ETV Bharat / state

ಇಡೀ ವಿಶ್ವಕ್ಕೆ ಭಾರತದ ಅವಶ್ಯಕತೆ ಇದೆ: ಮೋಹನ್ ಭಾಗವತ್

author img

By

Published : Aug 15, 2023, 10:43 AM IST

RSS chief Mohan Bhagwat
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

77ನೇ ಸ್ವಾತಂತ್ರೋತ್ಸವ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ಬಸವನಗುಡಿಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಧ್ವಜಾರೋಹಣ ನೆರವೇರಿಸಿದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಬೆಂಗಳೂರು: ಇಡೀ ವಿಶ್ವಕ್ಕೆ ಬೆಳಕು ನೀಡುವುದಕ್ಕಾಗಿಯೇ ಭಾರತ ಸ್ವತಂತ್ರವಾಗಿದೆ. ಇಡೀ‌ ವಿಶ್ವಕ್ಕೆ ಇಂದು ಭಾರತದ ಅವಶ್ಯಕತೆ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​​ಎಸ್) ‌ಮುಖ್ಯಸ್ಥ ಡಾ.ಮೋಹನ್ ಭಾಗವತ್ ಪ್ರತಿಪಾದಿಸಿದರು. 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಮುಂಜಾನೆ 6.55ಕ್ಕೆ ಬಸವನಗುಡಿಯ ವಾಸವಿ ಕನ್ವೆನ್ಷನ್ ಹಾಲ್‌ ಮುಂಭಾಗದಲ್ಲಿ ಮೋಹನ್ ಭಾಗವತ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ದಿವಸದ ಆನಂದದ ದಿನದಲ್ಲಿ ಎಲ್ಲರಿಗೂ ಶುಭಕಾಮನೆಗಳು. ನಾವು ಧ್ವಜಾರೋಹಣ, ಭಾರತ‌ ಮಾತೆಗೆ ಪೂಜೆ ಹಾಗೂ ಸೂರ್ಯ ನಮಸ್ಕಾರ ಮಾಡಿದ್ದೇವೆ. ಬೆಳಕಿನ ಪೂಜೆ ಮಾಡುತ್ತೇವೆ, ಇದೇ ಭಾರತ. ಸ್ವಾತಂತ್ರ್ಯ ದಿನದಂದು ಸೂರ್ಯನ ನಮಸ್ಕಾರ ಅತ್ಯಂತ ಸೂಕ್ತವಾಗಿದೆ. ವಿಶ್ವಕ್ಕೆ ಬೆಳಕು ನೀಡುವುದಕ್ಕಾಗಿಯೇ ಭಾರತ ಸ್ವತಂತ್ರವಾಗಿದೆ. ಇಡೀ‌ ವಿಶ್ವಕ್ಕೆ ಇಂದು ಭಾರತದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಧ್ವಜದ ಸ್ವರೂಪದ ಬಗ್ಗೆ ನಾವು ಯೋಚಿಸಬೇಕು. ನಿರಂತರವಾಗಿ ಕ್ರಿಯಾಶೀಲರಾಗಿರಬೇಕು. ಇದನ್ನೇ ಕೇಸರಿ ಬಣ್ಣ ಸೂಚಿಸುತ್ತದೆ. ತ್ಯಾಗವನ್ನು ಮಾಡುವುದು ಸ್ವಾರ್ಥಕ್ಕಾಗಿ ಅಲ್ಲ. ಮನದ ವಿಕಾರಗಳನ್ನು ನಿರ್ಮೂಲನೆಗೊಳಿಸಲು ಬಿಳಿ ಬಣ್ಣವಿದೆ. ಲಕ್ಷ್ಮಿಯ ಪ್ರೀತಿಗೆ ಹಸಿರು ಬಣ್ಣ ನಮ್ಮ ಸಮೃದ್ಧಿಯನ್ನು ಸೂಚಿಸುತ್ತದೆ. ಈ‌ ಸಂದೇಶವನ್ನು ತ್ರಿವರ್ಣ ಧ್ವಜ ನೀಡುತ್ತದೆ. ನಾವು ಸಬಲರಾಗದಿದ್ದರೆ ನಮ್ಮನ್ನು ಒಡೆಯುವ ಶಕ್ತಿಗಳು ಬಲಶಾಲಿಯಾಗುತ್ತವೆ ಎಂದರು‌.

ನಮ್ಮ ಅಸ್ಮಿತೆಯ ಆಧಾರದಲ್ಲಿ ದೇಶವನ್ನು ಕಟ್ಟಬೇಕು. ನಮಗೆ ಸ್ವಾಧೀನತೆ ಸಿಕ್ಕಿದೆ. ಆದರೆ ಸ್ವಾತಂತ್ರ್ಯ ಸಿಕ್ಕಿಲ್ಲ. ಜ್ಞಾನ, ಕರ್ಮದ ಆಧಾರದಲ್ಲಿ ಕೆಲಸ ಮಾಡಿದರೆ ಸ್ವಾತಂತ್ರ ಸಿಗುತ್ತದೆ. ನಮ್ಮ ಜಲ, ಅರಣ್ಯ, ಜಾನುವಾರುಗಳನ್ನು ಸುಖಿಯಾಗಿಡಬೇಕು. ಈ ಎಲ್ಲ ವಿಚಾರಗಳನ್ನೂ ಮನಸ್ಸಿನಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕು ಎಂಬ ಸಂದೇಶ ನೀಡುತ್ತಾ ಕೇವಲ 8 ನಿಮಿಷದಲ್ಲಿ ಭಾಷಣ ಮುಗಿಸಿದರು. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಉಪಸ್ಥಿತರಿದ್ದರು.

ಅನ್ನಬ್ರಹ್ಮ ರೈತ, ಸುಭದ್ರ ಕರ್ನಾಟಕದ ಅಭಿವೃದ್ಧಿಯೇ ಗುರಿ: ಹಿಂದಿನ ಸರ್ಕಾರದಲ್ಲಾದ ಲೋಪಗಳ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಮನುಷ್ಯರ ಬುದ್ಧಿಮತ್ತೆಯು ಉದ್ಯೋಗವನ್ನು ಕಿತ್ತುಕೊಳ್ಳದಂತೆ ಕಾರ್ಯಯೋಜನೆ ರೂಪಿಸಬೇಕಿದೆ. ಸಮಾಜದಲ್ಲಿ ನಕಾರಾತ್ಮಕ ಧೋರಣೆ ಹೆಚ್ಚಾಗುತ್ತಿದೆ. ಇದೆಲ್ಲವನನ್ನೂ ನಾವು ಮೆಟ್ಟಿ ನಿಲ್ಲಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಗರದ ಮಾಣಿಕ್​ ಶಾ ಪರೇಡ್​ನಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಅನ್ನವನ್ನು ಕೊಡು, ಉಡಲು ಬಟ್ಟೆಯನ್ನು ಕೊಡು, ಮನೆಯನ್ನು ಕಟ್ಟಿಕೊಡು ಇರಲು ಎಂಬ ಮಾತಿನಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಮಾಜಿ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರ ಆಶಯವನ್ನು ಪೂರೈಸಲು ಬದ್ಧರಾಗಿದ್ದೇವೆ. ಎಲ್ಲರ ಅಭಿವೃದ್ಧಿಯನ್ನು ಬಯಸುವುದೇ ರಾಜ್ಯ ಸರ್ಕಾರ ನೀತಿಯಾಗಿದೆ. ನಾಡಿನಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದಾಗಿದೆ. ಅನ್ನಬ್ರಹ್ಮ ರೈತರ ಅಭಿವೃದ್ಧಿಯಾಗಬೇಕಿದೆ. ಸುಭದ್ರ ಕರ್ನಾಟಕ, ಭಾರತವನ್ನು ನಿರ್ಮಿಸೋಣ. ನಮ್ಮ ಶಕ್ತಿಯಾದ ವೈವಿಧ್ಯತೆಯನ್ನು ಕಾಪಾಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: CM siddaramaiah: ಅನ್ನಬ್ರಹ್ಮ ರೈತ, ಸುಭದ್ರ ಕರ್ನಾಟಕದ ಅಭಿವೃದ್ಧಿಯೇ ಗುರಿ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.