ETV Bharat / state

ಬೆಂಗಳೂರು ಇಸ್ಕಾನ್‌ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ.. ಶ್ರೀಕೃಷ್ಣನ ತೊಟ್ಟಿಲು ತೂಗಿದ ಹೆಚ್​ಡಿಕೆ

author img

By

Published : Aug 20, 2022, 7:31 AM IST

krishna janmashtami
ಶ್ರೀ ಕೃಷ್ಣಾ ಜನ್ಮಾಷ್ಟಮಿ

ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಬೆಂಗಳೂರಿನ ಹರೇ ಕೃಷ್ಣ ಗಿರಿ, ವೈಕುಂಠ ಗಿರಿ ಮತ್ತು ವೈಟ್ ಫೀಲ್ಡ್​ನಲ್ಲಿ ಆಚರಿಸಲಾಯಿತು. ದೇವರಿಗೆ ಸುವಿಸ್ತಾರ ಅಭಿಷೇಕ, ಆರತಿ, 108 ಸಿಹಿ ತಿಂಡಿಗಳು, ಉಯ್ಯಾಲೆ ಸೇವೆ ಇತ್ಯಾದಿ ಸೇವೆಗಳನ್ನು ಅರ್ಪಿಸಲಾಯಿತು. ಬೆಣ್ಣೆ ಮತ್ತು ಸಕ್ಕರೆ ಸೇರಿದಂತೆ ಅನೇಕ ವಿಶೇಷ ತಿನಿಸುಗಳನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಲಾಯಿತು.

ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ನಿನ್ನೆ ರಾತ್ರಿ ಬೆಂಗಳೂರಿನ ಇಸ್ಕಾನ್‌ ದೇವಾಲಯಕ್ಕೆ ತೆರಳಿ ಶ್ರೀಕೃಷ್ಣನ ತೊಟ್ಟಿಲು ತೂಗುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಇಸ್ಕಾನ್‌ ಅಧ್ಯಕ್ಷ ಮಧುಪಂಡಿತ ದಾಸ್‌ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಶ್ರೀ ಕೃಷ್ಣ ಜನ್ಮಾಷ್ಟಮಿ 2022 ರ ಪ್ರಯುಕ್ತ ಟ್ವೀಟ್​ ಮಾಡಿರುವ ಹೆಚ್​ಡಿಕೆ, ರಾಜ್ಯದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ನೆಲೆಗೊಳಿಸಿ ಸರ್ವರಿಗೂ ಒಳಿತನ್ನೇ ಮಾಡು ತಂದೆ ಎಂದು ಆ ಗೋಪಾಲನ ಸನ್ನಿಧಿಯಲ್ಲಿ ಬೇಡಿಕೊಂಡೆ ಎಂದು ತಿಳಿಸಿದ್ದಾರೆ.

ಇಸ್ಕಾನ್‌ ದೇವಾಲಯಕ್ಕೆ ಕುಮಾರಸ್ವಾಮಿ ಭೇಟಿ

ಬೆಂಗಳೂರು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ: ಕೃಷ್ಣನ ಜನ್ಮದಿನವಾದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಬೆಂಗಳೂರಿನ ಹರೇ ಕೃಷ್ಣ ಗಿರಿ, ವೈಕುಂಠ ಗಿರಿ ಮತ್ತು ವೈಟ್ ಫೀಲ್ಡ್​ನಲ್ಲಿ ಆಚರಿಸಲಾಯಿತು. ದೇವರಿಗೆ ಸುವಿಸ್ತಾರ ಅಭಿಷೇಕ, ಆರತಿ, 108 ಸಿಹಿ ತಿಂಡಿಗಳು, ಉಯ್ಯಾಲೆ ಸೇವೆ ಇತ್ಯಾದಿ ಸೇವೆಗಳನ್ನು ಅರ್ಪಿಸಲಾಯಿತು. ಬೆಣ್ಣೆ ಮತ್ತು ಸಕ್ಕರೆ ಸೇರಿದಂತೆ ಅನೇಕ ವಿಶೇಷ ತಿನಿಸುಗಳನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಲಾಯಿತು. ಶ್ರೀ ಕೃಷ್ಣನ ಲೀಲೆಗಳನ್ನು ಆಧರಿಸಿದ ಸಂಗೀತ ನೃತ್ಯ ಸೇವೆಗಳನ್ನು ಭಕ್ತರು ಅರ್ಪಿಸಿದರು. ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣ ವೇಷಭೂಷಣಗಳನ್ನು ತೊಡಿಸಲಾಗಿತ್ತು.

Kumaraswamy
ಮಧುಪಂಡಿತ ದಾಸ್‌ ಅವರಿಂದ ಆಶೀರ್ವಾದ ಪಡೆದ ಹೆಚ್​ಡಿಕೆ

ವೈಕುಂಠ ಗಿರಿಯಲ್ಲಿ ನೂತನವಾಗಿ ಆರಂಭಗೊಂಡ ಇಸ್ಕಾನ್ ಶ್ರೀ ರಾಜಾಧಿರಾಜ ಗೋವಿಂದ ಮಂದಿರದಲ್ಲಿಯೂ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಇದು ಇಸ್ಕಾನ್‌ನ ಮೊದಲ ಶಿಲಾ ಮಂದಿರವಾಗಿದ್ದು, ಇದರ ವಾಸ್ತು ಶಿಲ್ಪಕ್ಕೆ ತಿರುಮಲ ಮಂದಿರವೇ ಸ್ಫೂರ್ತಿ.

ವೈಟ್‌ಫೀಲ್ಡ್ ಜನ್ಮಾಷ್ಟಮಿ ಉತ್ಸವ: ಈ ವರ್ಷ ವೈಟ್‌ಫೀಲ್ಡ್​ನ ಕೆಟಿಪಿಒ ಸಭಾಂಗಣದಲ್ಲಿ ಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಣೆ ಆಯೋಜಿಸಲಾಗಿತ್ತು. ಸಂಗೀತ, ನೃತ್ಯ, ನಾಟಕ ಪ್ರದರ್ಶನ, ಮಕ್ಕಳಿಗೆ ಮತ್ತು ಯವಕರಿಗೆ ಆಕರ್ಷಕ ಸಾಂಸ್ಕೃತಿಕ ಮೇಳ ನಡೆಸಲಾಯಿತು.

ರಾಧಾ ಕೃಷ್ಣ ಮೂರ್ತಿಗಳಿಗೆ ವಿಶೇಷ ಅಲಂಕಾರ: ರಾಧಾ ಕೃಷ್ಣರ ಮೂರ್ತಿಗಳನ್ನು ವಜ್ರಾಭರಣಗಳಿಂದ ಚಿನ್ನದ ನೇಯ್ಗೆಯುಳ್ಳ ಚಿತ್ತಾಕರ್ಷಕ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಭಗವಂತನ ಅವತಾರವನ್ನು ಸಂಭ್ರಮಿಸಲು ಮಂದಿರದ ಶ್ರೀರಾಧಾ ಕೃಷ್ಣ, ಕೃಷ್ಣ ಬಲರಾಮ ವಿಗ್ರಹಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿತ್ತು.

ಆಗಸ್ಟ್​ 18 ಮತ್ತು 19 ರಂದು ರಾಧಾಕೃಷ್ಣನಿಗೆ ಮುಂಜಾನೆ 4.30ಕ್ಕೆ ಮಹಾಮಂಗಳಾರತಿ ಮತ್ತು ಕೀರ್ತನೆಗಳಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿ ನಂತರ ಪಂಚಾಮೃತ, ಪಂಚಗವ್ಯ, ಪುಷ್ಪೋದಕ, ಫಲೋದಕ ಮತ್ತು ಔಷಧಗಳಿಂದ ಅಭಿಷೇಕ ಮಾಡಲಾಯಿತು. ದೇವಸ್ಥಾನದ ಗೋಶಾಲೆಯಲ್ಲಿ ಗೋಪೂಜೆ ಮಾಡಲಾಯಿತು.

ಶ್ರೀ ರಾಧಾಕೃಷ್ಣಚಂದ್ರ ಉತ್ಸವ ಮೂರ್ತಿಗಳಿಗೆ ಉಯ್ಯಾಲೆ ಸೇವೆ, ತೆಪ್ಪೋತ್ಸವ ಮತ್ತು ಕೃಷ್ಣನಿಗೆ ಪ್ರಿಯವಾದ 108 ಭಕ್ಷ್ಯಗಳ ನೈವೇದ್ಯಗಳ ಸೇವೆ ಸಲ್ಲಿಸಲಾಯಿತು. ಇಡೀ ಮಂದಿರವನ್ನು ವಿವಿಧ ಸುಗಂಧ ಭರಿತವಾದ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು.

ಲಡ್ಡು, ಬರ್ಫಿ, ಮೈಸೂರು ಪಾಕ್, ಹೋಳಿಗೆಯಂತಹ ಸಾಂಪ್ರದಾಯಿಕ ಸಿಹಿ ತಿನಿಸು ಮತ್ತು ಮುರುಕ್ಕು, ನಿಪ್ಪಟ್ಟುಗಳನ್ನು ಮಂದಿರಗಳ ಸುಪ್ರಸಿದ್ಧ ಪಾಕಶಾಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ತಯಾರಿಸಲಾಗಿತ್ತು. ಭಕ್ತಾದಿಗಳಿಗೆ ನಿರಾತಂಕವಾದ ದರ್ಶನ ಲಭ್ಯವಾಗಲು ಸುವ್ಯವಸ್ಥೆ ಮಾಡಲಾಗಿತ್ತು.

krishna janmashtami
ರಾಧಾ ಕೃಷ್ಣ ಮೂರ್ತಿಗಳಿಗೆ ವಿಶೇಷ ಪೂಜೆ

ದಹಿ ಹಂಡಿ ರೂಪಕ ಪ್ರದರ್ಶನ: ಕೃಷ್ಣ, ಬಲರಾಮ ಮತ್ತು ಅವರ ಗೋಪಾಲಕ ಮಿತ್ರರು ವೃಂದಾವನದಲ್ಲಿ ಬೆಣ್ಣೆಯನ್ನು ಕದಿಯುವ ಸುಮಧುರ ಲೀಲೆಯ ಸ್ಮರಣಾರ್ಥ ಭಾರತದಲ್ಲಿ ಈ ದಹಿ ಹಂಡಿ ಎನ್ನುವ ಸಾಂಪ್ರದಾಯಿಕ ಕ್ರೀಡೆಯನ್ನು ಆಡಲಾಗುತ್ತದೆ. ಶ್ರೀ ಕೃಷ್ಣನ ದಿವ್ಯ ಅವತಾರದ ಸುಸ್ಮರಣೆಗಾಗಿ ಬೆಂಗಳೂರು ಇಸ್ಕಾನ್ ಮಂದಿರದ ಆವರಣದಲ್ಲಿ ನೃತ್ಯ ಕಲಾವಿದರು ದಹಿ ಹಂಡಿ ರೂಪಕ ಪ್ರದರ್ಶಿಸಿದರು. ಶಯನ ಆರತಿ ಮತ್ತು ಶಯನ ಪಲ್ಲಕ್ಕಿಯೊಂದಿಗೆ ಸಂಭ್ರಮಾಚರಣೆ ಮುಕ್ತಾಯಗೊಂಡಿತು.

ಈ ಕುರಿತು ಮಾತನಾಡಿದ ಬೆಂಗಳೂರು ಇಸ್ಕಾನ್ ದೇವಾಲಯದ ಅಧ್ಯಕ್ಷ ಶ್ರೀ ಮಧು ಪಂಡಿತ ದಾಸ, ಶ್ರೀ ಕೃಷ್ಣ ಜನ್ಮಾಷ್ಟಮಿಯು ಭಾರತದಲ್ಲಿ ಅತ್ಯಂತ ಸಡಗರ, ಸಂಭ್ರಮ ಮತ್ತು ಭಕ್ತಿಭಾವದಿಂದ ಆಚರಿಸುವ ಪ್ರಮುಖ ಉತ್ಸವವಾಗಿದೆ. ಲಕ್ಷಾಂತರ ಜನರು ನಮ್ಮ ಮಂದಿರಗಳಿಗೆ ಭೇಟಿ ನೀಡುತ್ತಿರುವುದು, ಕಾತರದಿಂದ ಭಗವಂತನ ದರ್ಶನ ಮಾಡುತ್ತಿರುವುದು ಮತ್ತು ವಿವಿಧ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ.

ನಾವು ಎಲ್ಲ ವಯೋಮಾನದವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ನಡೆಸಿದ್ದೇವೆ. ನಮಗೆಲ್ಲರಿಗೂ ಆರೋಗ್ಯ, ಸುಖ, ಸಂತೋಷ ಮತ್ತು ಭಕ್ತಿಯನ್ನು ನೀಡಲೆಂದು ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ.. ಇಸ್ಕಾನ್ ದೇವಾಲಯದಲ್ಲಿ ನೆರವೇರಿದ ವಿಶೇಷ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.