ETV Bharat / state

ಆನ್​​​​ಲೈನ್​​ ವಂಚನೆ ಮಾಡುವ ಆ್ಯಪ್​ಗಳ ವಿರುದ್ಧ ಸರ್ಕಾರದಿಂದ ಸೂಕ್ತ ಹಾಗೂ ಕಠಿಣ ಕ್ರಮ: ಸಚಿವ ಗುಂಡೂರಾವ್​ ಭರವಸೆ

author img

By

Published : Jul 10, 2023, 10:46 PM IST

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

ಬಿಜೆಪಿ ಶಾಸಕ ಡಿ.ಎಸ್ ಅರುಣ್ ಕೇಳಿದ ಪ್ರಶ್ನೆಗೆ ಸಚಿವ ದಿನೇಶ್ ಗುಂಡೂರಾವ್​ ವಿಧಾನಸಭೆಯಲ್ಲಿ ಉತ್ತರಿಸಿದರು.

ಬೆಂಗಳೂರು : ಆನ್‌ಲೈನ್ ವೇದಿಕೆ ಮೂಲಕ ಸಾಲ ನೀಡಿ ಸಾರ್ವಜನಿಕರಿಗೆ ವಂಚಿಸುವ ಆ್ಯಪ್‌ಗಳ ಮೇಲೆ ನಿಗಾವಹಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ನಲ್ಲಿ ಗಮನ ಸೆಳೆಯುವ ಸೂಚನೆ ಅಡಿ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಮಟ್ಟದಲ್ಲಿ ಸಿಐಎನ್ ಪೊಲೀಸ್ ಠಾಣೆಗಳನ್ನು ತೆರೆದು, ಪೊಲೀಸ್ ಇನ್ಸ್‌ಪೆಕ್ಟರ್ ದರ್ಜೆ ಅಧಿಕಾರಿಯನ್ನು ಇದಕ್ಕಾಗಿಯೇ ನೇಮಿಸಲಾಗಿದೆ.

ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದ್ದು, ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರ ವಹಿಸಲಿದೆ ಎಂದು ಭರವಸೆ ಕೊಟ್ಟರು. ವಿಧಾನಸಭೆ ವೇಳೆ ಡಿ.ಎಸ್ ಅರುಣ್ ಮಾತನಾಡಿ, ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಹಾವಳಿಗೆ ಯುವ ಸಮೂಹ ಬಲಿ, ಸಾರ್ವಜನಿಕರಿಗೆ ಆನ್‌ಲೈನ್ ಸಾಲದ ಕಿರುಕುಳದತ್ತ ಸರ್ಕಾರ ಗಮನ ಹರಿಸಬೇಕು ಎಂದರು. ಈ ಸಂದರ್ಭ ಗೃಹ ಸಚಿವರ ಪರವಾಗಿ ಸದನದಲ್ಲಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಿದರು.

ಆನ್‌ಲೈನ್ ಮೂಲಕ ಸಾಲ ನೀಡಿ ಸಾರ್ವಜನಿಕರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ 42 ಬಗೆಯ ಆ್ಯಪ್‌ಗಳನ್ನು ಗೂಗಲ್ ಪ್ಲೇಟ್ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ. ಗೂಗಲ್ ಸೇವಾ ಪೂರೈಕೆದಾರರಿಗೆ ಸಿಇಎನ್ ಪೊಲೀಸ್ ಠಾಣೆಯಿಂದ ಈ ಕುರಿತು ಇ-ಮೇಲ್ ಸಂದೇಶ ರವಾನಿಸಿದ್ದು, ತಕ್ಷಣ ಆ್ಯಪ್‌ಗಳನ್ನು ಗೂಗಲ್‌ನವರು ಡಿಲೀಟ್ ಮಾಡಿದ್ದಾರೆ ಎಂದು ಹೇಳಿದರು.

ಆನ್‌ಲೈನ್ ಗೇಮ್ ಆಡುವ ಹವ್ಯಾಸದಿಂದ ಯುವಜನರು, ವಿದ್ಯಾರ್ಥಿಗಳ ಜೀವನದ ಮೇಲೆ ದುಷ್ಪರಿಣಾಮ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಿತ್ತಿಪತ್ರ, ಜಾಥಾ, ಸಮೂಹ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೈಬರ್ ಕ್ರೈಂ ಜಾಗೃತಿ ದಿವಸ ಆಚರಿಸಿ ವಂಚನೆಗೆ ಒಳಗಾಗದಂತೆ ಜನರಿಗೆ ಸಲಹೆ ನೀಡಲಾಗುತ್ತದೆ. ಜೊತೆಗೆ ಸಹಾಯವಾಣಿ (1930)ಯನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ದಿನದ 24 ತಾಸು ಹಣ ವಂಚನೆಯಾದ ಬಗ್ಗೆ ತುರ್ತು ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆನ್‌ಲೈನ್ ವಂಚನೆ ಬಗ್ಗೆ ತಿಳಿವಳಿಕೆ ನೀಡಿ, ಭಿತ್ತಿಪತ್ರ ಹಂಚಲಾಗಿದೆ. ಸೈಬರ್ ಅಪರಾಧಗಳ ಪತ್ತೆ ಮತ್ತು ತಡೆಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ನೀಡಿ, ಪ್ರಕರಣಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಲು ಕ್ರಮವಹಿಸಲಾಗಿದೆ. ಇದು ಇಷ್ಟಕ್ಕೆ ನಿಂತಿಲ್ಲ. ಇನ್ನಷ್ಟು ವ್ಯಾಪಕವಾಗಿ ಕಾನೂನನ್ನ ಬಿಗಿಗೊಳಿಸುವ ಜೊತೆಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲಾಗುವುದು ಎಂದು ದಿನೇಶ್​​ ತಿಳಿಸಿದರು.

ತಾಯಿ ಮರಣ ಸೂಚ್ಯಂಕ ಇಳಿಕೆ : ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಮಹತ್ವದ ವಿಷಯದತ್ತ ಗಮನಸೆಳೆದ ಪ್ರಶ್ನೆಗೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿದರು. ವಿವಿಧ ನೆರವಿನ ಕಾರ್ಯಕ್ರಮಗಳು, ಅಪೌಷ್ಟಿಕತೆ ನಿವಾರಣೆ ಕೌಟುಂಬಿಕ ಜಾಗೃತಿ, ಬಾಲ್ಯವಿವಾಹ ಪರಿಣಾಮಕಾರಿ ತಡೆಯಿಂದ ರಾಜ್ಯದಲ್ಲಿ ತಾಯಿ ಮರಣ ಸೂಚ್ಯಂಕ 213 ರಿಂದ 69ಕ್ಕೆ ಇಳಿದಿದೆ ಎಂದು ನೀಡಿದ ದಿನೇಶ್ ಗುಂಡೂರಾವ್, ದಕ್ಷಿಣ ಭಾರತದ 5 ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ತಾಯಿ ಪ್ರಮಾಣ ಹೆಚ್ಚಿದ್ದು ನಿಜ. ಹಲವಾರು ಕ್ರಮಗಳ ನಂತರ ಎಸ್‌ಆರ್‌ಎಸ್ ಇತ್ತೀಚಿನ ಸಮೀಕ್ಷೆ ಪ್ರಕಾರ 213 ರಿಂದ 69ಕ್ಕೆ ಇಳಿದಿದ್ದರೂ ಇನ್ನಷ್ಟು ತಗ್ಗಿಸಲು ಸರ್ಕಾರ ಒತ್ತು ನೀಡಲಿದೆ ಎಂಬ ಭರವಸೆ ನೀಡಿದರು.

ಬಾಲ್ಯ ವಿವಾಹ ಪ್ರಕರಣ ತಡೆ ಯಶಸ್ಸು : ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 2020-21ರಲ್ಲಿ 3007 ದೂರುಗಳನ್ನು ಸ್ವೀಕರಿಸಿ 2711 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 296 ಬಾಲ್ಯವಿವಾಹಗಳನ್ನು ನಡೆದಿದ್ದು, 239 ಪ್ರಕರಣಗಳು ದಾಖಲಾಗಿವೆ. 2021-22ರಲ್ಲಿ 2819 ದೂರು ಸ್ವೀಕಾರ, 2401 ತಡೆ, 418 ಬಾಲ್ಯ ವಿವಾಹಗಳು ನಡೆದಿವೆ. 389 ಪ್ರಕರಣಗಳು ದಾಖಲಾಗಿವೆ. 2022-23ರಲ್ಲಿ 2522 ದೂರು ಸ್ವೀಕಾರ, 2194 ತಡೆ, 328 ಬಾಲ್ಯ ವಿವಾಹಗಳು ನಡೆದಿವೆ. 327 ಪ್ರಕರಣಗಳು ದಾಖಲಾಗಿವೆ ಎಂದು ಸಚಿವರು ಪರಿಷತ್ತಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ : 108 ವಾಹಿನಿ ಸಿಬ್ಬಂದಿ ಬಾಕಿ ವೇತನ ಶೀಘ್ರ ಪಾವತಿಗೆ ಕ್ರಮ: ಮುಷ್ಕರ ನಡೆಸದಂತೆ ಆರೋಗ್ಯ ಸಚಿವರ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.