ETV Bharat / state

ಬಿಜೆಪಿ ಜೆಡಿಎಸ್ ಸದಸ್ಯರ ಗೈರಿನ ನಡುವೆಯೇ ವಿಧಾನ ಪರಿಷತ್​ನಲ್ಲಿ 5 ವಿಧೇಯಕಗಳಿಗೆ ಅಂಗೀಕಾರ

author img

By

Published : Jul 20, 2023, 4:21 PM IST

ವಿಧಾನ ಪರಿಷತ್ ಕಲಾಪ
ವಿಧಾನ ಪರಿಷತ್ ಕಲಾಪ

ಬಿಜೆಪಿ ಮತ್ತು ಜೆಡಿಎಸ್​ ಗೈರಿನಲ್ಲಿ ನಡುವೆ ಸಭಾಪತಿ ಬಸವರಾಜ ಹೊರಟ್ಟಿ ಪರಿಷತ್ ಕಲಾಪ ನಡೆಸಿದ್ದಾರೆ.

ಬಿಜೆಪಿ ಜೆಡಿಎಸ್ ಸದಸ್ಯರ ಗೈರಿನ ನಡುವೆ ನಡೆದ ವಿಧಾನ ಪರಿಷತ್ ಕಲಾಪ

ಬೆಂಗಳೂರು : ಕಾಂಗ್ರೆಸ್​ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಹೊರ ರಾಜ್ಯದ ರಾಜಕಾರಣಿಗಳ ಸ್ವಾಗತಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳ ನಿಯುಕ್ತಿ ಮಾಡಿದ್ದು ಹಾಗು ಬಿಜೆಪಿಯ 10 ಶಾಸಕರನ್ನು ಪ್ರಸಕ್ತ ಅಧಿವೇಶನದಿಂದ ಅಮಾನತು ಮಾಡಿದ ಸ್ಪೀಕರ್ ಕ್ರಮ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್​ ಸದಸ್ಯರ ಗೈರಿನ ನಡುವೆ ವಿಧಾನ ಪರಿಷತ್ ಕಲಾಪವನ್ನು ನಡೆಸಲಾಯಿತು. ಈ ವೇಳೆ 5 ಪ್ರಮುಖ ವಿಧೇಯಕಗಳನ್ನು ಪ್ರತಿಪಕ್ಷ ಸದಸ್ಯರ ಗೈರಿನಲ್ಲಿ ಅಂಗೀಕರಿಸಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ಸದಸ್ಯರ ಜೊತೆ ಮಾತನಾಡಿ ಕಲಾಪದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ. ಅವರು ಸಮಯ ಕೋರಿದರು ನಂತರ ಬರಲ್ಲ ಸದನ ನಡೆಸಿ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ನಂತರ ಜೆಡಿಎಸ್ ಸದಸ್ಯರನ್ನೂ ಸಂಪರ್ಕಿಸಿದೆ. ಅವರೂ ಕೂಡ ಸದನ ನಡೆಸಿ ನಾವು ಸಭೆ ಮಾಡುತ್ತಿದ್ದೇವೆ ನಂತರ ನಾವು ನಮ್ಮ ನಿರ್ಧಾರ ತಿಳಿಸುತ್ತೇವೆ. ಎರಡೂ ಪಕ್ಷದ ಸದಸ್ಯರಿಗಾಗಿ ಸಮಯ ನೀಡಿದರೂ ಅವರು ಬರಲಿಲ್ಲ, ಹಾಗಾಗಿ ಅವರ ಗೈರಿನಲ್ಲೇ ಸದನ ನಡೆಸುತ್ತೇನೆ ಎಂದರು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಅಧಿವೇಶನ ನಡೆಯುವಾಗ ಅಧಿವೇಶನ ಬಹಿಷ್ಕಾರ ಮಾಡುವುದು ಸರಿಯಲ್ಲ. 5 ವಿದೇಯಕ ಮಂಡನೆಯಾಗಿದೆ. ಬಿಲ್ ಮೇಲೆ ಚರ್ಚೆ ನಡೆಯಬೇಕು. ಬಜೆಟ್ ಮೇಲೂ ಚರ್ಚೆ ಮಾಡಬೇಕಾಗಿದೆ. ಒಂದೆರಡು ದಿನ‌ ಸದನ ನಡೆಸಲಿಲ್ಲ ಎಂದರೆ ಸಾರ್ವಜನಿಕರ ಹಣ ನಷ್ಟವಾಗಲಿದೆ. ನಾಡಿನ ಜ್ವಲಂತ ಸಮಸ್ಯೆಗಳ ಚರ್ಚೆ ಮಾಡಿ ನಾಡಿನ ಅಭಿವೃದ್ಧಿಗೆ ನಿರ್ಣಯ ಕೈಗೊಳ್ಳಲು ಸರ್ಕಾರದ ಕಣ್ಣು ತೆರೆಸಲು ಕಲಾಪ ನಡೆಸಬೇಕು. ಹಾಗಾಗಿ ಪ್ರತಿಪಕ್ಷ ಸದಸ್ಯರು ಪಾಲ್ಗೊಳ್ಳಿ ಎಂದು ಮನವಿ ಮಾಡಿ, ಕಲಾಪ ಮುಂದುವರೆಸಲು ಮನವಿ ನೀಡಿದರು.

ಸಿವಿಲ್ ಪ್ರಕ್ರಿಯಾ ತಿದ್ದುಪಡಿ ವಿಧೇಯಕ : ನಂತರ ಶಾಸಕ ರಚನೆ ಕಲಾಪವನ್ನು ಸಭಾಪತಿಗಳು ಕೈಗೆತ್ತಿಕೊಂಡರು. ಕಾನೂನು ಸಚಿವ ಹೆಚ್ ಕೆ ಪಾಟೀಲ್ ಸಿವಿಲ್ ಪ್ರಕ್ರಿಯಾ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ವಿಧೇಯಕದ ಮೇಲೆ ಮಾತನಾಡಿದ ಹೆಚ್.ವಿಶ್ವನಾಥ್, ಎಷ್ಟೋ ಜನರಿಗೆ ನ್ಯಾಯವಾದಿಗಳಿಗೆ ಹಣ ಕೊಡಲು ಸಾದಸ್ಯವಾಗದೆ ಕೇಸ್​ ಬಿಟ್ಟ ಉದಾಹರಣೆಗಳು ಇವೆ. ಇಂತಹದ್ದರಲ್ಲಿ ಬಡವರಿಗೆ ನ್ಯಾಯ ಕೊಡುವ ತಿದ್ದುಪಡಿ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ ಎಂದರು.

ಮತ್ತೆ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ತಾತ ಆರಂಭಿಸಿದ ಕೇಸ್ ಅನ್ನು ಮೊಮ್ಮಕ್ಕಳು ಮುಂದುವರೆಸಿಕೊಂಡು ಹೋಗುವ ಉದಾಹರಣೆ ಇವೆ. ಕೇಸ್​ ಇತ್ಯರ್ಥ ಬಹಳ ವಿಳಂಬವಾಗುತ್ತಿದ್ದು, ಹಣ ವ್ಯಯವಾಗುತ್ತಿದೆ. ಇದನ್ನು ಮನಗಂಡು ಬಡವರಿಗೆ ತ್ವರಿತ ನ್ಯಾಯ ಕೊಡುವ ಸರ್ಕಾರದ ಚಿಂತನೆ ಉತ್ತಮವಾಗಿದೆ. ಸರ್ಕಾರಿ ವಕೀಲರಿದ್ದರೂ ಸರ್ಕಾರದ ಪರ ತೀರ್ಪು ಬರುತ್ತಿಲ್ಲ. ಇನ್ನು ಬಡವರ ಪರ ವಾದ ಮಾಡುವ ವಕೀಲರು ಎಷ್ಟು ಪ್ರಾಮಾಣಿಕವಾಗಿ ವಾದ ಮಾಡಲಿದ್ದೇರೆ ಎನ್ನುವುದು ಮುಖ್ಯವಾಗಲಿದೆ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿ ವಿಧೇಯಕವನ್ನು ಬೆಂಬಲಿಸಿದರು. ಕಾಂಗ್ರೆಸ್ ಸದಸ್ಯರಾದ ಯುಬಿ ವೆಂಕಟೇಶ್, ನಜೀರ್ ಅಹಮದ್, ಜಗದೀಶ್ ಶೆಟ್ಟರ್ ವಿಧೇಯಕ ಸ್ವಾಗತಿಸಿ ಮಾತನಾಡಿ ಕೆಲ ಸಲಹೆ ನೀಡಿದರು.

ಸದಸ್ಯರ ಅಭಿಪ್ರಾಯದ ನಂತರ ಮಾತನಾಡಿದ ಹೆಚ್.ಕೆ ಪಾಟೀಲ್, ಬಡವರಿಗೆ ಅನುಕೂಲ ಮಾಡಿಕೊಡಬೇಕ. ಆಸ್ತಿ, ಬದುಕಿನ ಹಕ್ಕು ಉಳಿಸಿಕೊಳ್ಳಲು, ನ್ಯಾಯ ಪಡೆಯಲು ಈ ಬಿಲ್ ಸಹಕಾರಿಯಾಗಲಿದೆ. ನ್ಯಾಯದಾನ ವ್ಯವಸ್ಥೆಯಲ್ಲಿ ಯಾರಿದ್ದಾರೋ ಅವರೆಲ್ಲರಿಗೂ ನೀವು ಮಾಡಲೇಬೇಕು ಎನ್ನುವ ನಿರ್ದೇಶನ ಕೊಡಲಿದೆ. ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕಳೆದ 10 ವರ್ಷ ಯಾವ ಮಟ್ಟಕ್ಕೆ ಏರಬೇಕಾಗಿತ್ತೋ ಅಲ್ಲಿಗೆ ಏರಿಲ್ಲ. ಕಾನೂನು ವಿವಿ ಸ್ಥಾಪನೆಗೆ ನನ್ನ ಜೊತೆ ಬಸವರಾಜ ಹೊರಟ್ಟಿ ಅವರ ಪಾಲೂ ಇದ. ನನ್ನ ನಂತರ ಕಾನೂನು ಸಚಿವರಾಗಿ ಹೊರಟ್ಟಿ ಕಾನೂನು ವಿವಿ‌‌ ಸ್ಥಾಪಿಸಿದರು.

ಆದರೆ ನಂತರ ನಾವು ಅಧಿಕಾರದಲ್ಲಿ ಇರಲಿಲ್ಲ. ಹೊರಟ್ಟಿ ಅವರೂ ಅಧಿಕಾರದಲ್ಲಿ ಇರಲಿಲ್ಲ. ಅಧಿಕಾರದಲ್ಲಿ ಇದ್ದವರು ಅಗತ್ಯ ನೆರವು ಕಾನೂನು ವಿವಿಗೆ ನೀಡಿಲ್ಲ. ಮುಂದಿನ ಮೂರು ವರ್ಷದಲ್ಲಿ ಕಾನೂನು ವಿವಿಯ ಎಲ್ಲ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿದರು. ನಂತರ ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ಅಂಗೀಕರಿಸಿತು.

ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕ : ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕವನ್ನು ಹೆಚ್.ಕೆ ಪಾಟೀಲ್ ಸದನದಲ್ಲಿ ಮಂಡಿಸಿದರು. ವಿಧೇಯಕ ಬೆಂಬಲಿಸಿ ಮಾತನಾಡಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಹಿನ್ನಡೆ ಮಾಡುವ ಅಧಿಕಾರಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಬೇಕು. ಪ್ರಕರಣಕ್ಕೆ ನೇಮಕವಾಗುವ ಲಾಯರ್ ಗಳನ್ನೂ ಹೊಣೆಗಾರಿಕೆ ಮಾಡಬೇಕು. ಸರ್ಕಾರ ನೀಡುವ ಮಾಹಿತಿಯನ್ನು ಕೋರ್ಟ್​ಗೆ ತಲುಪಿಸೋದೆ ಇಲ್ಲ. ಅಂತಹ ಲಾಯರ್ ಕೂಡ ಇದಾರೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ರೂ. ನಷ್ಟ ಆಗುತ್ತಿದೆ. ಈ ವಿಧೇಯಕದಿಂದ ಅಧಿಕಾರಿಗಳು, ಲಾಯರ್​ಗೆ ಕಡಿವಾಣ ಹಾಕುವ ಕೆಲಸ ಆಗಲಿದೆ‌ ಎಂದರು.

ಬಿಜೆಪಿ ಸದಸ್ಯ ವಿಶ್ವನಾಥ್ ಮಾತನಾಡಿ, ಸರ್ಕಾರಿ ವ್ಯಾಜ್ಯ ನಿರ್ವಹಣಾ ವಿಧೇಯಕವನ್ನ ಸ್ವಾಗತಿಸುತ್ತೇನೆ. ಸರ್ಕಾರಿ ವಕೀಲರನ್ನೇ ಎದುರುವಾದಿ ಲಾಯರ್ ಬುಕ್ ಮಾಡುತ್ತಾನೆ. ಸಾಕ್ಯಗಳ ಕೊರತೆಯಿಂದಲೇ ಪ್ರಕರಣ ಸೋಲುತ್ತಿದ್ದೇವೆ. ಹಿಂದೆ ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತಿತ್ತು. ಪಾಕಿಸ್ತಾನದಲ್ಲಿ ಚೆಕ್ ಬೌನ್ಸ್ ಕೇಸ್ ಒಂದೇ ಹಿಯರಿಂಗ್​ನಲ್ಲಿ ಮುಗಿಯುತ್ತೆ ಅಂತಹ ಕಾನೂನು ಬೇಕು. ಬಿಜೆಪಿ ಸದಸ್ಯರು ಸದನದಲ್ಲಿ ಇರಬೇಕಿತ್ತು. ಎಲ್ಲರೂ ಇಷ್ಟು ಬುದ್ಧಿವಂತರಾಗಿದ್ದಾರಲ್ಲ ಎಂದು ಧರಣಿಗೆ ಕುಳಿತಿದ್ದಾರೆ. ಸದನದಲ್ಲಿ ಇರಬೇಕು. ಇಂತಹ ಬಿಲ್ ಬಗ್ಗೆ ಚರ್ಚೆ ಮಾಡಬೇಕು ಎಂದು ಬಿಜೆಪಿ ಸದಸ್ಯರಿಗೆ ತಿವಿದರು.

ಚರ್ಚೆಗೆ ಉತ್ತರ ನೀಡಿದ ಹೆಚ್ ಕೆ ಪಾಟೀಲ್, ಸರ್ಕಾರಿ ವ್ಯಾಜ್ಯ ನಿರ್ವಹಣೆ ಸರಿಯಾಗಿ ಆಗಬೇಕು ಎನ್ನುವ ಕಾರಣಕ್ಕೆ ಈ ವಿಧೇಯಕ ತರಲಾಗಿದೆ. ಸರ್ಕಾರಿ ಪರ ವಕೀಲರು ವ್ಯಾಜ್ಯ ಮಂಡನೆಯ ಲಿಖಿತ ಪ್ರತಿಯನ್ನು ಕಾನೂನು ಕಾರ್ಯದರ್ಶಿಗೆ ಸಲ್ಲಿಕೆ ಮಾಡಬೇಕು. ವ್ಯಾಜ್ಯದಲ್ಲಿ ಯಾವ ಸಣ್ಣ ಅಂಶವೂ ನ್ಯಾಯಾಧೀಶರ ಗಮನಕ್ಕೆ ಬಾರದೆ ಹೋಗಬಾರದು ಎನ್ನುವುದನ್ನು ಈ ಕಾನೂನಿನಲ್ಲಿ ಮಾಡಲಾಗಿದೆ. ಹಾಗಾಗಿ ಸದುದ್ದೇಶದಿಂದ ತಂದ ಬಿಲ್‌ಗೆ ಸದನ ಒಪ್ಪಿಗೆ ಕೊಡಬೇಕು ಎಂದು ಮನವಿ ಮಾಡಿದರು. ನಂತರ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.

ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ : ಬಳಿಕ ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿದರು. ವಿಧೇಯಕ ಕುರಿತು ಮಾತನಾಡಿದ ಸಚಿವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಆಡಳಿತಲ್ಲಿ ಸುಧಾರಣೆ ತರಬೇಕು ಎನ್ನುವ ಜನರ ಆಶಯದಂತೆ ನಮ್ಮ ಸರ್ಕಾರದ ಮೇಲೆ ಜನತೆ ಆಶೋತ್ತರ ಇರಿಸಿಕೊಂಡಿದ್ದಾರೆ.

ಉತ್ತಮ ಆಡಳಿತದ ನಿರೀಕ್ಷೆ ಇರಿಸಿಕೊಂಡಿದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭೂ ಕಂದಾಯ ತಿದ್ದುಪಡಿ ವಿಧೇಯಕ ತರುತ್ತಿದ್ದೇವೆ. ಭೂ ಪರಿವರ್ತನೆ ಅರ್ಜಿ ದುರುಪಯೋಗಪಡಿಸಿಕೊಂಡು ಶೋಷಣೆ ಮಾಡುವುದನ್ನು ತಪ್ಪಿಸಲು ಕಾನೂನಿಗೆ ತಿದ್ದುಪಡಿ ತರಲಾಗಿದೆ. ಅನಗತ್ಯ ವಿಳಂಬ ಮತ್ತು ಜಿಲ್ಲಾಧಿಕಾರಿಗಳ ಮೇಲಿನ ಅನಗತ್ಯ ಒತ್ತಡ ತಡೆಯಲು ತಿದ್ದುಪಡಿ ತರಲಾಗಿದೆ ಎಂದು ವಿವರ ನೀಡಿದರು. ನಂತರ ಯಾವುದೇ ಚರ್ಚೆ ಇಲ್ಲದೆ ಧ್ವನಿಮತದ ಮೂಲಕ ವಿಧಾನ ಪರಿಷತ್ ವಿಧೇಯಕಕ್ಕೆ ಅಂಗೀಕಾರ ನೀಡಿತು.

ನೋಂದಣಿ ತಿದ್ದುಪಡಿ ವಿಧೇಯಕ : ಇದೇ ವೇಳೆ ಕೃಷ್ಣಬೈರೇಗೌಡ ನೋಂದಣಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ವಿಧೇಯಕದ ಕುರಿತು ವಿವರಣೆ ನೀಡಿ ಮಾಲೀಕತ್ವ ಇಲ್ಲದವರು ನಕಲಿ ದಾಖಲಿ ಸೃಷ್ಟಿಸಿ ಅಥವಾ ವ್ಯಕ್ತಿಯ ಜಾಗದಲ್ಲಿ ಮತ್ತೊಬ್ಬ ವ್ಯಕ್ತಿ ಕೂರಿಸಿ ನೋಂದಣಿ ಮಾಡಿರುವುದು ಗಮನದಲ್ಲಿದೆ. ಯಾರದ್ದೋ ಆಸ್ತಿಯನ್ನು ಮತ್ತೆ ಯಾರೋ ಮತ್ತೆ ಯಾರಿಗೋ ಮಾರಾಟ ಮಾಡಿದ್ದ ಮಾಹಿತಿ ಇದೆ. ಸರ್ಕಾರದ ಹೆಸರಿನ ಜಾಗವನ್ನು ನಕಲಿ ದಾಖಲೆ ಮೂಲಕ ವಂಚಿಸಿದ್ದಾರೆ.

ಇಂತಹ ವಂಚನೆಯಿಂದ ಮೂಲ ಮಾಲೀಕ ಮಾಲೀಕತ್ವ ಇಲ್ಲದಂತಾಗಿ ನ್ಯಾಯಾಲಯಗಳಿಗೆ ಅಲೆದಾಡಬೇಕಾದ ಸ್ಥಿತಿ ಇದೆ. ಇದು ಕೆಲವೆಡೆ ದುರುದ್ದೇಶವಾಗಿ ಮಾಡುತ್ತಿದ್ದರೂ ಇನ್ನು ಕೆಲವರು ಕಣ್ತಪ್ಪಿಸಿ ಮಾಡುತ್ತಿದ್ದಾರೆ. ನಕಲಿಯೋ ಅಸಲಿಯೋ ಒಮ್ಮೆ ನೋಂದಣಿಯಾದ ನಂತರ ಕೋರ್ಟ್ ಗೆ ಹೋಗಿಯೇ ಆಸ್ತಿ ಪಡೆದುಕೊಳ್ಳಬೇಕಾದ ಸ್ಥಿತಿ ಇದೆ. ಇಂತಹ ಸಾವಿರಾರು ಪ್ರಕರಣ ರಾಜ್ಯದಲ್ಲಿ ನಡೆಯುತ್ತಿದೆ. ಮೊದಲನೆಯದಾಗಿ ಇದರಿಂದ ಜನರಿಗೆ ತೊಂದರೆ ಒಂದು ಕಡೆಯಾದರೆ, ನ್ಯಾಯಾಲಯಗಳ ಮೇಲೆ ಭಾರವೂ ಹೆಚ್ಚಾಗುತ್ತಿದೆ. ಹಾಗಾಗಿ ನೊಂದವರಿಗೆ ತ್ವರಿತ ಪರಿಹಾರ ಸಿಗಬೇಕು ಎಂದು ಈ ತಿದ್ದುಪಡಿ ತರಲಾಗಿದೆ. ಸದನ ಈ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು.

ವಿಧೇಯಕವನ್ನು ಬೆಂಬಲಿಸಿ ಕಾಂಗ್ರೆಸ್ ಸದಸ್ಯರಾದ ಜಗದೀಶ್ ಶೆಟ್ಟರ್, ಸಲೀಂ ಅಹಮದ್, ನಜೀರ್ ಅಹಮದ್, ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ ವಿಧೇಯಕವನ್ನು ಸ್ವಾಗತಿಸಿ ಕೆಲ ಸಲಹೆ ನೀಡಿದರು. ಸ್ವತಃ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸಹೋದರಿಯ ಆಸ್ತಿ ನಕಲಿ ದಾಖಲೆ ಸೃಷ್ಟಿ ಸಮಸ್ಯೆ ಎದುರಿಸಿ ಕಾನೂನು ಹೋರಾಟ ನಡೆಸುತ್ತಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಯ ಕರಾಳತೆಗೆ ನಿದರ್ಶನ ನೀಡಿದರು.

ನೋಂದಣಿಯನ್ನು ಮೂರು ವರ್ಷದಲ್ಲಿ ಪ್ರಶ್ನೆ ಮಾಡುವ ಅವಕಾಶ ಖಾಸಗಿಯವರಿಗೆ ಹಾಗು ಸರ್ಕಾರಿ ಭೂಮಿಯದ್ದಾದರೆ, 30 ವರ್ಷದವರೆಗೂ ನೋಂದಣಿ ಪ್ರಶ್ನಿಸುವ ಅವಕಾಶ ಕಲ್ಪಿಸಿರುವುದರಿಂದ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿದರೆ ನೋಂದಣಿ ರದ್ದಾಗಲಿದೆ ಎನ್ನುವ ಕಾರಣಕ್ಕೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸುವ ಪ್ರಕರಣ ಇಳಿಕೆಯಾಗಲಿದೆ. ಹಾಗಾಗಿ ವಿಧೇಯಕವನ್ನು ಅಂಗೀಕರಿಸಬೇಕು ಎಂದು ಕೃಷ್ಣಬೈರೇಗೌಡ ಮನವಿ ಮಾಡಿದರು. ನಂತರ ಧ್ವನಿಮತದ ಮೂಲಕ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಿತು.

ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ : ನಂತರ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕವನ್ನು ಸಹಕಾರ ಸಚಿವ ಕೆ ಎನ್ ರಾಜಣ್ಣ ಮಂಡಿಸಿದರು. ಯಾವುದೇ ಚರ್ಚೆ ಇಲ್ಲದೆ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿದರು.

ಇದನ್ನೂ ಓದಿ : ಬಿಜೆಪಿ ಶಾಸಕರ ಅಮಾನತು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಕಲಾಪ ಬಹಿಷ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.