ETV Bharat / state

ಬೀದರ್‌ನಲ್ಲಿ ಐಟಿಬಿಟಿ ಪಾರ್ಕ್ ಸ್ಥಾಪನೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

author img

By ETV Bharat Karnataka Team

Published : Jan 3, 2024, 6:42 AM IST

High Court
ಹೈಕೋರ್ಟ್​

ಬೀದರ್​ನಲ್ಲಿ ಐಟಿಬಿಟಿ ಪಾರ್ಕ್​ ಸ್ಥಾಪಿಸುವಂತೆ ಸರ್ಕಾರಕ್ಕೆ ಆದೇಶ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ.

ಬೆಂಗಳೂರು: ಬೀದರ್​ ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಪಾರ್ಕ್ (ಐಟಿ-ಬಿಟಿ ಪಾರ್ಕ್) ಸ್ಥಾಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಐಟಿ-ಬಿಟಿ ಪಾರ್ಕ್ ಸ್ಥಾಪಿಸುವ ವಿಚಾರ ಸರ್ಕಾರದ ನೀತಿ ರೂಪಕ ವಿಷಯ, ಹಣಕಾಸು ಸೇರಿದಂತೆ ಅನೇಕ ವಿಚಾರಗಳನ್ನು ಒಳಗೊಂಡಿರುತ್ತದೆ. ಅಷ್ಟಕ್ಕೂ ಬೀದರ್​ನಲ್ಲಿ ಐಟಿ-ಬಿಟಿ ಪಾರ್ಕ್ ಆಗಬೇಕು ಎಂಬ ಬಗ್ಗೆ ಅರ್ಜಿದಾರರು ಯಾವ ಪ್ರಾಥಮಿಕ ಸಂಶೋಧನೆ ಅಥವಾ ಮಾಹಿತಿ ಸಂಗ್ರಹಿಸಿದ್ದಾರೆ. ಬೀದರ್​ ಜಿಲ್ಲೆಯಲ್ಲಿ ಎಷ್ಟು ಮಂದಿ ಐಟಿ ವೃತ್ತಿಪರರು ಇದ್ದಾರೆ. ಅವರಲ್ಲೂ ಅಲ್ಲೇ ಕೆಲಸ ಮಾಡಲು ಆಸಕ್ತರಾಗಿದ್ದಾರೆಯೇ ಎಂಬ ಬಗ್ಗೆ ಏನಾದರೂ ಮಾಹಿತಿ ಇದೆಯೇ? ಮೇಲಾಗಿ ಇದೇ ವಿಚಾರವಾಗಿ ಈ ಹಿಂದೆ ಹೈಕೋರ್ಟ್‌ಗೆ ಎರಡು ಬಾರಿ ಅರ್ಜಿ ಸಲ್ಲಿಸಲಾಗಿದೆ. ಈಗ ಪುನಃ ಅದೇ ವಿಚಾರ ಬಂದಿದೆ. ಈ ರೀತಿ ಏನಾದರೂ ತಂದು ನ್ಯಾಯಾಲಯದಲ್ಲಿ ಸುರಿಯುವುದು ಸರಿಯಲ್ಲ. ದಂಡ ಹಾಕಿ ಈ ಅರ್ಜಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.

ಅಂತಿಮವಾಗಿ ನೋಟಿಸ್ ಜಾರಿಗೊಳಿಸುವುದಕ್ಕೂ ಈ ಅರ್ಜಿ ಅರ್ಹವಾಗಿಲ್ಲ. ಅರ್ಜಿದಾರರ ಆಸೆಗಳು ಮತ್ತು ಕಲ್ಪನೆಗಳ ಆಧಾರದಲ್ಲಿ ನಿರ್ದೇಶನ ನೀಡಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ : ಪ್ರಾದೇಶಿಕ ಅಸಮತೋಲನಾ ನಿವಾರಣೆಗೆ ಸಂಬಂಧಿಸಿದ ಉನ್ನತಾಧಿಕಾರಿ ಸಮಿತಿಯ (ಡಾ. ನಂಜುಂಡಪ್ಪ) ವರದಿಯ ಆಧಾರದಲ್ಲಿ ಬೀದರ್​​ನಲ್ಲಿ ಐಟಿ-ಬಿಟಿ ಪಾರ್ಕ್ ಸ್ಥಾಪಿಸುವಂತೆ 2023 ರ ಜೂನ್ 12 ರಂದು ನೀಡಿರುವ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು.

ಇದನ್ನೂ ಓದಿ: ಚುನಾವಣಾ ಸಂದರ್ಭ ಉಚಿತ ಕೊಡುಗೆ ಪ್ರಶ್ನಿಸಿ ಅರ್ಜಿ, ವಿಚಾರಣೆ ಮುಂದೂಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.