ETV Bharat / state

ಕೈಕೊಟ್ಟ ಮಳೆ.. ಚಿಗುರುವ ಮುನ್ನವೇ ಕಮರಿದ ಬೆಳೆಗಳು.. ರೈತರು ಕಂಗಾಲು

author img

By ETV Bharat Karnataka Team

Published : Aug 22, 2023, 7:09 PM IST

ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಹಾಳಾಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಹೊಲದಲ್ಲಿರುವ ರೈತ
ಹೊಲದಲ್ಲಿರುವ ರೈತ

ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ಬೇಕಿದೆ ಸರ್ಕಾರದ ನೆರವು

ಚಿಕ್ಕೋಡಿ : ಪ್ರತಿ ವರ್ಷ ವಾಡಿಕೆಯಂತೆ ಮುಂಗಾರು ಮಳೆ ಜೂನ್​ ಮೊದಲನೇ ವಾರದಲ್ಲಿ ಪ್ರಾರಂಭವಾಗಿ ರೈತರು ಬಿತ್ತನೆ ಕಾರ್ಯವನ್ನು ಮಾಡುತ್ತಿದ್ದರು. ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮುಂಗಾರು ಬಿತ್ತನೆ ಆಗದೆ ಕೃಷಿ ಚಟುವಟಿಕೆಗಳು ಮಂದಗತಿಯಲ್ಲೇ ಸಾಗಿದ್ದವು. ಅಲ್ಪ ಸ್ವಲ್ಪ ಮಳೆಯಲ್ಲೇ ಬೀಜ ಬಿತ್ತಿದ್ದ ರೈತರಿಗೆ ಆಘಾತವಾಗಿದೆ. ಮಳೆ ಕೈಕೊಟ್ಟ ಪರಿಣಾಮ, ಬಿತ್ತನೆ ಮಾಡಿರುವ ಬೀಜಗಳು ಮೊಳಕೆಯಲ್ಲಿ ಒಣಗುತ್ತಿರುವ ಹಿನ್ನೆಲೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಕಾಗವಾಡ, ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ಸುರಿದ ಅಲ್ಪಸ್ವಲ್ಪ ಮಳೆಗೆ ಶೇಕಡಾ 60 ರಷ್ಟು ರೈತರು, ಉದ್ದು, ಹತ್ತಿ, ಕಬ್ಬು, ಅರಿಶಿಣ, ಮೆಕ್ಕೆಜೋಳ, ಸಿರಿಧಾನ್ಯ, ಹಲವು ಬೆಳೆಗಳ ಬಿತ್ತನೆ ಕಾರ್ಯವನ್ನು ಮುಗಿಸಿದ್ದರು. ವಾಡಿಕೆಯಂತೆ ಶ್ರಾವಣ ಮಾಸದಲ್ಲಿ ಮಳೆ ಸುರಿದು ಬಿತ್ತನೆ ಮಾಡಿರುವ ಬೆಳೆಗಳು ರೈತರಿಗೆ ಆದಾಯದ ವರದಾನವಾಗಿ ಬರುತ್ತಿದ್ದವು. ಆದರೆ, ಈವರೆಗೆ ಮಳೆ ಅಭಾವ ಆಗಿರುವುದರಿಂದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಬೆಳೆಗಳು ರೈತನ ಕಣ್ಮುಂದೆಯೇ ಒಣಗುತ್ತಿವೆ. ಬಿತ್ತನೆ ಕಾರ್ಯಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದು, ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ ಎಂದು ಅನ್ನದಾತರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.

ರೈತ ಮುಖಂಡ ಮಹಾದೇವ ಮಡಿವಾಳ ಮಾತನಾಡಿ, ''ಪ್ರಸ್ತುತ ವರ್ಷದಲ್ಲಿ ತುಂಬಾ ಅಂದ್ರೆ ತುಂಬಾ ಮಳೆ ಕಡಿಮೆಯಾಗಿದೆ. ಕೃಷಿ ಸಚಿವರು ಇತ್ತಕಡೆ ನೋಡುತ್ತಿಲ್ಲ. ಯಾವ ತಾಲೂಕಿಗೂ ಅವರು ಭೇಟಿ ನೀಡಿಲ್ಲ. ಇದರಿಂದ ಈ ಭಾಗದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಆದಷ್ಟು ಬೇಗನೆ ಕೃಷಿ ಸಚಿವರು ಈ ಭಾಗಕ್ಕೆ ಭೇಟಿ ನೀಡಿ, ಇಲ್ಲಿರುವ ರೈತರ ಸ್ಥಿತಿಯ ಕುರಿತು ಅವಲೋಕನ ಮಾಡಿ, ಈ ಭಾಗವನ್ನು ಬರಗಾಲ ಪ್ರದೇಶ ಎಂದು ಘೋಷಿಸಬೇಕು. ವಿಶೇಷ ಪ್ಯಾಕೇಜ್ ನೀಡಿ ಮತ್ತು ಒಣಗಿದ ಬೆಳೆಗಳಿಗೆ ಹೆಚ್ಚುವರಿ ಪರಿಹಾರ ನೀಡಿದರೆ ಮಾತ್ರ ರೈತರು ಉಳಿಯುತ್ತಾರೆ. ಇಲ್ಲವಾದರೆ ಸರ್ಕಾರದ ವಿರುದ್ಧ ತಿರುಗಿ ಬೀಳಬೇಕಾಗುತ್ತದೆ. ಆದಷ್ಟು ಬೇಗನೆ ಕೃಷಿ ಸಚಿವರು ಅಥಣಿ ಮತ್ತು ಕಾಗವಾಡ ತಾಲೂಕಿಗೆ ಭೇಟಿ ನೀಡಿ, ಅಧ್ಯಯನ ನಡೆಸಬೇಕು'' ಎಂದು ಆಗ್ರಹಿಸಿದ್ದಾರೆ.

ಬರಗಾಲದಿಂದ ಕಂಗಾಲಾಗಿರುವ ರೈತರ ನೋವಿಗೆ ಸರ್ಕಾರ ಸ್ಪಂದಿಸಬೇಕಿದೆ. ಮುಂಗಾರು ಹಂಗಾಮಿನಲ್ಲಿ ಆಗಿರುವ ನಷ್ಟಕ್ಕೆ ಪರಿಹಾರ ಒದಗಿಸಬೇಕಿದೆ.

ಇದನ್ನೂ ಓದಿ : ಮಾಯವಾದ ಮಳೆ, ಬಿರುಕು ಬಿಟ್ಟಿದೆ ಗದ್ದೆ; ಆಕಾಶದತ್ತ ಮುಖ ಮಾಡಿದ ಅನ್ನದಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.