ETV Bharat / state

ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ಬಗ್ಗೆ ಪ್ರಧಾನಿ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ: ದೇವೇಗೌಡ

author img

By ETV Bharat Karnataka Team

Published : Jan 13, 2024, 3:43 PM IST

Updated : Jan 13, 2024, 8:42 PM IST

ನನಗೀಗ 91 ವರ್ಷವಾಗಿದೆ. ರಾಜ್ಯಸಭೆ ಸದಸ್ಯತ್ವದ ಅವಧಿ ಇನ್ನೂ ಎರಡೂವರೆ ವರ್ಷವಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ದೇವೇಗೌಡ ಸ್ಪಷ್ಟವಾಗಿ ಹೇಳಿದರು.

former-pm-devegowda-talks-on-lok-sabha-electios
ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ಬಗ್ಗೆ ಪ್ರಧಾನಿ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ: ದೇವೇಗೌಡ

ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಸುದ್ದಿಗೋಷ್ಠಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುವ ಬಗ್ಗೆ ತಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕ್ರಿಯಾಯೋಜನೆಗಳ ಬಗ್ಗೆ ಅವರ ಸಂಪುಟದ ಸಚಿವರಿಗೂ ಗೊತ್ತಾಗದ ರೀತಿಯಲ್ಲಿ ತೀರ್ಮಾನ ಮಾಡುತ್ತಾರೆ. ಹೊಸದಾಗಿ ವಿಧಾನಸಭೆ ಪ್ರವೇಶಿಸಿದವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಹೀಗಾಗಿ ಅವರು ಯಾವ ತೀರ್ಮಾನ ಮಾಡುತ್ತಾರೆ ಎಂಬ ಬಗ್ಗೆ ಹೇಳಲು ಆಗುವುದಿಲ್ಲ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಸ್ಪರ್ಧಿಸುವ ಸನ್ನಿವೇಶ ಬಂದರೆ ನಾವೆಲ್ಲ ಕೂತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಪ್ರಧಾನಿ ಮೋದಿ ಜೊತೆ ಕುಮಾರಸ್ವಾಮಿ ಸಂಪರ್ಕದಲ್ಲಿದ್ದಾರೆ. ಪ್ರಧಾನಿಯವರು ಏನು ಹೇಳುತ್ತಾರೋ ಗೊತ್ತಿಲ್ಲ. ಅವರು ಸ್ಪರ್ಧೆ ಬಗ್ಗೆ ಏನಾದರೂ ಹೇಳಿದ ನಂತರ ಮುಂದಿನ ತೀರ್ಮಾನ ಎಂದರು.

ನಮಗೆ ಎಷ್ಟು ಸೀಟು ಕೊಡುತ್ತಾರೋ ಅಷ್ಟೂ ಗೆಲ್ಲಲು ಶ್ರಮ ವಹಿಸುತ್ತೇವೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಅವರು (ಬಿಜೆಪಿ ನಾಯಕರು) ಕರೆದ ಕ್ಷೇತ್ರಗಳಲ್ಲಿ ಹೋಗಿ ಪ್ರಚಾರ ಮಾಡಲಾಗುವುದು. ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸುತ್ತಾರೆ. ಅವರಿಗೆ ಪ್ರಧಾನಿ ಮೋದಿ, ಕುಮಾರಸ್ವಾಮಿ, ನಾನು ಹಾಗೂ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವನಿಧಿಗೆ ಸ್ವಾಗತ : ರಾಜ್ಯ ಸರ್ಕಾರ ನಿನ್ನೆ ಚಾಲನೆ ನೀಡಿದ ಯುವನಿಧಿಯನ್ನು ಸ್ವಾಗತಿಸಿದ ಗೌಡರು, ಪದವಿ ಹಾಗೂ ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ ನೀಡುವ ಯುವನಿಧಿಯ ಮೊದಲ ಕಂತಿನ ಹಣದಿಂದ ಶ್ರೀರಾಮನ ದರ್ಶನ ಪಡೆಯಲಿ. ರಾಮನ ಆಶೀರ್ವಾದದಿಂದ ಮುಂದೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.22ರ ನಂತರ ಅಯೋಧ್ಯೆ ಶ್ರೀರಾಮಮಂದಿರಕ್ಕೆ ಹೋಗುವುದಾಗಿ ಹೇಳಿದ್ದಾರೆ. ಆದರೆ ಆದಿನ ಹೋಗಲ್ಲ ಎಂದಿದ್ದಾರೆ. ಅವರ ಪಾರ್ಟಿ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಸಾಫ್ಟ್ ಹಿಂದುತ್ವವೋ ಹಾರ್ಡ್ ಹಿಂದುತ್ವವೋ, ಅವರು ರಾಮನ ದರ್ಶನ ಮಾಡಿಕೊಂಡು ಬರಲಿ. ಮುಂದೆ ರಾಮನ ಆಶೀರ್ವಾದ ಪಡೆಯಲಿ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿನ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಪ್ರಧಾನಿಯವರು 11 ದಿನ ಉಪವಾಸ ವ್ರತ ಕೈಗೊಂಡಿದ್ದಾರೆ. ಇದು ದೈವ ನಿಯಮ ಇರಬಹುದು. ಶಿಸ್ತು, ಶ್ರದ್ದೆ, ಭಕ್ತಿ, ನಿಷ್ಠೆಯಿಂದ ಮಾಡುತ್ತಿದ್ದಾರೆ. ಪ್ರತಿಯೊಂದು ಅವರು ನಿಯಮಬದ್ದವಾಗಿ ಮಾಡುತ್ತಾರೆ. ನಾನು ಒಂದು ದಿವಸ ಮಾತ್ರ ಉಪವಾಸ ಮಾಡಿದ್ದೆ ಅಷ್ಟೇ ಎಂದ ಗೌಡರು, ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭಕ್ಕೆ ಪತ್ನಿ ಜೊತೆ ಹೋಗುವುದಾಗಿ ತಿಳಿಸಿದರು.

ಆರೋಗ್ಯದಲ್ಲಿ ಚೇತರಿಕೆ : ತಮ್ಮ ಆರೋಗ್ಯ ಕೆಟ್ಟಾಗ ತಮ್ಮ ಪುತ್ರಿ ಅನುಸೂಯ ಹಾಗೂ ಪತ್ನಿ ಚೆನ್ನಮ್ಮ ಅವರು ಪ್ರತಿ ಶನಿವಾರ ಕಾರಂಜಿ ಆಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತು ಎಂದು ಅವರು ಹೇಳಿದರು.

ಇದನ್ನೂ ಓದಿ: 8 ಸಾವಿರ ಕೋಟಿ ಬಿಡುಗಡೆ ಮಾಡಿ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿ: ಹೆಚ್.ಡಿ. ದೇವೇಗೌಡ ಮನವಿ

Last Updated :Jan 13, 2024, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.