ETV Bharat / state

ಕೆಂಪಣ್ಣ ಸಿನಿಮಾದ ನಿರ್ದೇಶಕ, ನಿರ್ಮಾಪಕರ ವಿವರ ಸದ್ಯದಲ್ಲೇ ಹೊರಬೀಳಲಿದೆ: ಸಿ ಟಿ ರವಿ

author img

By

Published : Aug 25, 2022, 7:01 PM IST

ಸಿ ಟಿ ರವಿ
ಸಿ ಟಿ ರವಿ

ಆರೋಪ ಮಾಡುವುದು ಅತ್ಯಂತ ಸುಲಭ. ಕೆಂಪಣ್ಣಗೆ ಯಾರು, ಎಲ್ಲಿಂದ ಪ್ರಚೋದನೆ ನೀಡುತ್ತಿದ್ದಾರೆ ಎಂಬುದು ತಿಳಿಯಬೇಕಿದೆ. ಸುಮ್ಮನೆ ನ್ಯಾಯಾಂಗ ತನಿಖೆಗೆ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಸಿನಿಮಾದ ನಿರ್ದೇಶಕ, ನಿರ್ಮಾಪಕ ಯಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಅವರ ಆರೋಪಗಳು ಟೂಲ್ ಕಿಟ್‍ನ ಮತ್ತೊಂದು ಭಾಗ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರೋಪ ಮಾಡಲಾಗುತ್ತಿದೆ. ದಾಖಲೆ ನೀಡಿ ಎಂದರೆ ನೀಡುವುದಿಲ್ಲ. ಆರೋಪ ಮಾಡುವುದು ಅತ್ಯಂತ ಸುಲಭ. ಕೆಂಪಣ್ಣಗೆ ಯಾರು, ಎಲ್ಲಿಂದ ಪ್ರಚೋದನೆ ನೀಡುತ್ತಿದ್ದಾರೆ ಎಂಬುದು ತಿಳಿಯಬೇಕಿದೆ ಎಂದರು.

ಯಾವುದೇ ವಿಚಾರವನ್ನು ನ್ಯಾಯಾಂಗ ತನಿಖೆಗೆ ನೀಡಲು ಒಂದು ಮೂಲಭೂತ ಪ್ರಕರಣ ಇರಬೇಕು. ಒಂದು ನಿರ್ದಿಷ್ಟ ವಿಚಾರವೂ ಇರಬೇಕು. ಕೆಂಪಣ್ಣ ಆರೋಪದ ಹಿಂದಿನ ನಿರ್ದೇಶಕ ಯಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಹಿಂದೆ ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆಯಲು ಯತ್ನಿಸಿದರು. ಸುಮ್ಮನೆ ನ್ಯಾಯಾಂಗ ತನಿಖೆಗೆ ನೀಡಲು ಸಾಧ್ಯವಿಲ್ಲ. ಒಂದು ಹತ್ಯೆಯೇ ಆಗಿದ್ದರೆ, ಎಲ್ಲಿ, ಯಾರು ಮತ್ತು ಹೇಗೆ ಎಂಬುದು ಮುಖ್ಯವಾಗುತ್ತದೆ. ನಿರ್ದಿಷ್ಟವಾಗಿ ಪ್ರಕರಣ ಇದ್ದರೆ ಹೇಳಲಿ ಎಂದು ಸಿ ಟಿ ರವಿ ಒತ್ತಾಯಿಸಿದರು.

ಇದನ್ನೂ ಓದಿ: ನಮಾಜ್ ಮಾಡಲು ಬಿಟ್ಟಮೇಲೆ ಗಣಪತಿ ಇಡಲು ಬಿಡಬೇಕು: ಸಿ ಟಿ ರವಿ

ಮದರಸಾ ಶಿಕ್ಷಣದ ಬಗ್ಗೆ ಮಾಹಿತಿ ಕೇಳುವ ವಿಚಾರ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮಾಹಿತಿ ಕೇಳುವುದರಲ್ಲಿ ತಪ್ಪೇನಿದೆ? ಇವತ್ತು ತಾಲಿಬಾನ್ ಏನಾಗಿದೆ? ಶಿಕ್ಷಣ ಇಲಾಖೆ ಮದರಸಾ ಬಗ್ಗೆ ಗಮನ ನೀಡುವುದರಲ್ಲಿ ಏನು ತಪ್ಪಿದೆ? ಎಂದು ಮರು ಪ್ರಶ್ನೆ ಹಾಕಿದರು.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡುವುದರಲ್ಲಿ ಏನು ತಪ್ಪಿದೆ? ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಮಾಡಬಾರದು? ಹಬ್ಬ ಮಾಡುವವರು ಯಾರೂ ಬಾಂಬ್ ಹಾಕುವುದಿಲ್ಲ ಅಲ್ಲವೇ? ಎಂದು ಪತ್ರಕರ್ತರ ಪ್ರಶ್ನೆಗಳಿಗೆ, ಪ್ರಶ್ನೆಗಳ ಮೂಲಕವೇ ಉತ್ತರಿಸಿದರು. ಹಬ್ಬ ಮಾಡುವವರು ಹೆಚ್ಚೆಂದರೆ ಗಣಪತಿ ಬಪ್ಪ ಮೊರೆಯಾ ಎಂದು ಕೂಗಬಹುದು. ಅಷ್ಟು ಗ್ಯಾರಂಟಿ ನಾನು ಕೊಡಬಲ್ಲೆ ಎಂದು ಸಿ ಟಿ ರವಿ ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.