ETV Bharat / state

ಕರ್ನಾಟಕ ಸರಕು ಸೇವೆಗಳ ತೆರಿಗೆ ಮಸೂದೆಗೆ ಅಂಗೀಕಾರ ನೀಡಿದ ವಿಧಾನಸಭೆ

author img

By

Published : Jul 14, 2023, 6:52 PM IST

Minister HK Patil spoke.
ವಿಧೇಯಕ ಅಂಗೀಕಾರ ವೇಳೆ ಸಚಿವ ಎಚ್ ಕೆ ಪಾಟೀಲ್ ಮಾತನಾಡಿದರು.

ವಿಧಾನಸಭೆಯಲ್ಲಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕಗಳನ್ನು ಧ್ವನಿಮತದ ಮೂಲಕ ಅಂಗೀಕಾರ ಮಾಡಲಾಯಿತು.

ಬೆಂಗಳೂರು: 2023 ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕಗಳು ವಿಧಾನಸಭೆಯಲ್ಲಿ ಇಂದು ಅಂಗೀಕಾರಗೊಂಡವು.

ಸರಕು ಸೇವೆ ತೆರಿಗೆ ಸೋರಿಕೆ ತಡೆಗೆ ಪ್ರಯತ್ನ: ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಪರ್ಯಾಲೋಚಿಸಿ ಹಲವು ಸದಸ್ಯರು ಚರ್ಚಿಸಿದ ನಂತರ ಸದನದಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು. ವಿಧೇಯಕರ ಬಗ್ಗೆ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು, ರಾಜ್ಯದಲ್ಲಿ ಸರಕು ಸೇವೆ ತೆರಿಗೆ ಸೋರಿಕೆ ತಡೆಗೆ ಪ್ರಯತ್ನಿಸಲಾಗುವುದು. ಜಲ್ಲಿ ಕ್ರಷರ್, ಅಡಕೆ, ಸಿಮೆಂಟ್ ಸೇರಿದಂತೆ ಎಲ್ಲೆಲ್ಲಿ ತೆರಿಗೆ ಸೋರಿಕೆಯಾಗುತ್ತಿದೆಯೋ, ಅದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ದೇಶದಲ್ಲಿ ಅತಿ ಹೆಚ್ಚು ಜಿಎಸ್​​​​ಟಿ ಪಾವತಿಸುವ ರಾಜ್ಯ: 2017-18ನೇ ಸಾಲಿನಲ್ಲಿ 44,816 ಕೋಟಿ ಇದ್ದ ರಾಜ್ಯದ ಜಿ ಎಸ್ಟಿ ಪಾಲು 2022-23ನೇ ಸಾಲಿನಲ್ಲಿ 81,848 ಕೋಟಿ ರೂ.ಗೆ ಹೆಚ್ಚಾಗಿದೆ. ದೇಶದಲ್ಲಿ ಅತಿ ಹೆಚ್ಚು ಜಿಎಸ್ಟಿ ಪಾವತಿಸುವ ರಾಜ್ಯ ನಮ್ಮದಾಗಿದೆ ಎಂದು ಹೇಳಿದ ಅವರು, ತಿದ್ದುಪಡಿ ವಿಧೇಯಕದಲ್ಲಿ 22 ತಿದ್ದುಪಡಿಗಳಿದ್ದು ಆರು ವರ್ತಕ ಸ್ನೇಹಿಯಾಗಿದೆ. 16 ಸುಗಮ ತೆರಿಗೆ ಅನುಸರಣ ಉಪಕ್ರಮಗಳಿವೆ. ವರ್ತಕ ಸ್ನೇಹಿ ಉಪಕ್ರಮದಲ್ಲಿ ಇ - ಕಾಮರ್ಸ್ ಮೂಲಕ ಸರಕು ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ವಿಳಂಬ ಮರುಪಾವತಿಗೆ ಬಡ್ಡಿ ಲೆಕ್ಕಾಚಾರ ಮಾಡುವ ಸರಳೀಕರಣ ಮಾಡಲಾಗಿದೆ. ಜಿಎಸ್​ಟಿ ಪರಿಷತ್ ನಲ್ಲಿ ಆಗಿರುವ ಚರ್ಚೆಗಳ ಹಿನ್ನೆಲೆಯಲ್ಲಿ ವರ್ತಕರಿಗೆ ಸಹಾಯಕವಾಗುವ ರೀತಿಯಲ್ಲಿ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.

ರಾಜ್ಯದ ಆದಾಯ ಕಡಿಮೆ ಆಗಬಾರದು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕೆಲವು ರಾಜ್ಯಗಳು ಉತ್ಪಾದಕ ರಾಜ್ಯಗಳಾಗಿದ್ದರೆ, ಕೆಲವು ಬಳಕೆ ರಾಜ್ಯಗಳಾಗಿವೆ. ತೆರಿಗೆ ಸಂಕೀರ್ಣ ಸರಳಗೊಳಿಸುವುದು ಸುಲಭವಲ್ಲ. ಆಗಿಂದಾಗ್ಗೆ ಬದಲಾವಣೆ ಆಗುತ್ತವೆ. ರಾಜ್ಯ ಸರ್ಕಾರದ ಎದುರು ಸಾಕಷ್ಟು ಸವಾಲುಗಳಿವೆ. ಯಾವುದೇ ಕಾರಣಕ್ಕೂ ಆದಾಯ ಕಡಿಮೆಯಾಗಬಾರದು. ತೆರಿಗೆ ಪಾವತಿ ಹೆಚ್ಚಾದಂತೆ ಆದಾಯವೂ ಹೆಚ್ಚಲಾಗಿದೆ ಎಂದು ಹೇಳಿದರು.

ತಿದ್ದುಪಡಿ ಅಂಗೀಕಾರ: ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಿಗೆ ಪ್ರತ್ಯೇಕ, ಸುಸಜ್ಜಿತ ಕಾರ್ಯಾಲಯ ಸೃಜಿಸುವುದಕ್ಕಾಗಿ, ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣಾ) ಅಧಿನಿಯಮ 1956 ಕ್ಕೆ ತಿದ್ದುಪಡಿ ತರಲಾಗುತ್ತಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಸದನಕ್ಕೆ ತಿಳಿಸಿದರು. ನಂತರ ಹಲವು ಸದಸ್ಯರ ಚರ್ಚೆ ಬಳಿಕ ಶಾಸಕರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದರು. ಬಳಿಕ ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ವಿಧೇಯಕಗಳನ್ನು ಮತಕ್ಕೆ ಹಾಕಿದಾಗ ಧ್ವನಿ ಮತದ ಅಂಗೀಕಾರ ಪಡೆಯಿತು.

ಇದನ್ನೂ ಓದಿ : ವಿಧಾನಸೌಧದಲ್ಲಿ ಭದ್ರತಾ ತಪಾಸಣೆ ಚುರುಕು: 4 ದಿನಗಳಲ್ಲಿ 250ಕ್ಕಿಂತ ಹೆಚ್ಚು ನಕಲಿ ಪಾಸ್ ಪತ್ತೆ ಹಚ್ಚಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.