ETV Bharat / state

ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ: ಸದನದಲ್ಲಿ ಪ್ರತಿಪಕ್ಷ ಸದಸ್ಯರ ಆಕ್ರೋಶ

author img

By

Published : Feb 4, 2021, 3:58 PM IST

voice-raise-kalyana-karnataka-injustice-issue
ಸದನದಲ್ಲಿ ಪ್ರತಿಪಕ್ಷ ಸದಸ್ಯರ ಆಕ್ರೋಶ

ಈಶ್ವರ್ ಖಂಡ್ರೆ, ಅಜಯ್‍ ಸಿಂಗ್, ಪರಮೇಶ್ವರ ನಾಯ್ಕ, ಭೀಮಾ ನಾಯಕ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಸೇರಿದಂತೆ ಮತ್ತಿತರರು, ಕೇವಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ನೇಮಕಾತಿಗೆ ಆರ್ಥಿಕ ಇಲಾಖೆ ನಿರ್ಬಂಧ ಹಾಕಿದೆಯೇ? ಬೇರೆ ಬೇರೆ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ನಮ್ಮ ಭಾಗಕ್ಕೆ ಮಾತ್ರ ಏಕೆ ಇಂತಹ ತಾರತಮ್ಯ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಆರ್ಥಿಕ ಇಲಾಖೆಯ ನಿರ್ಬಂಧ ತೆರವುಗೊಂಡ ನಂತರ ನೇಮಕಾತಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.‌ ಅಶ್ವತ್ಥ ನಾರಾಯಣ ಅವರ ಪರವಾಗಿ ಸಚಿವ ಸುರೇಶ್‍ ಕುಮಾರ್ ನೀಡಿದ ಉತ್ತರಕ್ಕೆ ಅಸಮಾಧಾನಗೊಂಡು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.

ಓದಿ: ರಾಜ್ಯದ 2, 3ನೇ ಹಂತದ ನಗರಗಳಲ್ಲಿ ಹೂಡಿಕೆಗೆ ಮುಂದಾಗಿ: ಉದ್ಯಮಿಗಳಿಗೆ ಸಚಿವ ಶೆಟ್ಟರ್‌ ಕರೆ

ಪ್ರಶ್ನೋತ್ತರ ವೇಳೆ ಶಾಸಕ ಈಶ್ವರ್ ಖಂಡ್ರೆ ಅವರ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರ ಪರವಾಗಿ ಸುರೇಶ್‍ ಕುಮಾರ್ ಉತ್ತರಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಹುದ್ದೆಗಳು ಅನೇಕ ವರ್ಷದಿಂದ ಖಾಲಿ ಇರುವುದು ನನ್ನ ಗಮನಕ್ಕೆ ಬಂದಿದೆ. ಆರ್ಥಿಕ ಇಲಾಖೆಯ ನಿರ್ಬಂಧ ತೆರವಾದ ನಂತರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಈಶ್ವರ್ ಖಂಡ್ರೆ, ಅಜಯ್‍ ಸಿಂಗ್, ಪರಮೇಶ್ವರ ನಾಯ್ಕ, ಭೀಮಾ ನಾಯಕ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಸೇರಿದಂತೆ ಮತ್ತಿತರರು, ಕೇವಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ನೇಮಕಾತಿಗೆ ಆರ್ಥಿಕ ಇಲಾಖೆ ನಿರ್ಬಂಧ ಹಾಕಿದೆಯೇ? ಬೇರೆ ಬೇರೆ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ನಮ್ಮ ಭಾಗಕ್ಕೆ ಮಾತ್ರ ಏಕೆ ಇಂತಹ ತಾರತಮ್ಯ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಸರ್ಕಾರ ಎಲ್ಲಾ ರೀತಿ ಅನ್ಯಾಯ ಮಾಡುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೀರಿ. ಆರ್ಥಿಕ ಇಲಾಖೆ ಯಾವಾಗ ನಿರ್ಬಂಧವನ್ನು ತೆರವುಗೊಳಿಸಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಪಟ್ಟು ಹಿಡಿದರು.

ನಾನು ಆರ್ಥಿಕ ಇಲಾಖೆಗೆ ನಿರ್ಬಂಧ ತೆರವುಗೊಳಿಸುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆದಷ್ಟು ಬೇಗ ಇಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಕೊಡಲಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ 80 ಸರ್ಕಾರಿ, 49 ಅನುದಾನಿತ ಸೇರಿದಂತೆ ಒಟ್ಟು 129 ಪದವಿ ಕಾಲೇಜುಗಳಿವೆ. ಇದರಲ್ಲಿ ಸರ್ಕಾರಿ ಕಾಲೇಜುಗಳಲ್ಲಿ 1438 ಹುದ್ದೆಗಳ ಪೈಕಿ 967 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 471 ಹುದ್ದೆಗಳು ಖಾಲಿ ಇವೆ.

ಅನುದಾನಿತ ಕಾಲೇಜುಗಳಲ್ಲಿ 629 ಹುದ್ದೆ ಭರ್ತಿ ಮಾಡಲಾಗಿದ್ದು, 665 ಖಾಲಿಯಿವೆ. ಶೀಘ್ರದಲ್ಲೇ ಇವುಗಳನ್ನು ಭರ್ತಿ ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಹಿಂದಿನ ಸರ್ಕಾರವೇ ನೇಮಕಾತಿ ಪ್ರಕ್ರಿಯೆಗೆ ಆದೇಶ ಕೊಟ್ಟಿದ್ದು, ಈಗ ಈ ಆದೇಶವನ್ನು ಹಿಂಪಡೆಯಲಾಗಿದೆ. ಇದು ಅತ್ಯಂತ ಘೋರ ಅನ್ಯಾಯ. ನೀವು ಕಲ್ಯಾಣ ಕರ್ನಾಟಕವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.