ಗವಿಗಂಗಾಧರೇಶ್ವರ ದೇಗುಲದಲ್ಲಿ 2 ನಿಮಿಷ 13 ಸೆಕೆಂಡುಗಳ ಕಾಲ ಶಿವಲಿಂಗ ಸ್ಪರ್ಶಿಸಿದ ಸೂರ್ಯರಶ್ಮಿ

author img

By

Published : Jan 14, 2022, 5:53 PM IST

Updated : Jan 14, 2022, 9:18 PM IST

sun-rays-touches-shiva-linga-in-historic-gavi-gangadhareshwara

ಸಂಕ್ರಾಂತಿ ಸಂಭ್ರಮದ ಇಂದು ನಗರದ ಐತಿಹಾಸಿಕ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯು ಶಿವಲಿಂಗವನ್ನು ಸ್ಪರ್ಶಿಸಿತು.

ಬೆಂಗಳೂರು: ಸಂಕ್ರಾಂತಿ ಸಂಭ್ರಮದ ಜೊತೆಗೆ ಸೂರ್ಯನು ದಕ್ಷಿಣಾಯನದಿಂದ ಪಥ ಬದಲಿಸಿ ಉತ್ತರಾಯಣ ಚಲನೆಗೆ ತೊಡಗುವ ದಿನವಾದ ಇಂದು ನಗರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸುವ ಪ್ರಕೃತಿಯ ಐತಿಹಾಸಿಕ ಕೌತುಕ ನಡೆಯಿತು.

ಆರಂಭದಲ್ಲಿ ನಂದಿವಾಹನವನ್ನು ಸ್ಪರ್ಶಿಸಿದ ಸೂರ್ಯರಶ್ಮಿಯು ಕೆಲ ಕ್ಷಣಗಳಲ್ಲೇ ನಂದಿಯ ಎರಡು ಕೊಂಬಿನ ಮುಖಾಂತರ ಶಿವಲಿಂಗವನ್ನು ಸ್ಪರ್ಶಿಸಿತು. ಈ ಕೌತುಕ ಸಂಜೆ 5.13ರಿಂದ ಪ್ರಾರಂಭವಾಗಿ 2 ನಿಮಿಷ 13 ಸೆಕೆಂಡುಗಳ ಕಾಲ ನಡೆಯಿತು. ಪಾಣಿಪೀಠದಿಂದ ಲಿಂಗದವರೆಗೆ ಎರಡು ನಿಮಿಷ ಹಾಗೂ ಲಿಂಗದಿಂದ ಶಿರದವರೆಗೆ ಸುಮಾರು 13 ಸೆಕೆಂಡುಗಳ ತನಕ ರಶ್ಮಿಯ ಅಭಿಷೇಕ ಆಯಿತು.

sun-rays-touches-shiva-linga-in-historic-gavi-gangadhareshwara-temple
ಶಿವಲಿಂಗ ಸ್ಪರ್ಶಿಸುತ್ತಿರುವ ಸೂರ್ಯರಶ್ಮಿ

ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆಬಗೆಯ ಅಭಿಷೇಕಗಳು ನಡೆದವು. ಸೂರ್ಯನ ಕಿರಣಗಳ ಅದ್ಭುತ ಅಭಿಷೇಕದ ಜೊತೆಗೆ ಗಂಗಾಧರೇಶ್ವರನಿಗೆ ಹಾಲು, ಎಳನೀರು, ಪವಿತ್ರ ಜಲದಿಂದ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕರಿಂದ ಮಂತ್ರಘೋಷ, ಡೊಳ್ಳು, ನಗಾರಿ, ಗಂಟೆಗಳ ನಾದ ಮೊಳಗಿತು.

2 ನಿಮಿಷ 13 ಸೆಕೆಂಡುಗಳ ಕಾಲ ಶಿವಲಿಂಗ ಸ್ಪರ್ಶಿಸಿದ ಸೂರ್ಯರಶ್ಮಿ

ಕಳೆದ ವರ್ಷ ಮೋಡದಿಂದಾಗಿ ಈ ವಿಸ್ಮಯ ನಡೆದಿರಲಿಲ್ಲ. ಕೋವಿಡ್​ ಹಿನ್ನೆಲೆಯಲ್ಲಿ ಈ ಬಾರಿ ಸೂರ್ಯರಶ್ಮಿ ಸ್ಪರ್ಶ ಕಾಲದಲ್ಲಿ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶ ನೀಡಿರಲಿಲ್ಲ.

ಈ ವರ್ಷ ಸಕಲರಿಗೂ ಶುಭವಾಗಲಿದೆ:

ಸೂರ್ಯ ರಶ್ಮಿ ಸ್ಪರ್ಶದ ಬಗ್ಗೆ ಮಾತನಾಡಿದ ದೇವಾಲಯದ ಪ್ರಧಾನ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ಅವರು, ಇಂದು ಬಹಳ ವಿಶೇಷವಾದ ದಿನ, ಕಳೆದ ವರ್ಷ ಪ್ರಕೃತಿಯ ಪ್ರಕೋಪದಿಂದ ಸೂರ್ಯಪೂಜೆ ದರ್ಶನ ಆಗಿರಲಿಲ್ಲ. ಆದರೆ ಈ ಬಾರಿ ಸ್ವಾಮಿಯ ಪೂಜೆಯ ಮೂಲಕ ಉತ್ತರಾಯಣ ಆರಂಭವಾಗಿದೆ. ಸಕಲರಿಗೂ ಈ ವರ್ಷ ಶುಭವಾಗಲಿದೆ. ಕಳೆದ ವರ್ಷ ವಿಸ್ಮಯ ಕಾಣದೇ ಇದ್ದುದರಿಂದ ಹಲವು ಅನಾಹುತ ಸಂಭವಿಸಿತು ಎಂದರು.

ದೇವಾಲಯದ ಪ್ರಧಾನ ಅರ್ಚಕರ ಮಾತು

ಇದನ್ಣೂ ಓದಿ: ಸಂಕ್ರಾಂತಿ ಹಬ್ಬದಂದು ರಾಜ್ಯ ಸರ್ಕಾರದಿಂದ ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ..

Last Updated :Jan 14, 2022, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.