ETV Bharat / state

ಶಿಕ್ಷಣ ಇಲಾಖೆ ಖಾಲಿ ಹುದ್ದೆ ಭರ್ತಿ ವಿಚಾರ.. ಸರ್ಕಾರದ ಉತ್ತರ ಪೆಂಡಿಂಗ್ ಇರಿಸಿ ರೂಲಿಂಗ್ ನೀಡಿದ ಸಭಾಪತಿ

author img

By

Published : Dec 13, 2021, 2:26 PM IST

council session
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ಶಿಕ್ಷಣ ಇಲಾಖೆಯ ಖಾಲಿ ಹುದ್ದೆ ಭರ್ತಿಗೆ ಸಂಬಂಧ ಸಚಿವರು, ಸಭಾ ನಾಯಕರು, ಶಿಕ್ಷಣ ಇಲಾಖೆ, ಸಂಬಂಧಿಸಿದವರೆಲ್ಲ ಸೇರಿ ಸಭೆ ನಡೆಸಿ ತೀರ್ಮಾನಿಸಿ ಗುರುವಾರದ ಒಳಗೆ ಬಂದು ಹೇಳಬೇಕು. ಸದನದಲ್ಲಿ ಸಂಪೂರ್ಣವಾದ ಚರ್ಚೆ ನಡೆಸಲು ಗುರುವಾರ ಸಭಾನಾಯಕ, ಸಚಿವರು, ಅಧಿಕಾರಿಗಳು ಚರ್ಚಿಸಿ ತೀರ್ಮಾನಿಸಿ ಇಲ್ಲಿ ಬಂದು ಹೇಳಬೇಕು, ಅಲ್ಲಿಯವರೆಗೂ ಉತ್ತರವನ್ನು ಪೆಂಡಿಂಗ್ ಇಡಲಾಗುತ್ತದೆ ಎಂದು ಪರಿಷತ್ ಕಲಾಪದಲ್ಲಿ ಹೊರಟ್ಟಿ ರೂಲಿಂಗ್ ನೀಡಿದರು.

ಬೆಂಗಳೂರು: ಶಿಕ್ಷಣ ಇಲಾಖೆಯ ಖಾಲಿ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಶಿಕ್ಷಕರ ಕ್ಷೇತ್ರದಿಂದ ಬಂದಿದ್ದ ಸದಸ್ಯರ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರವನ್ನು ಪೆಂಡಿಂಗ್​​ನಲ್ಲಿ ಇರಿಸಿ ಸಂಬಂಧಪಟ್ಟವರ ಜೊತೆ ಸೂಕ್ತ ರೀತಿಯ ಚರ್ಚೆ ನಡೆಸಿ ನಂತರ ಸದನಕ್ಕೆ ಉತ್ತರ ನೀಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದ ಘಟನೆ ಪರಿಷತ್ ಕಲಾಪದಲ್ಲಿ ನಡೆಯಿತು.

ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಪಕ್ಷಾತೀತವಾಗಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿರುವ, ಶಶಿಲ್ ನಮೋಶಿ, ಸಂಕನೂರ, ಅರುಣ್ ಶಹಾಪುರ್, ಪುಟ್ಟಣ್ಣ, ಶ್ರೀಕಂಠೇಗೌಡ ಖಾಲಿ ಹುದ್ದೆ ಭರ್ತಿ ಕುರಿತು ಸರ್ಕಾರದ ನಡೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಲೋಪದೋಷಗಳ ಕುರಿತು ಬೆಳಕು ಚಲ್ಲಿದರು. ಇದಕ್ಕೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ, 2015ರವರೆಗಿನ ಹುದ್ದೆ ಭರ್ತಿಗೆ ಅವಕಾಶ ನೀಡಲಾಗಿದೆ. 2,081 ಹುದ್ದೆಗಳಲ್ಲಿ 257 ಹುದ್ದೆ ಭರ್ತಿಗೆ ಅವಕಾಶ ನೀಡಲಾಗಿದೆ. ಅದರಲ್ಲಿ ಭರ್ತಿಗೆ ಕೇವಲ 12 ಅರ್ಜಿ ಮಾತ್ರ ಬಂದಿದೆ, ಜಾಹೀರಾತು ನೀಡುವಾಗಿನ ವ್ಯತ್ಯಯವಾಗಿದೆ, ಮೊದಲು ಇದನ್ನ ಭರ್ತಿ ಮಾಡುವ ಕೆಲಸ ಆಗಲಿ ನಂತರ ಆರ್ಥಿಕ ಇಲಾಖೆಯಿಂದ ಉಳಿದ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸುವ ಕೆಲಸ ಮಾಡೋಣ ಎಂದರು.

ಸರ್ಕಾರದ ಈ ಉತ್ತರಕ್ಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಕಿಡಿಕಾರಿ ಕೆಲಕಾಲ ಆಡಳಿತ ಪಕ್ಷದ ಸದಸ್ಯರೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದರು. ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರು, ಸಭಾ ನಾಯಕರು, ಶಿಕ್ಷಣ ಇಲಾಖೆ, ಸಂಬಂಧಿಸಿದವರೆಲ್ಲ ಸೇರಿ ಸಭೆ ನಡೆಸಿ ತೀರ್ಮಾನಿಸಿ ಗುರುವಾರದ ಒಳಗೆ ಬಂದು ಹೇಳಬೇಕು ಎಂದು ಸೂಚಿಸಿದರು. ಸದನದಲ್ಲಿ ಸಂಪೂರ್ಣವಾದ ಚರ್ಚೆ ನಡೆಸಲು ಗುರುವಾರ ಸಭಾನಾಯಕ, ಸಚಿವರು, ಅಧಿಕಾರಿಗಳು ಚರ್ಚಿಸಿ ತೀರ್ಮಾನಿಸಿ ಇಲ್ಲಿ ಬಂದು ಹೇಳಬೇಕು, ಅಲ್ಲಿಯವರೆಗೂ ಉತ್ತರವನ್ನು ಪೆಂಡಿಂಗ್ ಇಡಲಾಗುತ್ತದೆ ಎಂದು ಹೊರಟ್ಟಿ ರೂಲಿಂಗ್ ನೀಡಿದರು.

ಸರ್ಕಾರಿ ಸಮಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ರೆ ಕ್ರಮ:

ಸರ್ಕಾರಿ ಸೇವೆ ನೀಡಬೇಕಾದ ಸಮಯದಲ್ಲಿ ಯಾವುದೇ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಗೆ ತೆರಳಿದಲ್ಲಿ, ಅಂತಹವರ ವಿರುದ್ಧ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲು ನೀತಿ ರೂಪಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಮಹಾಂತೇಶ್ ಕಮಟಗಿಮಠ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 9,600 ಆರೋಗ್ಯ ಉಪಕೇಂದ್ರ, 2,500 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಸಾಕಷ್ಟು ಕಡೆ ಉಪಕೇಂದ್ರಗಳಲ್ಲಿ ನಮಗೆ ಸ್ವಂತ ಕಟ್ಟಡಗಳಿಲ್ಲ, ಬಾಡಿಗೆ ಕಟ್ಟಡಗಳಲ್ಲಿ ಆರೋಗ್ಯ ಸೇವೆ ನೀಡಲಾಗುತ್ತಿದೆ. ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ, ಆರೋಗ್ಯ ಕೇಂದ್ರ ಮತ್ತು ಉಪಕೇಂದ್ರಗಳ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಣ ಮಾಡಲಾಗುತ್ತದೆ.

council session
ವಿಧಾನ ಪರಿಷತ್ ಕಲಾಪ

ಅದಕ್ಕಾಗಿಯೇ ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆಯನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. 150 ಕೋಟಿ ಅನುದಾನ ಕೊಟ್ಟಿದ್ದಾರೆ.ಕೇಂದ್ರ ಸರ್ಕಾರ ಕೂಡ ಮುಂದಿನ 5 ವರ್ಷದಲ್ಲಿ ರಾಜ್ಯದ ಸಂಪೂರ್ಣ ಆರೋಗ್ಯ ಕೇಂದ್ರ, ಉಪ ಕೇಂದ್ರಗಳನ್ನು ಹೆಲ್ತ್ ಅಂಡ್ ವೆಲ್ತ್ ಕೇಂದ್ರಗಳಾಗಿ ಮಾಡಲು ಅನುದಾನ ನೀಡಲಿದ್ದಾರೆ. 552 ಕೋಟಿ ಪ್ರತಿ ವರ್ಷ ಬರಲಿದೆ, ಮೂಲಭೂತ ಸೌಕರ್ಯ, ಲ್ಯಾಬ್, ಉಪಕರಣ ಖರೀದಿಗೆ ಇದನ್ನು ಬಳಕೆ ಮಾಡಲಾಗುತ್ತದೆ. ಮುಂದಿನ ಐದು ವರ್ಷದಲ್ಲಿ 2,900 ಕೋಟಿ ಹಣ ನಮಗೆ ಲಭ್ಯವಾಗಲಿದೆ, ನಮ್ಮ ಪ್ರಾಥಮಿಕ ಕೇಂದ್ರ ಉಪಕೇಂದ್ರ ಸಶಕ್ತ ಮತ್ತು ಸದೃಢವಾಗಲಿದೆ ಎಂದರು.

ನಮ್ಮಲ್ಲಿ ಕೆಲವು ಕಡೆ ವಸತಿ ನಿಲಯ ಇಲ್ಲದ ಕಡೆ ವೈದ್ಯರು ಅಲ್ಲಿ ಉಳಿಯುತ್ತಿಲ್ಲ, ಅನೇಕ ಕಡೆ ಸರ್ಕಾರಿ ವೈದ್ಯರೇ ಖಾಸಗಿಯಾಗಿ ಆಸ್ಪತ್ರೆ ಸ್ಥಾಪನೆ ಮಾಡಿರಬಹುದು, ಆದರೆ ನಮ್ಮ ಸರ್ಕಾರಿ ವೈದ್ಯರು ನಿಗದಿತ ಸಮಯದಲ್ಲಿ ನಮ್ಮ ಆಸ್ಪತ್ರೆಗಳಲ್ಲೇ ಕೆಲಸ ಮಾಡಬೇಕು ಅದನ್ನು ಟ್ರ್ಯಾಕ್ ಮಾಡಲು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ, ಸಿಸಿಟಿವಿ ಎಲ್ಲಾ ಕಡೆ ಅಳವಡಿಸುತ್ತಿದ್ದೇವೆ, ಕಡ್ಡಾಯ ಹಾಜರಾತಿ ಇರಬೇಕು, ಸರ್ಕಾರ ಬಯಸಿದ ರೀತಿ ಅವರು ಕೆಲಸ ಮಾಡಬೇಕು ಎಂದು ಸೂಚಿಸಿದೆ.

ಆದರೂ ಅದಕ್ಕೆ ನಿರೀಕ್ಷಿತ ಫಲಿತಾಂಶ ಇನ್ನು ಸಿಕ್ಕಿಲ್ಲ, ವೈದ್ಯರಿಗೆ ವೃತ್ತಿ ಮೌಲ್ಯಾಧಾರಿತ ಚಿಂತನೆ ಬರದೇ ಇದ್ದಲ್ಲಿ, ನಿಯಮ ತಂದು ಅನುಷ್ಠಾನ ತರಲು ಕಷ್ಟವಾಗಲಿದೆ, ಮೊದಲೆಲ್ಲಾ ವೈದ್ಯರನ್ನು ಅಮಾನತು ಮಾಡಿದರೆ ಹೊಸದಾಗಿ ವೈದ್ಯರು ಬರುವ ಸ್ಥಿತಿ ಇರಲಿಲ್ಲ, ಸಂಖ್ಯೆ ನಮಗೆ ಕಡಿಮೆ ಇತ್ತು, ಆದರೆ ಈಗ ನಮ್ಮ ಕಡೆ ಬರುವ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಈಗ ಲೋಪವೆಸಗುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಹೆಚ್ಚಿನ ಅವಕಾಶವಿದೆ. ಖಾಸಗಿ ಆಸ್ಪತ್ರೆಗೆ ಸರ್ಕಾರಿ ಸಮಯದಲ್ಲಿ ನಮ್ಮ ವೈದ್ಯರು ಹೋದಲ್ಲಿ ಅಂತಹ ವೈದ್ಯರ ವಿರುದ್ಧ ಕೈಗೊಳ್ಳುವ ನೀತಿ ರೂಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ವಿದ್ಯುತ್ ಸ್ಟೇಷನ್ ನಿರ್ಮಾಣ ಪೂರ್ಣ:

ಇಂಧನ ಇಲಾಖೆಯ ಕಾಮಗಾರಿಗಳ ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆಯಿಂದ ಅನುಮತಿ ಬಾಕಿ ಇರುವ ಕುರಿತು ಸಮಸ್ಯೆ ಪರಿಹರಿಸಿಕೊಳ್ಳಲು ಆದಷ್ಟು ಬೇಗ ಒಂದು ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ.

ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಸ್ಟೇಷನ್ ಕಾಮಗಾರಿ ಮೂರು ವರ್ಷವಾದರೂ ಮುಗಿಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಲ್ಲೂರಿನಲ್ಲಿ 33 ಕೆಪಿ ಸಬ್ ಸ್ಟೇಷನ್ ನಿರ್ಮಾಣ ಕಾರ್ಯವನ್ನು 2018ರಲ್ಲಿ ಆರಂಭಿಸಿದ್ದ ಇನ್ನು ಮುಗಿದಿಲ್ಲ. 33 ಕೆವಿ ಸ್ಟೇಷನ್​​ಗಳನ್ನು ಟೆಂಡರ್ ಮೂಲಕ ಮಾಡಲಾಗುತ್ತಿದೆ. 2018-19ರ ಕಾಮಗಾರಿಗಳನ್ನು ಕೂಡ ನಮಗೆ ಇನ್ನು ಮುಗಿಸಲು ಸಾಧ್ಯವಾಗಿಲ್ಲ, ಅರಣ್ಯ ಇಲಾಖೆ ಒಪ್ಪಿಗೆ, ಭೂಸ್ವಾಧೀನ ಸಮಸ್ಯೆ ಆಗಿದೆ, ಇದನ್ನು ಸರಿಪಡಿಸಿಕೊಳ್ಳಲಾಗುತ್ತದೆ. ಕೊಲ್ಲೂರು ಸ್ಟೇಷನ್ ಲೈನ್ ಎಳೆಯಲು ಸಮಸ್ಯೆಯಾಗಿದ್ದು, ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಅರಣ್ಯ ಇಲಾಖೆ ಜೊತೆಗೆ ಶೀಘ್ರದಲ್ಲೇ ಒಂದು ಸಭೆ ನಡೆಸಿ ಇಂಧನ ಇಲಾಖೆ ಚಟುವಟಿಕೆ ಸಂಬಂಧ ಅನುಮತಿ ಪಡೆಯಲು ಒಂದು ಸಭೆ ನಡೆಸಲಾಗುತ್ತದೆ. ಕೊಲ್ಲೂರು ಸ್ಟೇಷನ್ ಸಂಬಂಧ ಮೂರು ನಾಲ್ಕು ಪತ್ರ ಬರೆಯಲಾಗಿದೆ, ಆದಷ್ಟು ಬೇಗ ಕಾಮಗಾರಿ ಮುಗಿಸಲಾಗುತ್ತದೆ ಎಂದು ತಿಳಿಸಿದರು.

ಸ್ಮಾರಕ ರಕ್ಷಣೆಗೆ ಸರ್ಕಾರದ ಕ್ರಮ:

ರಾಜ್ಯದಲ್ಲಿನ ಎಲ್ಲಾ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. ಸಂರಕ್ಷಣೆಗೆ ಹಣಕಾಸು ಕೊರತೆ ಇಲ್ಲ, ಪುರಾತತ್ವ ಇಲಾಖೆಯ ವ್ಯಾಪ್ತಿಯ ಕಟ್ಟಡಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವ ಕಾಮಗಾರಿ ನಡೆಸುವಂತಿಲ್ಲ, 100-200 ಮೀಟರ್ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಕಾಮಗಾರಿ ಕೈಗೆತ್ತಿಕೊಳ್ಳಬಹುದು ಆದರೆ ಅದಕ್ಕೆ ಕೇಂದ್ರದಿಂದ ಅನುಮತಿ ಬೇಕು.

ಅದಕ್ಕೆ ಕಾಯಲಾಗುತ್ತಿದೆ, ಇನ್ನೊಂದು ತಿಂಗಳಿನಲ್ಲಿ ಇರುವ ಅಡೆತಡೆ ಸರಿಪಡಿಸಿಕೊಂಡು ಕೆಲಸ ಆರಂಭಿಸಲಾಗುತ್ತದೆ, ಪುರಾತನ ಸ್ಮಾರಕಗಳ ಸಂರಕ್ಷಣೆ, ಅಗತ್ಯ ಅನುದಾನ ಬಳಕೆ, ರಕ್ಷಣೆಗೆ ಅಗತ್ಯ ಕಾನೂನು ರಚನೆ ಸೇರಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೂಜಾರಿ ಭರವಸೆ ನೀಡಿದರು.

ಇದನ್ನೂ ಓದಿ: ನಟ ಪುನೀತ್ ರಾಜ್​​ಕುಮಾರ್​ಗೆ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು : ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.