ETV Bharat / state

ಕೊಲೆ ಪ್ರಕರಣ: ಜಾಮೀನು ಷರತ್ತು ಸಡಿಲಿಸಿದ ಕೋರ್ಟ್.. ಮಾಜಿ ಸಚಿವ ವಿನಯ್ ಕುಲಕರ್ಣಿಗೆ ರಿಲೀಫ್​

author img

By

Published : Jan 17, 2022, 2:24 PM IST

Murder case: bail relief  to farmer  minister vinay kulkarni
Murder case: bail relief to farmer minister vinay kulkarni

ಜನವರಿ 14ರಂದು ಈ ಅರ್ಜಿ ಕುರಿತು ಆದೇಶ ಹೊರಡಿಸಿರುವ ಬೆಂಗಳೂರಿನ ಶಾಸಕರು - ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ್ ಕುಮಾರ್, ನ್ಯಾಯಾಲಯದ ಅನುಮತಿ ಇಲ್ಲದೇ ವ್ಯಾಪ್ತಿ ಬಿಟ್ಟು ಹೊರಹೋಗುವಂತಿಲ್ಲ ಎಂಬ ಷರತ್ತನ್ನು ಮಾರ್ಪಡಿಸಿದ್ದು, ಆರೋಪಿಯು ಸಿಬಿಐ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ, ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೀಡಿದ್ದ ಜಾಮೀನು ಷರತ್ತನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಡಿಲಗೊಳಿಸಿ ಆದೇಶಿಸಿದೆ.

ನ್ಯಾಯಾಲಯದ ಈ ಆದೇಶದಿಂದಾಗಿ ಆರೋಪಿ ವಿನಯ್ ಕುಲಕರ್ಣಿ ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗಲು ಅನುಮತಿ ಸಿಕ್ಕಂತಾಗಿದೆ. ಧಾರವಾಡದಲ್ಲಿರುವ ಡೈರಿ ವ್ಯವಹಾರದ ನಿಮಿತ್ತ ನವೆಂಬರ್ 30ರಿಂದ ಡಿಸೆಂಬರ್ 30ರವರೆಗೆ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಲು ವಿನಯ್ ಕುಲಕರ್ಣಿ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು.

ಬಳಿಕ ಮತ್ತೆ ಅರ್ಜಿ ಸಲ್ಲಿಸಿದ್ದ ವಿನಯ್ ಕುಲಕರ್ಣಿ, ನ್ಯಾಯಾಲಯದ ಅನುಮತಿ ಇಲ್ಲದೇ ಆರೋಪಿ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳಬಾರದು ಎಂದು ವಿಧಿಸಿರುವ ಷರತ್ತನ್ನು ಕೈಬಿಡುವಂತೆ ಕೋರಿದ್ದರು.

ಸಿಬಿಐ ಪರ ವಕೀಲರಿಂದ ಆಕ್ಷೇಪ
ಅರ್ಜಿ ವಿಚಾರಣೆ ವೇಳೆ ಸಿಬಿಐ ಪರ ವಕೀಲರು ಆರೋಪಿಯ ಮನವಿ ಪುರಸ್ಕರಿಸದಂತೆ ಕೋರಿದ್ದರು. ಆರೋಪಿ ಈ ಹಿಂದೆ ನೀಡಿದ್ದ ಅನುಮತಿ ಬಳಕೆ ಮಾಡಿಕೊಂಡು ಧಾರವಾಡದ ಹಲವೆಡೆ ಸಂಚರಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಮತ್ತೆ ಅನುಮತಿ ನೀಡಿದರೆ ಅಥವಾ ಷರತ್ತು ಸಡಿಲಿಸಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಆರೋಪಿಯ ಮನವಿಯನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.

ಕುಲಕರ್ಣಿ ಪರ ವಕೀಲರ ವಾದ ಒಪ್ಪಿದ ಕೋರ್ಟ್​

ಜನವರಿ 14ರಂದು ಈ ಅರ್ಜಿ ಕುರಿತು ಆದೇಶ ಹೊರಡಿಸಿರುವ ಬೆಂಗಳೂರಿನ ಶಾಸಕರು - ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ್ ಕುಮಾರ್, ನ್ಯಾಯಾಲಯದ ಅನುಮತಿ ಇಲ್ಲದೇ ವ್ಯಾಪ್ತಿ ಬಿಟ್ಟು ಹೊರಹೋಗುವಂತಿಲ್ಲ ಎಂಬ ಷರತ್ತನ್ನು ಮಾರ್ಪಡಿಸಿದ್ದು, ಆರೋಪಿಯು ಸಿಬಿಐ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ, ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಹತ್ಯೆ ಪ್ರಕರಣದ ಆರೋಪಿ ಆಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ರಿಲೀಫ್ ಸಿಕ್ಕಂತಾಗಿದೆ.


ಪ್ರಕರಣದ ಹಿನ್ನೆಲೆ:
2016ರ ಜೂನ್ 15ರಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಪ್ರಕರಣದ ಸಂಬಂಧ ಸ್ಥಳೀಯ ಪೊಲೀಸರು ಮೊದಲಿಗೆ ತನಿಖೆ ಆರಂಭಿಸಿದ್ದರು. ನಂತರ ಸಿಬಿಐ ತನಿಖೆ ಕೈಗೆತ್ತಿಕೊಂಡು ಪೊಲೀಸರ ಲೋಪಗಳ ಕುರಿತು ಬೆಳಕು ಚೆಲ್ಲಿತ್ತು. 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳ ವಿನಯ್ ಕುಲಕರ್ಣಿ ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

ಬಲವಾದ ಸಾಕ್ಷ್ಯಗಳನ್ನು ಸಿಬಿಐ ತೋರಿಸಿದ್ದರಿಂದ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್​​​ನಲ್ಲಿ ವಿನಯ್ ಕುಲಕರ್ಣಿಗೆ ಜಾಮೀನು ಲಭ್ಯವಾಗಿರಲಿಲ್ಲ. ನಂತರ 2021ರ ಆಗಸ್ಟ್ 11ರಂದು ಸುಪ್ರೀಂಕೋರ್ಟ್ ಆರೋಪಿಗೆ ಜಾಮೀನು ನೀಡಿ, ಷರತ್ತುಗಳನ್ನು ವಿಧಿಸಿ ಬಿಡುಗಡೆಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

ಅದರಂತೆ ಷರತ್ತುಗಳನ್ನು ವಿಧಿಸಿದ್ದ ವಿಶೇಷ ನ್ಯಾಯಾಲಯ ಅಕ್ಟೋಬರ್ 13ರಂದು ವಿವಿಧ ಷರತ್ತುಗಳ ಜತೆಗೆ ಆರೋಪಿ ನ್ಯಾಯಾಲಯದ ಸಮ್ಮತಿ ಇಲ್ಲದೇ ತನ್ನ ವ್ಯಾಪ್ತಿ ಬಿಟ್ಟು ಹೊರಹೋಗಬಾರದು ಎಂಬ ಷರತ್ತು ವಿಧಿಸಿತ್ತು.

ಇದನ್ನೂ ಓದಿ:ಇಂದು ಸಿಎಂ ಸಭೆ : ವೀಕೆಂಡ್ ಕರ್ಫ್ಯೂ ಬಗ್ಗೆ ಚರ್ಚೆ.. ಸಚಿವ ಡಾ. ಸುಧಾಕರ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.