ETV Bharat / state

ದೆಹಲಿಯಲ್ಲಿ ಒಂದೆರೆಡು ಕೋಟಿ ರೂ ಪ್ರಕರಣಕ್ಕೆ ಸಿಬಿಐ ದಾಳಿ.. ಬಿಜೆಪಿಯಲ್ಲಿ ನೈತಿಕತೆ ಇದೆಯೇ ಎಂದ ಹೆಚ್​ಡಿಕೆ

author img

By

Published : Aug 23, 2022, 5:54 PM IST

Former Chief Minister HD Kumaraswamy
ಕುಮಾರಸ್ವಾಮಿ ಪ್ರಶ್ನೆ

40 ಪರ್ಸೆಂಟ್ ಸರ್ಕಾರವೆಂದು ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ‌. ಇಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಆದರೂ ಸದ್ದು ಗದ್ದಲ ಇಲ್ಲ. ದೆಹಲಿಯಲ್ಲಿ ಮನೀಶ್ ಸಿಸೋಡಿಯಾ ಅವರ ಮೇಲೆ ಎಕ್ಸೈಸ್ ಪಾಲಿಸಿ ಒಂದೆರಡು ಕೋಟಿ ಕುರಿತ ಸಿಬಿಐ ತನಿಖೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಸಾವಿರಾರು ಕೋಟಿ ಲೂಟಿ ಆದರೂ ಕೇಳುವವರು ಇಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ನಾನು ಅವರನ್ನು ಕೇಳುತ್ತೇನೆ, ಜನ ನಿಮ್ಮ ಸರ್ಕಾರ 40 ಪರ್ಸೆಂಟ್​​ ಸರ್ಕಾರ ಎಂದು ಮಾತನಾಡುತ್ತಿದ್ದಾರೆ. ಹಾಗಿದ್ದಾಗ ಯಾವ ನೈತಿಕತೆ ನಿಮ್ಮ ಪಕ್ಷದಲ್ಲಿ ಇದೆ ಎಂದು ಮಾತನಾಡಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಸಾವಿರಾರು ಕೋಟಿ ಲೂಟಿ: ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕೊಡಗು ಜಿಲ್ಲೆಯ ಮುಖಂಡರ ಜೊತೆ ಪಕ್ಷ ಸಂಘಟನೆ ಕುರಿತು ಅವರು ಚರ್ಚಿಸಿದರು. ಬಳಿಕ ಮಾತನಾಡಿದ ಹೆಚ್​ಡಿಕೆ, 40 ಪರ್ಸೆಂಟ್ ಸರ್ಕಾರವೆಂದು ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ‌. ಇಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಆದರೂ ಸದ್ದು ಗದ್ದಲ ಇಲ್ಲ. ದೆಹಲಿಯಲ್ಲಿ ಮನೀಶ್ ಸಿಸೋಡಿಯಾ ಅವರ ಮೇಲೆ ಎಕ್ಸೈಸ್ ಪಾಲಿಸಿ ಒಂದೆರಡು ಕೋಟಿ ಕುರಿತ ಸಿಬಿಐ ತನಿಖೆ ನಡೆಯುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಸಾವಿರಾರು ಕೋಟಿ ಲೂಟಿ ಆದರೂ ಕೇಳುವವರು ಇಲ್ಲ ಎಂದು ಕಿಡಿಕಾರಿದರು.

ಮೋದಿ ಯಾವ ಸಂದೇಶ ಕೊಡಲು ಬರುತ್ತಿದ್ದಾರೆ?: ದೇಶಕ್ಕೆ ಆರ್ಥಿಕ ಶಕ್ತಿ ಕೊಡುವಂತ ನಗರ ಮಂಗಳೂರು. ಆದರೆ ಅಲ್ಲಿ ದೇಶಕ್ಕೆ ಮಾರಕ ಆಗುವಂತ ವಾತಾವರಣ ನಿರ್ಮಾಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಸಂದೇಶ ಕೊಡಲು ಮಂಗಳೂರಿಗೆ ಬರುತ್ತಿದ್ದಾರೆ. ಅವರು, ಶಾಂತಿಯುತವಾಗಿ ಹೂಡಿಕೆದಾರರು ಬರುವ ರೀತಿ ಸಂದೇಶ ಕೊಟ್ಟರೆ ಬಂದಿದ್ದಕ್ಕೂ ಸಾರ್ಥಕ ಆಗುತ್ತದೆ. ಮತ್ತೆ ಇದೇ ಸಂಘರ್ಷ ಆದರೆ ಅವರು ಬಂದರೂ ಏನು ಪ್ರಯೋಜನ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಈ ರಾಜ್ಯಕ್ಕೆ ಉತ್ತಮ ಹೆಸರಿತ್ತು. ಆದರೆ ಇದೀಗ ಬಂಡವಾಳ ಹೂಡುವವರು ಯೋಚನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಿ. ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡೂ ಪಕ್ಷದಿಂದಲೂ ಯಾವುದೇ ವಿಚಾರ ಇಲ್ಲ. ಒಬ್ಬರು ಸಾವರ್ಕರ್, ಮತ್ತೊಬ್ಬರು ಮಾಂಸ ತಿನ್ನುವ ವಿಚಾರ ಇಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ, ನಾವು ವಿಷಯಾಧಾರವಾಗಿ ಹೊರಟಿದ್ದೇವೆ. ಜನತೆ ಮುಂದೆ ನಾವು ಅಭಿವೃದ್ಧಿ ವಿಚಾರ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.

ಸಾವರ್ಕರ್ ರಥಯಾತ್ರೆಯಿಂದ ಉಪಯೋಗವೇನು: ಪಿಎಸ್​ಐ ಅಕ್ರಮ ಆಯಿತು. ಈಗ ಕೆಪಿಟಿಸಿಎಲ್​ನದ್ದು ಶುರುವಾಗಿದೆ. ಇದರ ಬಗ್ಗೆ ಚರ್ಚೆ ಆಗಬೇಕು. ಆದರೆ ಬೇರೆ ವಿಚಾರ ಚರ್ಚೆ ಆಗುತ್ತಿದೆ. ಬಿಜೆಪಿಯವರು ಸಾವರ್ಕರ್ ರಥಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಉಪಯೋಗವೇನು?. ಎರಡೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಜನರಿಗೆ ಏನಾದರೂ ಮಾಡಿದರೆ, ಆಗ ಸಾವರ್ಕರ್​ಗೆ ಗೌರವ ತಂದಂತೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕೈಗಾರಿಕೆಗಳು ಕರ್ನಾಟಕದ ಪ್ರತಿಭಾವಂತ ಯುವ ಜನರನ್ನು ಪರಿಗಣಿಸಬೇಕು: ಹೆಚ್ ​ಡಿ ಕುಮಾರಸ್ವಾಮಿ

ಎಸಿಬಿ ರದ್ದು ಸಂಬಂಧ ಸುಪ್ರೀಂ ಕೋರ್ಟ್​ಗೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂಥೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕುರಿ ಕಾಯಲು ತೋಳ ಬಿಟ್ಟಂಗೆ ಇದೆ. ತೋಳ ಇಟ್ಟುಕೊಂಡು ಕುರಿ ರಕ್ಷಣೆ ಆಗುತ್ತಾ?. ಭ್ರಷ್ಟಾಚಾರಕ್ಕೆ ದೊಡ್ಡ ಮಟ್ಟದಲ್ಲಿ ಹಾಲೆರೆದಿದ್ದಾರೆ. ಸರ್ಕಾರ ಸರಿಯಾಗಿ ನಿಗಾ ಇಟ್ಟು ಮಟ್ಟ ಹಾಕಬೇಕು ಎಂದು ಹೇಳಿದರು.

ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಹೆಚ್​ಡಿಕೆ: ಸಿದ್ದರಾಮೋತ್ಸವದಿಂದ ಉಪಯೋಗ ಏನು?: ನಮ್ಮ ಜನತಾ ಜಲಧಾರೆಯಿಂದ ಕೆರೆ ಕಟ್ಟೆಗಳು ತುಂಬಿದ್ವು.ಇವರ ಉತ್ಸವದಿಂದ ಏನು ಉಪಯೋಗ ಆಯಿತು. ಅವರ ವರ್ಚಸ್ಸು ಏನು ಹೆಚ್ಚಾಗಿದೆ. ಅಂತಹ ಎಷ್ಟು ಸಮಾವೇಶ ರಾಜ್ಯದಲ್ಲಿ ಆಗಿದೆ. ನಮ್ಮ ಜನತಾ ಜಲಧಾರೆಗೆ ಎಷ್ಟು ಜನ ಸೇರಿದ್ರು. ನಮ್ಮ ಉತ್ಸವದಿಂದ 25 ವರ್ಷಗಳಿಂದ ತುಂಬದ ಕೆರೆಗಳಲ್ಲಿ ಮಳೆ ಬಂದು ನೀರು ತುಂಬಿವೆ. ಅವರ ಉತ್ಸವದಿಂದ ಏನು ಪ್ರಯೋಜನ ಆಗಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.