ETV Bharat / state

ಮತ್ತೆ ಮತ್ತೆ ಕಣಕ್ಕಿಳಿದ ಅಭ್ಯರ್ಥಿಗಳು ಯಾರು? ಇವರ ಸೋಲು, ಗೆಲುವಿನ ಮಾಹಿತಿ

author img

By

Published : May 14, 2023, 6:42 AM IST

Updated : May 14, 2023, 9:39 AM IST

Etv Bharat
Etv Bharat

5ಕ್ಕೂ ಹೆಚ್ಚು ಬಾರಿ ಚುನಾವಣಾ ಕಣಕ್ಕಿಳಿದ ಅಭ್ಯರ್ಥಿಗಳಲ್ಲಿ ಗೆಲುವು ಕಂಡವರು ಮತ್ತು ಸೋತವರ ಮಾಹಿತಿ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 224, ಕಾಂಗ್ರೆಸ್​ 223, ಜೆಡಿಎಸ್​ 211 ಹುರಿಯಾಳುಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ ಹಲವರು ಹೊಸಬರಾದರೆ, 6 ರಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಮತ್ತೆ ಮತ್ತೆ ನಿಂತ ಕೆಲವರಿಗೆ ರಾಜ್ಯದ ಜನತೆ ಶಾಕ್​ ನೀಡಿದ್ದಾರೆ.

ಸದನದ ಹಿರಿಯ ಶಾಸಕ ಆರ್.​​ವಿ.ದೇಶಪಾಂಡೆ: ಕಾಂಗ್ರೆಸ್​ ಹಿರಿಯ ನಾಯಕ ಆರ್.ವಿ.ದೇಶಪಾಂಡೆ 8 ಬಾರಿ ಗೆದ್ದಿದ್ದು, ಈ ಬಾರಿಯೂ ಕಣದಲ್ಲಿದ್ದರು. ಹಳಿಯಾಳ ಕ್ಷೇತ್ರದ ಜನ ಮತ್ತೆ ಇವರಿಗೆ ಅವಕಾಶ ಮಾಡಿಕೊಟ್ಟಿದ್ದು 9ನೇ ಬಾರಿಗೆ ಜಯ ಸಾಧಿಸಿದರು. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಾಖಲೆ ಸರಿಗಟ್ಟಿದ್ದಾರೆ. ಬಿಜೆಪಿ ಎದುರಾಳಿ ಸುನೀಲ್​ ಹೆಗ್ಡೆ ಅವರಿಂದ 3,643 ಹೆಚ್ಚು ಮತಗಳನ್ನು ಪಡೆದಿದ್ದಾರೆ.

1983 ರಿಂದ 1994 ರವರೆಗೆ ಜನತಾ ಪರಿವಾರದಿಂದ ಸ್ಪರ್ಧಿಸಿ 4 ಬಾರಿ ಶಾಸಕರಾಗಿದ್ದರು. 1999ರಲ್ಲಿ ಕಾಂಗ್ರೆಸ್​ ಸೇರಿದರು. 2004, 2013, 2018 ರ ಚುನಾವಣೆಯಲ್ಲಿ ಗೆದ್ದರು. 2008 ರಲ್ಲಿ ಒಮ್ಮೆ ಮಾತ್ರ ಶಿಷ್ಯ ಸುನೀಲ್​ ಹೆಗಡೆ ವಿರುದ್ಧ ಸೋಲುಂಡಿದ್ದರು.

more-time-winners-in-karnataka-assembly-elections
ಸೋಲು, ಗೆಲುವಿನ ಮಾಹಿತಿ

1999ರಲ್ಲಿ ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ಹಾಗೂ 1996-1999 ರವರೆಗಿನ ಜನತಾ ದಳ ಸರ್ಕಾರದ ಅವಧಿಯಲ್ಲೂ ಭಾರಿ ಕೈಗಾರಿಕ ಸಚಿವರಾಗಿ, ಧರ್ಮಸಿಂಗ್‌, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲೂ ದೇಶಪಾಂಡೆ ಕೈಗಾರಿಕಾ ಸಚಿವರಾಗಿದ್ದರು.

9ನೇ ಗೆಲುವು ದಾಖಲಿಸಿದ ಸಿದ್ದರಾಮಯ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಅವರು 10 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಉಪಚುನಾವಣೆ ಸೇರಿ 8 ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿ ವರುಣದಲ್ಲಿ ನಿಂತು ಬಿಜೆಪಿಯ ವಿ.ಸೋಮಣ್ಣ ಅವರನ್ನು ಮಣಿಸಿದ್ದಾರೆ. ಸೋಮಣ್ಣರನ್ನು 43 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಉಪ ಚುನಾವಣೆಯಲ್ಲಿ 253 ಮತಗಳಿಂದ ಶಿವಬಸಪ್ಪ ವಿರುದ್ಧ ಗೆಲುವು ಕಂಡಿದ್ದರು. ವಿಧಾನಸಭಾ ರಾಜಕೀಯ ಜೀವನದಲ್ಲಿ ಒಟ್ಟು ಮೂರು ಬಾರಿ ಸೋಲು (1989- 1999, 2018- ಚಾಮುಂಡೇಶ್ವರಿ) ಕಂಡಿದ್ದಾರೆ. ಕಳೆದ 2018 ಚುನಾವಣೆಯಲ್ಲಿ ಬಾದಾಮಿಯಲ್ಲಿ ಗೆದ್ದರೆ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದರು. ಸಿಎಂ ಸ್ಥಾನದಲ್ಲಿದ್ದಾಗಲೇ ತಮ್ಮ ಸ್ವಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಕಂಡಿದ್ದು ವಿಶೇಷ. ಆದರೆ, ಬಾದಾಮಿಯಲ್ಲಿ ಕಡಿಮೆ ಅಂತರದ ಗೆಲುವು ಸಿಕ್ಕಿತ್ತು. ಈ ಸಲ ಸಿದ್ದರಾಮಯ್ಯ ವರುಣದಲ್ಲಿ ಮಾತ್ರವೇ ಚುನಾವಣೆಗೆ ಸ್ಪರ್ಧಿಸಿದ್ದರು.

ಬೃಹತ್​ ಅಂತರದಲ್ಲಿ ಗೆದ್ದ ಡಿ.ಕೆ.ಶಿವಕುಮಾರ್​: ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್​ ಅವರು 8ನೇ ಬಾರಿಗೆ ಕನಕಪುರದಲ್ಲಿ ಕೈ ಧ್ವಜ ನೆಟ್ಟಿದ್ದಾರೆ. ಇವರ​ ವಿರುದ್ಧ ಕಂದಾಯ ಸಚಿವರಾಗಿದ್ದ ಆರ್.ಅಶೋಕ್‌ರ​ನ್ನು ಬಿಜೆಪಿ ಕಣಕ್ಕಿಳಿಸಿದರೆ, ಜೆಡಿಎಸ್​ನಿಂದ ಬಿ.ನಾಗರಾಜು ಸ್ಪರ್ಧಿಸಿದ್ದರು. ಅಶೋಕ್​ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಜೆಡಿಎಸ್​ ಅಭ್ಯರ್ಥಿ ಎರಡನೇ ಲೀಡ್​ ಪಡೆದರು. ಡಿಕೆಶಿ ಐತಿಹಾಸಿಕ 1,20,599 ಮುನ್ನಡೆ ಪಡೆದು ಗೆದ್ದರು.

ಡಿಕೆಶಿ 1989 ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 1999 ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ 56 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. 2008 ರಿಂದ ಕನಕಪುರ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಗೆಲ್ಲುತ್ತಾ ಬಂದಿದ್ದಾರೆ. ಎಸ್‌.ಬಂಗಾರಪ್ಪ, ಎಸ್‌.ಎಂ.ಕೃಷ್ಣ, ಧರ್ಮಸಿಂಗ್‌, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲಿ ಕೆಲಸ ಮಾಡಿದ ಅನುಭವ ಡಿಕೆಶಿಗಿದೆ.

ಕಾಂಗ್ರೆಸ್​ ಸೇರಿ ಸೋಲು ಕಂಡ ಶೆಟ್ಟರ್​: ಶೆಟ್ಟರ್‌ 6 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಈ ಸಲ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದು ಕಾಂಗ್ರೆಸ್​ ಸೇರಿದ್ದರು. ಕಾಂಗ್ರೆಸ್​ ಅವರಿಗೆ ಟಿಕೆಟ್​ ನೀಡಿತ್ತು. ಬಿಜೆಪಿ ಶೆಟ್ಟರ್​ ವಿರುದ್ಧ ಅವರ ಶಿಷ್ಯ ಎಂದೇ ಗುರುತಿಸಿಕೊಂಡಿದ್ದ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿತ್ತು. ಫಲಿತಾಂಶದಲ್ಲಿ 35 ಸಾವಿರಕ್ಕೂ ಹೆಚ್ಚಿನ ಅಂತರದಿಂದ ಟೆಂಗಿನಕಾಯಿ ಗೆದ್ದರು.

ಶೆಟ್ಟರ್ ಸಚಿವ, ವಿಧಾನಸಭೆ ಸ್ಪೀಕರ್, ವಿಧಾನಸಭೆ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. 1994 ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದರು.

ಮಾಜಿ ಸ್ಪೀಕರ್​ ರಮೇಶ್ ​ಕುಮಾರ್ ಸೋಲಿಸಿದ ಜೆಡಿಎಸ್​: ಸಚಿವರು, ಮಾಜಿ ಸ್ಪೀಕರ್ ಆಗಿರುವ ಕೆ.ಆರ್.​ ರಮೇಶ್ ​ಕುಮಾರ್​ 1978 ರಿಂದ ಚುನಾವಣಾ ರಾಜಕೀಯದಲ್ಲಿದ್ದಾರೆ. 1978 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 1983 ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದರು. 1985 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1989 ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋತರು. 1994 ರಲ್ಲಿ ಜನತಾ ದಳದಿಂದ ಗೆದ್ದು, ಸ್ಪೀಕರ್​ ಆಗಿ ಆಯ್ಕೆಯಾದರು. 1999 ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಸೋಲು ಕಂಡರು. 2004 ರಲ್ಲಿ ಮತ್ತೆ ಕಾಂಗ್ರೆಸ್​ ಸೇರಿ ಸತತವಾಗಿ ಗೆಲುತ್ತಾ ಬಂದಿದ್ದಾರೆ. ಈ ಬಾರಿ ಕಾಂಗ್ರೆಸ್​ ಬಹುಮತ ಸಾಧಿಸಿದರೂ ರಮೇಶ್​ ಕುಮಾರ್​ ಸೋಲು ಕಂಡಿದ್ದಾರೆ. ಜೆಡಿಎಸ್​ನ ಜಿ.ಕೆ. ವೆಂಕಟಶಿವರೆಡ್ಡಿ 10 ಸಾವಿರ ಮತದ ಅಂತರದಿಂದ ಮಣಿಸಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿಗೂ ಸೋಲು: ವಿಧಾನಸಭೆ ಸ್ಪೀಕರ್​ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1994, 1999, 2004, 2008, 2013, 2018 ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದಿಂದ 7ನೇ ಬಾರಿಗೆ ನಾಮ ಪತ್ರ ಸಲ್ಲಿಕೆ ಮಾಡಿದ್ದ ಅವರು ಕಾಂಗ್ರೆಸ್​ನ ಭಿಮಣ್ಣ ಟಿ.ನಾಯಕ್​ ವಿರುದ್ಧ 6 ಸಾವಿರ ಮತ ಅಂತರದಲ್ಲಿ ಸೋತಿದ್ದಾರೆ.

ಹೆಚ್​.ಡಿ.ರೇವಣ್ಣಗೆ 7ನೇ ಗೆಲುವು: 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹೆಚ್. ಡಿ. ರೇವಣ್ಣ 1999, 2004, 2008, 2013 ಮತ್ತು 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಒಟ್ಟು ಆರು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಇವರೂ ಸಹ 7 ನೇ ಬಾರಿ ಹೊಳೆನರಸೀಪುರದಿಂದಲೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಅವರು ಕಾಂಗ್ರೆಸ್​ನ ಶ್ರೇಯಸ್ ಎಂ.ಪಟೇಲ್ ವಿರುದ್ಧ 3 ಸಾವಿರ ಮತ ಅಂತರದಲ್ಲಿ ಗೆಲುವು ಕಂಡಿದ್ದಾರೆ.

ಮತ್ತೆ ಗೆದ್ದ ಎಂ.ಬಿ.ಪಾಟೀಲ್​: 6ನೇ ಬಾರಿಗೆ ಎಂ.ಬಿ.ಪಾಟೀಲ್​ ಗೆದ್ದು, ಶಕ್ತಿಕೇಂದ್ರದ ಪ್ರವೇಶ ಪಕ್ಕಾ ಮಾಡಿಕೊಂಡಿದ್ದಾರೆ. ಕಾಂಗ್ರೆಸ್​​​​​ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಪಾಟೀಲ್​ ಮೊದಲ ಬಾರಿಗೆ 1991ರಲ್ಲಿ ತಿಕೋಟಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿ ಶಾಸಕರಾದರು. 2004ರಲ್ಲಿ ತಿಕೋಟಾದಿಂದ ಮತ್ತೆ ವಿಧಾನಸಭೆಗೆ ಆಯ್ಕೆಯಾದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಬಬಲೇಶ್ವರ ಕ್ಷೇತ್ರದಿಂದ ಕಣಕ್ಕಿಳಿದು ಆಯ್ಕೆಗೊಂಡಿದ್ದು, 2013, 2018ರಲ್ಲಿಯೂ ಇದೇ ಕ್ಷೇತ್ರದಿಂದ ಆಯ್ಕೆ ಆಗಿ ಪ್ರಭಾವಿ ಸಚಿವರು ಹಾಗೂ ನಾಯಕರಾಗಿ ಪ್ರವರ್ಧನಮಾನಕ್ಕೆ ಬಂದಿದ್ದಾರೆ.

ಎರಡು ಕಡೆ ನಿಂತರೂ ವಿ.ಸೋಮಣ್ಣಗೆ ಸೋಲು: ಆಡಳಿತಾರೂಢ ಬಿಜೆಪಿಯಲ್ಲಿ ವಸತಿ ಸಚಿವರಾಗಿದ್ದ ವಿ.ಸೋಮಣ್ಣ ಈ ಬಾರಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಸಿದ್ದರಾಮಯ್ಯ ವಿರುದ್ಧ ವರುಣದಲ್ಲಿ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಪುಟ್ಟರಂಗಶೆಟ್ಟಿ ವಿರುದ್ಧ ನಿಂತಿದ್ದರು. ಅಚ್ಚರಿ ಎಂದರೆ ಸೋಮಣ್ಣ ಅವರಿಗೆ ಎರಡು ಕ್ಷೇತ್ರದ ಜನರೂ ಆರನೇ ಬಾರಿಗೆ ಗೆಲ್ಲುವ ಅವಕಾಶ ಕೊಟ್ಟಿಲ್ಲ.

ಲಿಂಗಾಯತ ಸಮುದಾಯದ ಪ್ರಭಾವಿ ರಾಜಕಾರಣಿಯಾಗಿರುವ ವಿ.ಸೋಮಣ್ಣ ರಾಜಕೀಯವಾಗಿ ಗಟ್ಟಿ ನಾಯಕ. 5 ಬಾರಿ ಶಾಸಕರಾಗಿ, 2 ಬಾರಿ ವಿಧಾನಪರಿಷತ್​ ಸದಸ್ಯರಾಗಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. 1994ರಲ್ಲಿ ಜನತಾದಳದಿಂದ ಬಿನ್ನಿಪೇಟೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. 1999 ರಲ್ಲಿ ಅದೇ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಿಸಿದರು. 2004, 2008 ರಲ್ಲಿ ಗೋವಿಂದರಾಜ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದು ಶಾಸಕರಾದರು. ಬದಲಾದ ರಾಜಕಾರಣದಲ್ಲಿ ಬಿಜೆಪಿ ಸೇರಿದ ಸೋಮಣ್ಣ 2010 ರಿಂದ 2018 ರವರೆಗೆ ವಿಧಾನಪರಿಷತ್​ಗೆ ಆಯ್ಕೆಯಾದರು. 2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾದರು.

ಸುರೇಶ್​ ಕುಮಾರ್​ಗೆ 6ನೇ ಗೆಲುವು: 1994, 1999, 2008, 2013, 2018 ರ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2004 ರ ಚುನಾವಣೆಯಲ್ಲಿ ಒಂದು ಬಾರಿ ಸೋಲು ಕಂಡಿದ್ದರು. ರಾಜಾಜಿನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸುರೇಶ್​ ಕುಮಾರ್​​​ 7ನೇ ಬಾರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಆರನೇ ಗೆಲುವು ದಾಖಲಿಸಿದ್ದಾರೆ.

ಜಿ.ಎಚ್.ತಿಪ್ಪಾರೆಡ್ಡಿಗೆ ಸೋಲು: ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರು 1994 ರಲ್ಲಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2008 ರ ಚುನಾವಣೆಯಲ್ಲಿ ಜೆಡಿಎಸ್​​ನಿಂದ ಕಣಕ್ಕಿಳಿದು ಸೋಲು ಕಂಡಿದ್ದರು. ಇದಾದ ಬಳಿಕ 2010 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2013 ರಲ್ಲಿ ವಿಧಾನಪರಿಷತ್​ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. 2013, 2018 ಸೇರಿ 5 ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. 2 ಬಾರಿ ವಿಧಾನ ಪರಿಷತ್​ಗೆ ಆಯ್ಕೆಯಾಗಿದ್ದರು. ಇದೀಗ 8 ನೇ ಸಲ ನಾಮಪತ್ರ ಸಲ್ಲಿಸಿದ್ದ ಅವರು ಕಾಂಗ್ರೆಸ್​ನ ವೀರೇಂದ್ರ ಪಪ್ಪಿ ವಿರುದ್ಧ 52,450 ಮತ ಅಂತರದಿಂದ ಸೋಲು ಕಂಡಿದ್ದಾರೆ.

ಮಾಜಿ ಸಿಎಂ ಹೆಚ್.​​ಡಿ.ಕುಮಾರಸ್ವಾಮಿಗೆ ಗೆಲುವು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು 2 ಬಾರಿ ಲೋಕಸಭೆ, 4 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 1996, 2009 ರ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಮತ್ತು ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ 4 ಬಾರಿ ಜಯ ಕಂಡಿದ್ದಾರೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನನ್ನಪಟ್ಟಣ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಚೆನ್ನಪಟ್ಟಣದಿಂದ ಸ್ಪರ್ಧಿಸಿ 5ನೇ ಗೆಲುವು ಕಂಡಿದ್ದಾರೆ.

ಇದನ್ನೂ ಓದಿ: ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮೆಲುಗೈ: ಭದ್ರಕೋಟೆ ಕಳೆದುಕೊಂಡ ಜೆಡಿಎಸ್, ಇದ್ದ ಸ್ಥಾನವನ್ನೂ ನಷ್ಟ ಮಾಡಿಕೊಂಡ ಬಿಜೆಪಿ

Last Updated :May 14, 2023, 9:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.