ETV Bharat / state

ಬೆಳಗಾವಿ: ದೇವಸ್ಥಾನದ ಮುಂದೆ ಪತ್ನಿ ಎದುರೇ ಪತಿ ಬರ್ಬರ ಹತ್ಯೆ.. ಆರೋಪಿ ಹೆಡೆಮುರಿ ಕಟ್ಟಿದ ಪೊಲೀಸ್

author img

By

Published : Jul 17, 2023, 12:38 PM IST

Updated : Jul 17, 2023, 7:56 PM IST

Husband killed in front of wife in front of temple
ದೇವಸ್ಥಾನ ಮುಂದೆ ಹೆಂಡತಿ ಎದುರೇ ಗಂಡನ ಹತ್ಯೆ

ಬೆಳಗಾವಿಯಲ್ಲಿ ಭೀಕರ ಹತ್ಯೆ ನಡೆದಿದೆ. ಪತ್ನಿಯ ಎದುರೇ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿ ಕೊಲೆ ಮಾಡಿದ್ದಾನೆ. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಪಾತಕಿಯನ್ನು ಅರೆಸ್ಟ್​ ಮಾಡುವಲ್ಲಿ ಪೊಲೀಸರು ಸಕ್ಸಸ್​ ಆಗಿದ್ದಾರೆ.

ದೇವಸ್ಥಾನದ ಮುಂದೆ ಪತ್ನಿ ಎದುರೇ ಪತಿ ಬರ್ಬರ ಹತ್ಯೆ.. ಆರೋಪಿ ಹೆಡೆಮುರಿ ಕಟ್ಟಿದ ಪೊಲೀಸ್

ಬೆಳಗಾವಿ: ಪತ್ನಿಯ ಕಣ್ಣೆದುರೇ ಪತಿಯ ಮೇಲೆ‌ ಮಾರಕಾಸ್ತ್ರದಿಂದ ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಿರುವ ದುಷ್ಕರ್ಮಿ ಬಳಿಕ ಸ್ಥಳದಿಂದ ಪರಾರಿಯಾದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿತ್ತು. ಶಂಕರ್ ಸಿದ್ದಪ್ಪ ಜಗಮುತ್ತಿ (25) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭೈರನಟ್ಟಿ ಗ್ರಾಮದ ಶ್ರೀಧರ(22) ಬಂಧಿತ ಆರೋಪಿ. ಅಮಾವಾಸ್ಯೆ ಹಿನ್ನೆಲೆ ವಡೇರಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಪತ್ನಿ ಪ್ರಿಯಾಂಕ ಜೊತೆಗೆ ಕೊಲೆಯಾದ ಶಂಕರ್ ಆಗಮಿಸಿದ್ದನು.‌ ದೇವರ ದರ್ಶನ ಪಡೆದ ಬಳಿಕ ವಾಪಸ್​ ಬರುತ್ತಿದ್ದ ವೇಳೆ ದೇವಸ್ಥಾನ ಆವರಣದಲ್ಲೇ ಆರೋಪಿ ಶ್ರೀಧರ ದಾಳಿ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಮೂಡಲಗಿ ಠಾಣೆ ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು. ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿ ಶ್ರೀಧರನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ, ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಮಾರಕಾಯುಧವನ್ನು ವಶಕ್ಕೆ ಪಡೆದಿದ್ದೇವೆ. ಕೊಲೆ ಹಿಂದೆ ಇನ್ನು ಯಾರಾದರೂ ಇದ್ದಾರಾ ಎಂಬ ಬಗ್ಗೆಯೂ ವಿಚಾರಿಸುತ್ತಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದಿದ್ದಾರೆ.

19 ನೇ ತಾರೀಖಿಗೆ ಮದುವೆಯಾಗಿ 4 ತಿಂಗಳು: ಕಳೆದ ಮೂರು ತಿಂಗಳ ಹಿಂದಷ್ಟೇ ಶಂಕರ್ ಮದುವೆಯಾಗಿತ್ತು. ಇಂದು ದೇವಸ್ಥಾನಕ್ಕೆ ಬಂದಿದ್ದಾಗ ಪತ್ನಿ ಮುಂದೆಯೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಪತ್ನಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪತಿಯ ಕೊಲೆಯನ್ನು ಕಣ್ಣಾರೆ ಕಂಡ ಪ್ರಿಯಾಂಕಾ ಪ್ರತಿಕ್ರಿಯಿಸಿ, "ನಿನ್ನೆ ತಡರಾತ್ರಿ ಪತಿ ನನ್ನ ಬರ್ತ್‌ಡೇ ಆಚರಿಸಿದ್ದರು. ಕುಟುಂಬಸ್ಥರೊಂದಿಗಿದ್ದು ಖುಷಿಪಟ್ಟಿದ್ದರು. ಇಂದು ಬೆಳಗ್ಗೆ ನನ್ನನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದರು. ಬೈಕ್ ತಿರುಗಿಸಿಕೊಂಡು ಬರ್ತಾರೆ ಅಂತ ನಾನು ಮುಂದೆ ಹೋಗಿ ನಿಂತುಕೊಂಡಿದ್ದೆ. ಅಷ್ಟರಲ್ಲಿ ಲಾಂಗ್ ಹಿಡಿದುಕೊಂಡು ಬಂದ ಒಬ್ಬ ವ್ಯಕ್ತಿ ಗಂಡನ ಮೇಲೆ ಹಲ್ಲೆ ಮಾಡಿ ಪರಾರಿಯಾದ. ನಾನು ಓಡಿ ಹೋಗುವಷ್ಟರಲ್ಲಿ ಅವರು ಕೆಳಗೆ ಬಿದ್ದಿದ್ದರು" ಎಂದು ಘಟನೆಯನ್ನು ವಿವರಿಸಿದರು. "ಮದುವೆಯಾಗಿ ಇದೇ 19ನೇ ತಾರೀಕಿಗೆ ನಾಲ್ಕು ತಿಂಗಳು ಪೂರ್ಣವಾಗುತ್ತಿತ್ತು" ಎಂದು ಅವರು ಕಣ್ಣೀರು ಹಾಕಿದರು.

ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ವೈಯಕ್ತಿಕ ಕಾರಣವೋ..? ಅಥವಾ ಮತ್ಯಾವುದೋ ಕಾರಣಕ್ಕೋ ಯುವಕನ ಹತ್ಯೆಯಾಗಿದ್ದು, ಆರೋಪಿ ಕೂಡ ಜೈಲು ಪಾಲಾಗಿದ್ದಾನೆ. ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ನಿಖರ ಕಾರಣ ಗೊತ್ತಾಗಲಿದೆ‌.

ಇದನ್ನೂ ಓದಿ: Vijayapura crime: ರೌಡಿಶೀಟರ್ ಬರ್ಬರ ಹತ್ಯೆ ಪ್ರಕರಣ.. ಮೂವರು ಆರೋಪಿಗಳ ಬಂಧನ

Last Updated :Jul 17, 2023, 7:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.