ETV Bharat / state

ಕನ್ನಡ ರಾಜ್ಯೋತ್ಸವದ ಶುಭಾಶಯಗಳು: ಇಲ್ಲಿದೆ ನೀವು ತಿಳಿದಿರಬೇಕಾದ ಆಚರಣೆಯ ಇತಿಹಾಸ

author img

By

Published : Nov 1, 2022, 7:44 AM IST

History of kannada rajyotsava  Kannada rajyotsava today  November 1 kannada rajyotsava  kannada rajyotsava celebration  ಭೌಗೋಳಿಕವಾಗಿ ಭಾರತದ 6ನೇ ಅತಿ ದೊಡ್ಡ ರಾಜ್ಯ  ಹಳದಿ ಕೆಂಪು ಬಾವುಟ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಆರಂಭ  ವಿದೇಶಗಳಲ್ಲೂ ಕನ್ನಡದ ಕಂಪು  ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ  ಕನ್ನಡ ರಾಜ್ಯೋತ್ಸವದ ನಲ್ಮೆಯ ಶುಭಾಶಯಗಳು  ಈಟಿವಿ ಭಾರತದಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು  ಕನ್ನಡ ರಾಜ್ಯೋತ್ಸವ ಆಚರಣೆಯ ಇತಿಹಾಸ  ಕನ್ನಡ ರಾಜ್ಯೋತ್ಸವ
ಈಟಿವಿ ಭಾರತದಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಆತ್ಮೀಯ ಓದುಗರೇ, ಕನ್ನಡ ರಾಜ್ಯೋತ್ಸವವನ್ನು ಎಂದಿನಿಂದ ಆಚರಿಸಿಕೊಂಡು ಬರಲಾಗುತ್ತಿದೆ, ಅದರ ಹಿಂದಿನ ಇತಿಹಾಸವೇನು ಎಂಬುದು ತಮಗೆ ಗೊತ್ತೇ? ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಕನ್ನಡ ಮನಸುಗಳಿಗಾಗಿ, ನಿಮಗಾಗಿ..

ಸಮಸ್ತ ಕನ್ನಡಿಗರಿಗೆ 'ಈಟಿವಿ ಭಾರತ' ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ನಲ್ಮೆಯ ಶುಭಾಶಯಗಳು. ಇಂದು ಕನ್ನಡಿಗರ ಹಬ್ಬ ಅದುವೇ ಕನ್ನಡ ರಾಜ್ಯೋತ್ಸವ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದಿನ ಮೈಸೂರು ಮಹಾರಾಜರಾಗಿದ್ದ ಒಡೆಯರ್ ಅವರು ತಮ್ಮ ರಾಜ್ಯವನ್ನು ಭಾರತ ದೇಶದೊಂದಿಗೆ ವಿಲೀನ ಮಾಡಲು ಒಪ್ಪಿದರು. ಹೀಗಾಗಿ 1950ರಲ್ಲಿ ಮೈಸೂರು ಭಾರತದ ಒಂದು ರಾಜ್ಯವಾಯಿತು. ದೇಶದಲ್ಲಿ ರಾಜ್ಯಗಳ ವಿಲೀನಿಕರಣ ಪ್ರಕ್ರಿಯೆಯು 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭಗೊಂಡಿತ್ತು. ನಂತರ 1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯ ಜಾರಿಯೊಂದಿಗೆ ಈ ಪ್ರಕ್ರಿಯೆ ಮುಕ್ತಾಯವಾಯಿತು. ಕೂರ್ಗ್​, ಮದರಾಸು, ಹೈದರಾಬಾದ್ ಮತ್ತು ಬಾಂಬೆ ಸಂಸ್ಥಾನದ ಕೆಲ ಪ್ರದೇಶಗಳು ಈ ಪ್ರಕ್ರಿಯೆಯಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು.

ನಂತರ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಪುನರ್​ ನಾಮಕರಣ ಮಾಡಲಾಯಿತು. ಆರಂಭದಲ್ಲಿ 19 ಜಿಲ್ಲೆಗಳು ಕರ್ನಾಟಕದಲ್ಲಿದ್ದವು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದ ಸವಿನೆನಪಿಗಾಗಿಯೇ ಪ್ರತಿವರ್ಷ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956 ರಲ್ಲಿ ಅಸ್ತಿತ್ವಕ್ಕೆ ಬಂದಿತು. 1950ರಲ್ಲಿ ಭಾರತ ಗಣರಾಜ್ಯವಾದ ನಂತರ ಭಾಷೆಯ ಆಧಾರದಲ್ಲಿ ದೇಶದ ಪ್ರಾಂತ್ಯಗಳನ್ನು ರಾಜ್ಯಗಳಾಗಿ ಪುನರ್ವಿಂಗಡನೆ ಮಾಡಲಾಯಿತು.

1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ರಾಜ್ಯದ ಉತ್ತರ ಭಾಗದ ಬಹಳಷ್ಟು ಜನರಿಗೆ ಮೈಸೂರು ರಾಜ್ಯ ಎಂಬ ಹೆಸರಿನ ಬದಲಾಗಿ ಬೇರೆ ಹೆಸರನ್ನು ರಾಜ್ಯಕ್ಕೆ ಇಡುವ ಇರಾದೆ ಇತ್ತು. ಹೀಗಾಗಿ 1973ರ ನವೆಂಬರ್ 1ರಂದು ಮೈಸೂರು ರಾಜ್ಯ ಎಂಬುದು ಅಧಿಕೃತವಾಗಿ ಕರ್ನಾಟಕ ರಾಜ್ಯವಾಯಿತು.

ಭೌಗೋಳಿಕವಾಗಿ ಭಾರತದ 6ನೇ ಅತಿ ದೊಡ್ಡ ರಾಜ್ಯ: ಪಶ್ಚಿಮ ಘಟ್ಟಗಳಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಭಾರತದ 6ನೇ ಅತಿ ದೊಡ್ಡ ಹಾಗೂ ಜನಸಂಖ್ಯೆಯ ಆಧಾರದಲ್ಲಿ 8ನೇ ಅತಿ ದೊಡ್ಡ ರಾಜ್ಯ.

ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಆಗುಂಬೆ ಹೀಗೆ ಹಲವಾರು ಪ್ರವಾಸಿ ತಾಣಗಳ ತವರೂರು ನಮ್ಮ ಕನ್ನಡ ನಾಡು. ಮೈಸೂರು ನಗರ ನೂರಾರು ವರ್ಷಗಳಷ್ಟು ಇತಿಹಾಸ ಹೊಂದಿರುವ ಸಾಂಸ್ಕೃತಿಕ ವೈಭವಕ್ಕೆ ಜೀವಂತ ಸಾಕ್ಷಿಯಾಗಿದೆ. ಕದಂಬರು, ಹೊಯ್ಸಳರು, ಚೋಳರು, ನಿಜಾಮರು ಹಾಗೂ ಒಡೆಯರ್​ ರಾಜರು ಆಳಿದ ಭೂಮಿ ಕರ್ನಾಟಕ.

ಹಳದಿ-ಕೆಂಪು ಬಾವುಟ ನಮ್ಮದು: ಕರ್ನಾಟಕ ರಾಜ್ಯವು ತನ್ನದೇ ಆದ ಹಳದಿ-ಕೆಂಪು ಬಣ್ಣದ ಸಾಂಸ್ಕೃತಿಕ ಬಾವುಟವನ್ನು ಹೊಂದಿದೆ. ಹಿಂದಿನ ಕಾಲದ ಕನ್ನಡ ಹೋರಾಟಗಾರ ಎಂ. ರಾಮಮೂರ್ತಿಯವರು ಈ ಹಳದಿ-ಕೆಂಪು ಬಾವುಟವನ್ನು ಪ್ರಥಮ ಬಾರಿಗೆ ತಯಾರಿಸಿ ಬಳಸಿದ್ದರು. ಅಂದಿನಿಂದ ಈ ಬಾವುಟ ಕೋಟ್ಯಂತರ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಆರಂಭ: ಕಲೆ, ಶಿಕ್ಷಣ, ಉದ್ಯಮ, ಸಾಹಿತ್ಯ, ಆಟೋಟ, ವೈದ್ಯಕೀಯ, ಸಾಮಾಜಿಕ ಕಾರ್ಯ, ಸಾರ್ವಜನಿಕ ಆಡಳಿತ ಹೀಗೆ ವಿಭಿನ್ನ ರಂಗಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುವ ಸಾಧಕರನ್ನು ಸನ್ಮಾನಿಸಲು 1966ರಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಆರಂಭಿಸಲಾಯಿತು.

ವಿದೇಶಗಳಲ್ಲೂ ಕನ್ನಡದ ಕಂಪು: ಇಂದು ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಾವಿದ್ದಲ್ಲಿಯೇ ಅತ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ತಾಯಿ ಭುವನೇಶ್ವರಿಯನ್ನು ಪೂಜಿಸುತ್ತಾರೆ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್​ ಮುಂತಾದ ದೇಶಗಳ ಕನ್ನಡಿಗರು ಕೆಲಸ ಮಾಡುವ ದೊಡ್ಡ ದೊಡ್ಡ ಸಂಸ್ಥೆಗಳಲ್ಲೂ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿರುತ್ತದೆ.

ಕವಿ ದಿ. ಕೆ.ಎಸ್.​ ನಿಸಾರ್ ಅಹಮದ್​ ಅವರು ರಚಿಸಿದ ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ ಕವನವನ್ನು ಗುನುಗುತ್ತ ಹೇಳೋಣ... ಜೈ ಕನ್ನಡಾಂಬೆ... ಜೈ ಭಾರತ ಮಾತೆ.

ಇದನ್ನೂ ಓದಿ: 2 ರೂಪಾಯಿ ಪಡೆದು ಚಿಕಿತ್ಸೆ ನೀಡುವ ಬಡವರ ಭಗವಂತನಿಗೆ ರಾಜ್ಯೋತ್ಸವ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.