ETV Bharat / state

ರಾಜಧಾನಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ಇಂದು ಸಂಜೆ ಗವಿಗಂಗಾಧರನಿಗೆ ಸೂರ್ಯ ನಮನ

author img

By

Published : Jan 15, 2023, 7:00 AM IST

Updated : Jan 15, 2023, 8:18 AM IST

Makar Sankranti
ಮಕರ ಸಂಕ್ರಾಂತಿ

ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಹಬ್ಬವನ್ನು ಭಕ್ತರು ಸೂರ್ಯ ದೇವರಿಗೆ ಅರ್ಪಣೆ ಮಾಡುತ್ತಾರೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಸುಸಂದರ್ಭವಿದು. ಇಲ್ಲಿಂದ ಉತ್ತರಾಯಣ ಪುಣ್ಯಕಾಲ ಶುರುವಾಗುತ್ತದೆ. ಬೆಂಗಳೂರಿನಲ್ಲಿ ನಿನ್ನೆ ಹಬ್ಬದ ವ್ಯಾಪಾರ ಜೋರಾಗಿತ್ತು. ಇಂದು ಪ್ರಮುಖ ದೇವಾಲಯಗಳಲ್ಲಿ ದಿನವಿಡೀ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಬೆಂಗಳೂರು: ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ಸಡಗರ ರಾಜ್ಯ ರಾಜಧಾನಿಯಲ್ಲಿ ಮೇಳೈಸುತ್ತಿದೆ. ಇಂದು ನಗರದ ಪ್ರಮುಖ ದೇವಾಲಯಗಳಲ್ಲಿ ಪೂಜಾ ವಿಧಿವಿಧಾನಗಳು ಜರುಗಲಿವೆ. ಹಬ್ಬದಲ್ಲಿ ವಿಶೇಷವಾಗಿ ಎಳ್ಳು-ಬೆಲ್ಲ ಹಂಚಿಕೊಳ್ಳುವುದು, ಎತ್ತುಗಳನ್ನು ಕಿಚ್ಚು ಹಾಯಿಸುವ ಆಚರಣೆಗಳು ನಡೆಯುತ್ತವೆ.

ನಗರದ ಗವಿಗಂಗಾಧರೇಶ್ವರ ದೇವಸ್ಥಾನ, ಬನಶಂಕರಿಯ ಶ್ರೀ ಬನಶಂಕರಿದೇವಿ ದೇವಸ್ಥಾನ, ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನ, ಬಸವನಗುಡಿ ದೊಡ್ಡಬಸವಣ್ಣ ದೇವಾಲಯ, ಕೆ.ಆರ್.ಮಾರುಕಟ್ಟೆಯ ಕೋಟೆ ವೆಂಕಟರಮಣ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಾಲಯಗಳಲ್ಲಿ ದಿನವೆಲ್ಲ ವಿಶೇಷ ಪೂಜಾ ಕಾರ್ಯಕ್ರಮಗಳು ನಿಗದಿಯಾಗಿವೆ.

ಗವಿಗಂಗಾಧರೇಶ್ವರ ಸನ್ನಿಧಾನದಲ್ಲಿ ಕೌತುಕ: 'ಮಕರ ಸಂಕ್ರಮಣವು ಸೂರ್ಯದೇವ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ದಿನ. ಸಂಜೆ 5.20 ರಿಂದ 5.32 ಸಮಯದಲ್ಲಿ ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ಸೂರ್ಯ ರಶ್ಮಿ ಬೀಳಲಿದೆ. ಈ ಪ್ರಕೃತಿಯ ಕೌತುಕ ಸುಮಾರು 2 ರಿಂದ 3 ನಿಮಿಷಗಳ ನಡೆಯುತ್ತದೆ. ಇದನ್ನು ನೋಡಲು ಬರುವ ಭಕ್ತರಿಗೆ ದೇಗುಲದ ಆಡಳಿತ ಮಂಡಳಿ ಸಕಲ ವ್ಯವಸ್ಥೆಗಳನ್ನು ಮಾಡಿದೆ. ಶಿವನ ವಿಗ್ರಹಕ್ಕೆ ಸೂರ್ಯಾಭಿಷೇಕ ಆಗುವ ವೇಳೆ ಎಳನೀರು ಮತ್ತು ಹಾಲಿನಿಂದ ಅಭಿಷೇಕ ಮಾಡಲಾಗುವುದು. ಬಳಿಕ ಸಂಕಲ್ಪ ಪೂಜೆ ಮಾಡಿ, ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಗುವುದು' ಎಂದು ದೇವಾಲಯದ ಪ್ರಧಾನ ಅರ್ಚಕ ಡಾ.ಸೋಮಸುಂದರ ದೀಕ್ಷಿತ್ ತಿಳಿಸಿದರು.

Makar Sankranti celebration
ಕೆ.ಆರ್.ಮಾರುಕಟ್ಟೆಯಲ್ಲಿ ಕಬ್ಬು ವ್ಯಾಪಾರ

ಇದನ್ನೂ ಓದಿ: ಗವಿಗಂಗಾಧರೇಶ್ವರ ದೇಗುಲದಲ್ಲಿ 2 ನಿಮಿಷ 13 ಸೆಕೆಂಡುಗಳ ಕಾಲ ಶಿವಲಿಂಗ ಸ್ಪರ್ಶಿಸಿದ ಸೂರ್ಯರಶ್ಮಿ

ಗೋವುಗಳಿಗೆ ಕಿಚ್ಚು ಹಾಯಿಸುವ ಪದ್ಧತಿ: ರಾಜರಾಜೇಶ್ವರಿ ನಗರ, ಮತ್ತಿಕೆರೆ, ಯಶವಂತಪುರ, ಯಲಹಂಕ ಉಪನಗರ, ಪದ್ಮನಾಭನಗರ ಸೇರಿದಂತೆ ವಿವಿಧೆಡೆ ಸಂಘ ಸಂಸ್ಥೆಗಳು ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಸಜ್ಜಾಗಿವೆ. ಗೋವುಗಳನ್ನು ಅಲಂಕರಿಸಿ, ಬೆನ್ನ ಮೇಲೆ ಸಿಂಗಾರದ ಬಟ್ಟೆ ಹೊದಿಸಿ, ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಿಗೆ ಗಂಟೆ ಮಾಲೆಯಿಂದ ಸಿಂಗರಿಸಿ ಸ್ಥಳೀಯ ಮೈದಾನಗಳಲ್ಲಿ ಕಿಚ್ಚು ಹಾಯಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಕರ ಸಂಕ್ರಾಂತಿಯಂದು ಪವಿತ್ರ ಗಂಗಾ ನದಿಯಲ್ಲಿ ಮಿಂದೆದ್ದ ಭಕ್ತರು

ಹಬ್ಬದ ವ್ಯಾಪಾರ, ವಹಿವಾಟು ಬಲು ಜೋರು: ಹಬ್ಬದ ಮುನ್ನಾ ದಿನವಾದ ಶನಿವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಬ್ಬು, ಕಡ್ಲೆ, ಗೆಣಸು, ಅವರೆಕಾಯಿ ವ್ಯಾಪಾರ ಭರ್ಜರಿಯಾಗಿತ್ತು. ಮಾರುಕಟ್ಟೆ, ಬಡಾವಣೆಗಳ ಅಂಗಡಿ-ಮುಂಗಟ್ಟುಗಳಲ್ಲಿ ಎಳ್ಳು, ಬೆಲ್ಲ, ಸಕ್ಕರೆ ಮಾರಾಟ ಹೆಚ್ಚಾಗಿತ್ತು. ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರ, ಯಶವಂತಪುರ, ಜಯನಗರ, ವಿಜಯನಗರ, ದಾಸರಹಳ್ಳಿ, ಮಡಿವಾಳ, ಕೆ.ಆರ್.ಪುರ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ವ್ಯಾಪಾರ ಜೋರಾಗಿದ್ದುದು ಕಂಡುಬಂತು.

Makar Sankranti celebration
ಹಬ್ಬದ ವ್ಯಾಪಾರ

ಕೈ ಸುಡುತ್ತಿದೆ ಹಬ್ಬದ ಸಾಮಗ್ರಿಗಳ ಬೆಲೆ: ಕೆ.ಆರ್.ಮಾರುಕಟ್ಟೆಗೆ ಸಂಕ್ರಾಂತಿಗಾಗಿ ನಾಲ್ಕೈದು ದಿನಗಳಿಂದ ಲಾರಿಗಳ ಮೂಲಕ ಸುಮಾರು 15 ಲೋಡ್ ಕಬ್ಬು ಬಂದಿದೆ. ಪ್ರತಿ ಕಬ್ಬಿನ ಜಲ್ಲೆಗೆ 120 ರೂಪಾಯಿ ವರೆಗೆ ಮಾರಾಟ ಮಾಡಲಾಗುತ್ತಿದೆ. ಕಡಲೆಕಾಯಿ, ಅವರೆಕಾಯಿ ಪ್ರತಿ ಕೆ.ಜಿಗೆ 100 ರೂಪಾಯಿ ದರವಿದೆ. ಸಿಹಿ ಗೆಣಸು 50 ರಿಂದ 60 ರೂಪಾಯಿಗೆ ಮಾರಾಟವಾಗುತ್ತಿತ್ತು. ಸಂಕ್ರಾಂತಿಗೆ ಮಲ್ಲಿಗೆ ಹೂವಿನ ಪೂರೈಕೆ ಕೊರತೆಯ ಕಾರಣ ದರ ಹೆಚ್ಚಾಗಿದೆ. ಪ್ರತಿ ಕೆಜಿ ಮಲ್ಲಿಗೆಗೆ 1,000 ರೂಪಾಯಿ ಬೆಲೆಯಿದೆ. ಸೇವಂತಿಗೆ ಕೆಜಿಗೆ 180, ಗುಲಾಬಿ 250, ತುಳಸಿ ಸುಮಾರು 80 ರೂಪಾಯಿಗೆ ನಿನ್ನೆ ಮಾರಾಟವಾಗುತ್ತಿತ್ತು.

ಇದನ್ನೂ ಓದಿ: ಸಂಕ್ರಾತಿ ಹಬ್ಬಕ್ಕೆ ಪಟಾವಳಿ, ಕಪ್ಪು ಕಬ್ಬು ಬೆಳೆಯುವ ಗ್ರಾಮ: ಕೋಟ್ಯಂತರ ರೂಪಾಯಿ ವಹಿವಾಟು

Last Updated :Jan 15, 2023, 8:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.