ETV Bharat / state

ಕೇವಲ ಶಿಕ್ಷಕರು, ಪ್ರಾಂಶುಪಾಲರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ : ಹೆಚ್ ಡಿ ಕುಮಾರಸ್ವಾಮಿ

author img

By ETV Bharat Karnataka Team

Published : Dec 23, 2023, 3:00 PM IST

former-cm-hd-kumarswamy-
ಹೆಚ್ ಡಿ ಕುಮಾರಸ್ವಾಮಿ

ಅಂದ್ರಹಳ್ಳಿ ಸರ್ಕಾರಿ ಶಾಲೆ ಮತ್ತು ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿರುವ ಘಟನೆ ನಮ್ಮ ವ್ಯವಸ್ಥೆ, ನಮ್ಮ ಮನಸ್ಸು ಎಷ್ಟು ಮಲಿನವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಮಾಜಿ ಸಿಎಂ ಹೆಚ್​​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು : ಅಂದ್ರಹಳ್ಳಿ ಸರಕಾರಿ ಶಾಲೆ ಮಕ್ಕಳಿಂದ ಶೌಚಾಲಯ ಸ್ವಚ್ಚ ಮಾಡಿಸಿದ್ದು, ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿದ ಘಟನೆಗಳು ನನಗೆ ತೀವ್ರ ಆಘಾತ ಉಂಟು ಮಾಡಿವೆ. ನಮ್ಮ ವ್ಯವಸ್ಥೆ, ಮನಸ್ಸುಗಳು ಎಷ್ಟು ಮಲೀನವಾಗಿವೆ ಎನ್ನುವುದಕ್ಕೆ ಎರಡೂ ಘಟನೆಗಳು ಸಾಕ್ಷಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ಸೂಕ್ಷ್ಮ ಮನಸ್ಸಿನಿಂದ ವರ್ತಿಸಬೇಕಿತ್ತು. 'ಆಚಾರ್ಯದೇವೋ ಭವ' ಎನ್ನುವ ಭಾರತೀಯ ಪರಂಪರೆಯನ್ನು ಅವರೊಮ್ಮೆ ನೆನಪು ಮಾಡಿಕೊಳ್ಳಬೇಕಿತ್ತು. ಆದಾಗ್ಯೂ, ಈ ಎರಡೂ ಘಟನೆಗಳಲ್ಲಿ ಕೇವಲ ಶಿಕ್ಷಕರು, ಪ್ರಾಂಶುಪಾಲರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸರಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

ಸರಕಾರಿ ಶಾಲೆ ಒಂದರ ಸ್ವಚ್ಛತೆ, ಸಂಪೂರ್ಣ ನಿರ್ವಹಣೆ ಸೇರಿ ಸಾದಿಲ್ವಾರು ವೆಚ್ಚಗಳಿಗೆ ಕೊಡುತ್ತಿರುವ ಹಣವೆಷ್ಟು? ಈ ಹಣ ನಿಯಮಿತವಾಗಿ ಬಿಡುಗಡೆ ಆಗುತ್ತಿಲ್ಲ. ನನಗೆ ಬಂದಿರುವ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ಈ ಅನುದಾನವನ್ನೇ ಕೊಟ್ಟಿಲ್ಲ. ಕೊಡುವ ಅತ್ಯಲ್ಪ ಹಣದಲ್ಲಿ ಶಿಕ್ಷಕರು ಏನು ಮಾಡಿಯಾರು? ಈ ಬಗ್ಗೆ ಸರಕಾರ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟೀಕಿಸಿದ್ದಾರೆ.

ಈ ಎರಡೂ ಪ್ರಕರಣಗಳಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದವರು ಈ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು. ಆದರೆ, ಶಿಕ್ಷಕರನ್ನಷ್ಟೇ ಬಲಿಪಶುಗಳನ್ನಾಗಿ ಮಾಡುವ ಕೆಲಸ ಆಗುತ್ತಿದೆ. ಹಾಗೆಯೇ ಬೋಧಕರು, ಶಾಲಾ ಸಿಬ್ಬಂದಿ ಕೂಡ ಇಂಥ ಘಟನೆಗಳಿಗೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.

ಈ ಅಂದ್ರಹಳ್ಳಿ ಸರ್ಕಾರಿ ಶಾಲೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಜಿ.ಪರಮೇಶ್ವರ್ , ''ಖಂಡಿತವಾಗಿಯೂ ಇಂತಹ ಘಟನೆಗಳು ನಡೆಯಬಾರದು. ಮಕ್ಕಳನ್ನು ಈ ರೀತಿಯ ಕೆಲಸಕ್ಕೆ ಬಳಸುವಂತಿಲ್ಲ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಆದೇಶ​ ಹೊರಡಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರು ಈ ಕೆಲಸ ಮಾಡಿದ್ದಾರೆ ಎಂದು ತನಿಖೆ ನಡೆಸಿ, ಕ್ರಮ ಜರುಗಿಸುತ್ತೇವೆ'' ಎಂದು ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷನಾಯಕ ಆರ್ ಅಶೋಕ್​, ಯಶವಂತಪುರ ಕ್ಷೇತ್ರದ ಅಂದ್ರಹಳ್ಳಿಯ ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛ ಮಾಡಿಸಿರುವ ಘಟನೆ ನಡೆದಿದೆ. ಇದೆಲ್ಲ ಕಾಂಗ್ರೆಸ್ ಕಾಲದಲ್ಲಿ ನಡೆಯುತ್ತಿದೆ. ಸರ್ಕಾರ ತಡೆಯುವ ಪ್ರಯತ್ನ ಮಾಡದೆ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತದೆ. ಅಂದ್ರಹಳ್ಳಿ ಶಾಲೆಗೆ ಹೋಗಿ ವಸ್ತುಸ್ಥಿತಿ ನೋಡಿ, ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ : ಬೆಂಗಳೂರು: ಮಕ್ಕಳಿಂದಲೇ ಶೌಚಾಲಯ ಸ್ವಚ್ಛಗೊಳಿಸಿದ ಶಾಲಾ ಸಿಬ್ಬಂದಿ, ಪೋಷಕರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.