ಬೆಂಗಳೂರು: ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಬೇಡವೇ? ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಬಂಧನ ವಿಚಾರವಾಗಿ ವಿಧಾನಸೌಧದ ಕೆಂಗಲ್ ಗೇಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಸರ್ಕಾರದ 40% ಕಮಿಷನ್ ವಿರುದ್ಧ ಆಂದೋಲನ ನಡೆಯುತ್ತಿದೆ. ನಾನು, ಡಿಕೆಶಿ, ಹರಿಪ್ರಸಾದ್ ಎಲ್ಲರೂ ಆಂದೋಲನ ಮಾಡಿದ್ದೇವೆ. ಅದರ ಅಂಗವಾಗಿ ನಿನ್ನೆ ಪೋಸ್ಟರ್ ಅಂಟಿಸಿದ್ದಾರೆ. ಬಿಜೆಪಿ ಕೂಡ ಸುಳ್ಳು ಆರೋಪ ಮಾಡಿದ್ದಾರೆ. ನಮ್ಮ ವಿರುದ್ಧವೂ ಪೋಸ್ಟರ್ ಅಂಟಿಸಿದ್ದಾರೆ ಅಲ್ವಾ? ಅವರನ್ನು ಏಕೆ ಅರೆಸ್ಟ್ ಮಾಡಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಸಾಮಾಜಿಕ ಜಾಲತಾಣ ವಿಭಾಗದ ಬಿ.ಆರ್ ನಾಯ್ಡು ಅವರನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ. ಅವರೇನು ಕಳ್ಳತನ ಮಾಡಿದ್ರಾ? ನಾವು ಸರ್ಕಾರದ ವಿರುದ್ಧ ಹೋರಾಟ ಮಾಡಬಾರದಾ? ನಮಗೂ ರಿ-ಡೂ ಸಿದ್ದರಾಮಯ್ಯ ಅಂತಿದ್ದಾರೆ. ಕೆಂಪಣ್ಣ ಪತ್ರ ಬರೆದು ಎಷ್ಟು ದಿನ ಆಯ್ತು? ಯಾಕೆ ತನಿಖೆ ಮಾಡಿಸಲಿಲ್ಲ. ಯಡಿಯೂರಪ್ಪ ಆಪ್ತನ ಮೇಲೆ ದಾಳಿಯಾಗಿತ್ತಲ್ವೇ? ಆವಾಗ ದಾಖಲೆ ಸಿಕ್ಕಿತ್ತು, ತನಿಖೆ ಮಾಡಿಸಬೇಕಿತ್ತಲ್ವಾ? ಸರ್ಕಾರ ಇವೆಲ್ಲವನ್ನೂ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಇದನ್ನೂ ಓದಿ: PAYCM ಪೋಸ್ಟರ್ ಪ್ರಕರಣ: ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ