ETV Bharat / state

ಗಡಿ ವಿವಾದದಲ್ಲಿ ರಾಜ್ಯ ಸರ್ಕಾರ ರಣಹೇಡಿಯಂತೆ ಬಾಲ ಮುದುರಿಕೊಂಡಿದೆ: ದೇವೇಗೌಡ

author img

By

Published : Dec 29, 2022, 10:46 PM IST

Former Prime Minister HD Deve Gowda
ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಪ್ರಾದೇಶಿಕ ಪಕ್ಷದ ಅವಶ್ಯಕತೆಯ ಕುರಿತಾಗಿ ಜೆಡಿಎಸ್‌ ವರಿಷ್ಠರಾದ ಹೆಚ್.ಡಿ ದೇವೇಗೌಡ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು: ಗಡಿ ವಿವಾದದ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ರಣಹೇಡಿಯಂತೆ ಬಾಲ ಮುದುರಿಕೊಂಡಿದೆ. ವಿರೋಧ ಪಕ್ಷ ಈ ವಿಷಯಕ್ಕೂ ತಮಗೂ ಸಂಬಂಧವೇ ಇಲ್ಲದಂತಿದೆ. ಕರ್ನಾಟಕಕ್ಕೆ ಕನ್ನಡ-ಕೇಂದ್ರಿತ ಸರ್ಕಾರದ ಅನಿವಾರ್ಯತೆ ಎಷ್ಟಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕರ್ಣಾಟ ಬಲಂ ಅಜೇಯಂ' ಎಂದು ಕೊಂಡಾಡುವಷ್ಟು ಬಲಿಷ್ಠವಾಗಿದ್ದ ನಮ್ಮ ರಾಜ್ಯವು ಇಂದು ಛಿದ್ರ ಛಿದ್ರವಾಗುವ ಭಯದ ವಾತಾವರಣದಲ್ಲಿದೆ. ಇದಕ್ಕೆ ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯದ ಆಡಳಿತ ಕಾರಣ. ಕರ್ನಾಟಕದ ಗತವೈಭವ ಮರುಕಳಿಸಬೇಕಿದ್ದರೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು. ಇದು ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದರಿಂದ ಮಾತ್ರ ಸಾಧ್ಯ ಎಂದಿದ್ದಾರೆ.

ನೆಲ, ಜಲ, ಭಾಷೆಗಾಗಿ ಹೋರಾಟ: ಭಾರತ ಒಕ್ಕೂಟ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ಎಪ್ಪತ್ತೈದು ವರ್ಷಗಳು ಕಳೆದು ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲೂ ಕನ್ನಡಿಗರಾದ ನಾವು ನಮ್ಮ ನೆಲ, ಜಲ, ಭಾಷೆಗಾಗಿ ಹೋರಾಡುತ್ತಲೇ ಇರುವುದು ತೀವ್ರ ಕಳವಳಕಾರಿ ಸಂಗತಿ.

ಕನ್ನಡಿಗರ ಮೇಲೆ ದಬ್ಬಾಳಿಕೆ: ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮೂಲಕ ನಮ್ಮ ಪಾಲಿನ ನೀರನ್ನು ನಮ್ಮಿಂದ ಕಸಿಯುವುದರ ಮೂಲಕ ನಮ್ಮ ಗಡಿಯನ್ನು ಆಕ್ರಮಿಸಿ ಉಪಟಳ ನೀಡುವ, ಕನ್ನಡದ ಮಕ್ಕಳ ಉದ್ಯೋಗ ಕಸಿಯುವ ಮೂಲಕ ರಾಷ್ಟ್ರೀಯ ಪಕ್ಷಗಳು ಮತ್ತು ಕೆಲವು ಸಂಘಟನೆಗಳು ನಿರಂತರವಾಗಿ ದಬ್ಬಾಳಿಕೆ ಮಾಡುತ್ತಲೇ ಬರುತ್ತಿವೆ ಎಂದು ಗೌಡರು ಟೀಕಾಸಮರ ನಡೆಸಿದ್ದಾರೆ.

ನನಗೆ ಸಿಕ್ಕ ಅಲ್ಪಾವಧಿಯ ಅಧಿಕಾರದಲ್ಲಿ ನಾಡಿನ ಸಹಸ್ರಾರು ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿದ್ದೆ. ಈ ನೆಲದ ರೈತರೊಂದಿಗೆ ಯುವ ಸಮುದಾಯಕ್ಕೂ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಇಪ್ಪತ್ತು ಸಕ್ಕರೆ ಕಾರ್ಖಾನೆಗಳೊಂದಿಗೆ ನೂರಾರು ವಿವಿಧ ಕಾರ್ಖಾನೆಗಳ ನಿರ್ಮಾಣ ಅನುಷ್ಠಾನಗೊಳಿಸಿದೆ. ನೂತನ ರೈಲ್ವೆ ಮಾರ್ಗಗಳನ್ನು ನಾಡಿಗೆ ತರುವಾಗಲೂ ನಮ್ಮದೇ ಕಾವೇರಿ ನೀರನ್ನು ನಮಗೆ ಕುಡಿಯಲು ಪಡೆಯುವಾಗಲೂ, ಕನ್ನಡದ ಮಕ್ಕಳಿಗಾಗಿ ಯಾವುದೇ ಯೋಜನೆಯನ್ನು ತರುವಾಗಲೂ ರಾಷ್ಟ್ರೀಯ ಪಕ್ಷಗಳು ಉಪಟಳ ನೀಡುತ್ತಲೇ ಬಂದಿವೆ. ಆದರೆ ನನ್ನ ಕನ್ನಡದ ಜನತೆಗಾಗಿ ನನ್ನ ಹೋರಾಟ ನನ್ನ ಕೊನೆಯುಸಿರಿನವರೆಗೂ ನಿರಂತರ ಇರುತ್ತದೆ ಎಂದಿದ್ದಾರೆ.

ಕನ್ನಡಿಗರಿಗೆ ಕಂಟಕ ಬೆಳಗಾವಿ ಗಡಿ ವಿವಾದ: ಕನ್ನಡದ ರೈತರ ಬದುಕು ಹಸನಾಗಿಸಲು ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಲು ಪ್ರಧಾನಿ ಪಟ್ಟವನ್ನೇ ಪಣಕ್ಕಿಟ್ಟವನು ನಾನು. ನಾನು ಪ್ರಧಾನಿಯಾಗಿದ್ದ ಅಲ್ಪ ಸಮಯದಲ್ಲೇ ಗುಜರಾತಿನ ನರ್ಮದಾ ನದಿ ವಿವಾದ, ಕಾಶ್ಮೀರದ ಚುನಾವಣೆಯಂಥ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನೇ ಬಗೆಹರಿಸಿದ್ದೇನೆ. ಆದರೆ ಇಂದು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡು ಕಡೆಯೂ ಒಂದೇ ಪಕ್ಷ ಅಧಿಕಾರದಲ್ಲಿದ್ದರೂ ಕನ್ನಡಿಗರಿಗೆ ಸದಾ ಕಂಟಕವಾಗಿ ಕಾಡುತ್ತಿರುವ ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸಲು ಹಿಂದೇಟು ಹಾಕುತ್ತಿರುವುದು ಆಡಳಿತ ಪಕ್ಷ ಕನ್ನಡಿಗರ ಬಗ್ಗೆ ಎಷ್ಟು ತಾತ್ಸಾರ ಹೊಂದಿದೆ ಎಂಬುದನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂಓದಿ: ಲಿಂಗಾಯತ, ಒಕ್ಕಲಿಗರಿಗೆ ಸಿಹಿಸುದ್ದಿ: ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.