ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಪ್ರಕರಣ ಸಂಬಂಧ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಭಯೋತ್ಪಾದಕ ನಿಗ್ರಹ ದಳ (ಎಟಿಸಿ) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ರಾಹಿಂ ಹಾಗೂ ಗೌತಮ್ ಬಾಯ್ಬಿಟ್ಟ ಮಾಹಿತಿ ಆಧರಿಸಿ ಎಟಿಸಿ ತಮಿಳುನಾಡು ಮೂಲದ ನಾಲ್ವರನ್ನು ವಶಕ್ಕೆ ಪಡೆದುಕೊಂಡು ಅವರನ್ನು ನಗರಕ್ಕೆ ಕರೆತಂದಿದ್ದಾರೆ. ಇವರು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಡಿಸಲು ಬೇಕಾದ ಸಿಮ್ ಕಾರ್ಡ್ಗಳನ್ನು ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪಡೆದು ಕೊರಿಯರ್ ಮುಖಾಂತರ ತಲುಪಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ರೀತಿ ಇದುವರೆಗೂ ಎಷ್ಟು ಸಿಮ್ ಕಾರ್ಡ್ಗಳನ್ನು ಪಡೆಯಲಾಗಿದೆ?, ಕೃತ್ಯದಲ್ಲಿ ಇನ್ನಿತರರ ಪಾತ್ರಗಳ ಬಗ್ಗೆ ಆರೋಪಿಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಪಾಕ್ ನಿಂದಲು ಬರುತಿದ್ದ ಕರೆಗಳು:
ಪಾಕಿಸ್ತಾನ, ಯುಎಇ ಸೇರಿದಂತೆ ವಿವಿಧ ದೇಶಗಳಿಂದ ಬರುವ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡುವ ದಂಧೆಯಲ್ಲಿ ಆರೋಪಿಗಳು ತೊಡಗಿಸಿಕೊಂಡಿದ್ದು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಪಾಕಿಸ್ತಾನ, ದುಬೈನಿಂದ ಭಾರತೀಯ ಸೇನಾಧಿಕಾರಿಗಳ ಕಚೇರಿಗಳಿಗೆ ತಾವು ನಿವೃತ್ತ ಮಿಲಿಟರಿ ಅಧಿಕಾರಿಗಳು ಪರಿಚಯಿಸಿಕೊಂಡು ಫೋನ್ ಮಾಡುತ್ತಿದ್ದ ಅಪರಿಚಿತರು ಕರ್ನಲ್ ಸೇರಿದಂತೆ ಕೆಲ ಪ್ರಮುಖ ಮಿಲಿಟರಿ ಅಧಿಕಾರಿಗಳ ವಿಳಾಸ ಕೇಳುತ್ತಿದ್ದರು. ಉಗ್ರಗಾಮಿಗಳ ಜೊತೆ ನೇರಾನೇರ ಸಂಪರ್ಕ ಹೊಂದಿದ್ದರಾ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
15 ಸಿಮ್ ಬಾಕ್ಸ್ ಜಪ್ತಿ:
ಈಗಾಗಲೇ ಆರೋಪಿಗಳಿಂದ 30 ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಅಳವಡಿಸಲಾಗಿದ್ದ, 960 ಸಿಮ್ ಕಾರ್ಡ್ ಗಳನ್ನು ಜಪ್ತಿ ಮಾಡಿಕೊಂಡಿದ್ದ ಎಟಿಸಿ ಅಧಿಕಾರಿಗಳು ಮತ್ತೆ ಬಿಟಿಎಂ ಲೇಔಟ್ನಲ್ಲಿದ್ದ ಇಬ್ರಾಹಿಂಗೆ ಸೇರಿದ ಜಾಗದಿಂದ ಇನ್ನೂ 15 ಸಿಮ್ ಬಾಕ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.