ETV Bharat / state

ಮೊಬೈಲ್‌ನಲ್ಲಿ ಸೆರೆಯಾದ ಹಲ್ಲೆ ದೃಶ್ಯ ಆಧರಿಸಿ ಕೊಲೆ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್​..

author img

By

Published : Feb 11, 2023, 4:58 PM IST

ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಕೊಲೆ ಆರೋಪಿ - ಆರೋಪಿ ಹಲ್ಲೆ ಮಾಡಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆ - ಹಲ್ಲೆಯ ದೃಶ್ಯ ಆಧರಿಸಿ ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಪೀಠ.

High Court denied bail to murder accused
ಮೊಬೈಲ್‌ನಲ್ಲಿ ಸೆರೆಯಾದ ಹಲ್ಲೆ ದೃಶ್ಯ ಆಧರಿಸಿ ಕೊಲೆ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್​

ಬೆಂಗಳೂರು: ಪ್ರೀತಿಸಿ ಮದುವೆಯಾದ ಸೋದರಿಯ ಪತಿ ಕೊಲೆ ಮಾಡಿದ ಪ್ರಕರಣದಲ್ಲಿ ತನ್ನದೇ ಕುಟುಂಬದ ಸದಸ್ಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ದೃಶ್ಯ ಆರೋಪಿಯೊಬ್ಬರಿಗೆ ಜಾಮೀನು ಲಭ್ಯವಾಗದಂತೆ ಮಾಡಿದೆ. ಮೈಸೂರಿನ ಮೊಹಮ್ಮದ್ ಸುರ್ಹಾನ್ ಸುನೈನ್ ಎಂಬಾತನ ಕೊಲೆ ಪ್ರಕರಣ ಸಂಬಂಧ ಆರೋಪಿ ಅಬ್ದುಲ್ ಮಜೀದ್ ಎಂಬುವರು ಎರಡನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜತೆಗೆ, ತಾನು ಘಟನಾ ಸ್ಥಳದಲ್ಲಿರಲಿಲ್ಲ. ಮೃತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿಲ್ಲ ಎಂದು ಪ್ರತಿಪಾದಿಸಿ ಜಾಮೀನು ನೀಡುವಂತೆ ಮನವಿ ಮಾಡಿದ್ದ.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಪೀಠಕ್ಕೆ ಆರೋಪಿಯ ಕುಟುಂಬದ ಸದಸ್ಯ ಮತ್ತು ಪ್ರಕರಣದ ಮೂರನೇ ಆರೋಪಿಯು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೋದಲ್ಲಿ ಆರೋಪಿ ಹಲ್ಲೆ ಮಾಡಿರುವ ಅಂಶ ಬೆಳಕಿಗೆ ಬಂದಿತ್ತು. ಇದೇ ಅಂಶವನ್ನು ಆಧರಿಸಿ ನ್ಯಾಯಪೀಠ ಆರೋಪಿಗೆ ಜಾಮೀನು ನಿರಾಕರಿಸಿದೆ.

ಜತೆಗೆ, ಹಲವು ಆರೋಪಿಗಳು ಸೇರಿ ಮಾಡಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಜಾಮೀನು ಅರ್ಜಿಯನ್ನು ತೀರ್ಮಾನಿಸುವಾಗ ಪ್ರತಿಯೊಬ್ಬ ಆರೋಪಿಯು ಅಪರಾಧಕ್ಕೆ ನಿರ್ವಹಿಸಿದ ವೈಯಕ್ತಿಕ ಪಾತ್ರವನ್ನು ಪರಿಗಣಿಸಬೇಕಾದ ಅನಿವಾರ್ಯತೆ ಇಲ್ಲ. ಹಾಗೆಯೇ, ಪ್ರಕರಣದ ಇತರ ಆರೋಪಿಗಳಿಗೆ ಜಾಮೀನು ದೊರೆತಿರುವುದನ್ನು ಆಧರಿಸಿ (ಪ್ಯಾರಿಟಿ ಗ್ರೌಂಡ್) ಜಾಮೀನು ಕೋರಿದ ಸಂದರ್ಭದಲ್ಲಿ ಪ್ರಕರಣದ ಎಲ್ಲ ಸನ್ನಿವೇಶಗಳನ್ನು ಪರಿಗಣಿಸಬೇಕಾಗುತ್ತದೆ. ಪ್ರತಿಯೊಬ್ಬ ಆರೋಪಿಯ ವೈಯಕ್ತಿಕ ಪಾತ್ರವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?: ತಮ್ಮ ಸೋದರಿ ರುಬಿನಾ ಎಂಬಾಕೆಯನ್ನು ಮದುವೆಯಾದ ಮತ್ತು ಆಕೆಯೊಂದಿಗೆ ಪದೇ ಪದೆ ಜಗಳವಾಡುತ್ತಿದ್ದಾನೆ ಎಂಬ ಕಾರಣಕ್ಕೆ ಅಬ್ದುಲ್ ಮಜೀದ್ ಮತ್ತವರ ಕುಟುಂಬ ಸದಸ್ಯರು ಮೊಹಮದ್ ಸುರ್ಹಾನ್ ಸುನೈನ್ ಎಂಬಾತನನ್ನು 2021ರ ಆ.15ರಂದು ಕಾರಿನಲ್ಲಿ ಅಪಹರಿಸಿ ದೊಣ್ಣೆ - ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಮೈಸೂರಿನ ಉದಯಗಿರಿ ಠಾಣಾ ಪೊಲೀಸರು ಅರ್ಜಿದಾರ ಅಬ್ದುಲ್ ಮಜೀದ್‌ನನ್ನು ಬಂಧಿಸಿದ್ದರು.

2021ರ ಆ.20ರಿಂದ ನ್ಯಾಯಾಂಗ ಬಂಧನದಲ್ಲಿರುವ ಆತ ಜಾಮೀನು ಕೋರಿ 2022ರ ಏ.25ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್ 2022ರ ಜು.1ರಂದು ತಿರಸ್ಕರಿಸಿತ್ತು. ಇದರಿಂದ 2022ರ ಅ.29ರಂದು ಜಾಮೀನು ಕೋರಿ ಮತ್ತೆ ಪೂರಕ (ಸಕ್ಸೆಸಿವ್) ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಪರ ವಕೀಲರು, ಎಲ್ಲಿಯೂ ಕೂಡಾ ಅರ್ಜಿದಾರನ ಹೆಸರು ಉಲ್ಲೇಖಿಸಿಲ್ಲ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯಲ್ಲೂ ಅರ್ಜಿದಾರ ಮೃತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಕ್ಕೆ ದೃಶ್ಯಗಳಿಲ್ಲ. ಕೇವಲ ಒಬ್ಬ ಪ್ರತ್ಯಕ್ಷದರ್ಶಿಯ ಹೇಳಿಕೆ ಆಧರಿಸಿ ಘಟನೆ ನಡೆದ 5 ದಿನಗಳ ಬಳಿಕ ಅರ್ಜಿದಾರನ್ನು ಬಂಧಿಸಲಾಗಿದೆ. ಪ್ರಕರಣದ 4, 7, 8ನೇ ಆರೋಪಿಗೆ ಜಾಮೀನು ದೊರೆತಿದೆ. ಇದನ್ನು ಪರಿಗಣಿಸಿ ಅರ್ಜಿದಾರನಿಗೂ ಜಾಮೀನು ನೀಡುವಂತೆ ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರನೇ ಪ್ರಕರಣದ ಮೂರನೇ ಅರೋಪಿ (ಕುಟುಂಬ ಸದಸ್ಯ) ಚಿತ್ರೀಕರಿಸಿದ ಮೊಬೈಲ್ ವಿಡಿಯೋವನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ. ವಿಡಿಯೋದಲ್ಲಿ ಅರ್ಜಿದಾರ ಮತ್ತವರ ಕುಟುಂಬದ ಸದಸ್ಯರು ಎಷ್ಟು ಹುಡುಗಿಯರ ಜೀವನ ಹಾಳು ಮಾಡಿದ್ದೀಯ. ನಮ್ಮ ಹುಡುಗಿಯ ಬಾಳು ಸಹ ಹಾಳು ಮಾಡುತ್ತೀಯಾ ಎಂದು ಸುನೈನ್‌ಗೆ ಬೈದಿರುವ ಹಾಗೂ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ ದೃಶ್ಯಗಳಿವೆ. ಇದು ಸುನೈನ್ ಕೊಲೆಗೈದ ಸ್ಥಳದಲ್ಲಿ ಅರ್ಜಿದಾರ ಇರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ

ಇದನ್ನೂ ಓದಿ:ಡಿ.ಕೆ.ಶಿವಕುಮಾರ್‌ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.