ETV Bharat / state

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ವ್ಯತ್ಯಾಸ ಇದೆ: ನೇರವಾಗಿ ಮೋದಿ ಎದುರಿಸಬೇಕಾಗಿದೆ: ಸಚಿವ ಎಂ ಬಿ ಪಾಟೀಲ್

author img

By ETV Bharat Karnataka Team

Published : Sep 3, 2023, 4:53 PM IST

ಸಚಿವ ಎಂ ಬಿ ಪಾಟೀಲ್
ಸಚಿವ ಎಂ ಬಿ ಪಾಟೀಲ್

ನಮ್ಮ ಸಾಧನೆ ಹಾಗೂ ಮೋದಿಯವರ ವೈಫಲ್ಯಗಳನ್ನು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಸಂಕ್ಷಿಪ್ತವಾಗಿ ತಿಳಿಸುವ ಕರಪತ್ರಗಳನ್ನು ಸದ್ಯದಲ್ಲೇ ಹೊರತರಲಾಗುವುದು ಎಂದು ಸಚಿವ ಎಂ ಬಿ ಪಾಟೀಲ್ ಅವರು ತಿಳಿಸಿದ್ದಾರೆ.

ಬೆಂಗಳೂರು : ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ವ್ಯತ್ಯಾಸ ಇದೆ. ನೇರವಾಗಿ ಮೋದಿ ಎದುರಿಸಬೇಕಾಗಿದೆ ಎಂದು ಸಚಿವ ಎಂ ಬಿ ಪಾಟೀಲ್ ಅವರು ತಿಳಿಸಿದರು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭಾರಿ ಗೆಲುವಿಗೆ ಶ್ರಮಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪ್ರಚಾರ ಸಮಿತಿಗಳ ಪದಾಧಿಕಾರಿಗಳಿಗೆ ಭಾನುವಾರ ಪಕ್ಷದ ವತಿಯಿಂದ ಭಾರತ್ ಜೋಡೊ‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಮುಂಬರುವ ಲೋಕಸಭಾ ಚುನಾವಣಾ ಪೂರ್ವ ತಯಾರಿ‌ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ವಿಧಾನಸಭೆ ಚುನಾವಣೆಗೂ ವ್ಯತ್ಯಾಸ ಇರುತ್ತೆ. ಅಲ್ಲಿನ ವಿಚಾರಗಳೇ ಬೇರೆ. ಮೋದಿಯವರನ್ನು ಎದುರಿಸಬೇಕಾಗಿದೆ ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಉದಾತ್ತ ಇತಿಹಾಸ ಕಾಂಗ್ರೆಸ್​ಗಿದೆ. ಇದಾದ ಮೇಲೆ ದೇಶದ ಚುಕ್ಕಾಣಿ ಹಿಡಿದ ಜವಾಹರ್​ಲಾಲ್ ನೆಹರು ಸೇರಿದಂತೆ ಅನೇಕರು ಅರ್ಥಪೂರ್ಣ ಕೆಲಸಗಳನ್ನು ಮಾಡುವ ಮೂಲಕ ಭಾರತವನ್ನು ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಸಿದರು. ಇದನ್ನು ಮೋದಿ ಸೇರಿದಂತೆ ಬಿಜೆಪಿ ನಾಯಕರು ಮೊದಲು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿರುವ ಅಣೆಕಟ್ಟುಗಳಲ್ಲಿ ಶೇಕಡ 95 ರಷ್ಟು ನಿರ್ಮಾಣವಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ. ಹಾಗೆಯೇ ಐಐಎಂ, ಐಐಟಿ, ಏಮ್ಸ್, ಕ್ಷೀರಕ್ರಾಂತಿ, ಕೃಷಿ ಕ್ರಾಂತಿ, ಡಿಜಿಟಲ್ ಕ್ರಾಂತಿ ಇವೆಲ್ಲವನ್ನು ಮಾಡಿದ್ದು ನಮ್ಮ ಪಕ್ಷವೇ ಹೊರತು, ಕೋಮುವಾದಿ ರಾಜಕಾರಣ ಮಾಡುತ್ತಿರುವ ಮೋದಿಯಲ್ಲ. ಅವರೇನಿದ್ದರೂ ಚೆನ್ನಾಗಿ ಭಾಷಣ ಮಾಡಬಲ್ಲರು ಅಷ್ಟೇ ಎಂದು ವ್ಯಂಗ್ಯವಾಡಿದರು.

ಕೇವಲ 100 ದಿನಗಳಲ್ಲಿ ಸ್ವಿಸ್ ಬ್ಯಾಂಕ್​ನಲ್ಲಿ ಇರುವ ಕಪ್ಪು ಹಣವನ್ನೆಲ್ಲ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಮೋದಿ ಹೇಳಿದ್ದು, ಈಗ ಅವರಿಗೆ ಮರೆತು ಹೋಗಿರಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಮತ್ತು ಕುವೆಂಪು ಅವರ ಸಿದ್ಧಾಂತಗಳೇ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಾಗಿವೆ. ನಮ್ಮ ಸಾಧನೆ ಮತ್ತು ಮೋದಿಯವರ ವೈಫಲ್ಯಗಳನ್ನು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಸಂಕ್ಷಿಪ್ತವಾಗಿ ವಿವರಿಸುವ ಕರಪತ್ರಗಳನ್ನು ಸದ್ಯದಲ್ಲಿಯೇ ಹೊರತರಲಾಗುವುದು ಎಂದು ತಿಳಿಸಿದರು.

ಪ್ರಚಾರ ಸಮಿತಿ ಕಾರ್ಯ ಸಮಾಧಾನಕರವಾಗಿಲ್ಲ: ಕೆಪಿಸಿಸಿ ಪ್ರಚಾರ ಸಮಿತಿ ಸದ್ಯಕ್ಕೆ ಹೊಂದಿರುವ ಕಾರ್ಯ ಚಟುವಟಿಕೆ ಸಮಾಧಾನಕರವಾಗಿಲ್ಲ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿ ಸಕ್ರಿಯಗೊಳಿಸಲಾಗುವುದು. ಈಗಲೇ ನಾವು ವಿಭಾಗೀಯ ಕಾರ್ಯದರ್ಶಿ, ಉಪಾಧ್ಯಕ್ಷರು, ಜಿಲ್ಲಾಧ್ಯಕ್ಷರ ಜಿಲ್ಲೆಯ ಕಮಿಟಿ ಮಾಡಲು ತಿಳಿಸಿದ್ದೇವೆ. ಮುಂದಿನ 15 ದಿನಗಳಲ್ಲಿ ಕಮಿಟಿ ಮಾಡುವುದು ಅಗತ್ಯವಾಗಿದೆ. ಈ ಸಂಬಂಧ ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರುಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೇವಲ ಮೂರು ತಿಂಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಬಾಕಿ ಇರುವ ಯುವ ನಿಧಿ ಗ್ಯಾರಂಟಿ ಕೂಡ ಒಂದೆರಡು ತಿಂಗಳಲ್ಲಿ ಜಾರಿಯಾಗಲಿದೆ. ಇದನ್ನು ಪದಾಧಿಕಾರಿಗಳು ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪಿಸಬೇಕು. ಇವುಗಳ ಬಲದ ಮೇಲೆ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠಪಕ್ಷ ರಾಜ್ಯದ 20 ಕ್ಷೇತ್ರಗಳನ್ನು ಗೆಲ್ಲಬೇಕು. ಇಲ್ಲದೇ ಹೋದರೆ ನಮ್ಮ ಗ್ಯಾರಂಟಿಗಳಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಕರೆ ನೀಡಿದರು.

ಸಭೆಯಲ್ಲಿ ಹಿರಿಯ ಮುಖಂಡರಾದ ಬಿ ಎಲ್ ಶಂಕರ್, ವಿಧಾನ ಪರಿಷತ್ತಿನ ಸದಸ್ಯರುಗಳಾದ ಮಂಜುನಾಥ ಭಂಡಾರಿ, ಯು. ಬಿ ವೆಂಕಟೇಶ, ಸುಧಾಮದಾಸ್, ಪ್ರಕಾಶ ರಾಥೋಡ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ವಕ್ತಾರ ರಮೇಶ್ ಬಾಬು, ಸಮನ್ವಯಕಾರರಾದ ಎ ಪಿ ಬಸವರಾಜು, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸೆಪ್ಟೆಂಬರ್ 4ರಂದು ಬರಪೀಡಿತ ತಾಲೂಕಗಳ ಹೆಸರು ಘೋಷಣೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.