ETV Bharat / state

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ವಿಧಾನಸಭೆಯಲ್ಲಿ ಗದ್ದಲ: ಆಡಳಿತ ಪ್ರತಿಪಕ್ಷದ ನಡುವೆ 'ವ್ಯಾಪಾರ' ವಾಗ್ವಾದ

author img

By

Published : Jul 11, 2023, 2:57 PM IST

ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲದೆ ಇದ್ದರೂ ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ವಾಗ್ವಾದ ತಾರಕಕ್ಕೇರಿತ್ತು.

Basan Gowda Patil Yatnal and Byrati Satish
ಬಸನಗೌಡ ಪಾಟೀಲ್​ ಯತ್ನಾಳ್​ ಮತ್ತು ಬೈರತಿ ಸತೀಶ್​

ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ವಾಗ್ವಾದ

ಬೆಂಗಳೂರು: ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಸಚಿವ ಬೈರತಿ ಸುರೇಶ್ ನಡುವೆ ಆರಂಭವಾದ‌ "ವ್ಯಾಪಾರʼ ವಾಗ್ವಾದ ತಾರಕಕ್ಕೇರಿ, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಗದ್ದಲ ನಡೆಸಿದ ಸನ್ನಿವೇಶ ಉಂಟಾಯಿತು. ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ಸಾಕಷ್ಟು ವಾಗ್ವಾದ ನಡೆದು, ಅಂತಿಮವಾಗಿ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾದಾಗ ನಿಯಂತ್ರಣಕ್ಕೆ ತರಲು ಸಭಾಧ್ಯಕ್ಷ ಯು ಟಿ ಖಾದರ್‌ ಸದನವನ್ನು 10 ನಿಮಿಷ ಮುಂದೂಡಿದರು.

ಶೂನ್ಯವೇಳೆಯಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ಹೊಸ ಸರ್ಕಾರ ಬಂದಾಗ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ವಾಡಿಕೆ. ಆಯಾ ಹುದ್ದೆಗೆ ಸರಿಸಮನಾದ ಅಧಿಕಾರಿಗಳನ್ನು ನೇಮಿಸಬೇಕು. ವಿಜಯಪುರ ಮಹಾನಗರ ಪಾಲಿಕೆಗೆ ಅರ್ಹತೆ ಇಲ್ಲದ ವ್ಯಕ್ತಿಯನ್ನು ವರ್ಗಾವಣೆ ಮಾಡಲಾಗಿದೆ. ಸೂಕ್ತ ವ್ಯಕ್ತಿಯನ್ನು ಮಾತ್ರ ಆಯಾ ಸ್ಥಾನಕ್ಕೆ ನಿಯೋಜಿಸಬೇಕೆಂದು ಹೈಕೋರ್ಟ್‌ ಸ್ಪಷ್ಟವಾಗಿ ಹೇಳಿದೆ, ಜತೆಗೆ ಕೆಎಟಿ ಸಹ ಆದೇಶ ನೀಡಿದೆ ಎಂದರು.

ಜಿಲ್ಲೆಯಲ್ಲಿ ಕಾರ್ಪೋರೇಷನ್‌ ಆಯುಕ್ತರ ಸ್ಥಾನ ಖಾಲಿ ಇದೆ. ಶೇ. 25 ರಷ್ಟು ಸ್ಥಾನ ಐಎಎಸ್‌, ಶೇ. 25 ರಷ್ಟು ಕೆಎಎಸ್‌ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಆದರೆ ವಲಯ ಆಯುಕ್ತರಿಗಿಂತ ಕಡಿಮೆ ದರ್ಜೆಯ ಅಧಿಕಾರಿಗಳನ್ನು ತಂದು ಕೂರಿಸಲಾಗಿದೆ. ಸಚಿವ ಬೈರತಿ ಸುರೇಶ್‌ ಅವರ ಸಮುದಾಯದವರನ್ನೇ ಇಲ್ಲಿ ವರ್ಗಾವಣೆ ಮಾಡಲಾಗಿದೆ. ಹಿಂದೆ ಇದ್ದ ಆಯುಕ್ತರು ಸುರೇಶ್‌ ಅವರ ಸಮುದಾಯದವರೇ ಆಗಿದ್ದಾರೆ. ವರ್ಗಾವಣೆಯನ್ನು ಕಾನೂನು ಉಲ್ಲಂಘಿಸಿ ಮಾಡಲಾಗಿದೆ. ನಾನು ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ಮಾಡಿಲ್ಲ. ನಮ್ಮ ಸಮುದಾಯದವರನ್ನು ವರ್ಗಾವಣೆ ಮಾಡಿ ಎಂದು ಹೇಳುತ್ತಿಲ್ಲ. ನಿಮ್ಮದೇ ಸಮುದಾಯವರನ್ನು ತಂದು ವಾಪಸ್‌ ಕೂರಿಸಿ. ಯಾವುದೋ ಕಾರ್ಕೂನ ದರ್ಜೆಯ ಅಧಿಕಾರಿಯನ್ನು ತಂದು ಕೂರಿಸಿದ್ದು ಸರಿಯಲ್ಲ. ಇದೇನು ವರ್ಗಾವಣೆ ದಂಧೆಯೇ ಎಂದು ಪ್ರಶ್ನಿಸಿದರು.

ಈ ವೇಳೆ ಸಚಿವ ಬೈರತಿ ಸುರೇಶ್‌ ಉತ್ತರಿಸಿ, ಆಯುಕ್ತರ ನೇಮಕ ವಿಚಾರದಲ್ಲಿ ಕೆಎಂಎಸ್‌ ನಿರ್ಧಾರ ಅಂತಿಮ. ನಾವು ಅದರ ಆಧಾರದ ಮೇಲೆ ಹಾಕಿದ್ದೇವೆ. ಇಲ್ಲಿ ಜಾತಿ ಬರಲ್ಲ. ಸರ್ಕಾರಿ ಅಧಿಕಾರಿ ನೇಮಕ ಆಗಿದ್ದಾರೆ. ನಮ್ಮದೋ, ಅವರದ್ದೋ ಜಾತಿ ಅಂತ ಬರಲ್ಲ ಎಂದರು. ಆಗ ಮಧ್ಯ ಪ್ರವೇಶಿಸಿದ ಯತ್ನಾಳ್‌ ಎರಡನೇ ದರ್ಜೆ ಗುಮಾಸ್ತನ ಅರ್ಹತೆ ಇಲ್ಲ ಆ ವ್ಯಕ್ತಿಗೆ ಎಂದಾಗ, ಸಿಎಂ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ. ನಿಮ್ಮ ಪ್ರಶ್ನೆಗೆ ಸಚಿವರು ಕ್ರಮ ಕೈಗೊಳ್ಳುತ್ತಾರೆ. ನೀವು ಹಿರಿಯ ಸದಸ್ಯರು, ಚರ್ಚೆ ಮಾಡುವಂತಿಲ್ಲ ಎಂದರು. ಆಗ ನಿಧಾನವಾಗಿ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ಶುರುವಾಯಿತು.

ಯತ್ನಾಳ್‌ ಪರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಶೋಕ್‌ ಸೇರಿದಂತೆ ಹಲವು ಸದಸ್ಯರು ನಿಂತರೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವ ಕೆ. ಜೆ. ಜಾರ್ಜ್‌ ಮುಂತಾದವರು ಸುರೇಶ್‌ ಪರ ನಿಂತರು. ನಿಧಾನವಾಗಿ ಸದನದಲ್ಲಿ ದಂಧೆ ವಿಚಾರ ಕಾವು ಪಡೆಯತೊಡಗಿತು. ಬಸವರಾಜ ಬೊಮ್ಮಾಯಿ ಅವರು ಯತ್ನಾಳ್‌ ಪರವಾಗಿ ಮಾತನಾಡಿದರು. ಯತ್ನಾಳ್‌ ಮಾತಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಆದರೆ ಈ ಮಧ್ಯೆ ವ್ಯಾಪಾರ ಅನ್ನುವ ವಿಚಾರ ಹೆಚ್ಚು ಬಿಸಿ ಪಡೆಯಿತು. ಕೇಡರ್‌ಗೆ ಸಂಬಂಧಿಸದವರನ್ನು ನೇಮಿಸಿದ್ದೀರಾ ಅಂದರೆ ಆ ವ್ಯಕ್ತಿ ಅಷ್ಟು ಪ್ರಭಾವಿಯಾ? ನಿಮ್ಮ ನೇಮಕ ಅನುಮಾನ ತರಿಸುತ್ತದೆ ಎಂದರು. ಸಿಎಂ ಹಾಗೂ ಡಿಸಿಎಂ ಆಕ್ರೋಶಗೊಂಡು ಎದ್ದು ನಿಂತು ತಮ್ಮ ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಸದಸ್ಯರಾದ ಶಿವಲಿಂಗೇಗೌಡ, ಬಸವರಾಜ ರಾಯರೆಡ್ಡಿ ಮತ್ತಿತರರು ರೋಷ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಶಾಸಕ ರಾಯರೆಡ್ಡಿ ಪಾಯಿಂಟ್‌ ಆಫ್‌ ಆರ್ಡರ್‌ ಮೇಲೆ ಮಾತನಾಡಿ, ಇಂತಹ ವಿಚಾರ ಚರ್ಚೆಗೆ ಅವಕಾಶ ಇಲ್ಲ. ಕೇಂದ್ರ ಸಚಿವರಾಗಿದ್ದವರು ಯತ್ನಾಳ್‌, ಬೊಮ್ಮಾಯಿ ಸಿಎಂ ಆಗಿದ್ದವರು. ವ್ಯಾಪಾರ ಎಂಬ ಪದದ ಅಗತ್ಯವಿಲ್ಲ. ಇದನ್ನು ಕಡತದಿಂದ ತೆಗೆದುಹಾಕಿ. ಸಹಜವಾಗಿ ಕಲಾಪ ನಡೆಯಲು ಅವಕಾಶ ಮಾಡಿಕೊಡಿ ಎಂದರು. ಯತ್ನಾಳ್‌, ಬೊಮ್ಮಾಯಿ ಮಧ್ಯಪ್ರವೇಶಿಸಿದರು. ಬೊಮ್ಮಾಯಿಯವರೇ ನೀವು ಗಂಟಲು ಏರಿಸಿ ಮಾತನಾಡಿದರೆ ನಾವು ಮಾತನಾಡಬಾರದಾ? ಜನರಿಂದ ಗೆದ್ದು ಬಂದಿದ್ದೇವೆ. ನಮಗೂ ವಿಚಾರ ಗೊತ್ತು ಎಂದು ರಾಯರೆಡ್ಡಿ ಹೇಳಿದರು.

ಸಭಾಧ್ಯಕ್ಷರು ಸಚಿವರನ್ನು ಆಹ್ವಾನಿಸಿ ಉತ್ತರಿಸುವಂತೆ ಸೂಚಿಸಿದರು. ಸಚಿವ ಸುರೇಶ್‌ ಮಾತನಾಡಿ, ವ್ಯಾಪಾರ, ವ್ಯವಹಾರ ಮಾಡುವುದು ಯತ್ನಾಳ್‌ ಅವರಿಗೆ ಅಭ್ಯಾಸ ಇರಬಹುದು, ಆದರೆ ನನಗೆ ಇಲ್ಲ ಅಧ್ಯಕ್ಷರೇ. ಅಂತ ದರ್ದನ್ನು ದೇವರು ನನಗೆ ಕೊಟ್ಟಿಲ್ಲ. ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದವರು ನೀವು ಇಷ್ಟು ಕೀಳಾಗಿ ಮಾತನಾಡಬಾರದು. ಸೌಜನ್ಯಕ್ಕಾದರೂ ಅಧಿಕಾರಿ ನನ್ನ ಬಳಿ ಬಂದಿಲ್ಲ ಎನ್ನುತ್ತೀರಿ. ಅಧಿಕಾರಿಯನ್ನು ನಿಮ್ಮ ವ್ಯವಹಾರಕ್ಕೆ ಬಿಡಬೇಕಾ ನಾವು ಎಂದು ಗರಂ ಆದರು.

ಯತ್ನಾಳ್‌ ಹಾಗೂ ಡಿಕೆಶಿ ನಡುವಿನ ವಾಗ್ವಾದ ಹೆಚ್ಚಾದಾಗ, ಸಿಎಂ ಎದ್ದು ನಿಂತು, ನಾನು ಹೇಳಿದ್ದು ಏನು? ಅವರು ಪರಿಶೀಲಿಸುತ್ತೇವೆ ಎಂದು ಹೇಳಿಲ್ಲವಾ? ಸುಮ್ಮನೆ ಸದನದ ಬಾವಿಗಿಳಿದು ಧರಣಿ ನಡೆಸುವುದು ಸರಿಯಲ್ಲ. ಶೂನ್ಯವೇಳೆಯಲ್ಲಿ ಹೀಗೆಯೇ ಉತ್ತರ ಕೊಡಬೇಕೆಂದಿಲ್ಲ. ನಂತರ ಇಲ್ಲವೇ ಮಾರನೇ ದಿನ ಕೊಡುತ್ತೇವೆ ಎನ್ನಬಹುದು. ಸರ್ಕಾರ ಉತ್ತರ ಕೊಡಬಹುದು, ಇಲ್ಲದೇ ಇರಬಹುದು. ನೀವು ವ್ಯಾಪಾರ ಮಾಡಿದ್ದೀರಿ, ನಾವು ಮಾಡಿಲ್ಲ ಎನ್ನುವುದು ದೊಡ್ಡ ಸಮಸ್ಯೆಯಾದರೆ ಕಡತದಿಂದ ಶಬ್ಧ ತೆಗೆದುಹಾಕಿಬಿಡಿ. ಕಡತದಲ್ಲಿ ಇದೆಯಾ ಇಲ್ಲವಾ ಎನ್ನುವುದನ್ನು ನೋಡಿ. ವ್ಯಾಪಾರ ಮಾಡಿಕೊಂಡಿದ್ದೀರಿ ಎಂದು ಪ್ರತಿಪಕ್ಷದವರು ಹೇಳಿದಾಗ ನಾವು ಸುಮ್ಮನಿರಬೇಕಾ? ಜನ ತೀರ್ಮಾನಿಸಿದ್ದರಿಂದ ನೀವು ಅಲ್ಲಿ ಹೋಗಿ ಕುಳಿತಿದ್ದೀರಾ ಎಂದರು. ಸಚಿವರು ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾದರು. ವರ್ಗಾವಣೆ ವಿಚಾರದ ಬಗ್ಗೆ ತನಿಖೆ ಆಗಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ರಾಜಮಾರ್ಗ ಹಿಡಿದ ಬಿಜೆಪಿ ಸೋತಿತು, ವಾಮಮಾರ್ಗ ಹಿಡಿದ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿತು: ಛಲವಾದಿ ನಾರಾಯಣಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.