ETV Bharat / state

ಕಾಂಗ್ರೆಸ್​ನವರಿಗೆ ಕಾಮಾಲೆ ಕಣ್ಣು, ಆ ಪಕ್ಷಕ್ಕೆ ಡೈವೋರ್ಸ್ ಕೊಟ್ಟು ಬಂದೆ‌: ಬಿ ಸಿ ಪಾಟೀಲ್

author img

By

Published : Oct 19, 2022, 7:04 PM IST

ಸಚಿವ ಬಿ ಸಿ ಪಾಟೀಲ್
ಸಚಿವ ಬಿ ಸಿ ಪಾಟೀಲ್

ಕಾಂಗ್ರೆಸ್‌ನವರ ಸೇ ಸಿಎಂ ಅಭಿಯಾನಕ್ಕೆ ದಾಖಲೆ ಸಹಿತ‌ ಉತ್ತರಿಸುತ್ತೇವೆ. ಅಭಿವೃದ್ಧಿ ಕೆಲಸ ಸಹಿಸದೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ನಾಯಕರಿಗೆ ಕಾಮಾಲೆ ಕಣ್ಣು. ಎಲ್ಲವನ್ನೂ ಹಳದಿ ಎಂದೇ ಭಾವಿಸಿ ಹಾಗೆಯೇ ಬಿಂಬಿಸುತ್ತಾರೆ. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು, ‌ಸಾಧನೆಗಳು ಅವರ ಕಣ್ಣಿಗೆ ಕಾಣುವುದಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್​ಗೆ ಡೈವೋರ್ಸ್ ನೀಡಿ ಹೊರಬಂದೆ‌ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಟೀಕಿಸಿದರು.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳು ಮಾತ್ರವಲ್ಲ, ಅದರ ಹೊರತಾಗಿಯೂ ಅಮೃತ ಯೋಜನೆಗಳು, ಸಿಎಂ ರೈತ ನಿಧಿ, ಎಸ್​ಸಿ ಎಸ್​ಟಿ ಮೀಸಲು ಹೆಚ್ಚಳ ಸೇರಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರದ ಸಾಧನೆಗೆ ಹಲವು ಪ್ರಶಸ್ತಿಗಳು ಕೇಂದ್ರ ಸರ್ಕಾರ ಹಾಗೂ ಹಲವು ಸಂಸ್ಥೆಗಳಿಂದ ಸಂದಿವೆ. ಕಾಂಗ್ರೆಸ್‌ನವರ ಸೇ ಸಿಎಂ ಅಭಿಯಾನಕ್ಕೆ ದಾಖಲೆ ಸಹಿತ‌ ಉತ್ತರಿಸುತ್ತೇವೆ. ಅಭಿವೃದ್ಧಿ ಕೆಲಸ ಸಹಿಸದೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಮಾತನಾಡಿದರು

ಭಕ್ತಾದಿಗಳ ಜೊತೆ ಚರ್ಚೆ ಒಳ್ಳೆಯದು: ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ಮಠ, ಭಕ್ತಾದಿಗಳು ಹಾಗೂ ಸ್ವಾಮೀಜಿಗಳಿಗೆ ಸಂಬಂಧಿಸಿದ ವಿಚಾರ. ಈಗಾಗಲೇ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರಕ್ಕೂ ಮುನ್ನ ಮಠದ ಭಕ್ತಾದಿಗಳ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು ಎಂದರು.

ಸಿರಿಧಾನ್ಯ ಮೇಳ ಆಯೋಜನೆ: ರೈತರ ಸಿರಿಧಾನ್ಯ ಬೆಳೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಬರುವ ಜನವರಿ 20 ರಿಂದ 22ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಿರಿಧಾನ್ಯ ಬೆಳೆ ಬೆಳೆಯುವಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೊಲಿಸಿದರೆ ಕರ್ನಾಟಕ ಮುಂಚೂಣಿಯಲ್ಲಿದ್ದು, ಇದಕ್ಕೆ ಸೂಕ್ತ ಮಾರುಕಟ್ಟೆ ವಿಸ್ತರಣೆ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವುದೂ ಸೇರಿದಂತೆ ಇನ್ನಿತರ ಸದುದ್ದೇಶಗಳಿಗಾಗಿ ಸಿರಿಧಾನ್ಯ ಮೇಳ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದು, ಕೇಂದ್ರ ಕೃಷಿ ಸಚಿವ ಮಹೇಂದ್ರಸಿಂಗ್ ತೋಮರ್ ಆಗಮಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಿದರೇ ಹೆಚ್ಚಿನ ಪ್ರಚಾರ ಸಿಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಲ್ಲಿ ಕೋರಿಕೊಂಡಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

28.57 ಕೋಟಿ ಮೌಲ್ಯದ ಕೃಷಿ ಪರಿಕರಗಳ ಜಪ್ತಿ: ಕಳೆದ ಮೂರು ವರ್ಷಗಳಲ್ಲಿ 28.57 ಕೋಟಿ ರೂ.ಮೌಲ್ಯದ ನಕಲಿ ಕೃಷಿ ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಚಿವ ಬಿ. ಸಿ ಪಾಟೀಲ್ ಅವರು ತಿಳಿಸಿದರು. ಭೌಗೋಳಿಕ ಸೂಚ್ಯಂಕ ಪಡೆದಿರುವ ಗುಲ್ಬರ್ಗ ತೊಗರಿ ಬೆಳೆಗೆ “ಭೀಮಾ ಪಲ್ಸ್‍ಸ್” ಬ್ರ್ಯಾಂಡ್ ಅನ್ನು ಸಚಿವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಹೆಚ್ಚಿನ ಪೌಷ್ಠಿಕತೆ ಹೊಂದಿರುವ ಗುಲ್ಬರ್ಗ ತೊಗರಿ ಬೆಳೆ ಉತ್ಕೃಷ್ಟ ಒಳ್ಳೆಯ ಸುವಾಸನೆ ಮತ್ತು ರುಚಿಕರವಾಗಿರುತ್ತದೆ. ಈ ತೊಗರಿಯಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಹೇರಳವಾಗಿರುವುದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದ್ದು, ಜನರು “ಭೀಮಾ ಪಲ್ಸ್‍ಸ್” ಬ್ರ್ಯಾಂಡ್ ತೊಗರಿ ಬೆಳೆ ಬಳಸುವಂತೆ ಅವರು ಬಿ.ಸಿ.ಪಾಟೀಲ್ ಮನವಿ ಮಾಡಿದರು.

ಇದನ್ನೂ ಓದಿ: ಹಾಲಿನ ದರ ಏರಿಕೆ ಪ್ರಸ್ತಾಪ, ಸಿಎಂರದ್ದೇ ಅಂತಿಮ ತೀರ್ಮಾನ: ಸಚಿವ ಎಸ್ ಟಿ ಸೋಮಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.