ETV Bharat / state

ನಿಯೋಜಿತ ಅಭ್ಯರ್ಥಿಗಳು ಪಾದಯಾತ್ರೆ, ಗ್ರಾಮ ವಾಸ್ತವ್ಯ ಮಾಡುವಂತೆ ಹೆಚ್.ಡಿ.ದೇವೇಗೌಡ ಸೂಚನೆ

author img

By

Published : Feb 1, 2023, 9:58 PM IST

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಗುರಿ ಹೊಂದಿರುವ ಜೆಡಿಎಸ್ ತನ್ನ ಘೋಷಿತ ಹಾಗೂ ಸಂಭವನೀಯ ಅಭ್ಯರ್ಥಿಗಳಿಗೆ ಪಾದಯಾತ್ರೆ ಹಾಗೂ ಗ್ರಾಮ ವಾಸ್ತವ್ಯದ ಮೂಲಕ ಮತದಾರರ ಸೆಳೆಯಲು ಸೂಚನೆ ನೀಡಿದೆ.

hd-devegowda
ಹೆಚ್.ಡಿ.ದೇವೇಗೌಡ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಗೆ ಸಮನಾಂತರವಾಗಿ ನಿಯೋಜಿತ ಅಭ್ಯರ್ಥಿಗಳು ಪಾದಯಾತ್ರೆ ಹಾಗೂ ಗ್ರಾಮ ವಾಸ್ತವ್ಯ ಮಾಡುವಂತೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪತ್ರದ ಮೂಲಕ ಸೂಚಿಸಿದ್ದಾರೆ. ಪಕ್ಷದ ವತಿಯಿಂದ ಗುರುತಿಸಿರುವ 123 ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳು ಪಂಚರತ್ನ ಯೋಜನೆಯನ್ನು ಆಯಾ ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡಬೇಕು. ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೊಂದಿಗೆ ರ್ಯಾಲಿ, ಜನಸಂಪರ್ಕಸಭೆ, ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದ್ದಾರೆ.

ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಎರಡು ದಿನ ಗ್ರಾಮಗಳ ಪಾದಯಾತ್ರೆ ಮತ್ತು ಎರಡು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಬೇಕು. ಆ ಸಂದರ್ಭದಲ್ಲಿ ಪಕ್ಷದ ಇದುವರೆಗಿನ ಸಾಧನೆ ತಿಳಿಸಿ, ಪಕ್ಷ ಅಧಿಕಾರಕ್ಕೆ ಬಂದರೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಮನವರಿಕೆ ಮಾಡಬಹುದು. ಅಲ್ಲದೆ, ಆಯಾ ಕ್ಷೇತ್ರದ ಜನರ ಕುಂದು-ಕೊರತೆಗಳನ್ನು ಆಲಿಸಬಹುದು. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಇದರ ಜೊತೆಗೆ ಚುನಾವಣೆಯಲ್ಲಿ ಜನರ ನಾಡಿ ಮಿಡಿತ ಏನೆಂಬುದನ್ನು ಅರಿಯಲು ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಗಳಿಗೆ ಪತ್ರ ರವಾನೆ: ಈ ಸಂಬಂಧದ ಪತ್ರವನ್ನು ಜೆಡಿಎಸ್‌ ಅಭ್ಯರ್ಥಿಗಳಿಗೆ ಈಗಾಗಲೇ ರವಾನಿಸಲಾಗಿದೆ. ಪಾದಯಾತ್ರೆ ಮಾಡುವುದರಿಂದ ಪಕ್ಷ ಸಂಘಟನೆಗೂ ಸಹಕಾರಿಯಾಗಲಿದೆ. ಪಕ್ಷದ ರಾಜ್ಯಾಧ್ಯಕ್ಷರು, ಯುವ ಘಟಕದ ಅಧ್ಯಕ್ಷರು ಹಾಗೂ ಸಂಸದರು ಜಿಲ್ಲಾವಾರು ಪ್ರವಾಸ ಕೈಗೊಳ್ಳಲಿದ್ದು, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವೇ ಸಾಧಾರಣ 30 ರಿಂದ 50 ಗ್ರಾಮ ಪಂಚಾಯಿತಿಗಳಿದ್ದು, ಒಂದು ಗ್ರಾಮ ಪಂಚಾಯತ್​ನಲ್ಲಿ ಪಕ್ಷದ ನಿಯೋಜಿತ ಅಭ್ಯರ್ಥಿಗಳು ಎರಡು ದಿನ ಗ್ರಾಮ ಪಾದಯಾತ್ರೆ ಮತ್ತು ಎರಡು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯಗಳನ್ನು ಕೈಗೊಂಡರೆ, 2 ರಿಂದ 3 ತಿಂಗಳ ಕಾಲಮಿತಿಯೊಳಗೆ ಪೂರ್ಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಬಹುದು.

ನಿಯೋಜಿತ ಅಭ್ಯರ್ಥಿಗಳು ಪಾದಯಾತ್ರೆ: ಅಲ್ಲದೆ, ಪಕ್ಷದ ಬಲವರ್ಧನೆ ಮತ್ತು ಸಂಘಟನೆ ಜೊತೆಗೆ ಕ್ಷೇತ್ರದ ಜನತೆಯ ಕುಂದು-ಕೊರತೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳುವುದರೊಂದಿಗೆ, ಮತದಾರರ ನಾಡಿ-ಮಿಡಿತವನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಆದ್ದರಿಂದ, ರಾಜ್ಯದಲ್ಲಿ ಪಕ್ಷದ ವತಿಯಿಂದ ಗುರುತಿಸಿರುವ 123 ಮತ ಕ್ಷೇತ್ರಗಳಲ್ಲಿ ನಿಯೋಜಿತ ಅಭ್ಯರ್ಥಿಗಳು ಪಾದಯಾತ್ರೆ ಮತ್ತು ಗ್ರಾಮ ವಾಸ್ತವ್ಯಗಳನ್ನು ಕೈಗೊಂಡರೆ, ಮುಂಬರುವ 2023ರ ಚುನಾವಣೆಯಲ್ಲಿ ಪಕ್ಷ ನಿಚ್ಚಳ ಬಹುಮತ ಪಡೆಯುವಲ್ಲಿ ಯಾವುದೇ ಸಂಶಯವಿಲ್ಲ.

ಅಲ್ಲದೆ, ಹೆಚ್.ಡಿ.ಕುಮಾರಸ್ವಾಮಿಯವರು ಕೈಗೊಂಡಿರುವ ಪಂಚರತ್ನ ರಥಯಾತ್ರೆಗೆ ಸಮಾನಂತರವಾಗಿ ಮತ್ತು ಈ ರಥಯಾತ್ರೆಗೆ ಪೂರಕವಾಗಿ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಬಲವರ್ಧನೆ ಮತ್ತು ಸಂಘಟನೆಗೆ, ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ರವರು, ಹಾಸನ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ರವರು ಮತ್ತು ಪಕ್ಷದ ಯುವ ಜನತದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರು ಪ್ರವಾಸ ಕೈಗೊಳ್ಳಲಿದ್ದಾರೆ. ಇವರ ಪ್ರವಾಸ ಕಾರ್ಯಕ್ರಮವನ್ನು ರೂಪಿಸಿ, ಸಂಬಂಧಿಸಿದ ಜಿಲ್ಲಾಧ್ಯಕ್ಷರೊಂದಿಗೆ ಚರ್ಚಿಸಿ, ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ರವರು ಆದೇಶ ಹೊರಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ, ತಾವೆಲ್ಲರೂ ಪಕ್ಷದ ಎಲ್ಲಾ ಶ್ರಮಿಸುತ್ತೀರೆಂದು ಭಾವಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 'ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ ಮುಂದುವರಿದ ಭಾಗವೇ ಈ ಬಜೆಟ್‌': ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.