ETV Bharat / state

ಕಾಂಗ್ರೆಸ್​ನ ಹಿರಿಯ ಮುಖಂಡ ಸಿ ಎಂ ಧನಂಜಯ್, ಪುಟ್ಟಸ್ವಾಮಿ ಜೆಡಿಎಸ್​ ಸೇರ್ಪಡೆ; ದತ್ತಾ ವಿರುದ್ಧ ದಳಪತಿಗಳ ವಾಗ್ದಾಳಿ

author img

By

Published : Mar 4, 2023, 9:08 AM IST

Updated : Mar 4, 2023, 1:15 PM IST

Pancharatna Rath Yatra
ಕಾಂಗ್ರೆಸ್​ನ ಹಿರಿಯ ಮುಖಂಡ ಸಿ ಎಂ ಧನಂಜಯ್, ಪುಟ್ಟಸ್ವಾಮಿ ಜೆಡಿಎಸ್​ ಸೇರ್ಪಡೆ

ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಎಂ. ಧನಂಜಯ್ ಹಾಗೂ ಕೊಳ್ಳೇಗಾಲ ಕ್ಷೇತ್ರದ ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತಿ ಹೊಂದಿರುವ ಸರ್ಕಲ್ ಇನ್ಸ್​ಪೆಕ್ಟರ್ ಪುಟ್ಟಸ್ವಾಮಿ ಶುಕ್ರವಾರ ಜೆಡಿಎಸ್‌ಗೆ ಸೇರ್ಪಡೆಗೊಂಡರು. ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಿರಿಯ ಕಾರ್ಯಕರ್ತರು ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ದಳಪತಿಗಳು ಪಕ್ಷ ತೊರೆದ ವೈ ಎಸ್ ವಿ ದತ್ತಾ ಸೇರಿದಂತೆ ಹಲವರ ವಿರುದ್ಧ ವಾಗ್ದಾಳಿ ನಡೆಸಿದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್​ ನಾಯಕರು

ಬೆಂಗಳೂರು: ಹೆಚ್​ ಡಿ ದೇವೇಗೌಡರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯವರು ಬರೀ ಬೊಬ್ಬೆ ಹೊಡೆಯುತ್ತಿದ್ದಾರೆ ಅಷ್ಟೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ತಿರುಗೇಟು ನೀಡಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಿನ್ನಾಭಿಪ್ರಾಯ ಅಂತೀರಾ, ನೋಡಿ ವೇದಿಕೆ ಮೇಲೆ ಹೇಗೆ ಪ್ರಜ್ವಲ್, ಕುಮಾರಸ್ವಾಮಿ, ರೇವಣ್ಣ ಇದ್ದಾರೆ. ದೇವೇಗೌಡರ ವೃಕ್ಷದ ಬೀಜ ಬಲವಾಗಿದೆ. ಇದು ಮಾರುವ ಬೀಜವಲ್ಲ, ಬಿತ್ತನೆ ಬೀಜ. ಯಾವಾಗಲೂ ಇರುತ್ತದೆ ಎಂದು ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಟಾಂಗ್ ನೀಡಿದರು.

ವೈಎಸ್‌ವಿ ದತ್ತಾ ಅವರಿಗೆ ಹೇಳಿದ್ದೆ, ತಂದೆ ಸಮಾನರಾದ ದೇವೇಗೌಡರಿಗೆ ಮೋಸ ಮಾಡಬೇಡಿ ಅಂತ. ಈಗ ಅವರ ಸ್ಥಿತಿ ಏನಾಗಿದೆ, ಪಕ್ಷ ಬಿಟ್ಟು ಹೋದವರು ಮತ್ತೆ ಕೆನ್ನೆಗೆ ಹೊಡೆದುಕೊಂಡು ಇಲ್ಲಿಗೆ ಬರಬೇಕು. ಬೇರೆಯವರ ದುಡ್ಡಿಗೆ ನಾವು ಆಸೆ ಪಟ್ಟವರಲ್ಲ, ಕುಮಾರಸ್ವಾಮಿಯವರು ರಾಜ್ಯದ ಎಂಟು ಸಾವಿರದ ಐನೂರು ಕಿ.ಮೀ. ಸುತ್ತಿ ಮೂವತ್ತು ಸಾವಿರ ಹಳ್ಳಿಗಳಲ್ಲಿ ಪಂಚರತ್ನ ರಥಯಾತ್ರೆ ಮಾಡಿದ್ದಾರೆ. ಇದನ್ನು 45 ಲಕ್ಷ ಮಂದಿ ವೀಕ್ಷಿಸಿದ್ದಾರೆ. ನೀವು ಬಸ್, ಹೆಲಿಕಾಪ್ಟರ್ ಮೂಲಕ ಈ ಊರಿನಿಂದ ಆ ಊರಿಗೆ, ಆ ಊರಿನಿಂದ ಈ ಊರಿಗೆ ಹೋಗುವುದಷ್ಟೇ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಮಾತು : ನಾವು ಹೋದ‌ ಕಡೆಯೆಲ್ಲಾ ಕಾಂಗ್ರೆಸ್, ‌ಬಿಜೆಪಿ‌ ತೊರೆದು ಜೆಡಿಎಸ್‌ ಸೇರುತ್ತಿದ್ದಾರೆ. ಚುನಾವಣಾ ಪ್ರಚಾರ ಎರಡು ತಿಂಗಳ ಹಿಂದೆಯೇ ಶುರುವಾಗಿದೆ. ಜನರಿಗೋಸ್ಕರ ಯೋಜನೆ ಕೊಡುತ್ತೇನೆ ಅಂದಿದ್ದ ಏಕೈಕ ವ್ಯಕ್ತಿ ಕುಮಾರಸ್ವಾಮಿ. ಸ್ತ್ರೀ ಶಕ್ತಿ ಸಾಲ ಮನ್ನಾ,‌ ರೈತರ ಸಾಲ ಮನ್ನಾ ಮತ್ತೆ ಮಾಡೋದಾಗಿ ಹೇಳಿದ್ದಾರೆ. 8 ಗಂಟೆ ರೈತರಿಗೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ್ದಾರೆ. ಪಂಚರತ್ನ ಯಾತ್ರೆ ಶೋ ಕೊಡುವ ಯಾತ್ರೆಯಲ್ಲ. ಜನರ ಕಷ್ಟ ಅರ್ಥ ಮಾಡಿಕೊಂಡು 8 ಸಾವಿರ ಕಿ.ಮೀ‌ ಸುತ್ತುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಸಿಎಂ ಇಬ್ರಾಹಿಂ ಯಾವ ಪಕ್ಷದಲ್ಲಿ ಇರ್ತಾರೋ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ. ‌ಈ ಬಾರಿ ಇಬ್ರಾಹಿಂ ನಮ್ಮ ಜೊತೆ ಇದ್ದಾರೆ. ಜೆಡಿಎಸ್‌ ಖಂಡಿತ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು. ಬಳಿಕ ನಾವು ಕಿತ್ತಾಡಿಕೊಂಡಿದ್ವಿ ಅಂದ್ರೆ ಅದು ಭ್ರಮೆ ಎಂದ ರೇವಣ್ಣ, ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್​ನವರು‌ ಮತ ಕೇಳಬಾರದು. ನಾನು ಅಧಿಕಾರದಲ್ಲಿದ್ದಾಗ ಒಂದು ರೂಪಾಯಿ‌ ಕರೆಂಟ್ ಬಿಲ್ ಜಾಸ್ತಿ ಮಾಡಿರಲಿಲ್ಲ. 10 ವರ್ಷದಲ್ಲಿ‌ 48 ಸಾವಿರ ಕೋಟಿ ಬಾಕಿ‌ ನಷ್ಟ ಇದೆ.‌ ಬೆಂಗಳೂರಿಗೆ ದೇವೇಗೌಡ್ರು ಮಿಲಿಟರಿ‌ ಲ್ಯಾಂಡ್ ಕೊಡಿಸಿದರು, ದೇವೇಗೌಡರ ಕೊಡುಗೆ ಅಪಾ‌ರ‌ ಇದೆ ಎಂದರು.

  • ರಾಜ್ಯಾಧ್ಯಕ್ಷ ಶ್ರೀ ಸಿ.ಎಂ. ನುಇಬ್ರಾಹಿಂ, ಮಾಜಿ ಸಚಿವರಾದ ಶ್ರೀ ಹೆಚ್.ಡಿ.ರೇವಣ್ಣ, ಸಂಸದ ಶ್ರೀ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಭೋಜೇಗೌಡರು, ಶ್ರೀ ಕೆ.ಎನ್.ತಿಪ್ಪೇಸ್ವಾಮಿ, ಮಾಜಿ ಸದಸ್ಯ ಶ್ರೀ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಶ್ರೀ ಸುರೇಶ್ ಬಾಬು, ನಗರ ಘಟಕದ ಅಧ್ಯಕ್ಷ ಶ್ರೀ ಆರ್ ಪ್ರಕಾಶ್ ಇತರರು ಇದ್ದರು. 2/2 pic.twitter.com/jQ7oMAN0jl

    — ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 3, 2023 " class="align-text-top noRightClick twitterSection" data=" ">

ಮಾರ್ಚ್​ 26 ಕ್ಕೆ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭ: ಕಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ.ಎಂ. ಧನಂಜಯ ಹಾಗೂ ಕೊಳ್ಳೇಗಾಲ ಕ್ಷೇತ್ರದ ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತಿ ಹೊಂದಿರುವ ಸರ್ಕಲ್ ಇನ್ಸ್​ಪೆಕ್ಟರ್ ಪುಟ್ಟಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, 'ಈ ತಿಂಗಳ 26ರಂದು ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇದು ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿಯೇ ಮಹೋನ್ನತ ಸಮಾವೇಶ ಆಗಲಿದೆ. ಈವರೆಗೂ ಯಾರೂ ಮಾಡಿರದಂತಹ ಸಮಾವೇಶ ಅದಾಗಿರುತ್ತದೆ ಎಂದರು.

ಕುಂಬಳಗೋಡಿನಿಂದ ಪ್ರಾರಂಭವಾಗಿ ಮೈಸೂರಿನವರೆಗೆ ಸುಮಾರು 100 ಕೀ.ಮೀ ದೂರ ಬೃಹತ್ ರೋಡ್ ಶೋ ಮಾಡಲಾಗುವುದು. ಆ ರೋಡ್ ಶೋ ದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಗುವುದು. ಈ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಲಿದ್ದಾರೆ. ಇದೊಂದು ಐತಿಹಾಸಿಕ ಸಮಾವೇಶ ಆಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ಲಂಚ ಸ್ವೀಕಾರ ಪ್ರಕರಣ: ಸಿಎಂ ರಾಜೀನಾಮೆಗೆ ಆಗ್ರಹಿಸಿ ಇಂದು ಕಾಂಗ್ರೆಸ್​​ನಿಂದ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ

ಮಾ. 11 ಅಥವಾ 14ರಂದು ಜೆಡಿಎಸ್ ಎರಡನೇ ಪಟ್ಟಿ: ಇದೇ ತಿಂಗಳ 11 ಅಥವಾ 14 ರಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲಾಗುವುದು. ಹಾಸನ ಜಿಲ್ಲೆಯ ರಾಜಕಾರಣಕ್ಕೆ ನಾನು ಬಂದಿಲ್ಲ. ಅದನ್ನು ರೇವಣ್ಣ ಅವರಿಗೆ ಬಿಟ್ಟಿದ್ದೇನೆ. ಪಕ್ಷಕ್ಕೆ ದುಡಿದವರನ್ನು ನಾನು ಎಂದೂ ಕೈ ಬಿಟ್ಟಿಲ್ಲ, ತಾಳ್ಮೆ ಅನ್ನೋದು ಇಲ್ಲಿ ಮುಖ್ಯ ಎಂದ ಮಾಜಿ ಮುಖ್ಯಮಂತ್ರಿ, ಬೇಗ ಮತ್ತೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ. ಎರಡನೇ ಪಟ್ಟಿ ಇನ್ನೇನು ಅಂತಿಮ ಹಂತದಲ್ಲಿದೆ. ಆ ಪಟ್ಟಿಯಲ್ಲಿ 60ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರುಗಳು ಇರುತ್ತದೆ ಎಂದು ಹೇಳಿದರು.

ವೈಎಸ್ ವಿ ದತ್ತಾ ವಿರುದ್ಧ ಆಕ್ರೋಶ: ಧರ್ಮೇಗೌಡರ ಬದಲಾಗಿ ವೈ ಎಸ್ ವಿ ದತ್ತಾ ಅವರಿಗೆ ಪಕ್ಷವು ಕಡೂರು ಟಿಕೆಟ್ ಕೊಟ್ಟಿತು. ಪಕ್ಷಕ್ಕಾಗಿ ದುಡಿದ ನಾಯಕನಿಗೆ ಅನ್ಯಾಯ ಮಾಡಿ, ಕೈ ಕೊಟ್ಟು ಹೋದ ವ್ಯಕ್ತಿಗೆ ಟಿಕೆಟ್ ಕೊಟ್ಟೆವು. ಆದರೆ ಉಪಕಾರ ಸ್ಮರಣೆ ಮರೆತ ಆ ವ್ಯಕ್ತಿ ಕಾಂಗ್ರೆಸ್ ಸೇರಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಬಿಜೆಪಿ ವಿರುದ್ಧ ಕಿಡಿ: ಬಿಜೆಪಿ ಶಾಸಕರ ಮಗನ ಕಚೇರಿ, ಮನೆಯಲ್ಲಿ ಕೋಟಿ‌ ಕೋಟಿ ಹಣ ಸಿಕ್ಕಿದೆ. ಟೆಂಡರ್ ಹಣ ವಸೂಲಿಗೆ ಮಗನನ್ನು ಮೀಡಿಯೇಟರ್ ಮಾಡಿದ್ದಾರೆ. 40 ಲಕ್ಷ ಹಿಡಿಯಲಿಕ್ಕೆ ಹೋಗಿ ಎಂಟು ಕೋಟಿ ಹೊರಗೆ ಬಂದಿದೆ. 40 ಪರ್ಸೆಂಟ್ ಅನ್ನೋದರ ಅಳ -ಅಗಲ ಗೊತ್ತಾಗುತ್ತಿದೆ. ಒಬ್ಬೊಬ್ಬ ಬಿಜೆಪಿ ಶಾಸಕ 40-50 ಕೋಟಿ ಕ್ಯಾಷ್ ಇಟ್ಟುಕೊಂಡಿದ್ದಾರೆ. ಪಾಪದ ಹಣ ಇದು, ಲೂಟಿ ಮಾಡಿದ ಈ ಹಣದಲ್ಲಿ ಚುನಾವಣೆ ಗೆಲ್ಲೋದಕ್ಕೆ ಹೊರಟಿದ್ದಾರೆ ಎಂದು ಹೆಚ್​ಡಿಕೆ ಆಕ್ರೋಶ ಹೊರಹಾಕಿದರು.

ತಮ್ಮ ಕಾರ್ಯಕ್ರಮಗಳನ್ನು ಟೀಕೆ ಮಾಡಿರುವ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪಾಪದ ಹಣದಲ್ಲಿ ಲುಲು ಮಾಲ್​ ಕಟ್ಟಿದ್ದಾರೆ. ಮಾಲ್​ನಿಂದ ಬಂದ ಹಣವನ್ನು ಜನರಿಗೆ ನೀಡುತ್ತಿಲ್ಲ. ನಾನು ಪಂಚರತ್ನ ಯೋಜನೆ ರೂಪಿಸುವ ಬದಲು ಆ ಹಣವನೇ ಹಂಚಿಕೊಂಡು ಚುನಾವಣೆ ಗೆಲ್ಲುತ್ತಿದ್ದೆ ಎಂದರು.

Last Updated :Mar 4, 2023, 1:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.