ETV Bharat / state

ಜೆಎಂಬಿ ಸಂಘಟನೆಯ ನಾಲ್ವರಿಗೆ ಎನ್ಐಎ ವಿಶೇಷ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

author img

By

Published : Jan 14, 2023, 5:23 PM IST

representative image
ಪ್ರಾತಿನಿಧಿಕ ಚಿತ್ರ

ಜಮಾತ್ ಉಲ್ ಬಾಂಗ್ಲಾ(ಜೆಎಂಬಿ) ಸಂಘಟನೆಯ ನಾಲ್ವರಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಬೆಂಗಳೂರು: ಭಾರತದಲ್ಲಿ ಜೆಎಂಬಿ (ಜಮಾತ್ ಉಲ್ ಬಾಂಗ್ಲಾ) ಸಂಘಟನೆಯ ಚಟುವಟಿಕೆಗಳನ್ನ ಹೆಚ್ಚಿಸಲು ಹಣ ಹೊಂದಿಸುವ ಉದ್ದೇಶದಿಂದ ಬೆಂಗಳೂರಿನ ಹೊರವಲಯದಲ್ಲಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳಿಗೆ 7 ವರ್ಷ ಶಿಕ್ಷೆ ಪ್ರಕಟವಾಗಿದೆ. ಕಡೋರ್ ಖಾಜಿ, ಮುಸ್ತಫಿಜುರ್ ರೆಹಮಾನ್, ಆದಿಲ್ ಶೇಕ್ ಹಾಗೂ ಅಬ್ದುಲ್ ಕರೀಂ ಎಂಬ ಆರೋಪಿಗಳು ದೋಷಿಗಳೆಂದು ಘೋಷಿಸಿರುವ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ 7 ವರ್ಷ ಸಜೆ ವಿಧಿಸಿ ಆದೇಶ ಪ್ರಕಟಿಸಿದೆ.

ಪ್ರಕರಣದ ಹಿನ್ನೆಲೆ: 2014ರ ಬುರ್ದ್ವಾನ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಹಬೀಬುರ್ ರೆಹಮಾನ್ ಎಂಬಾತನನ್ನ ಸ್ಫೋಟಕ ಸಾಮಗ್ರಿಗಳು, ಟೈಮರ್, ಗ್ರೆನೇಡ್ ಸಹಿತ ಜುಲೈ 2019ರಲ್ಲಿ ಎನ್ಐಎ ತಂಡ ಬೆಂಗಳೂರಿನಲ್ಲಿ ಬಂಧಿಸಿತ್ತು. ತನಿಖೆ ವೇಳೆ ಹಬೀಬುರ್ ರೆಹಮಾನ್, 'ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ತನ್ನ ಬೆಂಬಲಿಗರು ನೆಲೆಸಿದ್ದು, ಎರಡು ಬಾರಿ ತಾನು ಭೇಟಿ ನೀಡಿರುವುದನ್ನ' ಬಾಯ್ಬಿಟ್ಟಿದ್ದ. ತಕ್ಷಣ ಸೋಲದೇವನಹಳ್ಳಿ ಪೊಲೀಸರ ಸಹಕಾರದೊಂದಿಗೆ ಚಿಕ್ಕಬಾಣಾವರದ ಮನೆ ಮೇಲೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಆರು ಜನ ಆರೋಪಿಗಳನ್ನು ಬಂಧಿಸಿದ್ದರು.

ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದ ಎನ್ಐಎ: ವಿಚಾರಣೆ ವೇಳೆ ಆರೋಪಿಗಳು ಮತ್ತು ಅವರ ಸಹಚರರು ಭಾರತದಲ್ಲಿ ಜೆಎಂಬಿ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನ ವಿಸ್ತರಿಸಲು ಹಣ ಹೊಂದಿಸುವ ಸಲುವಾಗ ಕೆ.ಆರ್.ಪುರಂ, ಕೊತ್ತನೂರು, ಅತ್ತಿಬೆಲೆ ಠಾಣಾ ವ್ಯಾಪ್ತಿಗಳಲ್ಲಿ ದರೋಡೆಯಲ್ಲಿ ಭಾಗಿಯಾಗಿರುವುದು ಮತ್ತು ಅದೇ ಹಣದಿಂದ ಸ್ಪೋಟಕಗಳ ಸಂಗ್ರಹಣೆ ಮಾಡಿರುವುದು ಬಯಲಾಗಿತ್ತು. ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಎನ್ಐಎ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ಸದ್ಯ ಈ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳನ್ನ ಎನ್ಐಎ ಬಂಧಿಸಿದ್ದು, 7 ಜನ ಆರೋಪಿಗಳಿಗೆ ಶಿಕ್ಷೆ ಪ್ರಕಟವಾದಂತಾಗಿದೆ.

ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟ: ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಣೆಗಾಗಿ ಬೆಂಗಳೂರು ಹೊರವಲಯದಲ್ಲಿ ಡಕಾಯಿತಿ ಮಾಡುತ್ತಿದ್ದ ಆರೋಪದಡಿ ಬಂಧನವಾಗಿದ್ದ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾ (JMB) ಸಂಘಟನೆಯ ಮೂವರು ಆರೋಪಿಗಳಿಗೆ ಎನ್ಐಎ ವಿಶೇಷ ನ್ಯಾಯಾಲಯ ತಲಾ 7 ವರ್ಷ ಸಜೆ ಹಾಗೂ ದಂಡ ವಿಧಿಸಿ ಕಳೆದ ವರ್ಷ ಆದೇಶಿಸಿತ್ತು.

ಬಂಧಿತ ನಜೀರ್ ಶೇಖ್​ಗೆ 7 ವರ್ಷ ಸಜೆ ಹಾಗೂ 48 ಸಾವಿರ ರೂ. ಹಬೀಬುರ್ ರೆಹಮಾನ್​ಗೆ- 7 ವರ್ಷ ಸಜೆ ಹಾಗೂ 49 ಸಾವಿರ ರೂ ಹಾಗೂ ಮೊಸ್ರಫ್ ಹೊಸೈನ್​ಗೆ 7 ವರ್ಷ ಸಜೆ ಹಾಗೂ 41 ಸಾವಿರ ರೂ ದಂಡ ವಿಧಿಸಿ ಆದೇಶಿಸಲಾಗಿತ್ತು. ಜೆಎಂಬಿ ಸಂಘಟನೆಯ ಸದಸ್ಯರಾಗಿದ್ದ ಆರೋಪಿಗಳ ಪೈಕಿ ಹಬೀಬುರ್ ರೆಹಮಾನ್ 2014ರ ಬುರ್ದ್ವಾನ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಎನ್ಐಎದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ.

ಆಸ್ತಿ ವಶಕ್ಕೆ ಪಡೆದ ಎಸ್​ಐಎ: ಜಮ್ಮು ಮತ್ತು ಕಾಶ್ಮಿರದ ಶೋಪಿಯಾನ್ ಜಿಲ್ಲೆಯಲ್ಲಿ ಇತ್ತೀಚೆಗೆ ಜಮಾತ್​ ಇ ಇಸ್ಲಾಮಿ ಸಂಘಟನೆಯ ವಿರುದ್ಧ ಪೋಲಿಸರು ಆಸ್ತಿ ವಶಪಡಿಸಿಕೊಂಡ ಆರೋಪದಡಿ ದಾಳಿ ನಡೆಸಿದರು. ಅಮೀರ್ ಜಮಾತ್ ಸೇರಿದಂತೆ ಒಂದೆ ಬಾರಿ ಹಲವು ಸ್ಥಳಗಳಲ್ಲಿ ಪೋಲಿಸರು ದಾಳಿ ನಡೆಸಿ ಆಸ್ತಿ ಮುಟ್ಟುಗೋಲು ಹಾಕಿದರು. ಜೆಇಐ ಧಾರ್ಮಿಕ ಸಂಘಟನೆಯನ್ನು 2019 ಗೃಹ ಸಚಿವಾಲಯವು ನಿಷೇಧಿಸಿತ್ತು. ಈ ಸಂಘಟನೆಯ ನಾಯಕರಾದ ಡಾ. ಆಬ್​ ಹಮೀದ್ ಫಯಾಜ್ ಸೇರಿದಂತೆ ಕೆಲವು ಉನ್ನತ ನಾಯಕರು ಇನ್ನೂ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಭಯೋತ್ಪಾದಕ ಕೃತ್ಯಗಳಿಗಾಗಿ ಡಕಾಯಿತಿ.. ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.