ETV Bharat / state

ಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು ಮೈತ್ರಿ ಪಕ್ಷ ಜೆಡಿಎಸ್​ಗೆ ಲಾಭವಾಗುವುದೇ?

author img

By ETV Bharat Karnataka Team

Published : Nov 14, 2023, 8:14 AM IST

BY Vijayendra
ಬಿವೈ ವಿಜಯೇಂದ್ರ

ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು, ಮೈತ್ರಿ ಪಕ್ಷ ಜೆಡಿಎಸ್​ಗೆ ಲಾಭ ಆಗಲಿದೆಯೇ ಎಂಬ ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

ಬೆಂಗಳೂರು: ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಬಿ ವೈ ವಿಜಯೇಂದ್ರ ನೇಮಕವಾಗಿರುವುದು ಜೆಡಿಎಸ್​ನಲ್ಲೂ ಉತ್ಸಾಹ ಹೆಚ್ಚಿದೆ. ಕೆಲ ದಿನಗಳಿಂದಲೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿ. ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಹೆಸರುಗಳು ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದ್ದವು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಹೈಕಮಾಂಡ್ ವಿಜಯೇಂದ್ರ ಅವರ ಹೆಸರನ್ನು ಘೋಷಿಸಿದೆ.

ವರಿಷ್ಠರ ಗೇಮ್ ಪ್ಲಾನ್​ ಇದ್ದಕ್ಕಿದ್ದಂತೆ ಬದಲಾಗಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾರಣ ಇರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಕಾಂಗ್ರೆಸ್ ಪಕ್ಷವನ್ನು ಎದುರಿಸಲು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳನ್ನು ಕನ್ಸಾಲಿಡೇಟ್ ಮಾಡಲು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತವೆಂದು ವರಿಷ್ಠರು ಯೋಚಿಸಿರಬಹುದು. ಈ ರೀತಿಯ ಹೊಂದಾಣಿಕೆಗೆ ಸಂಬಂಧಿಸಿದಂತೆ ಅದು ಒಂದು ಸೂತ್ರವನ್ನು ರಚಿಸಿ ಕುಮಾರಸ್ವಾಮಿ ಅವರಿಗೆ ವಿವರಿಸಿ ಹಲವು ದಿನಗಳೇ ಆಗಿವೆ.

ಕುಮಾರಸ್ವಾಮಿ ಅವರು ಸಹ ಲಿಂಗಾಯತ ನಾಯಕರು ರಾಜ್ಯಾಧ್ಯಕ್ಷರಾದರೆ ಒಳ್ಳೆಯದು ಎಂಬ ಮಾಹಿತಿಯನ್ನು ಬಿಜೆಪಿ ಹೈಕಮಾಂಡ್ ಮುಂದೆ ಇಟ್ಟಿದ್ದರು ಎನ್ನಲಾಗಿದೆ. ಲಿಂಗಾಯತ ಸಮುದಾಯಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದರಿಂದ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ನಿಭಾಯಿಸಲಿರುವ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗ ಅಥವಾ ಇತರ ಹಿಂದುಳಿದ ವರ್ಗಗಳ ಸಮುದಾಯಕ್ಕೆ (ಒಬಿಸಿ) ನೀಡುವುದು ಬಹುತೇಕ ಖಚಿತವಾಗಿದೆ. ಮೇಲ್ನೋಟಕ್ಕೆ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ಸಿಗಬಹುದು ಎಂಬ ಮಾತು ಕೇಳಿಬರುತ್ತಿದ್ದರೂ ಜೆಡಿಎಸ್ ಜೊತೆಗಿನ ಮೈತ್ರಿಯಾಗುವುದು ತೀರ್ಮಾನವಾಗಿರುವ ಹಿನ್ನೆಲೆಯಲ್ಲಿ ಒಬಿಸಿಗೆ ಅವಕಾಶ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಹೇಳಲಾಗುತ್ತಿದೆ.

ಒಕ್ಕಲಿಗ ಸಮುದಾಯಕ್ಕೆ ನೀಡುವುದಾದರೆ ಮಾಜಿ ಡಿಸಿಎಂ ಡಾ.ಸಿ. ಎನ್‌. ಅಶ್ವತ್ಥನಾರಾಯಣ ಹಾಗೂ ಆರ್‌. ಅಶೋಕ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಅದರಲ್ಲೂ ಅಶ್ವತ್ಥನಾರಾಯಣ ಅವರಿಗೆ ಹೆಚ್ಚು ಅವಕಾಶವಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ. ಇನ್ನು ಒಬಿಸಿ ವರ್ಗವನ್ನು ಪರಿಗಣಿಸುವ ನಿರ್ಧಾರ ಕೈಗೊಂಡಲ್ಲಿ ಮಾಜಿ ಸಚಿವ ವಿ. ಸುನೀಲ್‌ಕುಮಾರ್ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ.

ಜೆಡಿಎಸ್‌ನಲ್ಲಿ ಸಿ ಎಂ ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿಯೇ ಮುಂದುವರಿದಿದ್ದರೆ ಮೈತ್ರಿ ಪಾಲನೆ ವಿಚಾರದಲ್ಲಿ ಬಿಜೆಪಿಗೆ ಇರಿಸುಮುರಿಸಾಗುವ ಸಂಭವವಿತ್ತು. ಬಿ ವೈ ವಿಜಯೇಂದ್ರ ಜೊತೆ ಇಬ್ರಾಹಿಂ ಕಾಂಬಿನೇಷನ್ ಅನ್ನು ಬಿಜೆಪಿ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ, ಈಗ ಕುಮಾರಸ್ವಾಮಿಯೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಕಾರಣದಿಂದ ಎರಡು ಪ್ರಬಲ ಸಮುದಾಯಗಳನ್ನು ಒಗ್ಗೂಡಿಸಲು ಸಾಧ್ಯವಾಗಲಿದೆ ಎಂದು ಲೆಕ್ಕಾಚಾರ ಮಾಡಲಾಗಿದೆ.

ಕರ್ನಾಟಕದಲ್ಲಿ ಸಿದ್ಧಾಂತ ಆಧಾರಿತವಾಗಿ ಚುನಾವಣೆ ಸದ್ಯಕ್ಕಂತೂ ಕಷ್ಟ ಇಲ್ಲಿ ವರ್ಕ್‌ಔಟ್ ಆಗುವುದು ಪ್ರಬಲ ಲಿಂಗಾಯತ, ಒಕ್ಕಲಿಗ ಹಾಗೂ ಒಬಿಸಿ ಸಮುದಾಯಗಳು. ಬಹುತೇಕ ಇದೇ ಮಾದರಿಯಲ್ಲೇ ಕಳೆದ ಎರಡು ವಿಧಾನಸಭೆ ಚುನಾವಣೆಗಳು ನಡೆದಿವೆ. ಈ ಸತ್ಯ ಬಿಜೆಪಿ ದೆಹಲಿ ಹೈಕಮಾಂಡ್​ಗೂ ಈಗ ಮನವರಿಕೆಯಾಗಿದೆ. ಹಾಗಾಗಿ ಬಿಜೆಪಿ- ಜೆಡಿಎಸ್ ಮೈತ್ರಿ ಯಶಸ್ವಿಯಾಗುತ್ತದೆ ಎಂಬುದು ಜೆಡಿಎಸ್‌ನ ಬಲವಾದ ನಂಬಿಕೆಯಾಗಿದೆ.

ಜೆಡಿಎಸ್​ಗೆ ಫಲ ಸಿಗುವುದೇ?: ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಕಾರಣಕ್ಕೆ ಲಿಂಗಾಯತ ಸಮುದಾಯದ ಒಂದಷ್ಟು ಪ್ರಮಾಣದ ಮತಗಳು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂದಿದ್ದವು. ಇನ್ನು ಡಿ.ಕೆ. ಶಿವಕುಮಾರ್ ಸಿಎಂ ಆಗಬಹುದೆಂಬ ನಿರೀಕ್ಷೆಯಲ್ಲಿ ಒಕ್ಕಲಿಗರು ಕೂಡ ತಕ್ಕಮಟ್ಟಿಗೆ ಕಾಂಗ್ರೆಸ್‌ ಕಡೆಗೆ ಕೈಚಾಚಿದ್ದರು. ಆದರೆ, ಈ ಬಾರಿ ಬಿ.ವೈ. ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಜೋಡೆತ್ತಿನ ರೀತಿ ಕಾರ್ಯನಿರ್ವಹಿಸುವುದರಿಂದ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ, ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಕೆಲವು ಕಡೆ ಬಿಜೆಪಿಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರ ಉಭಯ ಪಕ್ಷಗಳಲ್ಲಿದೆ.

ಉಭಯ ಪಕ್ಷಗಳ ಮೈತ್ರಿ ಬಗ್ಗೆ ಈಗಾಗಲೇ ದೆಹಲಿ ಮಟ್ಟದಲ್ಲಿ ತೀರ್ಮಾನ ಆಗಿದೆ. ಇನ್ನು ಕ್ಷೇತ್ರಗಳ ಹಂಚಿಕೆ ಆಗುವುದು ಬಾಕಿ ಉಳಿದಿದೆ. ಒಟ್ಟು 28 ಕ್ಷೇತ್ರಗಳ ಪೈಕಿ ಜೆಡಿಎಸ್‌ಗೆ ನಾಲ್ಕರಿಂದ ಐದು ಕ್ಷೇತ್ರಗಳನ್ನು ಬಿಟ್ಟು ಕೊಡುವ ಚರ್ಚೆ ನಡೆದಿದ್ದು, ಇದೀಗ ಕುಮಾರಸ್ವಾಮಿ ಮತ್ತು ವಿಜಯೇಂದ್ರ ಅವರು ಈ ವಿಷಯದಲ್ಲಿ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ.

ಇನ್ನೊಂದೆಡೆ ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ನಾಯಕರ ಸಲಹೆ ಪಡೆಯುವಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿಯವರೇ ನಿಮಗ್ಯಾಕೆ ರಾಜ್ಯದ ಬಡವರ ಹೊಟ್ಟೆಗೆ ಹೊಡೆಯುವ ಕಿಚ್ಚು: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.