ETV Bharat / state

ಎನ್ಇಪಿ ರದ್ದು ಕುರಿತು ನಿಯಮ 59ರ ಅಡಿ ಚರ್ಚೆಗೆ ಪಟ್ಟು: ಸದನದ ಬಾವಿಗಿಳಿದ ಬಿಜೆಪಿ ಸದಸ್ಯರು

author img

By ETV Bharat Karnataka Team

Published : Dec 6, 2023, 4:45 PM IST

ವಿಧಾನ ಪರಿಷತ್ ಕಲಾಪ
ವಿಧಾನ ಪರಿಷತ್ ಕಲಾಪ

ನಿಯಮ 59ರ ಅಡಿ ಎನ್ಇಪಿ ರದ್ದತಿ ಕುರಿತ ಚರ್ಚೆಗೆ ಅವಕಾಶ ಕಲ್ಪಿಸುವಂತೆ ನಿಲುವಳಿ ಸೂಚನೆ ಮಂಡಿಸಿದರು.

ಬೆಳಗಾವಿ/ಬೆಂಗಳೂರು : ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ವಿಚಾರದ ಕುರಿತು ನಿಯಮ 59ರ ಅಡಿ ಚರ್ಚೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನ ಪರಿಷತ್​ನಲ್ಲಿ ಧರಣಿ ನಡೆಸಿದರು. ನಿಯಮ 330 ಅಡಿ ಚರ್ಚೆಗೆ ಅವಕಾಶ ನೀಡುವ ರೂಲಿಂಗ್ ನೀಡಿದರೂ ಒಪ್ಪದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿಗೆ ಮುಂದಾದರು. ಕೂಡಲೇ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿಕೆ ಮಾಡಿದ್ದರು.

ವಿಧಾನ ಪರಿಷತ್ ಕಲಾಪದಲ್ಲಿ ಶೂನ್ಯವೇಳೆ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕ ಕೋಟ ಶ್ರೀನಿವಾಸ ಪೂಜಾರಿ ನಿಯಮ 59ರ ಅಡಿ ಎನ್ಇಪಿ ರದ್ದತಿ ಕುರಿತ ಚರ್ಚೆಗೆ ಅವಕಾಶ ಕಲ್ಪಿಸುವಂತೆ ನಿಲುವಳಿ ಸೂಚನೆ ಮಂಡಿಸಿದರು. ಎನ್ಇಪಿ ರದ್ದತಿಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗೊಂದಲವಾಗಿದೆ. ಹಾಗಾಗಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಕೂಡಲೇ ಇದಕ್ಕೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಈಗಾಗಲೇ ನಿಯಮ 59ರ ಅಡಿ ಎರಡು ವಿಷಯ ಚರ್ಚೆಗೆ ನಿಗದಿಯಾಗಿದೆ. ಹಾಗಾಗಿ ಈ ವಿಷಯವನ್ನು 330ಕ್ಕೆ ಪರಿವರ್ತನೆ ಮಾಡಲಾಗುತ್ತಿದೆ ಎಂದು ರೂಲಿಂಗ್ ನೀಡಿದರು. ಆದರೆ ನಿಯಮ 59ರ ಅಡಿ ಏಕೆ ಚರ್ಚೆಗೆ ಅವಕಾಶ ಕೋರುತ್ತಿದ್ದೇವೆ ಎಂದು ಆಲಿಸಿ ನಂತರ ಪೀಠ ತೀರ್ಮಾನಿಸಬೇಕು. ನಮ್ಮ ಪ್ರಸ್ತಾಪ ನಿಯಮ 59ರ ರೂಪದಲ್ಲಿದೆ. ಹಾಗಾಗಿ ಪ್ರಾಥಮಿಕವಾಗಿ ವಿಷಯ ಪ್ರಸ್ತಾಪ ಮಾಡಲು ಅವಕಾಶ ನೀಡಬೇಕು. ಇದು ಗಂಭೀರವಾದ ವಿಚಾರ ಎನ್ನುತ್ತಾ ಎನ್ಇಪಿ ಕುರಿತು ವಿವರವಾಗಿ ವಿವರಿಸಲು ಮುಂದಾದರು.

ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿ ನಿಯಮ 330ಕ್ಕೆ ರೂಲಿಂಗ್ ಕೊಟ್ಟಾದ ನಂತರ ಮಾತು ಯಾಕೆ? ಎಂದು ಪ್ರಶ್ನಿಸಿದರು. ವಿಷಯದ ಪ್ರಸ್ತಾಪಕ್ಕೆ ಅವಕಾಶ ಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಪಟ್ಟು ಹಿಡಿದರು. ಇದಕ್ಕೆ ಸಭಾಪತಿ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಒಪ್ಪದ ಕೋಟ ಹಾಗಾದರೆ ನಮಗೆ ನಿಯಮ 330 ಬೇಡ, ನಿಯಮ 59ರಲ್ಲಿಯೇ ಬೇಕು ಎಂದು ಒತ್ತಾಯಿಸಿದರು. ಮಾತನಾಡಲು ಅವಕಾಶ ನೀಡದೆ ಇದ್ದರೆ ಸದನದ ಬಾವಿಯಲ್ಲಿ ಕುಳಿತುಕೊಳ್ಳುವ ಎಚ್ಚರಿಕೆ ನೀಡಿದರು. ಇದಕ್ಕೆ ಗರಂ ಆದ ಹೊರಟ್ಟಿ ಧರಣಿ ಕುಳಿತುಕೊಳ್ಳಿ ಎಂದರು. ಈ ವೇಳೆ ಬಿಜೆಪಿ ಬೇಡಿಕೆಗೆ ಕಿಡಿಕಾರಿದ ಕಾಂಗ್ರೆಸ್ ಸದಸ್ಯರು, ಬಿಜೆಪಿಯವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಾತಿನ ಚಕಮಕಿ ನಡುವೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಹಿರಿಯ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಕೋಟ ಶ್ರೀನಿವಾಸ ಪೂಜಾರಿ ಎನ್ಇಪಿ ಕುರಿತು ನಿಯಮ 59ರ ಅಡಿ ನಿಲುವಳಿ ಕೋರಿದ್ದಾರೆ. ಯಾಕೆ ಅದರ ಅಡಿ ಕೊಡಲ್ಲ ಎನ್ನುತ್ತೀರಿ ಎಂದು ಸ್ಪಷ್ಟೀಕರಣ ನೀಡಿ ಎಂದರು. ನಂತರ ಕೋಟ ಶ್ರೀನಿವಾಸ ಪೂಜಾರಿಗೆ ಪ್ರಾಸ್ತಾವಿಕವಾಗಿ ಮಾತನಾಡಲು ಅವಕಾಶ ನೀಡಲಾಯಿತು. ಎನ್ಇಪಿ ಬದಲಿಸಿ ಎಸ್ಇಪಿ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ 48 ಸಾವಿರ ಸರ್ಕಾರ ಶಾಲೆಗಳು ಮತ್ತು 1 ಕೋಟಿ ವಿದ್ಯಾರ್ಥಿಗಳಿದ್ದಾರೆ. ಅನೇಕ ಮಂತ್ರಿಗಳ ಬಳಿ ಖಾಸಗಿ ಶಾಲೆಗಳಿವೆ. ಅಲ್ಲಿನ ಮಕ್ಕಳಿಗೆ ಎನ್ಇಪಿ ಶಿಕ್ಷಣ ಸಿಗಲಿದೆ. ಏಕೆಂದರೆ ಐಸಿಎಸ್ಸಿ, ಸಿಬಿಎಸ್ಸಿ ಸಿಲೆಬಸ್ ಅಲ್ಲಿದೆ. ಆದರೆ ಬಡವರ ಮಕ್ಕಳು ಮಾತ್ರ ಎಸ್ಇಪಿ ಓದಬೇಕಾ? ಅಲೆಮಾರಿ, ಬಡವರು, ಹಿಂದುಳಿದ, ಎಸ್ಸಿ ಎಸ್ಟಿ ಒಟ್ಟಾರೆ ಬಡವರ ಮಕ್ಕಳಿಗೊಂದು, ಶ್ರೀಮಂತರ ಮಕ್ಕಳಿಗೊಂದು ನೀತಿ ಯಾಕೆ? ಎಂದು ಸರ್ಕಾರದ ಗಮನ ಸೆಳೆಯುತ್ತಿದ್ದೇನೆ ಎಂದರು.

ಈ ವೇಳೆ ಕಾಂಗ್ರೆಸ್​ ನಾಯಕ ಸಲೀಂ ಅಹ್ಮದ್​ ಆಕ್ಷೇಪ ವ್ಯಕ್ತಪಡಿಸಿದರು. ನಿಯಮ 330ಕ್ಕೆ ಕೊಟ್ಟ ನಂತರ ಚರ್ಚೆ ಯಾಕೆ? ಇಂದೇ ಚರ್ಚೆಗೆ ತೆಗೆದುಕೊಂಡಂತೆ ಮಾತನಾಡುತ್ತಿದ್ದಾರೆ, ಇದು ಸರಿಯಲ್ಲ. ಈಗ ಚರ್ಚೆಗೆ ಅವಕಾಶ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಅಂತಿಮವಾಗಿ ಸಭಾಪತಿ ಬಸವರಾಜ ಹೊರಟ್ಟಿ ಇನ್ನೆರಡು ನಿಮಿಷ ಮಾತನಾಡಿ ಮುಗಿಸಿ ಎಂದು ಕೋಟಾ ಶ್ರೀನಿವಾಸ ಪೂಜಾರಿಗೆ ಸೂಚಿಸಿದರು. ಇದಕ್ಕೆ ಒಪ್ಪದಿದ್ದಾಗ ಈ ನಿಲುವಳಿ ಸೂಚನೆಯನ್ನು ನಿಯಮ 330ಕ್ಕೆ ಪರಿಗಣಿಸಿ ನಾಳಿನ ಅಜೆಂಡಾದಲ್ಲಿ ಸೇರಿಸಿ ಎಂದು ರೂಲಿಂಗ್ ನೀಡಿದರು. ಸಭಾಪತಿ ರೂಲಿಂಗ್ ನೀಡಿದರೂ ನಿಯಮ 59ರ ಅಡಿ ಚರ್ಚೆಗೆ ಪಟ್ಟು ಹಿಡಿದು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಲು ಮುಂದಾದರು. ನಂತರ ಸಭಾಪತಿಗಳು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಿದ್ದರು.

ಇದನ್ನೂ ಓದಿ : ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಪಕ್ಷಗಳ ಪಟ್ಟು: ಭರವಸೆ ಹಿನ್ನೆಲೆ ಧರಣಿ ಹಿಂಪಡೆದ ಬಿಜೆಪಿ-ಜೆಡಿಎಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.