ETV Bharat / state

ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಮುಂದಾದ ಸರ್ಕಾರ: 7 ವಲಯಗಳಲ್ಲಿ ವಿಷನ್ ಗ್ರೂಪ್​ ರಚನೆ

author img

By

Published : Jun 19, 2023, 6:17 PM IST

government-planning-for-attract-capital-to-the-state
ರಾಜ್ಯದಲ್ಲಿ ಬಂಡವಾಳ ಆಕರ್ಷಿಸಲು ಮುಂದಾದ ಸರ್ಕಾರ

ಬಂಡವಾಳ ಹೊಡಿಕೆದಾರರಿಗೆ ಭೂಮಿ, ನೀರು ಮತ್ತಿತರ ಮೂಲಸೌಕರ್ಯ ಒದಗಿಸಲು ಸರ್ಕಾರ ಒತ್ತು ನೀಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಹೊಸ ಹೊಸ ಯೋಜನೆಗಳನ್ನು ತರಲು ಸಜ್ಜಾಗುತ್ತಿರುವ ಸರ್ಕಾರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಯನ್ನು ಉತ್ತೇಜಿಸಲು ಮುಂದಾಗಿದೆ. ಗ್ಯಾರಂಟಿ ಘೋಷಣೆ ಮಾಡುವ ಮೂಲಕ ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಮುಂದೆ ಹಲವು ಸವಾಲುಗಳು ಇವೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸರ್ಕಾರ ಸಿದ್ಧತೆಯನ್ನೂ ಮಾಡಿಕೊಂಡಿದೆ.

ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲು ಪೂರಕವಾದ ಕ್ರಮಗಳನ್ನು ವಹಿಸಲು ಉದ್ದೇಶಿಸಲಾಗಿದೆ. ಹೆಸರಿಗಷ್ಟೇ ಇರುವ ಏಕಗವಾಕ್ಷಿ ಯೋಜನೆಗೆ ನಿಜಾರ್ಥದಲ್ಲಿ ಬದಲಾವಣೆ ತಂದು ಅನಗತ್ಯ‌ ಅಡಚಣೆ ನಿರ್ಮೂಲನೆ, ಬಹುಗವಾಕ್ಷಿಗೆ ಅವಕಾಶ ಇಲ್ಲದಂತೆ‌ ತ್ವರಿತವಾಗಿ ಅನುಮತಿಗಳು ಸಿಗುವ ಹಾಗೆ ಮಾಡುವ ಬಗ್ಗೆ ಚಿಂತನೆ ಮಾಡಲಾಗಿದೆ. ರಾಜ್ಯದಲ್ಲಿ ಏಕಗವಾಕ್ಷಿ ಪದ್ಧತಿಯ ಜಾಗದಲ್ಲಿ ಬಹುಗವಾಕ್ಷಿ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದಕ್ಕೆ ವಿದಾಯ ಹೇಳಿ, ಏಕಗವಾಕ್ಷಿ ಪದ್ಧತಿಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಈ ಮೂಲಕ ಬಂಡವಾಳವನ್ನು ಆಕರ್ಷಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಕೈಗಾರಿಕೆಗಳ ಸ್ಥಾಪನೆಗೆ ಶೀಘ್ರ ಅನುಮತಿ ಸಿಗುವ ಹಾಗೆ ಮಾಡಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಯಲ್ಲೇ ಭಾರತೀಯ ಅರಣ್ಯ ಸೇವೆಯ ಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ನಿಯೋಜಿಸಿ, ಪರಿಸರ ಸಂಬಂಧಿ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶ. ರಾಜ್ಯದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜಿಸಲು ಸರ್ಕಾರ ಆಯ್ದ 7 ವಲಯಗಳಲ್ಲಿ ವಿಷನ್ ಗ್ರೂಪ್ ಗಳನ್ನು (ದೂರದರ್ಶಿ ತಂಡಗಳು) ರಚಿಸಲಿದೆ.

ಉದ್ಯಮಿಗಳು, ಉನ್ನತಾಧಿಕಾರಿಗಳು ಮತ್ತು ಶಿಕ್ಷಣ ತಜ್ಞರಿರುವ ಈ ವಿಷನ್ ಗ್ರೂಪ್​ಗಳು ಸೂಕ್ತ ಮಾರ್ಗದರ್ಶನ ನೀಡಲಿವೆ. ಏರೋಸ್ಪೇಸ್‌ ಮತ್ತು ರಕ್ಷಣೆ, ಮಷೀನ್‌ ಟೂಲ್ಸ್, ಇಎಸ್‌ಡಿಎಂ, ಫಾರ್ಮಾ, ಕಬ್ಬಿಣ-ಉಕ್ಕು-ಸಿಮೆಂಟ್‌ ಉತ್ಪಾದನಾ ಕ್ಷೇತ್ರಗಳನ್ನೊಳಗೊಂಡ ಕೋರ್​ ಮ್ಯಾನುಫ್ಯಾಕ್ಚರಿಂಗ್‌, ಸ್ಟಾರ್ಟಪ್ಸ್‌ (ಐ.ಟಿ‌.ಯೇತರ) ಮತ್ತು ಆಟೋ/ವಿದ್ಯುತ್‌ಚಾಲಿತ ಇವು ಹೊಸದಾಗಿ ವಿಷನ್ ಗ್ರೂಪ್ ರಚನೆಯಾಗಲಿರುವ ವಲಯಗಳಾಗಿವೆ.

ರಾಜ್ಯದಲ್ಲಿ ಈ ವಲಯಗಳಿಗಾಗಿ ವಿಷನ್ ಗ್ರೂಪ್ ಗಳು ರಚನೆಯಾಗುತ್ತಿರುವುದು ಇದೇ ಮೊದಲು. ಇದಕ್ಕೆ ಮುಂಚೆ ಒಟ್ಟಾರೆ ಉದ್ಯಮದ ಅಭಿವೃದ್ಧಿಗೆ ವಿಷನ್ ಗ್ರೂಪ್ ಇತ್ತು. ಆದರೆ ಇದು ವಲಯವಾರು ಮಟ್ಟದಲ್ಲಿ ಇರಲಿಲ್ಲ. ಈ ವಲಯಗಳ ಜೊತೆಗೆ ಭವಿಷ್ಯದ ಸಂಚಾರ ವ್ಯವಸ್ಥೆ, ಗ್ರೀನ್‌ ಹೈಡ್ರೋಜನ್, ಆಹಾರ ಸಂಸ್ಕರಣೆ, ಜವಳಿ, ಉಗ್ರಾಣ ಮತ್ತು ಲಾಜಿಸ್ಟಿಕ್ಸ್‌ ಗಳನ್ನು ಆದ್ಯತೆಯ ವಲಯಗಳೆಂದು ಗುರುತಿಸಲಾಗಿದೆ.

ವಿದ್ಯುತ್‌ ಚಾಲಿತ ವಾಹನ ತಯಾರಿಕೆ ಕ್ಷೇತ್ರದಲ್ಲಿ ಈಗಾಗಲೇ 40 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. ದೇಶದ ಪ್ರಪ್ರಥಮ ಗ್ರೀನ್‌ ಹೈಡ್ರೋಜನ್‌ ಕ್ಲಸ್ಟರ್ ಮಂಗಳೂರಿನಲ್ಲಿ ತಲೆಯೆತ್ತಲಿದ್ದು, ಆಸಕ್ತ ಉದ್ಯಮಿಗಳು ಇದಕ್ಕೆ 2.8 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದು ಈಗಾಗಲೇ ಖಾತ್ರಿಗೊಂಡಿದೆ. ಇದಕ್ಕೆ ಬೇಕಿರುವ ಭೂಮಿ, ನೀರು ಮತ್ತಿತರ ಮೂಲಸೌಕರ್ಯ ಒದಗಿಸಲು ಸರ್ಕಾರ ಒತ್ತು ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಏರೋಸ್ಪೇಸ್‌ ಮತ್ತು ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ದೇವನಹಳ್ಳಿಯ ಆರ್​ ಮತ್ತು ಡಿ ಪಾರ್ಕ್‌ನಲ್ಲಿ 'ಕರ್ನಾಟಕ ಏರೋಸ್ಪೇಸ್‌ ತಂತ್ರಜ್ಞಾನ ಕೇಂದ್ರ' ತೆರೆಯಲು ಯೋಜಿಸಲಾಗಿದೆ. ಜೊತೆಗೆ, ಸರ್ಕಾರವು ರಾಜ್ಯದಲ್ಲಿ 2.5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಗೆ ಇರುವ ಅವಕಾಶಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಭೂ ವ್ಯಜ್ಯಗಳ ತ್ವರಿತ ಇತ್ಯರ್ಥಕ್ಕೆ ಆದ್ಯತೆ: ಕೆಐಎಡಿಬಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತ ಇತ್ಯರ್ಥಕ್ಕೆ ಆದ್ಯತೆ ನೀಡಲಾಗಿದೆ. ಇಲಾಖೆಯ ವ್ಯಾಪ್ತಿಗೆ ಸೇರಿದ ಪ್ರಾಧಿಕಾರ, ನಿಗಮ ಮತ್ತು ಮಂಡಳಿಗಳ ಅಧಿಕಾರಿಗಳೊಂದಿಗೆ ಸಚಿವರು ಈಗಾಗಲೇ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಎಷ್ಟು ಕೈಗಾರಿಕಾ ನಿವೇಶನಗಳನ್ನು ಹೇಗೆ? ಯಾರಿಗೆ ಹಂಚಲಾಗಿದೆ ಮತ್ತು ಅವು ಯಾವ ಸ್ಥಿತಿಗತಿಯಲ್ಲಿವೆ ಎನ್ನುವ ವರದಿ ಸಿದ್ಧವಾಗಬೇಕು. ಇದರ ಆಧಾರದ ಮೇಲೆ ಕ್ಷಿಪ್ರ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಕೇವಲ ಟಿಡಿಎಸ್‌ ಮೂಲಕವೇ ವರ್ಷಕ್ಕೆ 1.20 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದೆ.

ಒಟ್ಟಿನಲ್ಲಿ ಪಾರದರ್ಶಕ ರೀತಿಯಲ್ಲಿ ರಾಜ್ಯದಲ್ಲಿ ಉದ್ದಿಮೆಗಳ ಬೆಳವಣಿಗೆಗೆ ಒತ್ತು ನೀಡಲು ಉದ್ದೇಶಿಸಲಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಕಾನೂನು ವಿಭಾಗದ ಅಧಿಕಾರಿಗಳು ಸರಿಯಾಗಿ ಪ್ರತಿನಿಧಿಸದೆ, ಪ್ರತಿವಾದಿಗಳ ಜೊತೆ ಷಾಮೀಲಾಗುತ್ತಿರುವ ವರದಿಗಳಿವೆ. ಇದನ್ನು ಸಹಿಸುವುದಿಲ್ಲ. ಆದರೆ ರಾಜ್ಯದ ಹಿತದೃಷ್ಟಿಯಿಂದ ಕಠಿಣ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿರುವ ಎನ್‌ಜಿಇಎಫ್‌ ಘಟಕದಲ್ಲಿ ತಯಾರಾಗುತ್ತಿರುವ ವಿದ್ಯುತ್ ಪರಿವರ್ತಕಗಳಿಗೆ ಒಳ್ಳೆಯ ಬೇಡಿಕೆ ಇದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಹಾಗೆಯೇ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಈಗಾಗಲೇ 10 ಸಾವಿರ ಚದರಡಿ ವಿಸ್ತೀರ್ಣವನ್ನು ವ್ಯಾಪಾರ ಉತ್ತೇಜನಾ ಕೇಂದ್ರಕ್ಕೆ ಮೀಸಲಿಟ್ಟಿದೆ. ಇದರ ಜೊತೆಗೆ ಇನ್ನೂ 10 ಸಾವಿರ ಚದರಡಿ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕನ್ವೆನ್ಷನ್ ಸೆಂಟರ್ ಸ್ಥಾಪಿಸುವ ಚಿಂತನೆ ಸರ್ಕಾರ ಮಾಡುತ್ತಿದೆ.

ಅದೇ ರೀತಿ ಮುಂಚೂಣಿ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ 2024ರ ಏಪ್ರಿಲ್ 1ರ ವೇಳೆಗೆ ದೇವನಹಳ್ಳಿ ಘಟಕದಲ್ಲಿ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಜುಲೈ 1ರ ವೇಳಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆ.
ಇದರೊಂದಿಗೆ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರವು 50,000 ಜನರಿಗೆ ಉದ್ಯೋಗ ಒದಗಿಸುವ 13,600 ಕೋಟಿ ರೂ. ಮೊತ್ತದ ಈ ಯೋಜನೆ ಜಾರಿಗೆ ವೇಗ ನೀಡಿದಂತಾಗಿದೆ. ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ (ಐಟಿಐಆರ್) ಕಾರ್ಯಯೋಜನೆಗಾಗಿ 300 ಎಕರೆ ಗುರುತಿಸಲಾಗಿದೆ. 2024ರ ಏಪ್ರಿಲ್ 1ರ ವೇಳೆಗೆ ಇಲ್ಲಿ ಕಂಪನಿಯು ತಯಾರಿಕೆ ಶುರು ಮಾಡುವ ಗುರಿ ಹಾಕಿಕೊಂಡಿದೆ.

ಕೆಎಐಡಿಬಿಗೆ ಚುರುಕು: ಕೆಎಐಡಿಬಿ ಕಾರ್ಯಚಟುವಟಿಕೆಗೆ ಚುರುಕುಗೊಳಿಸಲು ಮುಂದಾಗಿರುವ ಸರ್ಕಾರ, ಕೈಗಾರಿಕೆಗಳಿಗೆ ಜಮೀನು ಹಂಚಿಕೆ ವಿಷಯದಲ್ಲಿ ನಾಲ್ಕು ಹಂತಗಳನ್ನು ಅಳವಡಿಸಿ, ನೈಜ ಉದ್ದೇಶ ಈಡೇರುವಂತೆ ಗಮನ ನೀಡಲಾಗುತ್ತದೆ. ಮಹಾರಾಷ್ಟ್ರ ಸರ್ಕಾರ ವಿಮಾನಯಾನ ಪ್ರಾಧಿಕಾರ ಸ್ಥಾಪಿಸಿ, ಮುಂಬೈ-ಶಿರಡಿಗೆ ವಿಮಾನಯಾನ ಸೇವೆ ಪ್ರಾರಂಭಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಪ್ರಾಧಿಕಾರ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕಾದ ಭೂಮಿ, ನೀರು, ವಿದ್ಯುತ್ ರಾಜ್ಯ ಸರ್ಕಾರವೇ ಭರಿಸುತ್ತದೆ. ಖಾಸಗಿ ಕಂಪನಿಗೆ ಕೊಡುವ ಬದಲು ರಾಜ್ಯಕ್ಕೆ ವಹಿಸಿದರೆ ಭೂಮಿ ಸೇರಿ ಮಾಡಿದ್ದ ವೆಚ್ಚ ವಾಪಸ್‌ ಪಡೆಯಲು ಸಾಧ್ಯವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಪ್ರಾಧಿಕಾರಕ್ಕೆ ಸ್ಪಷ್ಟ ರೂಪ ನೀಡುವ ಉದ್ದೇಶವಿದೆ ಎಂದು ಇತ್ತೀಚೆಗೆ ಸಚಿವ ಎಂ.ಬಿ. ಪಾಟೀಲ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದರು. ಬೃಹತ್ ಉದ್ಯಮಗಳು, ಬಂಡವಾಳ ಹೂಡಿಕೆ ಆಕರ್ಷಣೆ ವಿಷಯದಲ್ಲಿ ರಾಜ್ಯಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಹೊರ ರಾಜ್ಯ ಹಾಗೂ ದೇಶಗಳಿಗೆ ಕಂಪೆನಿಗಳು ಹೋಗದಂತೆ ನೋಡಿಕೊಂಡು ರಾಜ್ಯದಲ್ಲೇ ನೆಲೆಯೂರುವಂತೆ ಮಾಡಲು ಅಗತ್ಯ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ನೀರು ಬಿಡುವ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಜತೆ ಮಾತನಾಡುತ್ತೇನೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.