ETV Bharat / state

ಜೈನ ಮುನಿ ಹತ್ಯೆ ಪ್ರಕರಣದ ತನಿಖೆ: ಟವೆಲ್‌ನಲ್ಲಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ!

author img

By

Published : Jul 11, 2023, 12:01 PM IST

Updated : Jul 11, 2023, 1:17 PM IST

ಜೈನಾಚಾರ್ಯ ಜಿನೈಕ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಪೊಲೀಸರು ಆಳವಾಗಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಕ್ರೌರ್ಯ ಬೆಳಕಿಗೆ ಬರುತ್ತಿದೆ.

jain-monk-murder-case-assassins-killed-swamiji-by-suffocation-says-fir
ಜೈನ ಮುನಿ ಹತ್ಯೆ ಪ್ರಕರಣ : ಸ್ವಾಮೀಜಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಹಂತಕರು.!

ಚಿಕ್ಕೋಡಿ (ಬೆಳಗಾವಿ) : ಜೈನಾಚಾರ್ಯ ಜಿನೈಕ್ಯ ಕಾಮಕುಮಾರ ನಂದಿ ಮಹಾರಾಜರನ್ನು ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತದ ಆಶ್ರಮದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪ್ರಕರಣದ ಎಫ್​ಐಆರ್​ (ಪ್ರಥಮ ಮಾಹಿತಿ ವರದಿ)ನಲ್ಲಿ ಉಲ್ಲೇಖಿಸಲಾಗಿದೆ.

ಕಾಮಕುಮಾರ ನಂದಿ ಮಹಾರಾಜರು ಜುಲೈ 6ರಂದು ಮಠದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಆಶ್ರಮದವರು ಪೊಲೀಸರಿಗೆ ದೂರು ನೀಡಿದ್ದರು. ಎರಡು ದಿನದ ಬಳಿಕ ಮೃತದೇಹ ರಾಯಬಾಗ ತಾಲೂಕಿನ ಕಡಕಬಾವಿ ಗ್ರಾಮದ ಕೊಳವೆ ಬಾವಿಯಲ್ಲಿ ಪತ್ತೆಯಾಗಿತ್ತು. ಹಂತಕರು ಸ್ವಾಮೀಜಿಯ ದೇಹವನ್ನು ಹಲವು ಭಾಗಗಳಾಗಿ ತುಂಡರಿಸಿ ಕೊಳವೆ ಬಾವಿಗೆ ಎಸೆದಿದ್ದರು. ಈ ಸಂಬಂಧ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಹಂತಕರ ಕ್ರೌರ್ಯ: ಆರೋಪಿಗಳಾದ ನಾರಾಯಣ ಮಾಳಿ ಹಾಗೂ ಹಸನಸಾಬ ದಲಾಯತ್ ಜೊತೆಯಾಗಿಯೇ ಜೈನಮುನಿಯನ್ನು ವಿದ್ಯುತ್ ಶಾಕ್​ ನೀಡಿ ಕೊಲ್ಲಲು ಪ್ರಯತ್ನಪಟ್ಟಿದ್ದರು. ಆದರೆ ತಮ್ಮ ಯೋಜನೆ ವಿಫಲವಾಗುತ್ತಿದ್ದಂತೆ, ಟವೆಲ್​ನಿಂದ ಕುತ್ತಿಗೆ ಬಿಗಿದು ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಆ ಬಳಿಕ ಶವವನ್ನು ಗೋಣಿಚೀಲದಲ್ಲಿ ತುಂಬಿ ಬೈಕ್​ನಲ್ಲಿ ಸುಮಾರು 35 ಕಿಲೋಮೀಟರ್ ದೂರದ ಕಡಕಬಾವಿ ಗ್ರಾಮಕ್ಕೆ ಸಾಗಿಸಿ ಕೊಳವೆ ಬಾವಿಗೆ ಹಾಕಿದ್ದಾರೆ. ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಈ ರೀತಿ ಮಾಡಿದ್ದಾರೆ ಎಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್​ಐಆರ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಜೈನ ಮುನಿಗಳಿಗೆ ರಕ್ಷಣೆ ಭರವಸೆ ಸರ್ಕಾರ ನೀಡುವರೆಗೂ ಸಲ್ಲೇಖನ ವೃತ ಕೈಗೊಳ್ಳುವೆ: ಕಣ್ಣೀರು ಹಾಕಿದ ಶ್ರೀ ಆಚಾರ್ಯ ಗುಣಧರನಂದಿ

ಆರೋಪಿಗಳು ಚಿಕ್ಕೋಡಿ ಪೊಲೀಸ್​​ ವಶಕ್ಕೆ : ಮುನಿಶ್ರೀ ಹತ್ಯೆ ಪ್ರಕರಣದ ಆರೋಪಿಗಳನ್ನು ಹಿಂಡಲಗಾ ಜೈಲಿನಿಂದ ವಶಕ್ಕೆ ಪಡೆದು ಚಿಕ್ಕೋಡಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಲು ಮುಂದಾಗಿದ್ದಾರೆ. ತನಿಖಾಧಿಕಾರಿ, ಚಿಕ್ಕೋಡಿ ಸಿಪಿಐ ಆರ್.ಆರ್. ಪಾಟೀಲ್ ತಂಡದಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇರುವ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್‌ನನ್ನು ಚಿಕ್ಕೋಡಿಯಲ್ಲಿನ 07 ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದುಕೊಳ್ಳಲಿದ್ದಾರೆ.

ರಾಜ್ಯಾದ್ಯಂತ ಪ್ರತಿಭಟನೆ, ಬಂದ್​ಗೆ ಕರೆ : ಜೈನ ಮುನಿ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬೋರಗಾಂವ ಪಟ್ಟಣದಲ್ಲಿ ಜೈನ ಸಮುದಾಯವು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಪಟ್ಟಣದ ಎಲ್ಲ ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ಸ್ಥಗಿತಗೊಳಿಸಲಾಗಿತ್ತು. ಜೈನ ಸಮುದಾಯದ ಉತ್ತಮ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಆರೋಪಿಗಳನ್ನು ಗಲ್ಲಿಗೇರಿಸಬೇಕು, ಇನ್ನು ಮುಂದೆ ಇಂತಹ ಘಟನೆ ನಡೆಯಬಾರದು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ : ಜೈನಮುನಿ ದೇಹ ಕೊಳವೆ ಬಾವಿಯಲ್ಲಿ ಪತ್ತೆ: 9 ಭಾಗಗಳಾಗಿ ತುಂಡರಿಸಿ ಎಸೆದ ಹಂತಕರು!

Last Updated : Jul 11, 2023, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.