ETV Bharat / state

ಕಚೇರಿಗಳಿಗೆ ಹಾಕಿದ್ದ ಬೀಗಮುದ್ರೆ ತೆರವಿಗೆ ಆಗ್ರಹಿಸಿ ಎಸ್‍ಡಿಪಿಐ ಹೈಕೋರ್ಟ್​ ಮೊರೆ

author img

By

Published : Feb 8, 2023, 10:25 AM IST

sdpi-questions-to-government-action-in-dakshina-kannada
ಕಚೇರಿಗಳಿಗೆ ಹಾಕಿದ್ದ ಬೀಗಮುದ್ರೆ ತೆರವಿಗೆ ಆಗ್ರಹಿಸಿ ಎಸ್‍ಡಿಪಿಐ ಹೈಕೋರ್ಟ್​ ಮೊರೆ

ಕಚೇರಿಗಳಿಗೆ ಹಾಕಲಾಗಿರುವ ಬೀಗಮುದ್ರೆ ತೆರವುಗೊಳಿಸಲು ಎಸ್​ಡಿಪಿಐ ಆಗ್ರಹ - ಹೈಕೋರ್ಟ್ ಮೊರೆ ಹೋದ ಎಸ್​ಡಿಪಿಐ - ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ಸಲ್ಲಿಸಿದ ಎಸ್‌ಡಿಪಿಐ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿ

ಬೆಂಗಳೂರು : ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಬೇಕಿದ್ದು, ಕಚೇರಿಗಳ ಮೇಲೆ ದಾಳಿ ನಡೆಸಿ ಹಾಕಲಾಗಿರುವ ಬೀಗ ಮುದ್ರೆ ತೆರವುಗೊಳಿಸಲು ಆದೇಶ ನೀಡಬೇಕೆಂದು ಕೋರಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​ಡಿಪಿಐ) ಹೈಕೋರ್ಟ್ ಮೊರೆ ಹೋಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತವು ಎಸ್‍ಡಿಪಿಐಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ 17 ಕಚೇರಿಗಳಿಗೆ ಬೀಗ ಹಾಕಿದೆ. ಇದನ್ನು ತೆರವುಗೊಳಿಸಲು ನಿರ್ದೇಶನ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಹೈಕೋರ್ಟ್​​ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಅರ್ಜಿಯ ವಿಚಾರಣೆ ನಡೆಸಿ ಎಸ್‌ಡಿಪಿಐ ಕಚೇರಿಗಳ ಮೇಲೆ ನಡೆಸಲಾದ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನದ ದಾಖಲೆಗಳನ್ನು ಹೈಕೋರ್ಟ್​​ಗೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಎಸ್‌ಡಿಪಿಐ ಪರವಾಗಿ ವಾದ ಮಂಡಿಸಿದ ವಕೀಲರು, ದಕ್ಷಿಣ ಕನ್ನಡದ ಜಿಲ್ಲಾ ಆಡಳಿತವು ಎಸ್​​​ಡಿಪಿಐಗೆ ಸೇರಿದ ಕಚೇರಿಗಳಿಗೆ ಅನಗತ್ಯವಾಗಿ ಬೀಗ ಹಾಕಿದೆ. ಕಚೇರಿಗಳನ್ನು ಬಂದ್ ಮಾಡಿದ್ದರಿಂದ ಯಾವುದೇ ರಾಜಕೀಯ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಕಚೇರಿಯ ಬಾಗಿಲುಗಳನ್ನು ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಸರ್ಕಾರದ ಪರ ವಕೀಲರಿಂದ ತೀವ್ರ ಆಕ್ಷೇಪ: ವಿಚಾರಣೆ ವೇಳೆ ಎಸ್‌ಡಿಪಿಐನ ಅರ್ಜಿಗೆ ರಾಜ್ಯ ಸರ್ಕಾರದ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಸಮಾಜ ವಿರೋಧಿ ಕೃತ್ಯಗಳ ಆರೋಪದ ಹಿನ್ನೆಲೆಯಲ್ಲಿ ಪಿಎಫ್​ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆಯನ್ನು ನಿಷೇಧಿಸಿದೆ. ಎಸ್​​ಡಿಪಿಐ ಕಚೇರಿಗಳ ಮೇಲಿನ ದಾಳಿ ಸಂದರ್ಭ ಸ್ಥಳದಲ್ಲಿ ಪಿಎಫ್​ಐಗೆ ಸಂಬಂಧಿಸಿದ ಸಾಮಗ್ರಿಗಳು, ಇತರ ಸೂಕ್ತ ಮಾಹಿತಿಗಳು ದೊರೆತಿವೆ. ಹಾಗಾಗಿ ಕಚೇರಿಗೆ ಬೀಗ ಹಾಕಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಎಸ್​​ಡಿಪಿಐ ಕಚೇರಿಗೆ ಬೀಗ ಹಾಕಲಾಗಿದೆ. ಆದರೆ ಈ ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನೇ ಪ್ರತಿವಾದಿಯನ್ನಾಗಿ ಮಾಡಲಾಗಿಲ್ಲ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಪರ ವಕೀಲರ ಈ ವಾದವನ್ನು ಗಮನಿಸಿದ ನ್ಯಾಯಾಲಯ ಎಸ್​​ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ ಬೀಗ ಹಾಕಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನದ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಿ ಅರ್ಜಿ ವಿಚಾರಣೆಯನ್ನು ಈ ತಿಂಗಳ 16ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಪತ್ನಿಯೊಂದಿಗೆ ಜೀವನ ನಡೆಸುವುದಾಗಿ ಪತಿ ಹೇಳಿಕೆ: ಪೋಷಕರ ಹೇಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥ

ಅಕ್ರಮ ದಾಳಿ ಆರೋಪ: ಎಸ್​​ಡಿಪಿಐ ಕಚೇರಿಗಳ ಬೀಗ ಮುದ್ರೆ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿರುವ ಅರ್ಜಿದಾರರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾಗೆ ಯಾವುದೇ ಸಂಬಂಧವಿಲ್ಲ. ಪಿಎಫ್​ಐ ಮತ್ತು ಅದರ ಸಂಘಟನೆಗಳನ್ನು ನಿಷೇಧ ಮಾಡುವ ವೇಳೆ ಕೇಂದ್ರದ ಗೃಹ ಸಚಿವಾಲಯ ಎಸ್​ಡಿಪಿಐ ಹೆಸರನ್ನು ಸೇರಿಸಿಲ್ಲ. ಆದರೂ ರಾಜ್ಯ ಸರ್ಕಾರವು ಎಸ್​ಡಿಪಿಐಗೆ ಸೇರಿದ ಸ್ಥಳಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ ಸಾಮಗ್ರಿಗಳನ್ನು ಜಪ್ತಿ ಮಾಡಿದೆ ಎಂದು ಪ್ರತಿಪಾದಿಸಿದೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮಂಗಳೂರು ನಗರ ಪೊಲೀಸರು ಎಸ್​ಡಿಪಿಐ ಸಂಘಟನೆಯ ಕಚೇರಿಗಳ ಮೇಲೆ ದಾಳಿ ನಡೆಸಿ, ನಿಷೇಧಿತ ಪಿಎಫ್ಐ ಸಂಘಟನೆ ಜೊತೆ ಒಡನಾಟವನ್ನು ಹೊಂದಲಾಗಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಕಚೇರಿಗಳನ್ನು ಸೀಲ್ ಮಾಡಿದ್ದರು.

ಇದನ್ನೂ ಓದಿ : ದೆಹಲಿ ಅಬಕಾರಿ ನೀತಿ ಹಗರಣ: ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿಯ ಮಾಜಿ ಆಡಿಟರ್​ ಬಂಧಿಸಿದ ಸಿಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.