ETV Bharat / state

ಗಾಲ್ಫ್ ಅಸೋಸಿಯೇಷನ್‌ ಪದಾಧಿಕಾರಿಗಳ ವಿರುದ್ಧ ದಾಖಲಾಗಿದ್ದ ದೂರು ರದ್ದುಪಡಿಸಿದ ಹೈಕೋರ್ಟ್​

author img

By

Published : Dec 12, 2022, 8:00 PM IST

high-court-quashed-complaint-filed-against-the-officials-of-the-golf-association
ಗಾಲ್ಫ್ ಅಸೋಸಿಯೇಷನ್‌ ಪದಾಧಿಕಾರಿಗಳ ವಿರುದ್ಧ ದಾಖಲಾಗಿದ್ದ ದೂರನ್ನು ರದ್ದುಪಡಿಸಿದ ಹೈಕೋರ್ಟ್​

ಮಾಜಿ ಸದಸ್ಯರೊಬ್ಬರು ಗಾಲ್ಫ್ ಅಸೋಸಿಯೇಷನ್‌ನ ನಾಲ್ವರು ಪದಾಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯಡಿ ದಾಖಲಿಸಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

ಬೆಂಗಳೂರು: ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನ ನಾಲ್ವರು ಪದಾಧಿಕಾರಿಗಳ ವಿರುದ್ಧ ಮಾಜಿ ಸದಸ್ಯರೊಬ್ಬರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಿಸಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

ಮಾಜಿ ಸದಸ್ಯ ಎ.ಎಂ ಸುರೇಶ್ ರಾಜ್ ಎಂಬುವರು ದಾಖಲಿಸಿದ್ದ ದೂರು ರದ್ದುಪಡಿಸಲು ಕೋರಿ ಡಾ.ಎಂ.ಜಿ. ಭಟ್ ಸೇರಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನ ನಾಲ್ವರು ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.

ಅಲ್ಲದೇ ಅರ್ಜಿದಾರರು ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಆರೋಪಗಳಿಗೆ ಸಂಬಂಧಿಸಿದ ಕೃತ್ಯಗಳು ಸಭಾ ಕೊಠಡಿಯಲ್ಲಿ ನಡೆದಿದೆ. ದೂರಿನ ಪ್ರಕಾರ ಅರ್ಜಿದಾರರಿದ್ದ ಕೊಠಡಿಗೆ ದೂರುದಾರರೇ ಹೋಗಿದ್ದಾರೆ. ಅಲ್ಲದೇ ಸಭಾ ಕೊಠಡಿ ಜನರಿದ್ದ ಜಾಗ ಅಥವಾ ಸಾರ್ವಜನಿಕ ಸ್ಥಳವಲ್ಲ. ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧ ಕೃತ್ಯವು ಸಾರ್ವಜನಿಕ ಸ್ಥಳದಲ್ಲಿ ನಡೆದಿರಬೇಕು. ಇನ್ನೂ ಸಿಸಿಟಿವಿ ದೃಶ್ಯಗಳು ನೋಡಿದರೆ, ಅರ್ಜಿದಾರರು ದೂರುದಾರ ಮೇಲೆ ಯಾವುದೇ ನಿಂದನೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ತಮಗೆ ಆಜೀವ ಸದಸ್ಯತ್ವ ನೀಡದೇ ಹೋದರೆ ಅಟ್ರಾಸಿಟಿ ಪ್ರಕರಣ ದಾಖಲಿಸುವುದಾಗಿ ಅರ್ಜಿದಾರರಿಗೆ ದೂರುದಾರರೇ ಬೆದರಿಕೆ ಹಾಕಿರುವುದು ತಿಳಿದಿದೆ. ಸದಸ್ಯತ್ವದ ಅರ್ಜಿಯ ನಮೂನೆ ಪರಿಶೀಲಿಸಿದರೆ ಸದಸ್ಯರ ಜಾತಿ ಹೆಸರು ಕೇಳುವಂತಹ ಯಾವುದೇ ಕಾಲಂ ಇಲ್ಲ. ಪರಿಶಿಷ್ಟ ಜಾತಿಗೆ ಸೇರಿದ್ದೇನೆ ಎಂಬ ಕಾರಣಕ್ಕೆ ತನಗೆ ಸದಸ್ಯತ್ವ ನೀಡಿಲ್ಲ ಎಂಬುದು ಕೇವಲ ದೂರುದಾರರ ಕಲ್ಪನೆಯಾಗಿದೆ. ಆದ್ದರಿಂದ ಅರ್ಜಿದಾರರ ವಿರುದ್ಧ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ ಎಂದು ತಿಳಿಸಿ ದೂರನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಎ.ಎಂ. ಸುರೇಶ್ ರಾಜ್ ಅವರು 2014ರಿಂದ ಅಸೋಸಿಯೇಷನ್ ತಾತ್ಕಾಲಿಕ ಸದಸ್ಯರಾಗಿದ್ದರು. 2019ರಲ್ಲಿ ನಡೆದ ಘಟನೆಯೊಂದರ ವಿಚಾರಣೆ ನಡೆಸಿ ಸುರೇಶ್ ರಾಜ್ ಅವರ ಸದಸ್ಯತ್ವವನ್ನು 2019ರ ಮಾ.13ರಂದು ಅಮಾನತುಪಡಿಸಲಾಗಿತ್ತು. ಈ ನಡುವೆ 2018ರ ಸೆ.1ರಂದು ಅಸೋಸಿಯೇಷನ್ ಆಜೀವ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದ್ದರು. 2020ರ ಅ.14ರಂದು ಆಜೀವ ಸದಸ್ಯತ್ವ ಪಡೆಯಲು ಅಗತ್ಯವಾದಷ್ಟು ಮತಗಳನ್ನು ಪಡೆದಿಲ್ಲ ಎಂದು ತಿಳಿಸಿ ಸುರೇಶ್ ರಾಜ್‌ಗೆ ಅಸೋಸಿಯೇಷನ್ ಪತ್ರ ಬರೆದಿತ್ತು.

ಅದನ್ನು ಅವರು ಸಹಕಾರ ಸಂಘಗಳ ರಿಜಿಸ್ಟ್ರಾರ್ ಮುಂದೆ ಪ್ರಶ್ನಿಸಿದ್ದರು. ಹೊಸದಾಗಿ ಪದಾಧಿಕಾರಿಗಳ ಸಭೆ ನಡೆಸಿ ಅರ್ಜಿದಾರರ ಮನವಿ ಪರಿಗಣಿಸುವಂತೆ ಅಸೊಸಿಯೇಷನ್‌ಗೆ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ 2022ರ ಮೇ 19ರಂದು ಸೂಚಿಸಿತ್ತು. ಪ್ರಕರಣ ಸಂಬಂಧ ಮುಂದೆ ಯಾವ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಚರ್ಚಿಸಲು ಅಸೋಸಿಯೇಷನ್ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು 2022ರ ಜೂ.14ರಂದು ಸಭೆ ನಡೆಸುತ್ತಿದ್ದರು.

ಈ ವೇಳೆ, ದೂರುದಾರ ಸುರೇಶ್ ರಾಜ್, ಸಭೆ ನಡೆಯುತ್ತಿದ್ದ ಕೊಠಡಿಗೆ ಏಕಾಏಕಿ ನುಗ್ಗಿ ಉಪ ನೋಂದಣಾಧಿಕಾರಿಗಳ ಆದೇಶವನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಈ ವೇಳೆ, ಅಸೋಷಿಯೇಷನ್ ಪದಾಧಿಕಾರಿಗಳಾದ ಅರ್ಜಿದಾರರು, ಸದ್ಯ ಸಭೆ ಮುಕ್ತಾಯವಾಗಿದೆ. ಉಪ ನೋಂದಣಾಧಿಕಾರಿಗಳ ಆದೇಶದ ತಲುಪಿದ ನಂತರ ಮುಂದೆ ಕೈಗೊಳ್ಳುವ ಕ್ರಮದ ಕುರಿತು ನಿಮಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದರು.

ಇದಾದ ಬಳಿಕ ದೂರುದಾರರು ಜೀವನ್‌ಭೀಮಾ ನಗರ ಪೊಲೀಸ್ ಠಾಣೆಗೆ ತೆರಳಿ, ಅರ್ಜಿದಾರರ ವಿರುದ್ಧ ಜೀವ ಬೆದರಿಕೆ, ಹಲ್ಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ)ಕಾಯ್ದೆಯಡಿ ದೂರು ಸಲ್ಲಿಸಿದ್ದರು. ಈ ದೂರು ರದ್ದತಿಗೆ ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ:ತುಮಕೂರು ನಗರ ಪಾಲಿಕೆ ಪೌರ ಕಾರ್ಮಿಕರ ಕಾಯಂಗೊಳಿಸಲು ಹೈಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.