ETV Bharat / state

ವೀರಶೈವ ಲಿಂಗಾಯತರಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲು ಶಾಮನೂರು ಪಟ್ಟು

author img

By

Published : May 18, 2023, 6:06 PM IST

Updated : May 18, 2023, 6:32 PM IST

ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ
ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ

ಕಾಂಗ್ರೆಸ್​ ಹೈಕಮಾಂಡ್​ ಮುಖ್ಯಮಂತ್ರಿ ಪದವಿ ನೀಡಿದರೆ ನಿಭಾಯಿಸಲು ನಾನು ಸಿದ್ಧವಿರುವುದಾಗಿ ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ತಿಳಿಸಿದ್ದಾರೆ.

ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಸಂದರ್ಶನ

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಅತ್ಯಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ಶಾಸಕರು ಚುನಾಯಿತರಾಗಿದ್ದಾರೆ. ವೀರಶೈವ ಲಿಂಗಾಯತ ಮತಬ್ಯಾಂಕ್ ಉಳಿಸಿಕೊಳ್ಳಲು ಸಚಿವ ಸಂಪುಟದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ.

ಉಳಿದ ಜಾತಿಯವರು ಏನು ಮಾಡಬೇಕು?: ಮುಖ್ಯಮಂತ್ರಿ ಹುದ್ದೆಗೆ ಲಿಂಗಾಯತ ಸಮುದಾಯದವರನ್ನು ಪರಿಗಣಿಸಬೇಕೆಂದು ಪಕ್ಷದ ಹೈಕಮಾಂಡ್​ಗೆ ಪತ್ರ ಬರೆದು ಆಗ್ರಹಿಸಿರುವ ಶಾಮನೂರು ಶಿವಶಂಕರಪ್ಪನವರು ಮಂತ್ರಿ ಮಂಡಲದಲ್ಲಿ ವೀರಶೈವ ಲಿಂಗಾಯತರಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ. ಈ ಸಂಬಂಧ 'ಈಟಿವಿ ಭಾರತ್​​' ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಮುಖ ಹುದ್ದೆಗಳನ್ನು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ನೀಡಿದರೆ ಕಾಂಗ್ರೆಸ್​ಗೆ ವೋಟು ಹಾಕಿದ ಉಳಿದ ಜಾತಿಯವರು ಏನು ಮಾಡಬೇಕೆಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಸಮಾಧಾನ ವ್ಯಕ್ತಪಡಿಸಿರುವ ಶಾಮನೂರು ಶಿವಶಂಕರಪ್ಪ: ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಹೆಸರಿನ ಬಗ್ಗೆ ಮಾತ್ರ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡಿದ್ದಕ್ಕೆ ಶಾಮನೂರು ಶಿವಶಂಕರಪ್ಪನವರು ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾಗಿಯೂ ಅವರು ತಿಳಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಅಖಿಲ ಭಾರತೀಯ ವೀರಶೈವ ಮಹಾಸಭಾದಿಂದ ಎಐಸಿಸಿ ಅಧ್ಯಕ್ಷರಿಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್​ ಸುರ್ಜೇವಾಲ ಅವರಿಗೆ ಪತ್ರ ಬರೆಯಲಾಗಿತ್ತು ಎಂದು ತಿಳಿಸಿದ್ದಾರೆ.

ಜಗದೀಶ್​ ಶೆಟ್ಟರ್ ಅವರನ್ನು ಮಂತ್ರಿ ಮಾಡ್ತಾರೆ: ನಿಮ್ಮ ಪಕ್ಷದಲ್ಲಿ ಜಗದೀಶ್​ ಶೆಟ್ಟರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್​ ಪಕ್ಷಕ್ಕೆ ಬಂದಿದ್ದರು. ನೀವು ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಬಹಳಷ್ಟು ಶ್ರಮವನ್ನು ಪಟ್ಟಿದ್ರಿ. ಆದರೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಫಲಿತಾಂಶ ಬರಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಮನೂರು, ಅವರಿಂದ ಕಾಂಗ್ರೆಸ್​ಗೆ ಬಹಳಷ್ಟು ಅನುಕೂಲವಾಗಿದೆ. ಅವರಿಗೆ ಏನಾದ್ರು ಒಂದು ಒಳ್ಳೆ ಪೋಸ್ಟ್​ ಕೊಟ್ಟು ಮಂತ್ರಿ ಮಾಡ್ತಾರೆ ಎಂದು ಹೇಳಿದರು.

ಪುತ್ರ ಮಲ್ಲಿಕಾರ್ಜುನ ಅವರು ಸಚಿವರಾಗುವ ಸಾಧ್ಯತೆ ಇದೆ: ಪಕ್ಷದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಹಲವಾರು ಮುಖಂಡರು ಸಹ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಎಸ್ ಎಸ್ ಮಲ್ಲಿಕಾರ್ಜುನ, ಎಂ ಬಿ ಪಾಟೀಲ್, ಈಶ್ವರ ಖಂಡ್ರೆ ಸೇರಿದಂತೆ ಬಹಳಷ್ಟು ಮುಖಂಡರಿದ್ದಾರೆಂದು ತಿಳಿಸಿದರು. ನೀವು ಸಚಿವರಾಗುತ್ತೀರಾ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪನವರು, ಸಚಿವನಾಗುವ ಆಸೆಯಿಲ್ಲ. ಪುತ್ರ ಮಲ್ಲಿಕಾರ್ಜುನ ಅವರು ಸಚಿವರಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಪಕ್ಷ ಒತ್ತಾಯಪೂರ್ವಕವಾಗಿ ಸಚಿವ ಸ್ಥಾನ ನೀಡಿದರೆ ಆಗ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳನ್ನು ಖಂಡಿತ ಜಾರಿಗೆ ತರಲಿದೆ: ಕಾಂಗ್ರೆಸ್​ ಪಕ್ಷದಲ್ಲಿ 34 ಜನ ವೀರಶೈವ ಲಿಂಗಾಯತ ಶಾಸಕರು ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಶಾಸಕರ ಸಂಖ್ಯೆಗನುಗುಣವಾಗಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಅಗತ್ಯತೆ ಇದೆ. ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ '' ಗ್ಯಾರಂಟಿ '' ಯೋಜನೆಗಳ ಭರವಸೆಗಳನ್ನು ಖಂಡಿತ ಜಾರಿಗೆ ತರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಅಂದು ಕುರಿ ಲೆಕ್ಕ ಹಾಕಲು ಬಾರದವ ಅನ್ನಿಸಿಕೊಂಡಿದ್ದ ಸಿದ್ದರಾಮಯ್ಯ.. ಈಗ 14ನೇ ಬಜೆಟ್​ ಮಂಡನೆಗೆ ಸನ್ನದ್ಧ!

Last Updated :May 18, 2023, 6:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.