ಬೆಂಗಳೂರು: ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೆ ಸಚಿವಾಕಾಂಕ್ಷಿಗಳು ಸಚಿವ ಸ್ಥಾನ ಪಡೆದುಕೊಳ್ಳಲು ಸರ್ಕಸ್ ಆರಂಭಿಸಿದ್ದಾರೆ. ಸಿಎಂ ನಿವಾಸಕ್ಕೆ ಭೇಟಿ ನೀಡಿ ತಮ್ಮ ಅಪೇಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಸಿಎಂಗೆ ಮತ್ತೆ ಆಕಾಂಕ್ಷಿಗಳನ್ನು ಸಮಾಧಾನಪಡಿಸುವ ಸಂಕಷ್ಟ ಎದುರಾಗಿದೆ.
ಹೌದು, ಚಳಿಗಾಲದ ಅಧಿವೇಶನದ ನಂತರ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಿಎಂ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಡಲು ಶುರು ಮಾಡಿದ್ದಾರೆ.
ಇಂದು ಬೆಳಗ್ಗೆಯೇ ಸಿಎಂ ನಿವಾಸ ಕಾವೇರಿಗೆ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಭೇಟಿ ನೀಡಿದರು. ಯಡಿಯೂರಪ್ಪ ಜೊತೆ ಕೆಲಕಾಲ ಮಾತುಕತೆ ನಡೆಸಿದರು. 'ಕಾಯುತ್ತಲೇ ಇದ್ದೇವೆ, ನಮ್ಮನ್ನು ಮತ್ತಷ್ಟು ಕಾಯಿಸಬೇಡಿ' ಎಂದು ಮನವಿ ಮಾಡಿದರು. ಇದಕ್ಕೆ ನಗುತ್ತಲೇ ಸಿಎಂ ಏನಾಗಲ್ಲ, ಎಲ್ಲಾ ಸರಿಯಾಗಲಿದೆ. ಸರಿಯಾದ ಸಮಯಕ್ಕೆ ಬಂದಿದ್ದೀರಿ, ಗೋಪೂಜೆಯಲ್ಲಿ ಪಾಲ್ಗೊಳ್ಳಿ ಎಂದರು.
ನಂತರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಜೊತೆಯಲ್ಲೂ ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದರು. ಕಾಯುವಿಕೆಗೆ ವಿರಾಮ ಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ಇನ್ನು ಎಂಟಿಬಿ ನಾಗರಾಜ್ ಅಧಿವೇಶನ ನಡೆಯುವ ಸಮಯದಲ್ಲೂ ಸಿಎಂ ಭೇಟಿಯಾಗಿ ಒತ್ತಡ ಹೇರಿದ್ದಾರೆ. ಇದೀಗ ಅಧಿವೇಶನ ಮುಗಿದಿದ್ದು, ಸದ್ಯದಲ್ಲೇ ಮತ್ತೆ ಸಿಎಂ ಭೇಟಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.