ETV Bharat / state

ವಿಧಾನಸಭೆಗೆ ಸ್ಪರ್ಧೆ : ಹೈಕಮಾಂಡ್ ಕೃಪಾಕಟಾಕ್ಷಕ್ಕೆ ಕಾಯುತ್ತಿರುವ ಸಂಸದರು, ಮಾಜಿ ಸಂಸದರು

author img

By

Published : Mar 19, 2023, 9:55 PM IST

ಬಿಜೆಪಿ -ಕಾಂಗ್ರೆಸ್
ಬಿಜೆಪಿ -ಕಾಂಗ್ರೆಸ್

ಬಿಜೆಪಿಯಲ್ಲಿ ಹಲವು ಲೋಕಸಭೆ ಸದಸ್ಯರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಲವು ಹೊಂದಿದ್ದಾರೆ. ಪಕ್ಷದ ವೇದಿಕೆಯಲ್ಲಿ ರಾಜ್ಯ ರಾಜಕಾರಣಕ್ಕೆ ಬರುವ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರು: ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಹತ್ತಾರು ಸಂಸದರು ಮತ್ತು ಮಾಜಿ ಸಂಸದರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹೆಚ್ಚಿನ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಪಕ್ಷದ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಶಿಫ್ಟ್ ಆಗಲು ಸಜ್ಜಾಗಿದ್ದಾರೆ.

ಬಿಜೆಪಿಯಲ್ಲಿ ಹಲವಾರು ಲೋಕಸಭೆ ಸದಸ್ಯರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಒಲವು ಹೊಂದಿದ್ದು, ಪಕ್ಷದ ವೇದಿಕೆಯಲ್ಲಿ ರಾಜ್ಯ ರಾಜಕಾರಣಕ್ಕೆ ಬರುವ ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಆದರೆ ಬಿಜೆಪಿಯಲ್ಲಿ ಹೈಕಮಾಂಡ್ ಬಲಿಷ್ಠವಾಗಿದ್ದರಿಂದ ಬಹಿರಂಗವಾಗಿ ಅಪೇಕ್ಷೆ ವ್ಯಕ್ತಪಡಿಸಲು ಸಾಧ್ಯವಾಗದೇ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಲಭ್ಯವಿಲ್ಲದಿರುವುದಕ್ಕೆ ಬೇಸರದಲ್ಲಿದ್ದಾರೆಂದು ತಿಳಿದುಬಂದಿದೆ.

ಭಾರತೀಯ ಜನತಾ ಪಕ್ಷದಲ್ಲಿ ಲೋಕಸಭೆ ಸದಸ್ಯರಾದ ಶಿವಕುಮಾರ ಉದಾಸಿ, ಜಿ ಎಂ ಸಿದ್ದೇಶ್ವರ, ಪಿ ಸಿ ಮೋಹನ್, ಪ್ರತಾಪ ಸಿಂಹ, ಕರಡಿ ಸಂಗಣ್ಣ, ಪಿ ಸಿ ಗದ್ದೀಗೌಡರ್ , ರಮೇಶ ಜಿಗಜಿಣಗಿ, ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭ ಕರಂದ್ಲಾಜೆ , ಎ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜ್ಯಕಾರಣಕ್ಕೆ ಬರಲು ಪಕ್ಷದೊಳಗಿನ ಮುಖಂಡರ ಬಳಿ ಮನದಿಂಗಿತ ಹೇಳಿದ್ದಾರೆನ್ನಲಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಹಾವೇರಿ ಲೋಕಸಭೆ ಸದಸ್ಯ ಶಿವಕುಮಾರ ಉದಾಸಿ, ಚಿಕ್ಕಮಗಳೂರು ಸಂಸದೆ ಶೋಭ ಕರಂದ್ಲಾಜೆ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು ರಾಜ್ಯ ರಾಜಕಾರಣಕ್ಕೆ ಬರಲು ಹೆಚ್ಚಿನ ಆಸಕ್ತಿ ತೋರಿದ್ದಾರೆನ್ನಲಾಗಿದೆ.

ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯ ಸಂಸದರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿವಹಿಸಿದ್ದರೂ ಪಕ್ಷದ ಹೈಕಮಾಂಡ್ ಇದಕ್ಕೆ ಅವಕಾಶ ನೀಡಲು ಸಿದ್ಧವಿಲ್ಲ. ಒಂದು ವೇಳೆ ಹೈಕಮಾಂಡ್​ ಒಪ್ಪಿದರೆ ಹತ್ತಕ್ಕೂ ಹೆಚ್ಚು ಬಿಜೆಪಿಯ ಲೋಕಸಭೆ ಸದಸ್ಯರು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗ ಮಾತ್ರವಲ್ಲ ಈ ಹಿಂದಿನ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯಲೂ ಈ ಸಂಸದರುಗಳು ಮನದಾಸೆ ಹೊರಹಾಕಿದ್ದರು. ಆದರೆ ಹೈಕಮಾಂಡ್ ಇದಕ್ಕೆ ತನ್ನ ಅನುಮತಿ ನೀಡಿರಲಿಲ್ಲ. ಆಗ ಲೋಕಸಭೆ ಸದಸ್ಯರಾಗಿದ್ದ ಸಚಿವ ಶ್ರೀರಾಮುಲು ಅವರಿಗೆ ಮಾತ್ರ ರಾಜಕೀಯ ಕಾರಣಕ್ಕೆ ಅವಕಾಶ ನೀಡಿದ್ದರು.

ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ನಾಯಕರು

ಹೈಕಮಾಂಡ್​ನಿಂದ ಅನುಮತಿ ಅನುಮಾನವೇಕೆ? ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿರುವ ಬಿಜೆಪಿ ಲೋಕಸಭೆ ಸದಸ್ಯರಿಗೆ ಪಕ್ಷದ ಹೈಕಮಾಂಡ್ ಅವಕಾಶ ನೀಡಲು ತಯಾರಿಲ್ಲ. ಒಂದು ವೇಳೆ ಸಂಸದರಿಗೆ ಅನುವು ಮಾಡಿಕೊಟ್ಟರೆ, ಚುನಾವಣೆಯಲ್ಲಿ ನಿಂತಿದ್ದ ಲೋಕಸಭೆ ಸದಸ್ಯರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ಅವರು ಸಂಸತ್ ಸ್ಥಾನಕ್ಕೆ ಉಪ ಚುನಾವಣೆ ನಡೆಸಬೇಕಾಗುತ್ತದೆ. ಹೆಚ್ಚಿನ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಿದರೆ ರಾಷ್ಟ್ರೀಯ ಮಟ್ಟದಲ್ಲಿ ಅದು ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವರ್ಚಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಆತಂಕ ಹೈಕಮಾಂಡ್​ನದ್ದಾಗಿದೆ.

ಹೆಚ್ಚಿದ ಒತ್ತಡ: ಪಕ್ಷದ ಹೈಕಮಾಂಡ್ ಸಂಸದರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಲು ಸಿದ್ಧವಿಲ್ಲದಿದ್ದರೂ ಕೆಲವು ಸಂಸದರು ವರಿಷ್ಠರ ಮೇಲೆ ಒತ್ತಡ ಹಾಕುತ್ತಿರುವ ಮಾಹಿತಿ'' ಈ ಟಿವಿ ಭಾರತ್​''ಗೆ ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಹಾವೇರಿ ಲೋಕಸಭೆ ಸದಸ್ಯರಾದ ಶಿವಕುಮಾರ ಉದಾಸಿಯವರು ಹಾನಗಲ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಅಭಿಲಾಶೆಯನ್ನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸಂಸದ ಶಿವಕುಮಾರ್ ಉದಾಸಿಯವರ ತಂದೆ ಸಿ.ಎಂ ಉದಾಸಿಯವರ ನಿಧನದ ಬಳಿಕ ರಾಜ್ಯ ರಾಜಕಾರಣಕ್ಕೆ ಶಿವಕುಮಾರ ಉದಾಸಿ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಪಕ್ಷದ ಹೈಕಮಾಂಡ್ ಅವಕಾಶ ನೀಡದಿದ್ದರೆ ಬರುವ ಲೋಕಸಭೆ ಚುನಾವಣೆಯಿಂದಲೂ ದೂರ ಉಳಿಯುವ ಬಗ್ಗೆ ಆಲೋಚಿಸುತ್ತಿದ್ದಾರೆನ್ನಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಬದಲಾವಣೆ ಸಂದರ್ಭದಲ್ಲಿ ಅವರ ಉತ್ತರಾಧಿಕಾರ ಸ್ಥಾನಕ್ಕೆ ಶಿವಕುಮಾರ ಉದಾಸಿ ಅವರ ಹೆಸರು ಕೇಳಿ ಬಂದಿತ್ತು. ಲಿಂಗಾಯತ ಸಮುದಾಯಕ್ಕೆ ಸೇರಿದ ಶಿವಕುಮಾರ ಉದಾಸಿಯವರು ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಕನಸನ್ನೂ ಸಹ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊಪ್ಪಳ ಲೋಕಸಭೆ ಕ್ಷೇತ್ರದ ಸದಸ್ಯರಾಗಿರುವ ಕರಡಿ ಸಂಗಣ್ಣ ಸಹ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತವನ್ನು ಪಕ್ಷದ ಮುಖಂಡರಲ್ಲಿ ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲಿಗರು ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ, ಕರಡಿ ಸಂಗಣ್ಣನವರಿಗೆ ವಿದಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್​ ನೀಡುವಂತೆ ಒತ್ತಾಯಿಸತೊಡಗಿದ್ದಾರೆ. ಕರಡಿ ಸಂಗಣ್ಣನವರು ಈ ಹಿಂದೆ ರಾಜ್ಯ ರಾಜಕಾರಣದಲ್ಲಿಯೇ ಇದ್ದವರಾಗಿದ್ದು ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ನಂತರ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದಿದ್ದರು.

ದಾವಣಗೆರೆ ಲೋಕಸಭೆ ಕ್ಷೇತ್ರದ ಸಂಸದರಾದ ಜಿ ಎಂ ಸಿದ್ದೇಶ್ವರ ಸಹ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಪಕ್ಷದ ಟಿಕೆಟ್ ದೊರೆಯುವುದು ಅನುಮಾನವೆನ್ನುವ ಮುನ್ಸೂಚನೆ ಅರಿತ ಬಿಜೆಪಿ ಸಂಸದರು ಸುರಕ್ಷತೆ ದೃಷ್ಟಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಸಂಬಂಧ ಟಿಕೆಟ್ ಗಿಟ್ಟಿಸಲು ಕಸರತ್ತು ನಡೆಸಿದ್ದಾರೆಂದು ಗೊತ್ತಾಗಿದೆ.

ಕಾಂಗ್ರೆಸ್ ನಲ್ಲಿಯೂ ಒತ್ತಡ; ಕಾಂಗ್ರೆಸ್ ಪಕ್ಷದಲ್ಲಿ ಇರುವ ರಾಜ್ಯದ ಏಕೈಕ ಸಂಸದರಾದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಒಲವನ್ನು ವ್ಯಕ್ತಪಡಿಸಿದ್ದಾರೆ. ಪಕ್ಷದ ಹೈಕಮಾಂಡ್ ಸಹ ಇದಕ್ಕೆ ಹಸಿರು ನಿಶಾನೆ ನೀಡುವುದಾಗಿ ತಿಳಿಸಿದೆ ಎಂದು ಹೇಳಲಾಗಿದೆ. ಉಳಿದಂತೆ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಸಂಸದರಾದ ಹಿರಿಯ ಮುಖಂಡ ಕೆ ಹೆಚ್ ಮುನಿಯಪ್ಪ, ಬಿ. ಚಂದ್ರಪ್ಪ, ಬಿ ವಿ ನಾಯಕ್ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಬಯಕೆ ವ್ಯಕ್ತಪಡಿಸಿ ಟಿಕೆಟ್ ನೀಡುವಂತೆ ಕೆಪಿಸಿಸಿಗೆ ಲಕ್ಷ ರೂಪಾಯಿ ಶುಲ್ಕ ನೀಡಿ ಅರ್ಜಿ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಮಾಜಿ ಸಂಸದರುಗಳಾದ ಕೆ ಹೆಚ್ ಮುನಿಯಪ್ಪ ಅವರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್ ನೀಡುವ ಸಾಧ್ಯತೆಗಳಿವೆ. ಉಳಿದ ಟಿಕೆಟ್ ಆಕಾಂಕ್ಷಿ ಮಾಜಿ ಸಂಸದರುಗಳಿಗೆ ಗೆಲುವಿನ ಸಾಧ್ಯತೆಗಳನ್ನು ಆಧರಿಸಿ, ಸಮೀಕ್ಷೆ ವರದಿ ಪ್ರಕಾರ ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.

ಇದನ್ನೂ ಓದಿ : ರಾಜ್ಯ ರಾಜಧಾನಿಯಲ್ಲಿ ಮೊಳಗಿದ ಕೇಸರಿ ಕಹಳೆ: ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ರೋಡ್ ಶೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.