ಬೆಂಗಳೂರು : ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆ ಎಸಿಬಿಯಲ್ಲಿ ಮುಂದುವರೆದಿದೆ. ಮೊದಲಿಗೆ ಬಿಡಿಎನಲ್ಲಿ ನಡೆದಿದ್ದು 300 ಕೋಟಿ ರೂ ಆಕ್ರಮ ಎಂದು ಅಂದಾಜಿಸಲಾಗಿತ್ತು. ಆದರೆ ನಡೆಯುತ್ತಿರುವ ತನಿಖೆಯಲ್ಲಿ 2,000 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎನ್ನುವುದು ಬೆಳಕಿಗೆ ಬರುತ್ತಿದೆ.
ಕಾರ್ನರ್ ಸೈಟ್, ಅಕ್ರಮ ಪರಭಾರೆ, ನಕಲಿ ಫಲಾನುಭವಿಗಳು ಹಾಗೂ ಬದಲಿ ನಿವೇಶನ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮ ನಡೆದಿರುವುದು. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ತನಿಖೆಯಲ್ಲಿ ತಿಳಿದು ಬಂದಿದೆ.
ಮೂರು ತಿಂಗಳ ಹಿಂದೆ ಬಿಡಿಎ ಮುಖ್ಯ ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಸಾಕಷ್ಟು ದಾಖಲೆಗಳನ್ನು ಎಸಿಬಿ ವಶಪಡಿಸಿಕೊಂಡಿತ್ತು. ಒಂದೇ ಗ್ರಾಮದಲ್ಲಿ 185 ಕೋಟಿ ರೂಪಾಯಿ ಅಕ್ರಮ ಬೆಳಕಿಗೆ ಬಂದಿತ್ತು.
ಕೆಂಗೇರಿ ಹೋಬಳಿಯ ಭೀಮನಕುಪ್ಪೆ ಗ್ರಾಮದ ಅರ್ಕಾವತಿ ಬಡವಾಣೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಕಂಡು ಬಂದಿತ್ತು. ಸರ್ಕಾರದ ಜಾಗವನ್ನು ಖಾಸಗಿ ಜಾಗ ಎಂದು ತೋರಿಸಿ ಸರ್ಕಾರದಿಂದ ಭ್ರಷ್ಟ ಅಧಿಕಾರಿಗಳು ಪರಿಹಾರ ಪಡೆದುಕೊಂಡಿದ್ದರು.
ಸರ್ಕಾರಿ ಜಾಗಕ್ಕೆ ಸುಮಾರು ₹185 ಕೋಟಿ ಪರಿಹಾರ ಪಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಸದ್ಯ ಈ ಭ್ರಷ್ಟ ಅಧಿಕಾರಿಗಳ ಕೈಗೆ ಕೋಳ ತೊಡಿಸಲು ಎಸಿಬಿ ದಾಖಲೆಗಳನ್ನು ಕಲೆ ಹಾಕುತ್ತಿದೆ.
ಹಸಿರು ವಲಯದಲ್ಲಿ ಐಷಾರಾಮಿ ವಿಲ್ಲಾಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಬಿಡಿಎ, ಹಸಿರು ವಲಯಕ್ಕೆ ಒಳಪಡುವ ಹೆಣ್ಣೂರು ಬಳಿ ಗಾಲ್ಫ್ ಮೈದಾನದ ನಿರ್ಮಾಣದ ಹೆಸರಲ್ಲಿ ಪ್ರತಿಷ್ಠಿತ ವಿಲ್ಲಾಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ. ಈ ಸ್ಥಳದಲ್ಲಿ ಸುಮಾರು 460 ವಿಲ್ಲಾಗಳನ್ನು ಅನಧಿಕೃತವಾಗಿ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ.
60 ನಿವೇಶನಗಳನ್ನ ನುಂಗಿದ ಬಿಡಿಎ ಅಧಿಕಾರಿಗಳು : ನಗರದ ವಿವಿಧ ಲೇಔಟ್ಗಳಲ್ಲಿ ಮುಂಜೂರಾಗದೆ ಉಳಿದ 60 ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಅಧಿಕಾರಿಗಳೇ ನುಂಗಿ ನೀರು ಕುಡಿದಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಈ ಬಿಡಿಎ ಬೃಹತ್ ಅಕ್ರಮದಲ್ಲಿ 60 ಅಧಿಕಾರಿಗಳು ಭಾಗಿಯಾಗಿರುವುದನ್ನು ಎಸಿಬಿ ಗುರುತಿಸಿದ್ದು, ಈಗಾಗಲೇ 45 ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಲು ಅನುಮತಿ ಪಡೆದಿರುವ ಎಸಿಬಿ ತನಿಖೆಯನ್ನು ಚುರುಕುಗೊಳಿಸಿದೆ.
ಓದಿ: ಅಬ್ಬಬ್ಬಾ.. ಸ್ಪೂನ್ನಿಂದ ಹಿಡಿದು ಒಳಕಲ್ವರೆಗೂ ಮಗಳಿಗೆ 'ಬೆಳ್ಳಿ' ಬಳುವಳಿ..