ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಬಂಧಿತರಾಗಿ ಬಳಿಕ ಬಿಡುಗಡೆಗೊಂಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಭೇಟಿ ಮಾಡಲಿದ್ದಾರೆ.
57 ದಿನಗಳ ನಂತರ ಡಿ.ಕೆ.ಶಿವಕುಮಾರ್ ಸದಾಶಿವನಗರ ಮನೆಗೆ ಬಂದಿದ್ದಾರೆ. ನಿನ್ನೆ ಬೃಹತ್ ಮೆರವಣಿಗೆ ಮೂಲಕ ವಿಮಾನ ನಿಲ್ದಾಣದಿಂದ ಆಗಮಿಸಿದ್ದಾರೆ. ಈಗಾಗಲೇ ಡಿಕೆಶಿ ಮನೆಗೆ ಸ್ವಾಮೀಜಿಗಳು, ಇತರ ನಾಯಕರು ಬಂದು ಭೇಟಿಯಾಗಿದ್ದಾರೆ. ಇಂದು ಡಿಕೆಶಿ ಮನೆಗೆ ಸಿದ್ದರಾಮಯ್ಯ, ಡಾ. ಜಿ.ಪರಮೇಶ್ವರ್ ತೆರಳಲಿದ್ದು, ಭೇಟಿ ವೇಳೆ ಪರಮೇಶ್ವರ್ ಮೇಲಿನ ಐಟಿ ದಾಳಿ, ಡಿಕೆಶಿ ಇಡಿ ವಿಚಾರಣೆ ಹಾಗೂ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಇನ್ನು ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ರಾಮನಗರ ಭಾಗದಿಂದಲೂ ಸಾವಿರಾರು ಕಾರ್ಯಕರ್ತರು ಇಂದು ಸದಾಶಿವನಗರ ಮನೆ ಬಳಿ ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗ ಪೊಲೀಸರು ಭದ್ರತೆಗೆ ಕ್ರಮ ವಹಿಸಿದ್ದು, ಸ್ಥಳದಲ್ಲಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮತ್ತೊಂದೆಡೆ ಡಿಕೆಶಿ ಮರಳಿ ಮನೆಗೆ ಬಂದ ಹಿನ್ನೆಲೆ ಕುಟುಂಬಸ್ಥರು ನಿರಾಳರಾಗಿದ್ದು, ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.