ETV Bharat / state

10 ವರ್ಷಗಳ ಬಳಿಕ ಮೇಲ್ಮನವಿ ಸಲ್ಲಿಸಿದ್ದ ಬಿಡಿಎ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ

author img

By

Published : Dec 2, 2022, 8:43 PM IST

10 ವರ್ಷಗಳ ಬಳಿಕ ಮೇಲ್ಮನವಿ ಸಲ್ಲಿಸಿದ ಬಿಡಿಎ ಕ್ರಮವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡು, ಅರ್ಜಿ ವಜಾಗೊಳಿಸಿದೆ.
ಹೈಕೋರ್ಟ್ ಅಸಮಾಧಾನ
ಹೈಕೋರ್ಟ್ ಅಸಮಾಧಾನ

ಬೆಂಗಳೂರು: ಹೆಚ್‌ಬಿಆರ್​ ಬಡಾವಣೆ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಾಗದಲ್ಲಿ ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ 10 ವರ್ಷಗಳ ಬಳಿಕ ಮೇಲ್ಮನವಿ ಸಲ್ಲಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹೆಚ್‌ಬಿಆರ್​ ಲೇಔಟ್ 3ನೇ ಹಂತದ ಬಡಾವಣೆ ನಿರ್ಮಾಣ ಹಿನ್ನೆಲೆಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ ನಗರದ ಚೋಳನಾಯಕನಹಳ್ಳಿ ಗ್ರಾಮದ ಸರ್ವೇ ನಂ.47ರಲ್ಲಿನ 17.5 ಗುಂಟೆ ಜಾಗಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ 2021ರ ಫೆ.22ರಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಆದೇಶಿಸಿತ್ತು.

ಅದನ್ನು ಪ್ರಶ್ನಿಸಿ 2022ರ ಫೆ.25ರಂದು ಬಿಡಿಎ ಆಯುಕ್ತರು ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಅವರಿದ್ದ ವಿಭಾಗೀಯ ಪೀಠ, ಮೇಲ್ಮನವಿಯನ್ನು 10 ವರ್ಷ ಕಾಲ ವಿಳಂಬವಾಗಿ ಸಲ್ಲಿಸಿದ ಬಿಡಿಎ ಕ್ರಮವನ್ನು ತರಾಟೆಗೆ ತೆಗೆದುಕೊಂಡು ಮೇಲ್ಮನವಿ ವಜಾಗೊಳಿಸಿತು.

ಮೇಲ್ಮನವಿಯನ್ನು ಸಲ್ಲಿಸಲು 2,540 ದಿನಗಳ ಕಾಲ ವಿಳಂಬ ಮಾಡಲಾಗಿದೆ. 2012ರಲ್ಲಿ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಆದೇಶಿಸಿದೆ. 2013ರಲ್ಲಿ ಕಾನೂನು ಅಧಿಕಾರಿ ಅಭಿಪ್ರಾಯ ನೀಡಿದ್ದಾರೆ. ಆದರೆ, ಅಂದಿನಿಂದಲೂ ಕಡತವು ಬಿಡಿಎ ಆಯುಕ್ತರ ಬಳಿಯಿದೆ. ಪ್ರಕರಣ ಸಂಬಂಧ ಸರ್ಕಾರ ಪ್ರಶ್ನಿಸಿದ ಮೇಲೆ ಎಚ್ಚೆತ್ತ ಬಿಡಿಎ ಆಯ್ತುಕ್ತರು ಮೇಲ್ಮನವಿ ಸಲ್ಲಿಸಿದ್ದಾರೆ. ಇಷ್ಟು ವಿಳಂಬ ಮಾಡುವುದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ನ್ಯಾಯಾಲಯಕ್ಕೆ ಅನಿಸುತ್ತಿಲ್ಲ. ಇನ್ನೂ ಮೇಲ್ಮನವಿ ಸಲ್ಲಿಸಲು ಇಷ್ಟು ವಿಳಂಬ ಮಾಡಿರುವುದಕ್ಕೆ ಬಿಡಿಎ ಸೂಕ್ತ ಕಾರಣ ನೀಡಿಲ್ಲ ಎಂದು ತಿಳಿಸಿದ ವಿಭಾಗೀಯ ಪೀಠ ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ ಏನು? ಹೆಚ್‌ಬಿಆರ್​ ಲೇಔಟ್ 3ನೇ ಹಂತದ ಬಡಾವಣೆ ನಿರ್ಮಾಣ ಹಿನ್ನೆಲೆಯಲ್ಲಿ ಚೋಳನಾಯಕನಹಳ್ಳಿ ಗ್ರಾಮದಲ್ಲಿ ಸಾಕಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ 1978ರ ಜೂ.2ರಂದು ಪ್ರಾಥಮಿಕ ಮತ್ತು 1989ರ ಫೆ.2ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಸರ್ವೇ ನಂ 47ರಲ್ಲಿನ 17.5 ಗುಂಟೆ ಜಾಗವು ರಾಮಯ್ಯ ಎಂಬುವರಿಗೆ ಸೇರಿತ್ತು.

ಆ ಜಾಗವನ್ನು ಬಿಡಿಎ ಸ್ವಾಧೀನಪಡಿಸಿಕೊಳ್ಳಲೂ ಇಲ್ಲ ಹಾಗೂ ಪರಿಹಾರವೂ ನೀಡಲಿಲ್ಲ. ಈ ಮಧ್ಯೆ ರಾಮಯ್ಯ ಅವರ ಜಮೀನು ಸುತ್ತಲಿನ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಟ್ಟು ಬಿಡಿಎ ಆದೇಶಿಸಿತ್ತು. ಆ ಭೂಮಿಯನ್ನು ಸಂಬಂಧಪಟ್ಟ ಮಾಲೀಕರು ಅಭಿವೃದ್ಧಿಪಡಿಸಿದ್ದರು. ಇದರಿಂದ ತಮಗೆ ಸೇರಿದ ಸಣ್ಣ ಜಾಗದಲ್ಲಿ ಬಡಾವಣೆ ರಚಿಸಲಾಗದ ಕಾರಣಕ್ಕೆ ಭೂ ಸ್ವಾಧೀನದಿಂದ ಕೈ ಬಿಡಬೇಕು.

ಹಾಗೆಯೇ, ಕೃಷಿಯೇತರ ಚಟುವಟಿಕೆಗೆ ಬಳಸಲು ಅನುಮತಿ ನೀಡಲು ಕೋರಿ ರಾಮಯ್ಯ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಅದನ್ನು 2012ರಲ್ಲಿ ತಿರಸ್ಕರಿಸಿದ ಕಾರಣ ರಾಮಯ್ಯ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ರಾಮಯ್ಯ ಅವರ ಭೂಮಿಗೆ ಸಂಬಂಧಿಸಿದಂತೆ ಬಿಡಿಎ ಹೊರಡಿಸಿದ ಅಂತಿಮ ಭೂ ಸ್ವಾಧೀನ ಅಧಿಸೂಚನೆ ಮತ್ತು ಭೂ ಪರಿವರ್ತನೆಗೆ ನಿರಾಕರಿಸಿ 2012ರಲ್ಲಿ ಬಿಡಿಎ ನೀಡಿದ್ದ ಹಿಂಬರಹವನ್ನು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ರದ್ದುಪಡಿಸಿತು. ಜತೆಗೆ, ಭೂ ಪರಿವರ್ತನೆಗೆ ಕೋರಿ ರಾಮಯ್ಯ ಅರ್ಜಿ ಸಲ್ಲಿಸಿದರೆ, ಅದನ್ನು ಜಿಲ್ಲಾಧಿಕಾರಿ ಪರಿಗಣಿಸಿ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿ 2013ರ ಫೆ.22ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬಿಡಿಎ ಆಯುಕ್ತರು 2022ರ ಫೆ.25ರಂದು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

(ಓದಿ: ಕೆಜಿಎಫ್ ಸಿನಿಮಾ ಹಾಡು ಕೃತಿಚೌರ್ಯ ಆರೋಪ: ರಾಹುಲ್ ಗಾಂಧಿ, ಇತರ ಕೈ ನಾಯಕರಿಗೆ ಹೈಕೋರ್ಟ್ ನೋಟಿಸ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.