ETV Bharat / state

SC-ST ಪ್ರಕರಣಗಳ ವಕಾಲತ್ತು ವಹಿಸುವ ಅಭಿಯೋಜಕರಿಗೆ ತರಬೇತಿ ನೀಡಿ: ಹೈಕೋರ್ಟ್ ಸಲಹೆ

author img

By

Published : Jun 1, 2021, 9:37 PM IST

Updated : Jun 2, 2021, 2:45 PM IST

High court
ಹೈಕೋರ್ಟ್

ಪ್ರಕರಣಗಳ ತನಿಖೆ ಸಾಕಷ್ಟು ವಿಳಂಬವಾಗುತ್ತಿದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳು ಖುಲಾಸೆಯಾಗುತ್ತಿರುವ ಅಂಶವನ್ನು ಪರಿಗಣಿಸಿದ್ದ ಪೀಠ, ಪ್ರಕರಣಗಳ ತನಿಖಾಧಿಕಾರಿಗಳಿಗೆ ಹಾಗೂ ಅಭಿಯೋಜಕರಿಗೆ ಕಾಯ್ದೆಯ ಕುರಿತು ಹೆಚ್ಚಿನ ಮಾಹಿತಿ ಮತ್ತು ತರಬೇತಿ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣಗಳಲ್ಲಿ ವಕಾಲತ್ತು ವಹಿಸುವ ಅಭಿಯೋಜಕರಿಗೆ ಆನ್​​ಲೈನ್ ಮೂಲಕ ತರಬೇತಿ ನೀಡಲು ಕರ್ನಾಟಕ ನ್ಯಾಯಾಂಗ ಅಕಾಡೆಮಿಯನ್ನು ಸಂಪರ್ಕಿಸಬಹುದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ರಾಜ್ಯದಲ್ಲಿ ಎಸ್​​​ಸಿ-ಎಸ್​​ಟಿ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಕೋರಿ ಪರಿಶಿಷ್ಟ ಜಾತಿ-ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಈ ಸಲಹೆ ನೀಡಿದೆ.

ಕಾಯ್ಡೆಯಡಿ ದಾಖಲಾದ ಪ್ರಕರಣಗಳ ತನಿಖೆ ಸಾಕಷ್ಟು ವಿಳಂಬವಾಗುತ್ತಿದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳು ಖುಲಾಸೆಯಾಗುತ್ತಿರುವ ಅಂಶವನ್ನು ಪರಿಗಣಿಸಿದ್ದ ಪೀಠ, ಪ್ರಕರಣಗಳ ತನಿಖಾಧಿಕಾರಿಗಳಿಗೆ ಹಾಗೂ ಅಭಿಯೋಜಕರಿಗೆ ಕಾಯ್ದೆಯ ಕುರಿತು ಹೆಚ್ಚಿನ ಮಾಹಿತಿ ಮತ್ತು ತರಬೇತಿ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೇ, ಈ ಸಂಬಂಧ ನ್ಯಾಯಾಂಗ ಅಕಾಡೆಮಿಯಿಂದ ತರಬೇತಿ ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಿತ್ತು.

ಅರ್ಜಿ ಮತ್ತೆ ವಿಚಾರಣೆಗೆ ಬಂದ ವೇಳೆ ನ್ಯಾಯಾಲಯದ ಸೂಚನೆ ಪಾಲನೆಯಾಗದ ಹಿನ್ನೆಲೆ, ಸರ್ಕಾರ ಅಭಿಯೋಜಕರಿಗೆ ತರಬೇತಿ ಕೊಡಿಸಲು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರನ್ನು ಸಂಪರ್ಕಿಸಬಹುದು. ಹಾಗೆಯೇ ಆನ್​ಲೈನ್ ಮೂಲಕವೇ ತರಬೇತಿ ಕೊಡಿಸಲು ಕ್ರಮ ಕೈಗೊಳ್ಳಬಹುದು. ಸೂಕ್ತ ತರಬೇತಿ ಸಿಕ್ಕಲ್ಲಿ ತನಿಖಾಧಿಕಾರಿಗಳ ತನಿಖಾ ಕ್ರಮದಲ್ಲಿ ಹಾಗೂ ಅಭಿಯೋಜಕರ ಕೆಲಸದಲ್ಲಿ ಗುಣಮಟ್ಟ ಕಾಣಬಹುದು ಎಂದಿದೆ. ಹಾಗೆಯೇ ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.

ಓದಿ: ತಯಾರಿಕಾ ವಲಯಕ್ಕೆ ಕೈಗಾರಿಕಾ ಆಮ್ಲಜನಕ ಪೂರೈಕೆ ಪುನಾರಂಭಿಸಿ; ಪೀಣ್ಯ ಕೈಗಾರಿಕಾ ಸಂಘ ಮನವಿ

Last Updated :Jun 2, 2021, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.