ETV Bharat / state

ಸುಲಿಗೆ ಆರೋಪ : ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆ ಪಿಎಸ್‌ಐ, ಎಎಸ್‌ಐ ಅಮಾನತು

author img

By

Published : Dec 10, 2022, 11:00 PM IST

sj-park-police-station-psi-and-asi-suspended-by-dcp
ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆ ಪಿಎಸ್‌ಐ

ಸುಲಿಗೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆ ಪಿಎಸ್‌ಐ ಹಾಗೂ ಎಎಸ್‌ಐ ಅವರನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು: ಚಿನ್ನದ ವ್ಯಾಪಾರಿಯಿಂದ ಸುಲಿಗೆ ಮಾಡಿದ ಆರೋಪದಲ್ಲಿ ನಗರದ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆ ಪಿಎಸ್‌ಐ ಹಾಗೂ ಎಎಸ್‌ಐ ಅವರನ್ನು ಅಮಾನತುಗೊಳಿಸಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಆದೇಶ ಹೊರಡಿಸಿದ್ದಾರೆ.

ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಯ ಪಿಎಸ್‌ಐ ಅಶೋಕ್ ಠಾಕೂರ್, ಎಎಸ್‌ಐ ರಮೇಶ್ ಅಮಾನತುಗೊಂಡವರು. ನಗರದ ಚಿನ್ನದ ವ್ಯಾಪಾರಿಯೊಬ್ಬರು ಡಿಸೆಂಬರ್ 3ರಂದು ಬೆಳಗ್ಗೆ ಚಿನ್ನ ತುಂಬಿದ್ದ ಬ್ಯಾಗ್ ತೆಗೆದುಕೊಂಡು ತಮ್ಮ ಅಂಗಡಿಗೆ ಹೋಗುತ್ತಿದ್ದರು. ಟೌನ್‌ಹಾಲ್ ಬಳಿ ಹೋಗುತ್ತಿದ್ದಾಗ ಅಶೋಕ್ ಠಾಕೂರ್ ಹಾಗೂ ರಮೇಶ್ ಇವರನ್ನು ತಡೆದು ಠಾಣೆಗೆ ಕರೆತಂದಿದ್ದರು.

ಬಳಿಕ ಚಿನ್ನಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಹೇಳಿದ್ದರು. ಇದಕ್ಕೆ ವ್ಯಾಪಾರಿಯು ತಮ್ಮ ಬಳಿಯಿದ್ದ ಎಲ್ಲ ದಾಖಲೆಗಳನ್ನೂ ನೀಡಿದ್ದರು. ಠಾಣೆ ದಾಖಲಾತಿ ಬುಕ್‌ನಲ್ಲಿ ಈ ವಿಚಾರವನ್ನು ನಮೂದಿಸದೇ, ವ್ಯಾಪಾರಿಗೆ ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದರು. ನಂತರ ಹಣ ಪಡೆದು ಚಿನ್ನವಿದ್ದ ಬ್ಯಾಗ್​​ ಅನ್ನು ಕೊಟ್ಟು ಕಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಈ ವಿಚಾರವು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರ ಗಮನಕ್ಕೆ ಬಂದಿತ್ತು. ಆಂತರಿಕ ತನಿಖೆ ನಡೆಸಿದಾಗ ಇಬ್ಬರೂ ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ ಎಂದು ಆದೇಶ ಡಿಸಿಪಿ ಶ್ರೀನಿವಾಸಗೌಡ ಹೊರಡಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಅಧಿಕಾರಿ, ಸಿಬ್ಬಂದಿ ಹೆಲ್ಮೆಟ್ ಹಾಕದಿದ್ದರೆ ಅಮಾನತು: ಎಸ್ಪಿ ಹರಿರಾಂ ಶಂಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.