಶ್ರಮದಿಂದ ನಾಪತ್ತೆಯಾಗಿದ್ದರು. ಈ ಕುರಿತು ಆಶ್ರಮದವರು ಪೊಲೀಸರಿಗೆ ದೂರು ನೀಡಿದ್ದರು. 2 ದಿನದ ನಂತರ ಮೃತದೇಹವನ್ನು ರಾಯಬಾಗ ತಾಲೂಕಿನ ಕಡಕಬಾವಿ ಗ್ರಾಮದ ಕೊಳವೆ ಬಾವಿಯಲ್ಲಿ ಪತ್ತೆ ಮಾಡಲಾಗಿತ್ತು. ಆರೋಪಿಗಳು ಸ್ವಾಮೀಜಿಯ ದೇಹವನ್ನು ಹಲವು ಭಾಗಗಳಾಗಿ ತುಂಡರಿಸಿ ಕೊಳವೆ ಬಾವಿಗೆ ಹಾಕಿದ್ದರು. ಈ ಕುರಿತು ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹಸನಸಾಬ್ ದಲಾಯತ್ ಜೊತೆಯಾಗಿಯೇ ಜೈನ ಮುನಿಗೆ ವಿದ್ಯುತ್ ಶಾಕ್​ ನೀಡಿ ಕೊಲ್ಲಲು ಪ್ರಯತ್ನಪಟ್ಟಿದ್ದರು. ಆದರೆ, ತಮ್ಮ ಯೋಜನೆ ವಿಫಲ ಆಗುತ್ತಿದ್ದಂತೆ, ಟವೆಲ್​ನಿಂದ ಕುತ್ತಿಗೆ ಬಿಗಿದು ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಬೈಕ್​ನಲ್ಲಿ ಸುಮಾರು 35 ಕಿಲೋ ಮೀಟರ್ ದೂರದ ಕಡಕಬಾವಿ ಗ್ರಾಮಕ್ಕೆ ಸಾಗಿಸಿ ಕೊಳವೆ ಬಾವಿಯಲ್ಲಿ ಎಸೆದಿದ್ದಾರೆ. ಆರೋಪಿಗಳು ಸಾಕ್ಷ್ಯ ನಾಶಪಡಿಸಲು ಈ ರೀತಿ ಕೃತ್ಯ ಎಸಗಿದ್ದಾರೆ ಎಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಜೈನ ಮುನಿ ಹತ್ಯೆ ಪ್ರಕರಣದ ತನಿಖೆ: ಟವೆಲ್‌ನಲ್ಲಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ!

Last Updated : Jul 11, 2023, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.