ಬೆಳಗಾವಿ : ಆರ್ಎಸ್ಎಸ್ ನಾಯಕರನ್ನು ಮೆಚ್ಚಿಸಲು ಸಚಿವ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಸದ್ಯ ರಾಜ್ಯದಲ್ಲಿ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಬೂಟಾಟಿಕೆಯ ಬೀದಿ ಚಳವಳಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಸಂಗೊಳ್ಳಿ ರಾಯಣ್ಣ ಸ್ಮಾರಕ ಪ್ರಾಧಿಕಾರ ರಚನೆ ಹೋರಾಟ ಸಮಿತಿ ಅಧ್ಯಕ್ಷ ಅರವಿಂದ ದಳವಾಯಿ ಆರೋಪಿಸಿದರು.
ಇದನ್ನೂ ಓದಿ: ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಲು ಆಗ್ರಹಿಸಿ ಸ್ವಾಮೀಜಿ ನೇತೃತ್ವದಲ್ಲಿ ಧರಣಿ
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸಚಿವ ಕೆ ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ಕುರುಬ ಸಮುದಾಯಕ್ಕಾಗಿ ನಡೆಯುತ್ತಿರುವ ಎಸ್ಟಿ ಹೋರಾಟ ಕುರಿತು ಒಮ್ಮೆಯೂ ಶಾಸನ ಸಭೆಯಲ್ಲಿ ಚರ್ಚಿಸಿಲ್ಲ. ರಾಜ್ಯದ ಮುಖ್ಯಮಂತ್ರಿಯನ್ನು ಬಿಟ್ಟು ಎಲ್ಲೋ ಕುಳಿತ ಆರ್ಎಸ್ಎಸ್ ಮುಖಂಡರಿಗೆ ಈ ಮನವಿ ಕೊಟ್ರೆ ನಮ್ಮ ಬೇಡಿಕೆ ಈಡೇರುವುದಿಲ್ಲ. ಇದೆಲ್ಲವೂ ನಾಟಕೀಯ ರಾಜಕಾರಣ. ಇವರು ಮಾಡುತ್ತಿರುವ ಎಸ್ಟಿ ಹೋರಾಟದ ಬೀದಿ ಚಳವಳಿ ಆರ್ಎಸ್ಎಸ್ ನಾಯಕರನ್ನು ಮೆಚ್ಚಿಸಲು ಮಾಡಿರುವ ತಂತ್ರ ಎಂದು ಕುಟುಕಿದರು.
ಒಂದು ವೇಳೆ ಈಶ್ವರಪ್ಪನವರಿಗೆ ಕುರುಬ ಸಮಾಜದ ಮೇಲೆ ಕಳಕಳಿ ಇದ್ರೆ, ಹೋರಾಟ ನಿಲ್ಲಿಸಿ ಶಾಸನ ಹಾಗೂ ಲೋಕಸಭೆಯಲ್ಲಿ ಚರ್ಚಿಸಲಿ. ಸಂವಿಧಾನದ ಯಾವುದೇ ಹುದ್ದೆ ಪಡೆಯದ ಆರ್ಎಸ್ಎಸ್ ಮುಖಂಡ ಬಿ.ಎಲ್.ಸಂತೋಷ ಅವರನ್ನು ಭೇಟಿ ಮಾಡಿ ಅವರಲ್ಲಿ ಮನವಿ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ಆಆರ್ಎಸ್ಎಸ್ ಪ್ರಾಯೋಜಿತ ಹೋರಾಟವಾಗಿದೆ.
ರಾಜಕೀಯ ಹುನ್ನಾರ ಇಟ್ಟುಕೊಂಡು ಯಾರನ್ನೋ ಮೆಚ್ಚಿಸಲು ಈ ಹೋರಾಟ ನಡೆಸಲಾಗುತ್ತಿದೆ. ಅವರಿಗೆ ಸಮಾಜದ ಮೇಲೆ ಕಾಳಜಿ ಇದ್ರೆ ಬಾಗಲಕೋಟೆಯಲ್ಲಿ ನ.29ರಂದು ನಡೆಯುವ ಬೆಳಗಾವಿ ವಿಭಾಗ ಮಟ್ಟದ ಸಮ್ಮೇಳನದಲ್ಲಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಬೇಕು. ಇಲ್ಲವೇ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಎಸ್ಟಿ ಪಂಗಡಕ್ಕೆ 7.5ರಷ್ಟು ಮೀಸಲಾತಿಗೆ ಆಗ್ರಹ.. ವಾಲ್ಮೀಕಿ ಪೀಠದ ಶ್ರೀ ನೇತೃತ್ವದಲ್ಲಿ ಮತ್ತೆ ಪ್ರತಿಭಟನೆ!
ಸಂಗೊಳ್ಳಿ ರಾಯಣ್ಣ ಸ್ಮಾರಕ ಪ್ರಾಧಿಕಾರ ರಚನೆ ಹೋರಾಟ ಸಮಿತಿ ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, ಸಚಿವ ಕೆ.ಎಸ್.ಈಶ್ವರಪ್ಪನವರ ಹೆಗಲು ಮೇಲೆ ಗನ್ ಇಟ್ಟು, ಸಿಎಂ ಯಡಿಯೂರಪ್ಪ ಅವರನ್ನೂ ಶೂಟ್ ಮಾಡುವಂತೆ ಬಿಜೆಪಿಯ ಬಿ.ಎಲ್.ಸಂತೋಷ ಅವರು ರಾಜ್ಯದಲ್ಲಿ ಕುರುಬ ಸಮಾಜವನ್ನು ಮೀಸಲಾತಿಗಾಗಿ ಎಸ್ಟಿ ಸ್ಥಾನಮಾನದ ಬೀದಿ ಚಳವಳಿ ನಡೆಸುವ ಹುನ್ನಾರ ನಡೆಸುತ್ತಿದ್ದಾರೆಯೇ ಹೊರತು, ಇಡೀ ಸಮಾಜಕ್ಕೆ ಒಳಿತು ಮಾಡುವ ಉದ್ದೇಶ ಇಲ್ಲ ಎಂದು ಆರೋಪಿಸಿದರು.