ETV Bharat / state

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಹೈಕೋರ್ಟ್ ಕಿಡಿ

author img

By

Published : Dec 1, 2022, 9:54 PM IST

high-court-sparks-political-interference-in-distribution-of-government-assets
ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಹೈಕೋರ್ಟ್ ಕಿಡಿ

ಉಡುಪಿಯ ಮಲ್ಪೆ ಬಂದರಿನ ಮೀನು ಸಂಸ್ಕರಣಾ ಘಟಕದಲ್ಲಿ 200 ಚದರ ಮೀಟರ್ ಜಾಗ ಗುತ್ತಿಗೆ ನೀಡಿ ಉಡುಪಿಯ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್​​ ರದ್ದು ಪಡಿಸಿದೆ.

ಬೆಂಗಳೂರು: ಸರ್ಕಾರಿ ಆಸ್ತಿಯನ್ನು ಹಂಚಿಕೆ ಮಾಡುವಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಸಾರ್ವಜನಿಕ ಆಸ್ತಿ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.

ಶಾಸಕರಿಬ್ಬರ ಶಿಫಾರಸು ಪತ್ರ ಆಧರಿಸಿ ಉಡುಪಿಯ ಮಲ್ಪೆ ಬಂದರಿನ ಮೀನು ಸಂಸ್ಕರಣೆ ಘಟಕದಲ್ಲಿ 200 ಚದರ ಮೀಟರ್ ಜಾಗ ಸಂತೋಷ್ ವಿ. ಸಾಲ್ಯಾನ್ ಎಂಬುವರಿಗೆ ಗುತ್ತಿಗೆ ನೀಡಿ ಉಡುಪಿಯ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಹೊರಡಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ರದ್ದುಪಡಿಸಿದೆ.

ಸರ್ಕಾರಿ ಆಸ್ತಿಯನ್ನು ಸಾರ್ವಜನಿಕ ಹರಾಜು ಅಥವಾ ಟೆಂಡರ್ ಪ್ರಕ್ರಿಯೆ ಮೂಲಕವೇ ಗುತ್ತಿಗೆ ನೀಡಬೇಕು. ತಪ್ಪಿದರೆ ಅಧಿಕಾರವನ್ನು ನಿರಂಕುಶವಾಗಿ ಬಳಕೆ ಮಾ0ಡಿದಂತಾಗುತ್ತದೆ. ಸಾರ್ವಜನಿಕರ ಗಮನಕ್ಕೆ ಬರದಂತೆ ಸರ್ಕಾರಿ ಆಸ್ತಿಯನ್ನು ಹಿತಾಸಕ್ತಿಯ ವ್ಯಕ್ತಿಗೆ ಮನಸೋಯಿಚ್ಛೆ ಹಂಚಿಕೆ ಮಾಡಲು ಅವಕಾಶವಿಲ್ಲ.

ಈ ಪ್ರಕರಣವು ಸರ್ಕಾರಿ ಆಸ್ತಿಯನ್ನು ಮನಬಂದಂತೆ ಹಂಚಿಕೆ ಮಾಡುತ್ತಿರುವ ಸರ್ಕಾರಕ್ಕೆ ಕೊನೆಯ ಎಚ್ಚರಿಕೆಯಾಗಿದೆ. ಈ ಪ್ರವೃತ್ತಿ ಮರುಕಳಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಶೀತಲ ಘಟಕ ನಿರ್ಮಾಣಕ್ಕಾಗಿ ಮಲ್ಪೆ ಬಂದರಿನ ಮೀನು ಸಂಸ್ಕರಣಾ ಕೇಂದ್ರದಲ್ಲಿರುವ ಸರ್ವೇ ನಂ.262/ಸಿ ರಲ್ಲಿ ಖಾಲಿಯಿರುವ ಜಾಗ ಗುತ್ತಿಗೆ ನೀಡಲು ಉಡುಪಿ ಜಿಲ್ಲೆಯ ಕೊಡವೂರು ನಿವಾಸಿ ಗ್ರಾಮದ ಚಂದ್ರ ಸುವರ್ಣ ಮತ್ತು ಅನಂತ ಕೃಷ್ಣ ನಗರ ನಿವಾಸಿ ಸಂತೋಷ್ ವಿ. ಸಾಲ್ಯಾನ್ ಅರ್ಜಿ ಸಲ್ಲಿಸಿದ್ದರು. ಕೇವಲ ಸಾರ್ವಜನಿಕ ಹರಾಜು ಮೂಲಕವಷ್ಟೇ ಸರ್ಕಾರಿ ಆಸ್ತಿಯನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.

ನಂತರ ಶಾಸಕ ಲಾಲಾಜಿ ಆರ್.ಮೆಂಡನ್ ಅವರು ಉಡುಪಿ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಪತ್ರ ಬರೆದು, ಮಲ್ಪೆ ಬಂದರಿನಲ್ಲಿ 200 ಚದರ ಮೀಟರ್ ಭೂಮಿಯನ್ನು ಸಂತೋಷ್ ವಿ.ಸಾಲ್ಯಾನ್‌ಗೆ ಗುತ್ತಿಗೆ ನೀಡಬೇಕು ಎಂದು ತಿಳಿಸಿದ್ದರು. ನಂತರ ಮತ್ತೊರ್ವ ಶಾಸಕ ಕೆ. ರಘುಪತಿ ಭಟ್ ಸಹ ಪತ್ರ ಬರೆದು, ಆ ಜಾಗವನ್ನು 10 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಗುತ್ತಿಗೆ ನೀಡಬೇಕೆಂದೂ ಕೋರಿದ್ದರು.

ಈ ಪತ್ರಗಳನ್ನು ಪರಿಗಣಿಸಿ ಸಂತೋಷ್‌ಗೆ ಜಾಗವನ್ನು ಗುತ್ತಿಗೆ ನೀಡಿ 2021ರ ಸೆ.23ರಂದು ಆದೇಶಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಚಂದ್ರ ಸುವರ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿರುವ ಹೈಕೋರ್ಟ್, ಬಂದರಿನ ಜಾಗವನ್ನು ಸಂತೋಷ್‌ಗೆ ಗುತ್ತಿಗೆ ನೀಡಿ 2022ರ ಸೆ.23ರಂದು ಉಡುಪಿ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಹೊರಡಿಸಿರುವ ಆದೇಶವನ್ನು ರದ್ದುಪಡಿಸಿತು. ಸರ್ಕಾರವು ವಿವಾದಿತ ಸರ್ಕಾರಿ ಜಾಗವನ್ನು ಸಾರ್ವಜನಿಕ ಹರಾಜು ಮೂಲಕವೇ ಗುತ್ತಿಗೆ ನೀಡಬೇಕು.

ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಜಿದಾರ ಹಾಗೂ ಸಂತೋಷ್‌ಗೆ ಈ ಆದೇಶ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

ಇದನ್ನೂ ಓದಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.