ETV Bharat / state

ಪಿಎಸ್ಐ ಅಕ್ರಮದ ಬಗ್ಗೆ ನಾನು ಗಾಳಿಯಲ್ಲಿ ಗುಂಡು ಹೊಡೆದಿಲ್ಲ, ಇದ್ದದ್ದನ್ನು ಹೇಳಿದ್ದೇನೆ: ಹೆಚ್​ಡಿಕೆ

author img

By

Published : Jul 5, 2022, 9:59 PM IST

HD Kumaraswamy spoke about PSI's illegality
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಬಿಜೆಪಿ ಸರ್ಕಾರ ಎಲ್ಲ ರೀತಿಯಲ್ಲೂ ಹಣ ಕೊಳ್ಳೆ ಹೊಡೆಯುತ್ತಿದೆ. ಅದಕ್ಕೆ ಸಾಕ್ಷಿ ಇಬ್ಬರು ಉನ್ನತ ಅಧಿಕಾರಿಗಳ ಬಂಧನ. ಇನ್ನೂ ಸ್ವಚ್ಚ ಭಾರತದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ನಾಯಕರೇ ಛಲವಾದಿಪಾಳ್ಯಕ್ಕೆ ಬನ್ನಿ, ನಿಮ್ಮ ಬಂಡವಾಳ ಗೊತ್ತಾಗುತ್ತದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಬೆಂಗಳೂರು: ಬಹುಕೋಟಿ ರೂಪಾಯಿ ಹಗರಣ ಪಿಎಸ್ಐ ಕರ್ಮಕಾಂಡದ ಬಗ್ಗೆ ನಾನು ಗಾಳಿಯಲ್ಲಿ ಗುಂಡು ಹೊಡೆದಿಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದೇನೆ. ಮಾಧ್ಯಮಗಳಲ್ಲೇ ಈ ಬಗ್ಗೆ ತನಿಖಾ ವರದಿಗಳು ಬಂದಿವೆ. ತಲಾ 30 ಲಕ್ಷ ರೂಪಾಯಿಯನ್ನು 25 ಅಭ್ಯರ್ಥಿಗಳಿಂದ ವಸೂಲಿ ಆಗಿದೆ ಅಂದರೆ, ಒತ್ತು ಮೊತ್ತ ಎಷ್ಟಾಯ್ತು? 200-300 ಜನ 70-80 ಲಕ್ಷ ಕೊಟ್ಟಿದ್ದರೆ ಒಟ್ಟು ಹಣ ಎಷ್ಟಾಯ್ತು? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಎಸಿಬಿಗೆ ಕೋರ್ಟ್ ಛೀಮಾರಿ: ಹಗರಣದಲ್ಲಿ ಕಿಂಗ್ ಪಿನ್ ಬೇರೆ ಇದ್ದಾರೆ. ಅವರನ್ನು ಮೊದಲು ಬಂಧಿಸಿ. ಸಣ್ಣ ಪುಟ್ಟ ಮೀನು ಹಿಡಿಯಬೇಡಿ ಅಂದಿದ್ದೆ. ನಾನು ಸರ್ಕಾರಕ್ಕೆ ಎಚ್ಚರಿಕೆ‌ ಕೊಡ್ತಾ ಬಂದಿದ್ದೇನೆ. ಎಲ್ಲಾ ಮಾಹಿತಿ ಪಡೆದ ನಂತರವೇ ಚರ್ಚೆ ಮಾಡೋದು ಎಂದು ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.

ಎಸಿಬಿಯ ಒಬ್ಬ ಎಸ್​ಪಿ ಕೇಡರ್ ಅಧಿಕಾರಿಗೆ 50 ಲಕ್ಷ ರೂಪಾಯಿ ಹಣ ಕೊಟ್ಟವರು ಯಾರು? ಯಾರು ತೆಗೆದುಕೊಂಡು ಹೋಗಿ ಕೊಟ್ಟವರು? ಯಾರು ತೆಗೆದುಕೊಂಡು ಹೋದರು? ಎಲ್ಲಿಂದ, ಯಾರಿಂದ ಹಣ ಪಡೆದರು ಎನ್ನುವ ಮಾಹಿತಿ ಬೇಕಾ ?. ಎಸಿಬಿಗೆ ಕೋರ್ಟ್ ಛೀಮಾರಿ ಹಾಕಿದೆ. ನನ್ನ ಬಗ್ಗೆ ಹುಡುಗಾಟಿಕೆ ಮಾಡಬೇಡಿ. ನಾನು ನಿಖರ ಮಾಹಿತಿಯನ್ನೇ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

HD Kumaraswamy spoke about PSI's illegality
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರದ ಸ್ವೇಚ್ಚಾಚಾರ: ನಿನ್ನೆ ಇಬ್ಬರು ಹಿರಿಯ ಅಧಿಕಾರಿಗಳ ಬಂಧನವಾಗಿದೆ. ಈ ಘಟನೆಗೆ ಕಾರಣ ಅನೇಕ ವರ್ಷಗಳಿಂದ ಆಗಿರುವ ಆಡಳಿತದ ಕುಸಿತ. ಆಡಳಿತ ನಡೆಸುವ ಮುಖ್ಯಸ್ಥರ ನಡವಳಿಕೆಯೇ ಇದಕ್ಕೆ ಕಾರಣ. ರಾಜ್ಯದಲ್ಲಿ ಭ್ರಷ್ಟಾಚಾರ ಸ್ವೇಚ್ಚಾಚಾರವಾಗಿ ನಡೀತಾ ಇದೆ. ಇದು ಕೇವಲ ಬಿಜೆಪಿ ಪಕ್ಷದ ಭ್ರಷ್ಟಾಚಾರ ಅಷ್ಟೆ ಅಲ್ಲ ಕಾಂಗ್ರೆಸ್ ಆಡಳಿತದಲ್ಲೂ ಇತ್ತು. ಆಗ ಕಠಿಣ ಕ್ರಮ ತೆಗದುಕೊಳ್ಳದೇ ಅಂತಹ ವ್ಯಕ್ತಿಗಳಿಗೆ ರಕ್ಷಣೆ ಕೊಟ್ಟರು ಎಂದು ಅವರು ದೂರಿದರು.

ಗುರೂಜಿ ಕೊಲೆ: ಹುಬ್ಬಳ್ಳಿಯಲ್ಲಿ ನಡೆದ ಚಂದ್ರಶೇಖರ ಗುರೂಜಿ ಕೊಲೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಯಾರಿಗೂ ಇವತ್ತು ಭಯ ಭಕ್ತಿ ಇಲ್ಲ ಹಾಗೂ ಯಾರಿಗೂ ರಕ್ಷಣೆಯೂ ಇಲ್ಲ. ಬಿಜೆಪಿ ಆಡಳಿತದಲ್ಲಿ ಏನೆಲ್ಲ ಆಗುತ್ತಿದೆ ಎನ್ನುವುದಕ್ಕೆ ಇದು ಜ್ವಲಂತ ಉದಾಹರಣೆ ಎಂದರು.

ಬಿಜೆಪಿ ವಿರುದ್ಧ ಹೆಚ್​ಡಿಕೆ ಕಿಡಿ: ಸ್ವಚ್ಚ ಭಾರತ ಮತ್ತು ಅಭಿವೃದ್ಧಿ ಬಗ್ಗೆ ದೊಡ್ಡದಾಗಿ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ನಾಯಕರು, ಬಿಬಿಎಂಪಿಗೆ ಅನತಿ ದೂರದಲ್ಲಿರುವ ಛಲವಾದಿಪಾಳ್ಯಕ್ಕೆ ಬಂದು ನೋಡಬೇಕು. ಅವರ ಬಂಡವಾಳ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ಚಾಮರಾಜಪೇಟೆ, ಛಲವಾದಿಪಾಳ್ಯದಲ್ಲಿ ಇಂದು ಜೆಡಿಎಸ್ ಜನತಾ ಮಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿ ಇರುವ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ ಇಲ್ಲ. ಮಹಿಳೆಯರು, ಮಕ್ಕಳು ಸಾರ್ವಜನಿಕ ಶೌಚಾಲಯವನ್ನೇ ಬಳಸಬೇಕಾದ ದುಃಸ್ಥಿತಿ ಇದೆ. ಇದಾ ಅಭಿವೃದ್ಧಿ? ಇದಾ ಸ್ವಚ್ಚ ಭಾರತ? ಎಂದು ಖಾರವಾಗಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಮುಂದಿನ ಸಂಪುಟದಲ್ಲಿ ನೂತನ ಉದ್ಯೋಗ ನೀತಿ ಮಂಡಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು ಅಭಿವೃದ್ಧಿಗೆ ಕೋಟಿ ಕೋಟಿ ಹರಿದುಬರುತ್ತಿದೆ. ಆ ಹಣವೆಲ್ಲ ಎಲ್ಲಿ ಹೋಗುತ್ತಿದೆ? ಯಾರ ಕಿಸೆ ಸೇರುತ್ತಿದೆ? ಎನ್ನುವುದು ಗೊತ್ತಿದೆ. ಬಿಜೆಪಿ ಅವರು ಕೇವಲ ಬಾಯಿಮಾತಿನಲ್ಲಿ ಸ್ವಚ್ಚ ಭಾರತ, ಬೆಂಗಳೂರು ಅಭಿವೃದ್ಧಿ ಎಂದು ಹೇಳುತ್ತಾ ಜನರನ್ನು ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಮಂಕುಬೂದಿ ಎರಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೌಚಾಲಯ ಸೌಲಭ್ಯ ಇಲ್ಲ: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಮಹಾನ್ ಇತಿಹಾಸ ಇದೆ. ಆ ಇತಿಹಾಸವನ್ನು ಕಾಪಾಡಿಕೊಳ್ಳುವುದು ಹೀಗೆನಾ? ಅನೇಕರು ಈ ಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿರುವವರೆಲ್ಲ ಬಡವರು, ಶ್ರಮಜೀವಿಗಳು. ಆದರೆ, ಇವರೆಲ್ಲರೂ ಶೌಚಾಲಯ ಸೌಲಭ್ಯವೂ ಇಲ್ಲದ ದುಸ್ಥಿತಿಯಲ್ಲಿ ಇದ್ದಾರೆ. ಬೆಂಗಳೂರಿನ ಅನೇಕ ಕಡೆ ಇದೇ ಸ್ಥಿತಿ ಇದೆ ಎಂದು ಅವರು ಹೇಳಿದರು.

ಬಿಜೆಪಿ ದೇಶಕ್ಕೆ ಮಾರಕ: ಧರ್ಮ‌ಧರ್ಮಗಳ ನಡುವೆ ಸಂಘರ್ಷ ತಂದಿಟ್ಟಿದೆ ಬಿಜೆಪಿ. ಆ ಪಕ್ಷ ದೇಶಕ್ಕೆ ಮಾರಕ. ಎಲ್ಲ ಧರ್ಮದ ಜನ ಒಬ್ಬ ತಾಯಿ ಮಕ್ಕಳಂತೆ ಬಾಳಬೇಕಿದೆ. ಬಿಜೆಪಿ ಮುಸ್ಲಿಮರನ್ನು ಕೆರಳಿಸುವ ರೀತಿ ಮಾಡುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಅದರ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಯುವಕರಿಗೆ ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.

ಜನರಲ್ಲಿ ಮನವಿ: ಜಾತ್ಯತೀತ ಜನತಾದಳಕ್ಕೆ ಒಂದು ಅವಕಾಶ ಕೊಡಿ. ಬೆಂಗಳೂರಿನ ಚಿತ್ರಣವನ್ನೇ ಬದಲಾಯಿಸುತ್ತೇನೆ. ಮೆಟ್ರೋ, ವರ್ತುಲ ರಸ್ತೆ, ಜೆ ನರ್ಮ್, ಬೆಂಗಳೂರಿಗೆ 9 ಟಿಎಂಸಿ ನೀರು ಹೀಗೆ ಅನೇಕ ಯೋಜನೆಗಳನ್ನು ಕಾರ್ಯಗತ ಮಾಡಿದ್ದು ನಮ್ಮ ಪಕ್ಷವೇ ಎಂದು ಹೇಳಿದರು. ಬಿಜೆಪಿ ಸರ್ಕಾರ ಎಲ್ಲಾ ರೀತಿಯಲ್ಲೂ ಹಣ ಕೊಳ್ಳೆ ಹೊಡೆಯುತ್ತಿದೆ.

ಅದಕ್ಕೆ ಸಾಕ್ಷಿ ಇಬ್ಬರು ಉನ್ನತ ಅಧಿಕಾರಿಗಳ ಬಂಧನ. ಆದರೆ, ಸರ್ಕಾರ ಜನರ ಒಳಿತಿನ ಬಗ್ಗೆ ಚಿಂತೆ ಮಾಡುತ್ತಿಲ್ಲ. ಮುಂದಿನ ದಿನದಲ್ಲಿ ಬಿಬಿಎಂಪಿ ಚುನಾವಣೆ ಇದೆ. ನಂತರ ವಿಧಾನಸಭೆ ಚುನಾವಣೆ ಇದೆ. ಆ ಸಮಯದಲ್ಲೂ ಬಿಜೆಪಿಗೆ ತಕ್ಕ ಉತ್ತರ ಕೊಡಬೇಕು ಎಂದು ಜನರಲ್ಲಿ ಅವರು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.