ETV Bharat / state

ತಬ್ಬಲಿ ಚಿರತೆ ಮರಿಗಳಿಗೆ ಆಸರೆಯಾದ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಾವಿತ್ರಮ್ಮ

author img

By

Published : Jun 1, 2023, 4:32 PM IST

Savitramma of Bannerghatta Biological Park
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾವಿತ್ರಮ್ಮ

ತಾಯಿ ಹಾಲಿಗೆ ಪರದಾಡುತ್ತಿದ್ದ ಒಂದು ವಾರದ ಚಿರತೆ ಮರಿಗಳಿಗೆ ಮೇಕೆ ಹಾಲು ನೀಡಿ ಪಾಲನೆ

ತಬ್ಬಲಿ ಚಿರತೆ ಮರಿಗಳಿಗೆ ಆಸರೆಯಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾವಿತ್ರಮ್ಮ

ಆನೇಕಲ್: ಅವು ಪುಟ್ಟ ಪ್ರಾಯದಲ್ಲಿಯೇ ಹೆತ್ತಮ್ಮನಿಂದ ದೂರವಾಗಿದ್ದ ನತದೃಷ್ಟ ಮರಿಗಳು. ಆದರೆ ತಾಯಿಯ ಪ್ರೀತಿಯ ವಾತ್ಸಲ್ಯ ಸಿಗದೇ ಪರದಾಡುತ್ತಿದ್ದ ತಬ್ಬಲಿಗಳಿಗೆ ಇಲ್ಲೊಂದು ವೈದ್ಯರ ತಂಡ ಆಸರೆಯಾಗಿ 'ಒಳಿತು ಮಾಡು ಮನುಷಾ ನೀ ಇರೋದು ಮೂರು ದಿವಸ' ಅಂತ ಅಮ್ಮನ ಮಡಿಲಿನಿಂದ ದೂರವಾದ ಮರಿಗಳಿಗೆ ಅಮ್ಮನಂತಾಗಿದ್ದಾರೆ ಸಾವಿತ್ರಮ್ಮ.

ಮೈಸೂರು, ಬಿಳಿಗಿರಿರಂಗನಬೆಟ್ಟ, ನರಸೀಪುರ, ಮದ್ದೂರು, ರಾಮನಗರ ಸೇರಿದಂತೆ ನಾನಾ ಕಡೆಗಳಲ್ಲಿ ರೈತರ ಹೊಲಗದ್ದೆಗಳಲ್ಲಿ ತಾಯಿಯಿಂದ ಬೇರ್ಪಟ್ಟು ಅನಾಥವಾಗಿದ್ದ ಒಟ್ಟು 11 ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕರೆತರಲಾಗಿತ್ತು. ಬಹುತೇಕ ಚಿರತೆ ಮರಿಗಳು ಜನಿಸಿ ಕೇವಲ ಒಂದು ವಾರವಷ್ಟೇ ಆಗಿತ್ತು. ಈ ಮರಿಗಳು ತಾಯಿ ಹಾಲಿಲ್ಲದೆ ನಿತ್ರಾಣಗೊಂಡಿದ್ದವು. ಇಂತಹ ಸಂದರ್ಭದಲ್ಲಿ ಉದ್ಯಾನವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಹೆಚ್ಚು ಮುತುವರ್ಜಿ ವಹಿಸಿ ತಾಯಿ ಎದೆ ಹಾಲು ಬದಲಿಗೆ ಕಾಲ ಕಾಲಕ್ಕೆ ಮೇಕೆ ಹಾಲು ಮತ್ತು ಅಗತ್ಯ ವೈದ್ಯಕೀಯ ಸೇವೆ ನೀಡುವ ಮೂಲಕ ಯಶಸ್ವಿಯಾಗಿ ಪೋಷಣೆ ಮಾಡಿ ಕಾಪಾಡಿದ್ದಾರೆ.

ಸದ್ಯ ಮೂರು ತಿಂಗಳು ಪ್ರಾಯದ 11 ಚಿರತೆಗಳನ್ನು ಉದ್ಯಾನವನದ ಪಶು ಆಸ್ಪತ್ರೆಯಲ್ಲಿ ಪಾಲನೆ ಮಾಡಲಾಗುತ್ತಿದೆ. 8 ಚಿರತೆಗಳನ್ನು ಒಂದು ಗುಂಪು, 3 ಚಿರತೆಗಳ ಮತ್ತೊಂದು ಗುಂಪಾಗಿ ಪ್ರತ್ಯೇಕಿಸಿ ಇಡಲಾಗಿದೆ. ಪ್ರಾಯೋಗಿಕ ಪರೀಕ್ಷೆ ಬಳಿಕ ಈಗಾಗಲೇ ಸಿದ್ಧಗೊಳ್ಳುತ್ತಿರುವ ಚಿರತೆ ಸಫಾರಿಯ ಕ್ರಾಲ್​ನಲ್ಲಿ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ಉದ್ಯಾನವನದ ವೈದ್ಯಾಧಿಕಾರಿ ಡಾ ಉಮಾಶಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆರಡು ಚೀತಾ ಮರಿಗಳ ಸಾವು

ಜನಿಸಿ ವಾರ ಕಳೆದಿದ್ದ ಹಾಲು ಗಲ್ಲದ ಪುಟಾಣಿ ಚಿರತೆ ಮರಿಗಳನ್ನು ಹಾರೈಕೆ ಮಾಡುವುದೇ ಸವಾಲಿನ ಕೆಲಸ. ಪ್ರಾರಂಭದಲ್ಲಿ ಚಿರತೆ ಮರಿಗಳಿಗೆ ಹರಸಾಹಸಪಟ್ಟು ಮೇಕೆ ಹಾಲು ಕುಡಿಸಿದ್ದು, ಬಳಿಕ ಚೇತರಿಸಿಕೊಂಡ ಚಿರತೆ ಮರಿಗಳು ಇದೀಗ ದಿನದಲ್ಲಿ ಬೆಳಗ್ಗೆ ಮತ್ತು ಸಂಜೆ ಒಂದು ಲೀಟರ್ ಹಾಲು ಕುಡಿಯುತ್ತಿವೆ. ಎಲ್ಲಾ ಹನ್ನೊಂದು ಚಿರತೆ ಮರಿಗಳು ಆರೋಗ್ಯವಾಗಿದ್ದು, ಮಕ್ಕಳಂತೆ ಪಾಲನೆ ಪೋಷಣೆ ಮಾಡಿದ್ದರಿಂದ ಹೆಚ್ಚು ಲವಲವಿಕೆಯಿಂದ ಇರುವುದು ಹೆಚ್ಚು ಖುಷಿ ನೀಡಿದೆ ಎಂದು ಹೇಳುತ್ತಾರೆ ಉದ್ಯಾನವನದ ಪ್ರಾಣಿ ಪಾಲಕಿ ಸಾವಿತ್ರಮ್ಮ.

ಯಾವುದೇ ಪ್ರಾಣಿಗಳಿಗೆ ಹುಟ್ಟಿ ಕೆಲ ದಿನಗಳವರೆಗೆ ತಾಯಿ ಹಾಲು ಮುಖ್ಯ. ಆದರೆ ಹೆತ್ತಮ್ಮನನ್ನೇ ಕಳೆದುಕೊಂಡು ತಾಯಿ ಹಾಲಿಗಾಗಿ ಪರದಾಡುತ್ತಿದ್ದ ಪುಟ್ಟ ಮರಿ ಚಿರತೆಗಳನ್ನು ತಂದು ತಮ್ಮ ಮಕ್ಕಳಂತೆಯೇ ಅವುಗಳಿಗೆ ಮೇಕೆ ಹಾಲು ನೀಡಿ, ಬೆಳಸಿದ ತಾಯಿಯಂತಹ ಮನಸ್ಸಿನ ಸಾವಿತ್ತಮ್ಮ ಅವರ ಕೆಲಸ ಉದ್ಯಾನವನ ಮಾತ್ರವಲ್ಲ, ಹೊರಗಡೆ ಜನರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಸದ್ಯ ಪಶು ಆಸ್ಪತ್ರೆ ಅವರಣದಲ್ಲಿ ಬೆಳೆಯುತ್ತಿರುವ ಮುದ್ದಾದ ಚಿರತೆ ಮರಿಗಳನ್ನು ದತ್ತು ಪಡೆದುಕೊಳ್ಳುವ ಅವಕಾಶವಿದ್ದು, ಪ್ರಾಣಿ ಪ್ರಿಯರು ದತ್ತು ಪಡೆಯಬಹುದಾಗಿದೆ.

ಇದನ್ನೂ ಓದಿ: Watch.. ಪಾಳು ಬಿದ್ದ ಮನೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.